ಬಹುಮತವೆಂಬುದು ಭಾರತದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಸಾಬೀತಾಗಿದೆಯೋ, ಅಷ್ಟೇ ಋಣಾತ್ಮಕ ಉದಾಹರಣೆಗಳನ್ನು ಕೂಡಾ ಸೃಷ್ಟಿಸಿದೆ. ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಭಾಗವಾಗಿರುವ ಈ ಬಹುಮತ, ಅದೇ ಪ್ರಜಾಪ್ರಭುತ್ವದ ಆಶಯಗಳ ಪತನಕ್ಕೂ ಕಾರಣವಾಗಿದೆ. ದೇಶದಲ್ಲಿ ಹೇರಲಾಗಿದ್ದ ತುರ್ತುಪರಿಸ್ಥಿತಿಯಿಂದ ಹಿಡಿದು ಇತ್ತೀಚಿನ ರಾಜಕೀಯ ಬೆಳವಣೆಗಳು ಈ ವಿಚಾರವನ್ನು ಸ್ಪಷ್ಟಪಡಿಸಿವೆ.
ಮುಂದಿನ ವರ್ಷದಲ್ಲಿ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶದಲ್ಲಿಯೂ ಕಳೆದ ನಾಲ್ಕು ವರ್ಷಗಳಲ್ಲಿ ಪದೇ ಪದೇ ಪ್ರಜಾಪ್ರಭುತ್ವದ ಮೌಲ್ಯಗಳ ಕಗ್ಗೊಲೆ ನಡೆಯುತ್ತಲೇ ಬಂದಿದೆ. 1975ರಲ್ಲಿ ನಾಗರಿಕ ಹಕ್ಕುಗಳನ್ನು ಹತ್ತಿಕ್ಕಿ ಇಂದಿರಾ ಗಾಂಧಿ ಅವರು ತುರ್ತುಪರಿಸಸ್ಥಿತಿಯನ್ನು ಘೋಷಿಸಿದಾಗ ದೇಶದಲ್ಲಿ ಉಂಟಾದ ತಳಮಳ, ಇಂದಿನ ಅಘೋಷಿತ ತುರ್ತುಪರಿಸ್ಥಿಯ ಸಂದರ್ಭದಲ್ಲಿಯೂ ಕಾಣಸಿಗುತ್ತಿದೆ. ಒಂದೇ ವ್ಯತ್ಯಾಸವೆಮದರೆ, ಅಂದು ಅಧಿಕೃತವಾಗಿ ತುರ್ತುಪರಿಸ್ಥಿತಿ ಘೋಷಿಸಲಾಗಿತ್ತು, ಇಂದು ಅನಧಿಕೃತವಾಗಿ ಜಾರಿಗೊಳಿಸಲಾಗಿದೆ.
ಪ್ರಜಾಪ್ರಭುತ್ವದ ಮೌಲ್ಯಗಳ ಕಗ್ಗೊಲೆಗೆ ಉತ್ತಮ ಉದಾಹರಣೆಯೆಂದರೆ, ಉತ್ತರ ಪ್ರದೇಶ. ಎರಡು ಅಂಶಗಳು ಈ ವಾದವನ್ನು ಪುರಸ್ಕರಿಸುತ್ತವೆ. ಮೊದಲನೇಯದು, ಇಲ್ಲಿ ವ್ಯಕ್ತಿ ಕೇಂದ್ರಿತ ಆಡಳಿತ ವ್ಯವಸ್ಥೆ ಜಾರಿಯಾಗಿದೆಯೇ ಹೊರತು, ಹುದ್ದೆ ಕೇಂದ್ರಿತ ವಚ್ಯವಸ್ಥೆಯಲ್ಲ. ಎರಡನೇಯದು, ಕಾನೂನು ಪಾಲನೆ ಹಾಗೂ ರಾಜನೀತಿಯಲ್ಲಿ ವೈಚಾರಿಕತೆಯನ್ನು ಸಂಪೂರ್ಣವಾಗಿ ಬದಿಗಿಟ್ಟಿರುವುದು ಪ್ರಜಾಪ್ರಭುತ್ವ ಆಶಯಗಳಿಗೆ ಕೊಡಲಿ ಏಟು ನೀಡುತ್ತಿದೆ. ಅಧಿಕಾರಿಗಳಿಂದಲೇ ನಡೆಯುತ್ತಿವ ಸರ್ಕಾರವೆಂಬಂತೆ, ಮಂತ್ರಿಗಳು ಅನ್ನಿಸಿಕೊಂಡವರು ಪರದೆಯ ಹಿಂದೆ ಸರಿಯುತ್ತಿದ್ದಾರೆ. ಜನ ಪ್ರತಿನಿಧಿಗಳು ಅಧಿಕಾರಿಗಳ ಕೆಳಗೆ ಕೆಲಸ ಮಾಡುತ್ತಿದ್ದಾರೆನೋ ಎಂಬಂತೆ ವ್ಯವಸ್ಥೆಯು ತಿರುಚಲ್ಪಟ್ಟಿದೆ.
ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿಯೂ ಒಂಬತ್ತು ಅಧಿಕಾರಿಗಳ ತಂಡವು ಸಿಎಂ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಕಾರ್ಯನಿರ್ಹಿಸಿತು. ಇದು ಎಷ್ಟರ ಮಟ್ಟಿಗಿನ ಏಕಪಕ್ಷೀಯ ಸಮಿತಿಯೆಂದರೆ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವ ವ್ಯವಸ್ಥೆಯನ್ನು ರೂಪಿಸುವ ಗೋಜಿಗೆ ಯಾರೂ ಹೋಗಲೇ ಇಲ್ಲ. ಈ ವಿಚಾರವನ್ನು ಖುದ್ದು ಸಂಪುಟ ಸಚಿವರೇ ಪ್ರಶ್ನಿಸಿದರೂ, ಸಿಎಂ ಕ್ಯಾರೆ ಅನ್ನಲಿಲ್ಲ. ತಮ್ಮದೇ ಪಕ್ಷ ಅಧಿಕಾರದಲ್ಲಿ ಇದ್ದರೂ, ತಾವೇ ಬಲಶಾಲಿ ಮಂತ್ರಿ ಪದವಿಯನ್ನು ಹೊಂದಿದ್ದರೂ, ಬಿಜೆಪಿ ನಾಯಕರು ಸಾಮಾನ್ಯ ಜನರ ಸಾಲಿಗೆ ಸೇರಿಬಿಟ್ಟರು.
ಇಂತಹ ಅನಾಹುತಕಾರಿ ನೀತಿಗಳಿಂದ ಜನರ ಸಂಕಷ್ಟವನ್ನು ಅರಿಯುವ ಪ್ರಯತ್ನವನ್ನೇ ಮಾಡದ ಸರ್ಕಾರ ಕೋವಿಡ್ ಸಾವುಗಳ ಕುರಿತು ಪಾರದರ್ಶಕ ಲೆಕ್ಕವಿಡಬಲ್ಲದೇ? ಜನ ಸಾಮಾನ್ಯರ ಸಾವುಗಳನ್ನು ಬಿಡಿ, ಗ್ರಾಮ ಪಂಚಾಯ್ತಿ ಚುನಾವಣೆಯ ಸಂದರ್ಭದಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದ ಸರ್ಕಾರಿ ನೌಕರರ ಸಂಖ್ಯೆಯೆಷ್ಟು ಎಂಬುದು ಕುಡಾ ಈ ಸರ್ಕಾರಕ್ಕೆ ತಿಳಿದಿಲ್ಲ. ಇನ್ನು ಗಂಗಾ ನದಿಯಲ್ಲಿ ತೇಲಿ ಬಂದ ಶವಗಳ ಕುರಿತು ಪ್ರಶ್ನಿಸುವುದು ಅತಿರೇಕವಾದೀತು.
