ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕಕ್ಕೆ ಬಂದು ಮೂರು ದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೋರ್ ಕಮಿಟಿಯ ಸದಸ್ಯರು, ಸಚಿವರು, ಶಾಸಕರು ಹಾಗೂ ಪದಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ದೆಹಲಿಗೆ ತೆರಳಿದ್ದಾರೆ. ಒಂದೆರಡು ದಿನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅವರಿಗೆ ಸಮಗ್ರವಾದ ವರದಿಯನ್ನೂ ನೀಡಲಿದ್ದಾರೆ. ಪರೋಕ್ಷವಾಗಿ ರಾಜ್ಯದಲ್ಲಿ ನಾಯಕತ್ವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವೊಬ್ಬ ಶಾಸಕರು ಬಹಿರಂಗವಾಗಿ ಹೇಳಿಕೆ ಕೊಡಬಾರದು ಎಂಬ ‘ಎಚ್ಚರಿಕೆ’ ನೀಡಿದ್ದಾರೆ. ಇಷ್ಟೆಲ್ಲಾ ಆದ ಮಾತ್ರಕ್ಕೆ ರಾಜ್ಯ ಬಿಜೆಪಿಯ ಬಿಕ್ಕಟ್ಟಿಗೆ ವಿರಾಮ ಲಭಿಸಿತು ಎಂದಾಗಲಿ, ಯಡಿಯೂರಪ್ಪ ನಾಯಕತ್ವದ ಬಗ್ಗೆ ಇದ್ದ ಅಪಸ್ವರ ಅಡಗಿತು ಎಂದಲ್ಲ, ಯಡಿಯೂರಪ್ಪ ವಿರುದ್ಧ ಬಂಡೆದ್ದಿರುವವರು ಸುಮ್ಮನಾಗಿಬಿಡುತ್ತಾರೆ ಎಂದೂ ಅಲ್ಲ. ರಾಜ್ಯ ಬಿಜೆಪಿಯಲ್ಲಿ ಎರಡನೇ ಹಂತದ ಹೋರಾಟಕ್ಕೆ ತಯಾರಿ ಈಗಾಗಲೇ ಆರಂಭವಾಗಿದೆ.
ಅರುಣ್ ಸಿಂಗ್ ಕಾರಣ!
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಮೇಲೆ ಮೊದಲಿನಿಂದಲೂ ‘ಯಡಿಯೂರಪ್ಪ ಪಕ್ಷಪಾತಿ’ ಎಂಬ ಆರೋಪ ಇದೆ. ಇದಕ್ಕೆ ಪೂರಕ ಎಂಬಂತೆ ರಾಜ್ಯದಲ್ಲಿ ಯಡಿಯೂರಪ್ಪ ನಾಯಕತ್ವದ ಬಗ್ಗೆ ಅಸಮಾಧಾನದ ಮಾತುಗಳು ಕೇಳಿಬಂದಾಗಲೆಲ್ಲಾ ದೆಹಲಿಯಿಂದ ಅರುಣ್ ಸಿಂಗ್ ’ಯಡಿಯೂರಪ್ಪ ನಾಯಕತ್ವ ಬದಲಾವಣೆ ಇಲ್ಲ, ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ’ ಎಂಬ ಸಂದೇಶ ರವಾನಿಸುತ್ತಾ ಬಂದಿದಾರೆ. ಈಗಲೂ ಬಿಕ್ಕಟ್ಟು ಬಗಹರಿಸಲು ರಾಜ್ಯಕ್ಕೆ ಬರುವ ಮೊದಲೇ ಯಡಿಯೂರಪ್ಪ ಅವರಿಗೆ ‘ಕ್ಲೀನ್ ಚೀಟ್’ ಕೊಟ್ಟೆ ಕಾಲಿಟ್ಟಿದ್ದರು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಾಗಲೂ ಮತ್ತು ಮೂರು ದಿನದ ಕಸರತ್ತಿನ ಬಳಿಕ ದೆಹಲಿ ವಿಮಾನ ಏರುವ ಮೊದಲು ಮತ್ತೆ ಮತ್ತೆ ಯಡಿಯೂರಪ್ಪ ನಾಯಕತ್ವದ ಪರವೇ ಮುದ್ರೆ ಹೊತ್ತಿದ್ದಾರೆ.
