ಬಿಜೆಪಿ ಹಾಗೂ RSS ನ ಇಬ್ಬರು ನಾಯಕರು ಟ್ವಿಟರ್ನಲ್ಲಿ ಮೋದಿ ಸರ್ಕಾರದ ವಿವಾದಾತ್ಮಕ ತೆರಿಗೆ ಕಾಯ್ದೆ ಮಸೂದೆ ವಿಚಾರವಾಗಿ ಕಿತ್ತಾಡಿಕೊಂಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆರ್ಥಿಕ ವಹಿವಾಟುಗಳನ್ನು ನೋಡಿಕೊಳ್ಳುವ ಸ್ವದೇಶಿ ಜಾಗರಣ್ ಮಂಚ್(SJM) ಸಹ ಸಂಚಾಲಕ ಅಶ್ವನಿ ಮಹಾಜನ್ ಮತ್ತು ಬಿಜೆಪಿ ಹಿರಿಯ ನಾಯಕ ವಿಜಯ್ ಚೌಥೈವಾಲೆ ನಡುವೆ ಮಾತಿನ ಸಮರ ನಡೆದಿದೆ. ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವ ಮೋದಿ ಸರ್ಕಾರದ ನಿರ್ಧಾರದ ಸುತ್ತ ಈ ಇಬ್ಬರು ನಾಯಕರ ನಡುವೆ ವಾಗ್ವಾದ ಜರುಗಿದೆ.
ಈ ಬಗ್ಗೆ ಮೊದಲು ಟ್ವೀಟ್ ಮಾಡಿದ ಅಶ್ವನಿ ಮಹಾಜನ್, ಈ ನಿರ್ಧಾರ ಸರ್ಕಾರದ ಆದಾಯ ನಷ್ಟಕ್ಕೆ ಕಾರಣವಾಗಲಿದೆ ಮತ್ತು ವಿದೇಶಿ ನೇರ ಹೂಡಿಕೆಯು (FDI) ಅಪಾಯ ಎದುರಿಸಬೇಕಾಗುತ್ತದೆ’’ ಎಂದಿದ್ದಾರೆ. ಇದರ ಜೊತೆಗೆ, ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯಿಂದ ಒತ್ತಡಕ್ಕೆ ಒಳಗಾಗಿರುವ ಸರ್ಕಾರಕ್ಕೆ ಬೇರೆ ದಾರಿಯಿಲ್ಲ. ಆದರೆ ಇದರಿಂದ ಸರ್ಕಾರ ಮತ್ತು ಸಾರ್ವಜನಿಕರಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟ ಆಗಲಿದೆ. ವಿದೇಶಿ ಹೂಡಿಕೆಯಿಂದಾಗುವ ಅಡ್ಡ ಪರಿಣಾಮಗಳಿಗೆ ಇದೊಂದು ಉತ್ತಮ ಉದಾಹರಣೆ ಎಂದು ಮಹಾಜನ್ ಟ್ವೀಟ್ ಮಾಡಿದ್ದಾರೆ.
ಮಹಾಜನ್ ಟ್ವೀಟ್ಗೆ ಪ್ರತಿಕ್ರಿಯಿಸಿದ ಬಿಜೆಪಿಯ ವಿಜಯ್ ಚೌಥೈವಾಲೆ, ನಿಮ್ಮ ಪ್ರಶ್ನೆ ನೀವು ಎಷ್ಟರ ಮಟ್ಟಿಗೆ ದೇಶದ ಬಗ್ಗೆ ಕಾಳಜಿ ಹೊಂದಿದ್ದೀರಿ ಎಂಬುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಒಟ್ಟಾರೆಯಾಗಿ ನೀವು ವಿದೇಶಿ ಹೂಡಿಕೆಯ ಮೇಲೆ ಸಂಪೂರ್ಣ ನಿಷೇಧ ಹೇರಿ ಎನ್ನುತ್ತಿದ್ದೀರಾ ಎಂದು ಮಹಾಜನ್ ಅನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಮಹಾಜನ್, ಸರ್ಕಾರದ ನಿರ್ಧಾರಗಳನ್ನು ಪರಮಾರ್ಶೆ ಮಾಡಲು ಯಾಕೆ ಸಾಧ್ಯವಿಲ್ಲ.? ಪಾಲಿಸಿಯ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಮಾತನಾಡುವುದು ಅಪರಾಧವೇ.? ಎಂದು ಅವರು ಟ್ವಿಟರ್ನಲ್ಲಿ ಮರು ಪ್ರಶ್ನಿಸಿದ್ದಾರೆ.
