ಬಿಜ್ನೋರ್ನಲ್ಲಿರುವ ಗೋಶಾಲೆಯ ಜಮೀನನ್ನು ಸ್ಥಳೀಯ ಭೂ ಮಾಫಿಯಾ ವಶಪಡಿಸಿಕೊಂಡಿರುವುದರಲ್ಲಿ ರಾಮ್ ಮಂದಿರ ಟ್ರಸ್ಟ್ ಸದಸ್ಯ ಚಂಪತ್ ರಾಯ್ ಅವರ ಮೌನ ಸಮ್ಮತಿಯಿತ್ತು ಎಂದು ಆರೋಪಿಸಿರುವ ಹಿರಿಯ ಪತ್ರಕರ್ತ ವಿನೀತ್ ನರೈನ್ ಮತ್ತು ಇತರ ಇಬ್ಬರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಚಂಪತ್ ರಾಯ್ ಅವರ ಕುಟುಂಬವೂ ಭಾಗಿಯಾಗಿದೆ ಎಂದು ಆರೋಪಗಳಿವೆ.
ರಾಯ್ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವ ಹಿಂದೂ ಪರಿಷತ್ ನಾಯಕರಾಗಿದ್ದು, ಇತ್ತೀಚೆಗೆ ಅಯೋಧ್ಯೆಯಲ್ಲಿನ ಭೂಮಿ ಖರೀದಿಯಲ್ಲಿ ಉಂಟಾದ ಅವ್ಯವಹಾರದಲ್ಲೂ ಇವರ ಹೆಸರು ಕೇಳಿ ಬಂದಿತ್ತು.
ರಾಯ್ ಅವರ ಸಹೋದರ ಸಂಜಯ್ ಬನ್ಸಾಲ್ ಅವರ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ರಾಯ್ ಮತ್ತು ಅವರ ಸಹೋದರರಿಗೆ ಬಿಜ್ನೋರ್ ಪೊಲೀಸರು ಈಗಾಗಲೇ “ಕ್ಲೀನ್ ಚಿಟ್” ನೀಡಿದ್ದರು ಎಂದು ಬನ್ಸಾಲ್ ಹೇಳಿಕೊಂಡಿದ್ದಾರೆ, ಆದರೂ ಜನರು ಫೇಸ್ಬುಕ್ ಪೋಸ್ಟ್ಗಳಲ್ಲಿ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ.
ಎಫ್ಐಆರ್ ಮೂವರು ಆರೋಪಿಗಳ ವಿರುದ್ಧ 18 ಆರೋಪಗಳನ್ನು ಪಟ್ಟಿ ಮಾಡಿದೆ. ಫೋರ್ಜರಿ, ಒತ್ತಡ ಮತ್ತು ದ್ವೇಷವನ್ನು ಉತ್ತೇಜಿಸುವುದು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಲಾಗಿದೆ.
ಮೂರು ದಿನಗಳ ಹಿಂದೆ ಫೇಸ್ಬುಕ್ ಪೋಸ್ಟ್ನಲ್ಲಿ ಪತ್ರಕರ್ತ ವಿನೀತ್ ನರೈನ್ ಅವರು ಬಿಜ್ನೋರ್ನಲ್ಲಿರುವ ತಮ್ಮ ಸಹೋದರರು ಭೂ ಕಬಳಿಕೆಗೆ ಮಾಡಲು ರಾಯ್ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದರು. ಅಲ್ಕಾ ಲಾಹೋತಿ ಒಡೆತನದ ಗೋ ಶಾಲೆಯಿಂದ ಸಹೋದರರು 20,000 ಎಕರೆ ಭೂಮಿಯನ್ನು ಕಸಿದುಕೊಂಡಿದ್ದಾರೆ ಎಂದು ನರೈನ್ ಆರೋಪಿಸಿದ್ದರು.
ನರೈನ್ ಅವರ ಪೋಸ್ಟ್ ಪ್ರಕಾರ, ಲಾಹೋತಿ ಕೆಲವು ಸಮಯದಿಂದ ‘ಅತಿಕ್ರಮಣಕಾರ’ರನ್ನು ತನ್ನ ಭೂಮಿಯಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದರು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಸಹಾಯಕ್ಕಾಗಿ ಮನವಿ ಮಾಡಿದ್ದರು. ನರೈನ್ ಅವರು ‘ಲೌಡ್ ಕ್ರೈಸಿಸ್‘ ಎಂಬ ಯೂಟ್ಯೂಬ್ ಶೋನಲ್ಲೂ ಸಹ ಭೂ ಕಬಳಿಕೆಯ ಕುರಿತು ಮಾತನಾಡಿದ್ದಾರೆ.
ಈ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ತಾನು ನರೈನ್ ಅವರಿಗೆ ಕರೆಯನ್ನೂ ಮಾಡಿದ್ದೆ ಎನ್ನುವ ಬನ್ಸಾಲ್ “ರಜನೀಶ್ ಎಂದು ಕರೆದುಕೊಳ್ಳುವ ವ್ಯಕ್ತಿಯು ಫೋನ್ ಎತ್ತಿಕೊಂಡು, ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದರು ಮತ್ತು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ದೂರನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.
ಬಿಜ್ನೋರ್ ಪೊಲೀಸ್ ಮುಖ್ಯಸ್ಥ ಧರ್ಮ್ ವೀರ್ ಸಿಂಗ್ ಟ್ವಿಟ್ಟರ್ ನಲ್ಲಿ ಬನ್ಸಾಲ್ ಅವರನ್ನು ಬೆಂಬಲಿಸುವ ವೀಡಿಯೊ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. “ಚಂಪತ್ ರಾಯ್ ಅವರು ವಿಎಚ್ಪಿಯ ಹಿರಿಯ ನಾಯಕ ಮತ್ತು ರಾಮ್ ಟೆಂಪಲ್ ಟ್ರಸ್ಟ್ನ ಸದಸ್ಯರಾಗಿದ್ದಾರೆ ಮತ್ತು ಆರೋಪಿಗಳು ಅವರ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತವಾಗಿವೆ ಮತ್ತು ಅವರ ಸಂಬಂಧಿಕರ ವಿರುದ್ಧದ ಆರೋಪಗಳು ಸಹ ಆಧಾರರಹಿತವಾಗಿವೆ. ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ” ಎಂದು ಸಿಂಗ್ ಆ ಪೋಸ್ಟ್ನಲ್ಲಿ ಹೇಳಿದ್ದಾರೆ.
ಆದರೆ ಲಾಹೋತಿ ವಶದಲ್ಲಿರುವ ದಾಖಲೆಗಳಿಂದ ಭೂ ಕಬಳಿಕೆಯನ್ನು ಸಾಬೀತು ಪಡಿಸಬಹುದು ಎನ್ನುತ್ತಾರೆ ನರೈನ್.