ಇವಿಎಂ ಯಂತ್ರಗಳನ್ನು (ಮತಯಂತ್ರ) ಟ್ಯಾಂಪರಿಂಗ್ ಮಾಡಿ ಬಿಜೆಪಿ ಚುನಾವಣೆಯಲ್ಲಿ ಮೋಸ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಚುನಾವಣಾ ಸಂಧರ್ಭದಲ್ಲೆಲ್ಲಾ ಆರೋಪಿಸುತ್ತಿದ್ದು, ಇದೀಗ ಉತ್ತರ ಪ್ರದೇಶದ ಚುನಾವಣೆಯ ಮತ ಎಣಿಕೆಗೂ ಮುನ್ನ ಈ ಆರೋಪ ಮತ್ತೆ ಎದ್ದಿದೆ.
ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ಮತ ಯಂತ್ರ ಕದ್ದು ಸಾಗಿಸಲಾಗುತ್ತಿದೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. 2017ರ ಚುನಾವಣೆಗಳಲ್ಲಿ ರಾಜ್ಯದ ಸುಮಾರು 50 ಕೇತ್ರಗಳಲ್ಲಿ ಬಿಜೆಪಿಯ ಗೆಲುವಿನ ಅಂತರ 5,000 ಮತಗಳಿಗೂ ಕಡಿಮೆಯಿದ್ದ ಅಂಶವನ್ನು ಉಲ್ಲೇಖಿಸಿದ ಅವರು ಬಿಜೆಪಿಯು ಮತಯಂತ್ರಗಳನ್ನು ಕದ್ದು ಸಾಗಿಸಿ ಮತಗಳನ್ನು ತಿರುಚುತ್ತಿದೆ. ಎಲ್ಲಾ ಮತಗಟ್ಟೆಗಳಲ್ಲೂ ಎಚ್ಚರದಿಂದ ಕಾಯಿರಿ ಎಂದು ತನ್ನ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಟ್ರಕುಗಳಲ್ಲಿ ಕೆಲವು ಇವಿಎಮ್ ಮೆಷಿನ್ಗಳನ್ನು ಸಾಗಿಸುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬೆನ್ನಲ್ಲೇ ಆಡಳಿತ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, ಅಧಿಕಾರಿಗಳ ಮುಖಾಂತರ ಸರ್ಕಾರ ಸುಳ್ಳು ಹೇಳಿಸುತ್ತಿದೆ ಎಂದಿದ್ದಾರೆ.
ಅದಾಗ್ಯೂ, ಪ್ರತಿಪಕ್ಷಗಳ ಆರೋಪವನ್ನು ವಾರಣಾಸಿ ಜಿಲ್ಲಾಧಿಕಾರಿ ಕೌಶಲ ರಾಜ್ ಶರ್ಮಾ ಅವರು ನಿರಾಕರಿಸಿದ್ದು, ಟ್ರಕ್ಗಳಲ್ಲಿ ಕೊಂಡು ಹೋದ ಯಂತ್ರಗಳು ಮತದಾನಕ್ಕೆ ಬಳಕೆಯಾದ ಇವಿಎಂ ಯಂತ್ರಗಳಲ್ಲ, ಅವುಗಳನ್ನು ಸಿಬ್ಬಂದಿಗೆ ತರಬೇತಿ ನೀಡಲು ಬಳಸಲಾಗಿತ್ತಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಕೆಲವು ರಾಜಕೀಯ ಪಕ್ಷಗಳು ವದಂತಿಗಳನ್ನು ಹರಡುತ್ತಿವೆ ಎಂದು ಆರೋಪಿಸಿದ ಅವರು, ಚುನಾವಣೆಗಳಲ್ಲಿ ಬಳಕೆಯಾದ ಇವಿಎಮ್ ಗಳು ಸ್ಟ್ರಾಂಗ್ ರೂಮ್ನಲ್ಲಿ ಸಿಆರ್ಪಿಎಫ್ ರಕ್ಷಣೆಯಲ್ಲಿ ಭದ್ರವಾಗಿವೆ. ಸಿಸಿಟಿವಿ ಕಣ್ಗಾವಲು ಕೂಡಾ ಇದೆ, ಮಾತ್ರವಲ್ಲ ಅದನ್ನು ಎಲ್ಲ ರಾಜಕೀಯ ಪಕ್ಷಗಳು ನೋಡುತ್ತಿರುತ್ತಾರೆ ಎಂದಿದ್ದರು.