ಇದಕ್ಕೆ ಮತ್ತೆ ಉತ್ತರ ನೀಡಿದ ಬಿಜೆಪಿ ನಾಯಕ ಚೌಥೈವಾಲೆ, ದೇಶದ ಹಿತಾಸಕ್ತಿಗೆ ಒಳಪಡುವ ಎಲ್ಲವೂ ಅಪರಾಧವಾಗಿರುವುದಿಲ್ಲ. ನೀವು ಪದೇ ಪದೇ ಇದನ್ನು ಅರ್ಥ ಮಾಡಿಕೊಳ್ಳುವಲ್ಲಿಯೇ ಎಡವುತ್ತಿದ್ದೀರಿ ಎಂದು ಚಾಟಿ ಬೀಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಾಜನ್, ಬನ್ನಿ ಹಾಗದರೆ ಚರ್ಚೆ ಮಾಡೋಣ ಎಂದು ಬಹಿರಂಗ ಸವಾಲು ಎಸೆದರು. ನೀವು ನಿಮ್ಮ ‘ಶ್ರೇಷ್ಠ’ ನಂಬಿಕೆಗಳ ಬಗ್ಗೆ ಏಕೆ ಚರ್ಚೆಗೆ ಬರುವುದಿಲ್ಲ.? ಎಂದು ಚೌಥೈವಾಲೆ ಅನ್ನು ಕುಟುಕಿದ್ದಾರೆ. ಇದಕ್ಕೆ ಈವರೆಗೆ ಬಿಜೆಪಿ ಹಿರಿಯ ನಾಯಕ ವಿಜಯ್ ಚೌಥೈವಾಲೆ ಯವುದೇ ಪ್ರತಿಕ್ರಿಯೆ ನೀಡಿಲ್ಲ.
ವಿವಾದಾತ್ಮಕ ಆದಾಯ ತೆರಿಗೆ ಕಾಯ್ದೆಯ ಹಿನ್ನೋಟ :
ಹಿಂದಿನ ಯುಪಿಎ ಸರ್ಕಾರ 2012ರಲ್ಲಿ ವಿವಾದಾತ್ಮಕ ತೆರಿಗೆ ತಿದ್ದುಪಡಿಗಳನ್ನು ತೆಗೆದುಹಾಕುವ ನಿರ್ಧಾರ ಮಾಡಿತ್ತು. ಇದೀಗ ಅಂಥದ್ದೇ ತಿದ್ದುಪಡಿಗಳಿಗೆ ಮುಂದಾಗಿರುವ ಮೋದಿ ಸರ್ಕಾರವು ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಿದೆ. ಮೋದಿ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ ಈ ಆದಾಯ ತೆರಿಗೆ ಕಾಯ್ದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಅಗತ್ಯವಿಲ್ಲ. ಏಕೆಂದರೆ ಇದೊಂದು ಹಣಸಕಾಸಿಗೆ ಸಂಬಂಧಿಸಿದ ಕಾಯ್ದೆಯಾಗಿದ್ದು, ಕೇಂದ್ರ ಸರ್ಕಾರ ಲೋಕಸಭೆಯಲ್ಲೇ ಇದಕ್ಕೆ ಅಂಗೀಕಾರ ನೀಡಿದೆ.
ಲೋಕಸಭೆಯಲ್ಲಿ ಮಸೂದೆ ಮಂಡಿಸಿದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಕಳೆದ ಕೆಲವು ವರ್ಷಗಳಲ್ಲಿ ಹಣಕಾಸು ಮತ್ತು ಮೂಲಸೌಕರ್ಯ ವಲಯದಲ್ಲಿ ಪ್ರಮುಖ ಸುಧಾರಣೆಗಳನ್ನು ಆರಂಭಿಸಲಾಗಿದೆ, ಇದು ದೇಶದಲ್ಲಿ ಹೂಡಿಕೆಗೆ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿದೆ. ಆದಾಗ್ಯೂ, ಈ ಪೂರ್ವನಿಯೋಜಿತ ಸ್ಪಷ್ಟೀಕರಣ ಮತ್ತು ಕೆಲವು ಸಂದರ್ಭಗಳಲ್ಲಿ ಸೃಷ್ಟಿಯಾದ ಬೇಡಿಕೆಯು ಸಂಭಾವ್ಯ ಹೂಡಿಕೆದಾರರಲ್ಲಿ ಈ ಬಗ್ಗೆ ತಳಮಳ ಉಂಟುಮಾಡಿದೆ ಎಂದರು.
(ವರದಿ: ಮಂಜುನಾಥ್. ಬಿ)