ದೇಶದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶದ ವಿಕಾಸ್ ದುಬೆ ಎನ್ಕೌಂಟರ್ ಪ್ರಕರಣದಲ್ಲಿ ಪೊಲೀಸರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಪೊಲೀಸರ ವಿರುದ್ದ ಸಾಕ್ಷ್ಯಾಧಾರಗಳ ಕೊರತೆ ಇದ್ದುದರಿಂದ ವಿಚಾರಣಾ ಸಮಿತಿಯು ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದೆ.
ಸಾರ್ವಜನಿಕರು, ಮಾಧ್ಯಮಗಳು ಮತ್ತು ವಿಕಾಸ್ ದುಬೆ ಕುಟುಂಬದವರು ಯಾವುದೇ ಸಾಕ್ಷ್ಯಗಳನ್ನು ನೀಡಲಿಲ್ಲ ಎಂದು ಸಮಿತಿ ಹೇಳಿದೆ.
“ಮಾಧ್ಯಮಗಳು ಎನ್ಕೌಂಟರ್ ಕುರಿತಾಗಿ ತರಹೇವಾರಿ ಸುದ್ದಿಗಳನ್ನು ಪ್ರಕಟಿಸಿದ್ದರೂ, ಯಾವುದೇ ಸಾಕ್ಷ್ಯ ನೀಡಲಿಲ್ಲ. ಅಷ್ಟು ಸುದ್ದಿ ಪ್ರಕಟಿಸಿದವರಿಗೆ ಮುಂದೆ ಬಂದು ಸಾಕ್ಷ್ಯ ನೀಡಲು ಏಕೆ ಸಾಧ್ಯವಾಗಲಿಲ್ಲ,” ಎಂದು ಸಮಿತಿಯ ಮೂಲಗಳು NDTVಗೆ ಹೇಳಿಕೆ ನೀಡಿದೆ.
ವಿಕಾಸ್ ದುಬೆ ಎನ್ಕೌಂಟರ್ ನಕಲಿ ಎಂದು ಆರೋಪಿಸಿ ಸುಪ್ರಿಂಕೋರ್ಟ್ನಲ್ಲಿ ದಾವೆ ಹೂಡಲಾಗಿತ್ತು. ಈ ಕಾರಣಕ್ಕಾಗಿ ಎನ್ಕೌಂಟರ್ನ ನ್ಯಾಯಾಂಗ ತನಿಖೆ ನಡೆಸಲು ಸುಪ್ರಿಂ ಆದೇಶ ನೀಡಿತ್ತು. ಈ ಸಮಿತಿಯ ನೇತೃತ್ವವನ್ನು ಜಸ್ಟೀಸ್ ಬಿ ಎಸ್ ಚೌಹಾಣ್ ಅವರು ವಹಿಸಿಕೊಂಡಿದ್ದರು.
“ಪೊಲೀಸರ ವಿರುದ್ದ ಸಾಕ್ಷ್ಯಾಧಾರಗಳನ್ನು ಪಡೆಯಲು ನಾವು ಸಾಕಷ್ಟು ಪ್ರಯತ್ನ ಪಟ್ಟಿದ್ದೆವು. ಸಾರ್ವಜನಿಕರಲ್ಲಿ ಹಾಗೂ ಮಾಧ್ಯಮಗಳ ಸಹಾಯವನ್ನೂ ಕೇಳಿದ್ದೆವು. ಆದರೆ, ಯಾವುದೇ ಸ್ಪಷ್ಟ ಸಾಕ್ಷ್ಯಗಳು ನಮಗೆ ದೊರಕಲಿಲ್ಲ,” ಎಂದು ಸಮಿತಿಯ ಮೂಲಗಳು ಹೇಳಿವೆ.
ಸಾರ್ವಜನಿಕರು ಹಾಗೂ ಮಾಧ್ಯಮಗಳು ಈ ತನಿಖೆಯಲ್ಲಿ ಭಾಗವಹಿಸದೇ ಇರುವುದು, ಸಮಿತಿಯನ್ನು ರಚಿಸಿದ ಉದ್ದೇಶದ ಸೋಲಿಗೆ ಕಾರಣವಾಗಿದೆ. ವಿಕಾಸ್ ದುಬೆಯ ಪತ್ನಿ ಮತ್ತು ಕುಟುಂಬದ ಇತರೆ ಸದಸ್ಯರು ಕೂಡಾ ಸಾಕ್ಷ್ಯಾಧಾರಗಳನ್ನು ನೀಡಲು ವಿಫಲರಾದರು, ಎಂದು ಹೇಳಿದೆ.