ಆದರೆ, ಸರ್ಕಾರದ ಪರ ಸಮಜಾಯಿಷಿಗಳನ್ನು ತಳ್ಳಿ ಹಾಕಿದ ಅಖಿಲೇಶ್ ಯಾದವ್, ‘ವಾರಣಾಸಿಯಲ್ಲಿ ಒಂದು ಟ್ರಕ್ ಅನ್ನು ನಾವು ತಡೆದು ನಿಲ್ಲಿಸಿದೆವು, ಇನ್ನೆರಡು ಟ್ರಕ್ಗಳು ತಪ್ಪಿಸಿ ಪರಾರಿಯಾದವು, ಯಾವುದೇ ಸಂಶಯಾಸ್ಪದ ಚಟುವಟಿಕೆ ನಡೆದಿರದಿದ್ದರೆ ಇವಿಎಮ್ ಗಳಿದ್ದ ಟ್ರಕ್ಗಳು ಯಾಕೆ ಪರಾರಿಯಾದವು? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯೋರ್ವರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ‘ಬಿಜೆಪಿ ಸೋಲುತ್ತಿರುವ ಕ್ಷೇತ್ರಗಳಲ್ಲಿ ಮತ ಎಣಿಕೆ ನಿಧಾನವಾಗಿ ನಡೆಯಬೇಕು ’ ಎಂದು ಸೂಚಿಸಿರುವ ಮಾಹಿತಿಯು ನಮಗೆ ಈಗಾಗಲೇ ಲಭ್ಯವಾಗಿವೆ. ಆದರೆ, ಇವಿಎಮ್ಗಳು ಒಯ್ಯುವಾಗ ಸಿಕ್ಕಿಬಿದ್ದಿರುವುದರಿಂದ ಅಧಿಕಾರಿಗಳು ಹಲವಾರು ನೆಪಗಳನ್ನು ಹೇಳುತ್ತಾರೆ ಎಂದು ಹೇಳಿದ್ದಾರೆ.
ವಾರಣಾಸಿಯಲ್ಲಿ ಇವಿಎಂಗಳಿದ್ದ ಟ್ರಕ್ ಸಿಕ್ಕಿಬಿದ್ದಿರುವ ಸುದ್ದಿಯು ಉತ್ತರ ಪ್ರದೇಶದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿಯೂ ಎಚ್ಚರಿಕೆಯಿಂದಿರಬೇಕು ಎಂಬ ಸಂದೇಶ ನೀಡಿದೆ. ಎಸ್ಪಿ ಮೈತ್ರಿಕೂಟದ ಎಲ್ಲ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮತ ಎಣಿಕೆಯಲ್ಲಿ ಅಕ್ರಮಗಳನ್ನು ತಡೆಯಲು ತಮ್ಮ ಕ್ಯಾಮೆರಾಗಳೊಂದಿಗೆ ಸಜ್ಜಾಗಿರಬೇಕು. ಪ್ರಜಾಪ್ರಭುತ್ವ ಮತ್ತು ಭವಿಷ್ಯದ ರಕ್ಷಣೆಗಾಗಿ ಮತ ಎಣಿಕೆಯಲ್ಲಿ ಯುವಜನರು ಯೋಧರಂತೆ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದ್ದಾರೆ.
ಬಿಜೆಪಿ ವಿರುದ್ಧ ಇವಿಎಂ ಟ್ಯಾಂಪರಿಂಗ್, ಹಾಗೂ ತಿರುಚುವಿಕೆಯ ಆರೋಪಗಳು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹ ಆರೋಪಗಳು ಕೇಳಿ ಬಂದಿದ್ದವು. ಮುಂದುವರಿದ ರಾಷ್ಟ್ರಗಳಲ್ಲಿ ಬ್ಯಾಲೆಟ್ ಪೇಪರ್ ಬಳಸುವಂತೆ ಭಾರತದಲ್ಲೂ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಯಲಿ ಎಂಬ ಕೂಗುಗಳೂ ಎದ್ದಿದ್ದವು.