40 ಯೋಧರ ಸಾವಿಗೆ ಕಾರಣವಾದ ಪುಲ್ವಾಮ ಭಯೋತ್ಪಾದಕ ದಾಳಿಯ ಬಗ್ಗೆ ಆಗಿನ ಜಮ್ಮು & ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸ್ಪೋಟಕ ಮಾಹಿತಿಗಳನ್ನು ಬಹಿರಂಗಗೊಳಿಸಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
‘The Wire’ ಸುದ್ದಿ ಸಂಸ್ಥೆಯ ಕರಣ್ ಥಾಪರ್ ಅವರಿಗೆ ನೀಡಿದ್ದ ಸಂದರ್ಶನದಲ್ಲಿ ಸತ್ಯಪಾಲ್ ಮಲಿಕ್, ಪುಲ್ವಾಮಾ ದಾಳಿ ಸಂದರ್ಭದಲ್ಲಿನ ಲೋಪಗಳ ಕುರಿತು ಹಲವಾರು ವಿಷಯಗಳನ್ನು ಬಹಿರಂಗಗೊಳಿಸಿದ್ದರು.
“ನರೇಂದ್ರ ಮೋದಿಜಿ ನಿಮ್ಮ ಸರ್ಕಾರದ ತಪ್ಪಿನಿಂದಾಗಿ ಪುಲ್ವಾಮ ದಾಳಿಯಲ್ಲಿ 40 ಸೈನಿಕರು ಹುತಾತ್ಮರಾಗಬೇಕಾಯಿತು. ನಮ್ಮ ಯೋಧರಿಗೆ ವಿಮಾನವನ್ನು ನೀಡಿದ್ದರೆ ಉಗ್ರರ ಸಂಚು ವಿಫಲವಾಗುತ್ತಿತ್ತು. ಈ ಬಹುದೊಡ್ಡ ತಪ್ಪಿಗೆ ಕ್ರಮ ತೆಗೆದುಕೊಳ್ಳುವ ಬದಲು ನೀವು ವಿಷಯವನ್ನು ನಿಗ್ರಹಿಸಿ ನಿಮ್ಮ ಇಮೇಜ್ಗೆ ಧಕ್ಕೆ ಆಗದಂತೆ ನೋಡಿಕೊಂಡಿರಿ. ಪುಲ್ವಾಮಾ ಕುರಿತು ಸತ್ಯಪಾಲ್ ಮಲಿಕ್ ಹೇಳಿಕೆ ಕೇಳಿ ದೇಶವೇ ಬೆಚ್ಚಿಬಿದ್ದಿದೆ” ಎಂದು ಕಾಂಗ್ರೆಸ್ ಕೂಡಾ ಟ್ವೀಟ್ ಮಾಡಿದೆ.
ಮೋದಿ ಸರ್ಕಾರದ ಅಸಮರ್ಥತೆಯಿಂದಲೇ 2019ರ ಪುಲ್ವಾಮ ದಾಳಿಯಲ್ಲಿ 40 ಭಾರತೀಯ ಸೈನಿಕರು ಹುತಾತ್ಮರಾಗಬೇಕಾಯಿತು ಎಂದು ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ಈ ಹೇಳಿಕೆಯ ವಿಡಿಯೋ ತುಣುಕುಗಳು ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ನರೇಂದ್ರ ಮೋದಿಯವರ ಮೇಲೆ ಟೀಕಾಸ್ತ್ರ ಹೂಡಿದೆ.
“ಪುಲ್ವಾಮಾದಲ್ಲಿ ಸಿಆರ್ಪಿಎಫ್ ಬೆಂಗಾವಲು ಪಡೆಯ ಮೇಲಿನ ದಾಳಿಯು ಭಾರತೀಯ ಗುಪ್ತಚರ ಇಲಾಖೆಯ ಬಹುದೊಡ್ಡ ವೈಫಲ್ಯ. ನಿರ್ದಿಷ್ಟವಾಗಿ ಗೃಹ ಸಚಿವಾಲಯದ ಅಸಮರ್ಥತೆಯ ಪರಿಣಾಮದಿಂದ ಈ ದಾಳಿ ನಡೆದಿದೆ. ಆಗ ರಾಜನಾಥ್ ಸಿಂಗ್ ಗೃಹ ಸಚಿವರಾಗಿದ್ದರು. ಸಿಆರ್ಪಿಎಫ್ ತನ್ನ ಜವಾನರನ್ನು ಸಾಗಿಸಲು ಏರ್ಕ್ರಾಫ್ಟ್ ಅನ್ನು ಕೇಳಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಅದನ್ನು ನಿರಾಕರಿಸಿತ್ತು” ಎಂದು ಸತ್ಯಪಾಲ್ ಆರೋಪಿಸಿದ್ದಾರೆ.