ಹೀಗೆ ಅರುಣ್ ಸಿಂಗ್ ಬಹಿರಂಗವಾಗಿಯೇ ಯಡಿಯೂರಪ್ಪ ಪರ ವಕಾಲತ್ತು ವಹಿಸಿರುವುದರಿಂದ ಭಿನ್ನಮತೀಯರು ಅವರ ಮೇಲೆ ವಿಶ್ವಾಸ ಇಡುವ ಸ್ಥಿತಿಯಲ್ಲಿ ಇಲ್ಲ. ಪರಿಣಾಮ ಏನಾಗಿದೆ ಎಂದರೆ ಮುಂದೆ ಯಡಿಯೂರಪ್ಪ ಜೊತೆಗೆ ಅರುಣ್ ಸಿಂಗ್ ಬದಲಾವಣೆ ಬಗ್ಗೆಯೂ ಹೈಕಮಾಂಡಿಗೆ ದೂರು ನೀಡುವ ಸಾಧ್ಯತೆಗಳು ಗೋಚರಿಸುತ್ತಿವೆ. ಅರುಣ್ ಸಿಂಗ್ ರಾಜ್ಯ ಬಿಜೆಪಿ ಬಿಕ್ಕಟ್ಟಿನ ಬಗ್ಗೆ ಒಂದೆರಡು ದಿನದಲ್ಲಿ ವರದಿ ನೀಡುತ್ತಾರೆ. ಆ ವರದಿ ಆಧರಿಸಿ ಬಿಜೆಪಿ ಹೈಕಮಾಂಡ್ ಸೂಕ್ತ ನಿರ್ಧಾರಕ್ಕೆ ಬರಬೇಕಾಗುತ್ತದೆ. ಇದೇ ಜೂನ್ 24ರಂದು ಪಕ್ಷದ ಅತ್ಯುನ್ನತ ವೇದಿಕೆಯಾದ ಬಿಜೆಪಿ ಸಂಸದೀಯ ಮಂಡಳಿ (ಮುಖ್ಯಮಂತ್ರಿ ಆಯ್ಕೆ, ಬದಲಾವಣೆ ನಿರ್ಧಾರ ಮಾಡುವ ವೇದಿಕೆ) ಸಭೆ ನಡೆಯಲಿದೆ. ಆ ಸಭೆಯಲ್ಲಿ ಯಡಿಯೂರಪ್ಪ ಅವರನ್ನು ಬದಲಿಸುವ ನಿರ್ಧಾರ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ (ಆ ಸಾಧ್ಯತೆ ಸದ್ಯಕ್ಕೆ ಕಡಿಮೆ) ಭಿನ್ನರು. ನಂತರ ಮುಂದಿನ ನಡೆಯ ಬಗ್ಗೆ ನಿರ್ಧಾರ ಆಗಲಿದೆ.
