ಟಿಆರ್ಪಿ ಹಗರಣ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮಂಗಳವಾರ ಪೂರಕ ಆರೋಪ ಪಟ್ಟಿ ಸಲ್ಲಿಸಿದ್ದು, ರಿಪಬ್ಲಿಕ್ ಟಿವಿ ಮುಖ್ಯಸ್ಥ, ಪತ್ರಕರ್ತ ಅರ್ನಾಬ್ ಗೋಸ್ವಾಮಿಯನ್ನು ಆರೋಪಿಯೆಂದು ಹೇಳಿದೆ.
ಮುಂಬೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ 1,600 ಪುಟಗಳಿಗಿಂತ ಹೆಚ್ಚಿರುವ ಆರೋಪಪಟ್ಟಿ ಸಲ್ಲಿಸಲಾಗಿದೆ
ಈ ಹಿಂದೆ ಮೊದಲ ಆರೋಪ ಪಟ್ಟಿ ಸಲ್ಲಿಸಿದ್ದ ಮುಂಬೈ ಪೊಲೀಸರು, ಪ್ರಕರಣದಲ್ಲಿ ಒಟ್ಟು 22 ಆರೋಪಿಗಳಿದ್ದಾರೆ ಎಂದಿತ್ತು. ಆದರೆ, ಮೊದಲ ಆರೋಪ ಪಟ್ಟಿಯಲ್ಲಿ 15 ಆರೋಪಿಗಳನ್ನು ಮಾತ್ರ ಸೇರಿಸಿದ್ದು, ಈ ಬಾರಿ ಸಲ್ಲಿಸಿರುವ ಪೂರಕ ಆರೋಪ ಪಟ್ಟಿಯಲ್ಲಿ ಅರ್ನಾಬ್ ಸೇರಿದಂತೆ 7 ಮಂದಿಯನ್ನು ಸೇರಿಸಲಾಗಿದೆ.
ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕರಾದ ಅರ್ನಾಬ್ ರಂಜನ್ ಗೋಸ್ವಾಮಿ, ಅಮಿತ್ ಮೋಹನ್ ದವೆ, ಸಂಜಯ್ ಸುಖದೇವ್ ವರ್ಮಾ, ವಾಹಿನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಪ್ರಿಯಾ ಮುಖರ್ಜಿ, ಮುಖ್ಯ ಹಣಕಾಸು ಅಧಿಕಾರಿ ಶಿವ ಸುಬ್ರಮಣ್ಯಂ, ಉದ್ಯೋಗಿಗಳಾದ ಶಿವೇಂದ್ರ ಮುಂದೇರ್ಕರ್, ರಂಜಿತ್ ವಾಲ್ಟರ್ ಹೆಸರುಗಳು ಪೂರಕ ಆರೋಪಟ್ಟಿಯಲ್ಲಿ ಇವೆ ಎಂದು ಕನ್ನಡ ಬಾರ್ ಆಂಡ್ ಬೆಂಚ್ ವರದಿ ಹೇಳಿದೆ.
ಐಪಿಸಿ ಸೆಕ್ಷನ್ 406, 409 (ಕ್ರಿಮಿನಲ್ ವಿಶ್ವಾಸದ್ರೋಹ) ಮತ್ತು 420 (ವಂಚನೆ) 465, 468 (ಫೋರ್ಜರಿ), 201, 204 (ಸಾಕ್ಷ್ಯ ನಾಶ), 212 (ಅಪರಾಧಿಗೆ ಆಶ್ರಯ), 120 ಬಿ (ಪಿತೂರಿ) ಅಡಿಯಲ್ಲಿ ಅಪರಾಧ ಎಸಗಿದ್ದಕ್ಕಾಗಿ ಆರೋಪಪಟ್ಟಿ ಸಲ್ಲಿಸಲಾಗಿದೆ.
ಸ್ಯಾಂಪಲಿಂಗ್ ಮೀಟರಿಂಗ್ ಸೇವೆಗಳನ್ನು ತಿರುಚಿ, ನಿರ್ದಿಷ್ಟ ವಾಹಿನಿಗಳನ್ನು ವೀಕ್ಷಿಸಲು ಜನರಿಗೆ ಹಣ ನೀಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದ ನಂತರ ಟಿಆರ್ಪಿ ಹಗರಣದ ಕುರಿತು ಮುಂಬೈ ಅಪರಾಧ ವಿಭಾಗದ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.