ಇದರ ಬಳಿಕ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಕೂಡಾ ಸತ್ಯಪಾಲ್ ಅವರ ಸಂದರ್ಶನ ಮಾಡಿದ್ದು, ಸತ್ಯಪಾಲ್ ತಾನು ಹೇಳಿದ ವಿಷಯವನ್ನು ಸಮರ್ಥಿಸಿದ್ದಾರೆ. ಪುಲ್ವಾಮ ದಾಳಿಗೆ ಕಾರಣವಾದ ಲೋಪಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತಂದರೂ, ಅವರು ನನಗೆ ಮೌನವಾಗಿರುವಂತೆ ಸೂಚಿಸಿದ್ದರು ಎಂಬ ಸ್ಫೋಟಕ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.
ಕರಣ್ ಥಾಪರ್ ಅವರೊಂದಿಗಿನ ತಮ್ಮ ಸಂದರ್ಶನವನ್ನು ಸಮರ್ಪಕವಾಗಿ ಪ್ರಸಾರ ಮಾಡುವಲ್ಲಿ ಮಾಧ್ಯಮ ಸಂಸ್ಥೆಗಳು ವಿಫಲವಾಗಿದ್ದು, ಕೆಲವೇ ಮಾಧ್ಯಮ ಸಂಸ್ಥೆಗಳು ಮಾತ್ರ ಅದನ್ನು ಬಿತ್ತರಿಸಿವೆ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪುಲ್ವಾಮಾ ದಾಳಿಯ ನಂತರ ಸಿಆರ್ಪಿಎಫ್ ಯೋಧರ ಸಾಗಣೆಗೆ ಐದು ವಿಮಾನಗಳಿಗೆ ಬೇಡಿಕೆ ಇಡಲಾಗಿತ್ತು. ಆದರೆ, ಗೃಹ ಸಚಿವಾಲಯವು ಅವನ್ನು ಒದಗಿಸಲಿಲ್ಲ. ಅಲ್ಲದೆ ಅಲ್ಲಿ ಇನ್ನೂ ಹಲವು ಲೋಪಗಳಾಗಿದ್ದು, ಶಿಷ್ಟಾಚಾರದ ಪ್ರಕಾರ, ಯೋಧರ ಕಣ್ಗಾವಲು ವಾಹನವು ಆಕಾಶದಲ್ಲಿ ಹಾರಾಟ ನಡೆಸುವ ಬದಲು ರಸ್ತೆ ಮಾರ್ಗವಾಗಿ ತೆರಳುತ್ತಿತ್ತು. ರಸ್ತೆ ಮಾರ್ಗವಾಗಿ ತೆರಳುವ ವಾಹನಗಳನ್ನು ತಪಾಸಣೆ ಮಾಡಲು ಯಾವುದೇ ಗಸ್ತು ವಾಹನಗಳಾಗಲಿ, ತಪಾಸಣಾ ಠಾಣೆಗಳಾಗಲಿ ಇರಲಿಲ್ಲ ಎಂದು ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ಯೋಧರ ಕಣ್ಗಾವಲು ವಾಹನವು ಶಿಷ್ಟಾಚಾರದ ಪ್ರಕಾರ ಆಕಾಶ ಮಾರ್ಗವಾಗಿ ತೆರಳುವ ಬದಲು ರಸ್ತೆ ಮಾರ್ಗವಾಗಿ ಏಕೆ ತೆರಳುತ್ತಿತ್ತು ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಕಣ್ಗಾವಲು ವಾಹನ ತೆರಳುವ ಮುನ್ನ ರಸ್ತೆಯಲ್ಲಿ ಸಾಗುವ ವಾಹನಗಳನ್ನು ಜಿಪ್ಸಿ ತಡೆಯಬೇಕಿದ್ದರೂ, ಕಣ್ಗಾವಲು ವಾಹನವನ್ನು ಮೊದಲು ತೆರಳಲು ಬಿಡದೆ, ವಾಹನಗಳು ಸಾಗಲು ಅವಕಾಶ ಮಾಡಿಕೊಟ್ಟಿದ್ದೇಕೆ? ಎಂದು ಮಲಿಕ್ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನನಗೆ ಕರೆ ಮಾಡಿ, ಸರ್ಕಾರದ ಲೋಪಗಳ ಕುರಿತು ಏನೂ ಮಾತಾಡಬಾರದೆಂದು ಸೂಚಿಸಿದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಕೂಡಾ ನನಗೆ ಕರೆ ಮಾಡಿ ಮೌನವಾಗಿರುವಂತೆ ಸೂಚಿಸಿದರು ಎಂದು ಮಲಿಕ್ ತಿಳಿಸಿದ್ದಾರೆ.