ಆಕ್ಸಿಜನ್, ಬೆಡ್ಗಳ ಕೊರತೆಯಿಂದ ಉಂಟಾದ ಅಪಾರ ಸಾವುನೋವುಗಳ ಕುರಿತು ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿದ್ದರೂ, ಸಿಎಂ ಆದಿತ್ಯನಾಥ್ ಮಾತ್ರ ತಮ್ಮ ಸರ್ಕಾರದ ಬೆನ್ನನ್ನು ತಾವೇ ತಟ್ಟಿಕೊಳ್ಳುವಲ್ಲಿ ನಿರತರಾಗಿದ್ದರು. ಉತ್ತರ ಪ್ರದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿಯೇ ಇಲ್ಲ ಎಂದು ಜನರ ದಾರಿ ತಪ್ಪಿಸುವ ಯತ್ನವನ್ನೂ ಮಾಡಿದ್ದರು. ಇದನ್ನು ಮೀರಿ ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದರೆ, ಬ್ರಿಟಿಷ್ ಕಾಲದ ದೇಶದ್ರೋಹ ಕಾನೂನಿನಡಿ ಬಂಧನದ ಬಹುಮಾನ ನೀಡಲಾಗುತ್ತಿತ್ತು. ಇದೇ ಅಲ್ಲವೇ ಬಹುಮತದ ಕರಾಳ ಮುಖ. ಇದೇ ಬಹುಮತದ ನೆರಳಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಆಶಯಗಳ ಕಗ್ಗೊಲೆ.
ಇನ್ನುಳಿದ ಅಂಕಿ ಅಂಶಗಳನ್ನು ಗಮನಿಸಿದರೆ, ಕಳೆದ ಮೂರು ವರ್ಷಗಳಲ್ಲಿ 103 ಆರೋಪಿಗಳನ್ನು ಉತ್ತರ ಪ್ರದೇಶದಲ್ಲಿ ಎನ್’ಕೌಂಟರ್ ಎಂಬ ಹೆಸರಲ್ಲಿ ಕೊಲ್ಲಲಾಗಿದೆ. 1859 ಆರೋಪಿಗಳು ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಅಪರಾಧ ಚಟುವಟಿಕೆಗಳು ಮಿತಿಮೀರಿವೆ ಎಂಬುದೇನೋ ನಿಜ, ಆದರೆ ಅದೇ ನೆಪವೊಡ್ಡಿ ಬೇಕಾಬಿಟ್ಟಿ ಗುಂಡು ಚಲಾಯಿಸುವುದು ಎಷ್ಟು ಸರಿ?
ಸಿಎಎ ವಿರುದ್ದದ ಹೋರಾಟದಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರನ್ನು ಶಿಕ್ಷಿಸಲು ತರಾತುರಿಯಲ್ಲಿ ಜಾರಿಗೆ ತಂದಿದ್ದ ಖಾಸಗಿ ಆಸ್ಥಿ ಸುಗ್ರೀವಾಜ್ಞೆ, 2020 ರಾಜ್ಯದ ಆಡಳಿತದಲ್ಲಿನ ವೈಚಾರಿಕತೆಯ ಪತನಕ್ಕೆ ತೋರಿದ ಮತ್ತೊಂದು ಉದಾಹರಣೆ. ಪ್ರತಿಭಟನೆಯ ವೇಳೆ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾದ್ದಾರೆಂಬ ಆರೋಪ ಸಾಬೀತಾಗುವ ಮುನ್ನವೇ, ಹಲವರ ಫೋಟೋಗಳನ್ನು ದೊಡ್ಡ ಪೋಸ್ಟರ್ ನಲ್ಲಿ ಹಾಕಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗಿತ್ತು. ಇದು ಸಂವಿಧಾನಬಾಹಿರ ಕೆಲಸವೆಂದು ಹೇಳಿ, ಹೈಕೋರ್ಟ್ ಆ ಪೋಸ್ಟರ್ ಗಳನ್ನು ತೆರವುಗೊಳಿಸಲು ಆದೇಶ ನೀಡಿತ್ತು.
