ಭಾರತದ ನ್ಯಾಯಾಂಗ ವ್ಯವಸ್ಥೆ ಕುಸಿಯುತ್ತಿದೆ ಎಂದು ರಾಜ್ಯಸಭಾ ಸದಸ್ಯ, ಸುಪ್ರೀಂ ಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ಕಳವಳ ವ್ಯಕ್ತಪಡಿಸಿದ್ದಾರೆ. ನ್ಯಾಯಸಿಗಬೇಕೆಂದು ನ್ಯಾಯಾಲಯಗಳಿಗೆ ಹೋದರೆ ತೀರ್ಪಿಗಾಗಿ ದೀರ್ಘಕಾಲ ಕಾಯಬೇಕು ಎಂದಿದ್ದಾರೆ.
ನಿಮ್ಮ ಸಮಸ್ಯೆಗೆ ನ್ಯಾಯ ಸಿಗಬೇಕೆಂದು ನ್ಯಾಯಾಲಯದ ಬಳಿ ಹೋದರೆ ಸಮಸ್ಯೆಯ ತೀರ್ಪಿಗಾಗಿ ದೀರ್ಘಾವಧಿ ಕಾಯಬೇಕಾಗುತ್ತದೆ. ಸಾಂವಿಧಾನಿಕ ಸಂಸ್ಥೆಯಾಗಿ ನ್ಯಾಯಾಂಗ ಎಷ್ಟು ಮಹತ್ವವಾಗಿದೆ ಎಂಬುದನ್ನು ಒತ್ತಿ ಹೇಳಬೇಕಿಲ್ಲ ಆದರೆ ಈಗಿನ ಪರಿಸ್ಥಿತಿಯಲ್ಲಿ ನ್ಯಾಯಾಂಗ ಕುಸಿಯುತ್ತಿದೆ ಎಂದು ಹೇಳಿದ್ದಾರೆ.
ಇಂಡಿಯಾ ಟುಡೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೊಗಾಯ್, ʼನಿಮಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಬೇಕೆಂದು ಬಯಸುತ್ತೀರಿ, ಆದರೆ ನ್ಯಾಯಾಂಗದ ಮೌಲ್ಯಗಳು ಕುಸಿಯುವಂತೆ ಮಾಡಿದ್ದೀರಿ, ಇದರಿಂದ ನಿಮ್ಮ ಸಮಸ್ಯೆಯನ್ನು ಮುಂದಿಟ್ಟುಕೊಂಡು ನ್ಯಾಯಾಲಯದ ಮೆಟ್ಟಿಲೇರಿದರೆ ನೀವು ಯಾವುದೇ ತೀರ್ಪನ್ನು ಪಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
2020 ರಲ್ಲಿ ಭಾರತದ ಅಧೀನ ನ್ಯಾಯಾಲಯಗಳು ಸುಮಾರು 60 ಲಕ್ಷ ಹೊಸ ಪ್ರಕರಣಗಳನ್ನು ದಾಖಲಿಸಿಕೊಂಡಿವೆ. ಹೈಕೋರ್ಟ್ಗಳಲ್ಲಿ ಬಾಕಿಯಿರುವ ಪ್ರಕರಣಗಳ ಸಂಖ್ಯೆಗೆ ಮತ್ತೆ 3 ಲಕ್ಷ ಪ್ರಕರಣಗಳು ಸೇರಿಕೊಂಡಿವೆ. ಹಾಗೂ ಕಳೆದ ವರ್ಷ 6 ರಿಂದ 7 ಸಾವಿರ ಹೊಸ ಪ್ರಕರಣಗಳು ಸುಪ್ರೀಂ ಕೋರ್ಟ್ ನಲ್ಲಿ ಬಾಕಿಯಿರುವ ಪ್ರಕರಣಗಳಿಗೆ ಸೇರಿಕೊಂಡಿವೆ ಎಂದು ಅವರು ಹೇಳಿದ್ದಾರೆ.
ಇದರ ಪ್ರಕಾರ, ಭಾರತದ ಅಧೀನ ನ್ಯಾಯಾಲಯಗಳಲ್ಲಿ ಸುಮಾರು 4 ಕೋಟಿ ಪ್ರಕರಣಗಳು, ಹೈಕೋರ್ಟ್ನಲ್ಲಿ ಸುಮಾರು 44 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಮತ್ತು ಸುಪ್ರೀಂ ಕೋರ್ಟ್ನಲ್ಲಿ ಸುಮಾರು 70,000 ಪ್ರಕರಣಗಳು ಬಾಕಿ ಉಳಿದಿವೆ.
ಗೊಗಾಯ್ ಅವರ ಹೇಳಿಕೆಯೂ ಭಾರತದ ನ್ಯಾಯಾಂಗದ ಪ್ರಸ್ತುತ ಕಾರ್ಯವೈಖರಿಯನ್ನು ಸೂಚಿಸುತ್ತದೆ. ಅಂದರೆ, ಈ ಹಿಂದೆ ಬಾಕಿ ಇರುವ ಅದೆಷ್ಟೋ ಪ್ರಕರಣಗಳಿಗೆ ತೀರ್ಪು ನೀಡುವುದು ವಿಳಂಬವಾಗುತ್ತಿದೆ. ನ್ಯಾಯಾಧೀಶರ ಕೊರತೆಯಿಂದ ಇರಬಹುದು, ಕಾರ್ಯನಿರ್ವಹಣೆಯ ದಕ್ಷತೆ ಪ್ರಮಾಣದಲ್ಲಿ ಕುಂಠಿತತೆ ಇರಬಹುದು, ಈ ವ್ಯವಸ್ಥೆಯಲ್ಲಿ ಕೆಲಸ ಮಾಡುವವರು ಸಮಯ ಪ್ರಜ್ಞೆಯ ಜೊತೆಗೆ ಬದ್ಧತೆ, ಉತ್ಸಾಹ, ಕೆಲಸಕ್ಕೆ ನಿಗಧಿತ ಸಮಯವಿಲ್ಲ, ನಿರಂತರ ಕೆಲಸ ಮಾಡುವ ಗುಣ ಹೊಂದಿರಬೇಕೆಂದಿದ್ದಾರೆ.
ನ್ಯಾಯಾಧೀಶರ ಕೊರತೆಯಿಂದ ಕೆಲವು ಪ್ರಕರಣಗಳಿಗೆ ತೀರ್ಪು ಬರಬೇಕಾದರೆ ಹಲವು ವರ್ಷ ಅಥವಾ ದಶಕಗಳವರೆಗೆ ಕಾಯಬೇಕಾಗುತ್ತದೆ. ಭಾರತದಲ್ಲಿ ಹೂಡಿಕೆ ಮಾಡುವ ಕಂಪನಿಗಳು ಒಮ್ಮೆ ಕಾನೂನು ವಿವಾಧದಲ್ಲಿ ಸಿಲುಕಿಕೊಂಡರೆ ಮುಂದಿನ ಪರಿಸ್ಥಿತಿ ಕಠಿಣವಾಗಿರುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನಿವೃತ್ತಿಯಾಗಿ 15 ತಿಂಗಳ ಬಳಿಕ ಭಾರತದ ನ್ಯಾಯಾಂಗದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇವರು ಅಧಿಕಾರವಧಿಯಲ್ಲಿ ಅಂತಿಮವಾಗಿ ಐತಿಹಾಸಿಕ ಅಯೋಧ್ಯೆ ತೀರ್ಪು ನೀಡಿದ್ದರು. ನಿವೃತ್ತಿ ಬಳಿಕ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.