“ದಾಳಿಯ ಒಂದು ಗಂಟೆಯ ನಂತರ ಪ್ರಧಾನಿ ನರೇಂದ್ರ ಮೋದಿ ನನಗೆ ಕರೆ ಮಾಡಿದ್ದರು. ನಾನವರಿಗೆ ನಮ್ಮ ಲೋಪಗಳ ಕುರಿತು ತಿಳಿಸಿದೆ. ಅದಕ್ಕವರು ನನಗೆ ಮೌನವಾಗಿರುವಂತೆ ಸೂಚಿಸಿದ್ದರು. ಆದರೆ ನಾನು ಆ ಹೊತ್ತಿಗಾಗಲೇ ಒಂದೆರಡು ಮಾಧ್ಯಮ ಸಂಸ್ಥೆಗಳಿಗೆ ಹೇಳಿಕೆ ನೀಡಿದ್ದೆ” ಎಂದು ಸತ್ಯಪಾಲ್ ತಿಳಿಸಿದ್ದಾರೆ.
“ಅದು ಗುಪ್ತಚರ ವೈಫಲ್ಯವಾಗಿರಲಿಕ್ಕೂ ಸಾಕು. ಸ್ಫೋಟಕಗಳು ತುಂಬಿದ್ದ ವಾಹನವು ರಾಜ್ಯದಲ್ಲಿ ಹತ್ತು ದಿನಗಳಿಂದ ಓಡಾಡುತ್ತಿದ್ದರೂ ಅದನ್ನು ಯಾರೂ ತಡೆದಿರಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಒಂದು ತಿಂಗಳು ಮುಂಚಿತವಾಗಿಯೇ ಸಂಭವನೀಯ ದಾಳಿಯ ಬಗ್ಗೆ ಗುಪ್ತಚರ ವಿಭಾಗದ ಎಚ್ಚರಿಕೆ ಇದ್ದರೂ, ಕೂಡು ಮಾರ್ಗಗಳಲ್ಲೇಕೆ ತಪಾಸಣಾ ಸಿಬ್ಬಂದಿಗಳನ್ನು ನೇಮಿಸಲಿಲ್ಲ. ದಾಳಿ ನಡೆಯುವವರೆಗೂ ನನಗೆ ಸಿಆರ್ಪಿಎಫ್ ಯೋಧರ ಚಲನವಲನದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ದಾಳಿ ನಡೆದ ನಂತರವಷ್ಟೇ ಈ ಬಗ್ಗೆ ತಿಳಿದು ಬಂತು. ಅಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಪಾಕಿಸ್ತಾನ ಮಾತ್ರ ವ್ಯವಸ್ಥೆ ಮಾಡಲು ಸಾಧ್ಯ ಮತ್ತು ಅದನ್ನು ಸ್ಥಳೀಯವಾಗಿ ಖರೀದಿಸಲು ಸಾಧ್ಯವಿಲ್ಲ. ಒಂದು ವೇಳೆ ನಾನೇನಾದರೂ ಕೇಂದ್ರ ಸರ್ಕಾರ ವಿರೋಧಿ ಕ್ರಮವನ್ನು ಕೈಗೊಂಡಿದ್ದರೆ ನನಗೆ ದೇಶ ವಿರೋಧಿ ಎಂಬ ಹಣೆಪಟ್ಟಿ ಹಚ್ಚಲಾಗುತ್ತಿತ್ತು. ಹೀಗಾಗಿಯೇ ಅಂದು ನನಗೆ ಮೌನವಾಗಿರಲು ಸೂಚಿಸಲಾಯಿತು ಎಂದವರು ಹೇಳಿದ್ದಾರೆ.
ನನ್ನ ಸಂಕಟವೇನೆಂದರೆ, ನಾವು ನಮ್ಮ ಲೋಪಗಳನ್ನು ಒಪ್ಪಿಕೊಳ್ಳಬಹುದಾಗಿತ್ತು. ಆದರೆ, ದೇಶ ಎಂದಿಗೂ ಸತ್ಯ ತಿಳಿಯುವುದಿಲ್ಲ ಯಾಕೆಂದರೆ ಪ್ರಧಾನಿ ಆ ಕುರಿತು ಎಂದಿಗೂ ಮಾತನಾಡುವುದಿಲ್ಲ ಎಂದು ಸತ್ಯಪಾಲ್ ಹೇಳಿದ್ದಾರೆ.