ಈಗಲೇ ಮಾಡಿಬಿಡಬೇಕೆಂಬ ಯೋಜನೆ
ತಿಂಗಳೊಳಗೆ ಯಡಿಯೂರಪ್ಪ ಅವರನ್ನು ಮಾಜಿ ಮಾಡಿಬಿಡಬೇಕೆಂದು ಬಂಡಾಯಗಾರರು ತುದಿಗಾಲಲ್ಲಿ ನಿಂತಿದ್ದಾರೆ. ಈಗ ಮಾಡದಿದ್ದರೆ ಕರೋನಾ ಮೂರನೇ ಅಲೆ ಅಪ್ಪಳಿಸಲಿದೆ. ಅದು ಮುಗಿಯುವಷ್ಟರಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಸನ್ನಿಹಿತವಾಗಲಿದೆ. ಅದಾದ ಬಳಿಕ ಮತ್ತೆ ಬಜೆಟ್ ಮಂಡನೆ ಮಾಡಬೇಕಾಗುತ್ತದೆ. ಕಡೆಗೆ ಚುನಾವಣಾ ವರ್ಷ ಆರಂಭವಾಗುತ್ತದೆ. ಆದುದರಿಂದ ಈಗಲೇ ಮುಖ್ಯಮಂತ್ರಿ ಬದಲಾವಣೆ ಮಾಡಬೇಕೆಂದು ಬಿ.ಎಲ್. ಸಂತೋಷ್ ಬಣ ಪಣ ತೊಟ್ಟಿದೆ ಎನ್ನುತ್ತವೆ ರಾಜ್ಯ ಬಿಜೆಪಿ ಮೂಲಗಳು. ಸದ್ಯಕ್ಕೆ ಈ ಕೆಲಸಕ್ಕೆ ಉಸ್ತುವಾರಿ ಅರುಣ್ ಸಿಂಗ್ ತೊಡಕಾಗಿ ಪರಿಣಮಿಸಿರುವುದರಿಂದ ಅವರ ವಿರುದ್ಧವೂ ಹೋರಾಟ ಮಾಡಲು ತಯಾರಿ ನಡೆಯುತ್ತಿವೆ.
ಅಜೆಂಡಾ ಫಿಕ್ಸ್!
ಇಷ್ಟು ದಿನ ಬಂಡಾಯಗಾರರು ನಾಯಕತ್ವ ಬದಲಾವಣೆಗೆ ಒಂದು ಹಂತದ ವೇದಿಕೆ ಸೃಷ್ಟಿ ಮಾಡಿದ್ದಾರೆ. ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದೂ ಇದರ ಒಂದು ಭಾಗ. ಆದರೀಗ ಅರುಣ್ ಸಿಂಗ್ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗದ ಹಿನ್ನಲೆಯಲ್ಲಿ ಎರಡನೇ ಹಂತದ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ಅಜೆಂಡಾ ಕೂಡ ಫಿಕ್ಸ್ ಆಗಿದೆ. ಅವೇ ಫೋನ್ ಟ್ಯಾಪಿಂಗ್ ಮತ್ತು ಮತ್ತು ನೀರಾವರಿ ಇಲಾಖೆಯ ಭ್ರಷ್ಟಾಚಾರ. ಮುಂದೆ ಈ ಎರಡೂ ವಿಷಯಗಳನ್ನು ಇಟ್ಟುಕೊಂಡು ಒಂದು ತಂಡ ದೆಹಲಿಗೆ ಹೋಗಿ ನೇರವಾಗಿ ಜೆ.ಪಿ. ನಡ್ಡ ಅವರಿಗೇ ದೂರು ನೀಡಲು ನಿಶ್ಚಯಿಸಿದೆ ಎಂದು ಕೂಡ ಹೇಳಲಾಗುತ್ತಿದೆ. ಫೋನ್ ಟ್ಯಾಪಿಂಗ್ ಮತ್ತು ನೀರಾವರಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಹೈಕಮಾಂಡಿಗೆ ದಾಖಲೆಗಳನ್ನು ಕೊಟ್ಟು ತಮ್ಮ ಉದ್ದೇಶ ಈಡೇರಿಸಿಕೊಳ್ಳುವ ಚಿಂತನೆ ಇದೆ. ಈ ಎಲ್ಲಾ ಹಿನ್ನಲೆಯಲ್ಲಿ ‘ಕೊರೋನಾ ಮೂರನೇ ಅಲೆ ಬೇಗ ಬಂದರಷ್ಟೇ ಯಡಿಯೂರಪ್ಪ ಬಚಾವಾಗಲು ಸಾಧ್ಯ’ ಎನ್ನುತ್ತಾರೆ ಬಿಜೆಪಿ ನಾಯಕರೊಬ್ಬರು. ರಾಜ್ಯ ಬಿಜೆಪಿಯಲ್ಲಿ ಇನ್ನೂ ಏನೇನು ಆಗುತ್ತದೆ ಎಂಬುದನ್ನು ಕಾದುನೋಡಬೇಕಷ್ಟೇ.