ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಪ್ರಬಲ ಅಭ್ಯರ್ಥಿ ಸತೀಶ್ ಜಾರಕಿಹೊಳಿಯನ್ನು ಕಣಕ್ಕಿಳಿಸಿದೆ. ಇದು ಬಿಜೆಪಿಯನ್ನು 2004 ರಿಂದ ತನ್ನ ಸುಪರ್ದಿಯಲ್ಲಿರುವ ಕ್ಷೇತ್ರವನ್ನು ಕಳೆದುಕೊಳ್ಳುವ ಆತಂಕಕ್ಕೆ ತಳ್ಳಿದೆ. ಹಾಗಾಗಿ, ತನ್ನ ಹಿಂದಿನ ಗೇಮ್ಪ್ಲಾನ್ ಅನ್ನು ಬದಲಿಸಿ ಅನುಕಂಪದ ಆಧಾರದ ಮೇಲೆ ಜನರೆದುರು ಹೋಗಲು ಮುಂದಾಗಿದೆ.
ಬಿಜೆಪಿ ಅನುಕಂಪದ ಆಧಾರದಲ್ಲಿ ಮತಬೇಟೆ ಪಡೆಯುವ ತಂತ್ರ ಹೂಡಿದ್ದು, ದಿವಂಗತ ಸಂಸದ ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿಗೆ ಬೆಳಗಾವಿ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಇದೀಗ, ದಿವಂಗತ ಸಂಸದರ ಪತ್ನಿಗೆ ಟಿಕೆಟ್ ನೀಡಿರುವುದೇ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಕುಟುಂಬ ರಾಜಕಾರಣವನ್ನು ಉಲ್ಲೇಖಿಸಿ ಬಿಜೆಪಿ ಮೇಲೆ ದಾಳಿ ಮಾಡಿದರೆ, ಪಕ್ಷದ ಇಬ್ಬಗೆಯ ನೀತಿ ವಿರೋಧಿಸಿ ಬಿಜೆಪಿ ಬೆಂಬಲಿಗರಿಂದಲೇ ಅಸಮಾಧಾನ ಬುಗಿಲೆದ್ದಿದೆ.
Admin
2019 ರ ಚುನಾವಣೆಯ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ದಿವಂಗತ ಸಂಸದ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಪಕ್ಷ ಟಿಕೆಟ್ ನೀಡುವುದಾಗಿ ಗುಲ್ಲೆಬ್ಬಿತ್ತು. ತನ್ನ ಪತಿ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ಸ್ಪರ್ಧಿಸಲು ತೇಜಸ್ವಿನಿ ಅವರು ಕೂಡಾ ಉತ್ಸುಕರಾಗಿದ್ದರು. ಆದರೆ, ಕೊನೆ ಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ಏಕಾಏಕಿ ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡಿತ್ತು. ಇದು, ಅನಂತ್ ಕುಮಾರ್ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಖುದ್ದು ತೇಜಸ್ವಿನಿ ಅವರೇ ಟಿಕೆಟ್ ಕೈತಪ್ಪಿದ್ದಕ್ಕಾಗಿ ಪರೋಕ್ಷವಾಗಿ ನೋವು ತೋಡಿಕೊಂಡಿದ್ದರು. ಆದರೆ, ಬಿಜೆಪಿ ʼಕುಟುಂಬ ರಾಜಕಾರಣʼದ ಕಾರಣ ಮುಂದಿಟ್ಟು ಈ ಅಸಮಾಧಾನವನ್ನು ಯಶಸ್ವಿಯಾಗಿ ನಿಭಾಯಿಸಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದೀಗ, ಅಂತಹದ್ದೇ ಸನ್ನಿವೇಶವೊಂದು ಎದುರಾಗಿದ್ದು, ಬಿಜೆಪಿ ತನ್ನ ಹಿಂದಿನ ನಿಲುವಿಗೆ ಸಂಪೂರ್ಣ ತದ್ವಿರುದ್ಧವಾಗಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದೆ. ಕುಟುಂಬ ರಾಜಕಾರಣದ ಮುಂದಿಟ್ಟು ದಿವಂಗತ ಸಂಸದರ ಪತ್ನಿಗೆ ಟಿಕೆಟ್ ನೀಡಲು ಯಾವ ಬಿಜೆಪಿ ನಿರಾಕರಿಸಿತ್ತೋ, ಅದೇ ಬಿಜೆಪಿ ಈಗ ಇನ್ನೋರ್ವ ದಿವಂಗತ ಸಂಸದರ ಪತ್ನಿಗೆ ಟಿಕೆಟ್ ನೀಡಿ ತನ್ನ ಅಪ್ರಾಮಾಣಿಕತೆಯನ್ನು ಜಗಜ್ಜಾಹೀರುಗೊಳಿಸಿದೆ.
ಎರಡೇ ವರ್ಷದಲ್ಲಿ ಬಿಜೆಪಿ ತನ್ನ ಇಬ್ಬಗೆ ನೀತಿಯನ್ನು ಅನಾವರಣಗೊಳಿಸಿರುವುದು ದಿವಂಗತ ಅನಂತ್ ಕುಮಾರ್ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಹಿತೈಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ತೇಜಸ್ವಿನಿ ಅವರಿಗೆ ಟಿಕೆಟ್ ನೀಡಲು ತಡೆಯಾದ ಮಾನದಂಡಗಳೇಕೆ ಮಂಗಳಾ ಅವರ ವಿಚಾರದಲ್ಲಿ ತಡೆಯಾಗಲಿಲ್ಲ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
Admin
ಪತಿ, ಅಡ್ವಾಣಿ ಕ್ಯಾಂಪ್ನಲ್ಲಿದ್ದುದೇ ತೇಜಸ್ವಿನಿಯವರಿಗೆ ಮುಳುವಾಗಿತ್ತಾ?
ತನ್ನ ಪತಿ ಅನಂತ್ ಕುಮಾರ್ ಅಡ್ವಾಣಿ ಬಳಗದಲ್ಲಿ ಗುರುತಿಸಿಕೊಂಡದ್ದೇ ತೇಜಸ್ವಿನಿ ಅವರಿಗೆ ಮುಳುವಾಗಿದೆಯಾ ಎಂಬ ಪ್ರಶ್ನೆ ಈಗ ಮತ್ತೆ ಮೇಲೆದ್ದಿದೆ. ಕುಟುಂಬ ರಾಜಕಾರಣದ ಸಮಜಾಯಿಷಿ ನೀಡಿದರೂ, ತೇಜಸ್ವಿನಿಗೆ ಟಿಕೆಟ್ ನಿರಾಕರಿಸುವ ಹಿಂದೆ ಬಿಜೆಪಿಯ ಬೇರೆಯದ್ದೇ ಅಜೆಂಡಾ ಇತ್ತು ಎನ್ನಲಾಗಿದೆ. ಹೇಳಿಕೇಳಿ ಅನಂತ್ ಕುಮಾರ್ ಅಡ್ವಾಣಿ ಗುಂಪಿನೊಂದಿಗೆ ತಮ್ಮನ್ನು ತೊಡಗಿಸಿಕೊಂಡವರು, ಈ ಗುಂಪಿನ ನಾಯಕರನ್ನೆಲ್ಲಾ ಮೋದಿ-ಶಾ ಜೋಡಿ ಕ್ರಮೇಣ ನೇಪಥ್ಯಕ್ಕೆ ತಳ್ಳಿದೆ. ಹಾಗಾಗಿ, ಅನಂತ್ ಕುಮಾರ್ ಅವರ ಪತ್ನಿಗೆ ಟಿಕೆಟ್ ನೀಡದೆ ಬದಿಗೆ ಹಾಕಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಟಿಕೆಟ್ ಆಕಾಂಕ್ಷಿ ಮುತಾಲಿಕ್ ಮತ್ತವರ ಬೆಂಬಲಿಗರ ಪ್ರಹಸನ!
ಬಿಜೆಪಿ ರಾಜ್ಯದಲ್ಲಿ ಶಕ್ತಿಯಾಗಿ ಬೆಳೆಯುವ ಮೊದಲೇ ಹಿಂದುತ್ವದ ಮುಂಚೂಣಿ ನಾಯಕರಾಗಿದ್ದವರು ಮುತಾಲಿಕ್. ಶ್ರೀರಾಮಸೇನೆಯ ಸಂಸ್ಥಾಪಕರಾಗಿರುವ ಮುತಾಲಿಕ್ ಈ ಬಾರಿ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸುವ ಕನಸು ಕಂಡಿದ್ದರು. ಟಿಕೆಟ್ ಕುರಿತಾದ ತಮ್ಮ ಆಕಾಂಕ್ಷೆಯನ್ನು ಬಹಿರಂಗವಾಗಿ ಹೇಳಿಯೂ ಇದ್ದರೂ. ಹಿಂದುತ್ವಕ್ಕೋಸ್ಕರ ಅವಿರತ ದುಡಿದಿರುವ, ಸಮಾಜಬಾಹಿರ ಕೆಲಸಗಳಲ್ಲಿ ಯಾವುದೇ ಲಜ್ಜೆಯಿಲ್ಲದೆ ತೊಡಗಿರುವ ಮುತಾಲಿಕ್ ಗೆ ಬಿಜೆಪಿಗೆ ಟಿಕೆಟ್ ನೀಡಬೇಕೆಂದು ಮುತಾಲಿಕ್ ಬೆಂಬಲಿಗರೂ ಬಯಸಿದ್ದರು. ಬಿಜೆಪಿ ಟಿಕೆಟ್ ಪಡೆಯುವ ಎಲ್ಲಾ ಅರ್ಹತೆಯೂ ಹೊಂದಿರುವ ಮುತಾಲಿಕ ಈ ಕುರಿತು ಆಸೆಯನ್ನೂ ಕಟ್ಟಿದ್ದರು. ಆದರೆ, ಮಂಗಳಾ ಅಂಗಡಿಗೆ ಟಿಕೆಟ್ ಹೋಗಿರುವುದು ಮುತಾಲಿಕ್ ಹಾಗೂ ಮತ್ತವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಒಟ್ಟಾರೆ, ಅನುಕಂಪದ ಅಲೆಯಲ್ಲಿ ಮತ ಬಾಚುವ ಪ್ರಯತ್ನದಲ್ಲಿ ಬಿಜೆಪಿ ಕೊಚ್ಚಿಹೋದೀತೆ ಎಂಬುದು ಈಗ ಮುಖ್ಯಪ್ರಶ್ನೆ.!