ಇದೇ ರೀತಿಯ ವೈಚಾರಿಕ ದೀವಾಳಿತನ ‘ಲವ್ ಜಿಹಾದ್’ ವಿರುದ್ದದ ಕಾನೂನುಗಳಲ್ಲಿಯೂ ಗಮನಿಸಬಹುದಾಗಿದೆ. ಲವ್ ಜಿಹಾದ್ ನೆಪದಲ್ಲಿ ಸಂವಿಧಾನ ದೇಶದ ನಾಗರಿಕರಿಗೆ ನಿಡಿದ್ದ ಮೂಲಭೂತ ಹಕ್ಕನ್ನು ಕಸಿಯುವ ಪ್ರಯತ್ನ ಮಾಡಲಾಗಿದೆ. ಪರಸ್ಪರ ಸಮ್ಮತಿಯಿಂದ ನಡೆಯುವ ಮದುವೆಗಳು ಆಯಾ ವ್ಯಕ್ತಿಗಳ ವೈಯಕ್ತಿಕ ಹಕ್ಕು ಎಂಬುದು ಹಲವು ಬಾರಿ ನ್ಯಾಯಾಲಯಗಳು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದರೂ, ಈ ವಿಚಾರ ಆದಿತ್ಯನಾಥ್ ನೇತೃತ್ವದ ಸರ್ಕಾರಗಳ ಗಮನಕ್ಕೆ ಬರಲಿಲ್ಲ.
ಯಾವಾಗ ಬಹುಮತದ ಅಮಲು ಅಧಿಕಾರದಲ್ಲಿರುವ ಪಕ್ಷದ ತಲೆಗೆ ಏರಿದೆಯೋ, ಅವಾಗ ಆಗಿರುವ ಅವಾಂತರಗಳಿಗೆ ಈ ದೇಶ ಸಾಕ್ಷಿಯಾಗುತ್ತಲೇ ಇದೆ. ಅದು ಇಂದಿರಾ ಗಾಂಧಿ ಇರಬಹುದು, ನರೇಂದ್ರ ಮೋದಿ ಇರಬಹುದು ಅಥವಾ ಯೊಗಿ ಆದಿತ್ಯನಾಥ್ ಇರಬಹುದು. ಉತ್ತರ ಪ್ರದೇಶವಂತೂ, ಪ್ರಜಾಪ್ರಭುತ್ವ ಅಧಃಪತನಕ್ಕೆ ತಯಾರು ಮಾಡಿದಂತಹ ಪ್ರಯೋಗಾಲಯದ ರೀತಿ ಮಾರ್ಪಾಡಾಗಿದೆ. ಲಿಂಚಿಂಗ್ ಪ್ರಕರಗಳಿಂದ ಹಿಡಿದು, ವಾಕ್ ಸ್ವಾತಂತ್ರ್ಯದ ಕಗ್ಗೊಲೆಯವರೆಗೆ ಪ್ರತಿಯೊಂದು ಸಾಂವಿಧಾನಿಕ ಹಕ್ಕುಗಳ ಧಮನ ಮಾಡುವ ವಿಧಾನವನ್ನು ಇಲ್ಲಿ ಪರೀಕ್ಷಿಸಲಾಗುತ್ತಿದೆ. ಅದು ಕೂಡಾ ಬಹುಮತದ ಬಲದೊಂದಿಗೆ.
ಈ ರಾಜಕೀಯ ಷಡ್ಯಂತ್ರದ ಒಳಸುಳಿಗಳನ್ನು ಉತ್ತರ ಪ್ರದೇಶದ ಜನರು ಅರ್ಥ ಮಾಡಿಕೊಳ್ಳದೇ ಇರಬಹುದು. ಆದರೆ, ಇವುಗಳ ಪರಿಣಾಮವನ್ನು ಮಾತ್ರ ಅನುಭವಿಸುತ್ತಲೇ ಬರುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ಮುಂದಿನ ಚುನಾವಣೆಯಲ್ಲಿ ನೀಡುವರೋ ಇಲ್ಲವೋ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ.