ಪ್ರತಿವರ್ಷಕ್ಕಿಂತ ಈ ಸಲ ಪಿಯುಸಿ ಸೈನ್ಸ್ ದಂಧೆ ಜೋರಾಗಿಯೇ ನಡೆದಿದೆ. ನಿನ್ನೆ 23ಕ್ಕೆ ಪಿಯು ಕಾಲೇಜುಗಳು ಆರಂಭವಾಗಿವೆ. ಆಗಸ್ಟ್ 31ರವರೆಗೂ ಪ್ರವೇಶ ಪಡೆಯಲು ಅವಕಾಶವಿದೆ. ನಂತರ ಫೈನ್ ತುಂಬಿ ಅವಕಾಶ ವಿಸ್ತರಣೆಯಂತೆ.
ಗದಗ ಜಿಲ್ಲೆಯ ನರೇಗಲ್ನಲ್ಲಿ ಪೋಷಕರು ಸರ್ಕಾರಿ ಕಾಲೇಜು ಎದುರು ಪ್ರತಿಭಟನೆ ನಡೆಸಿದ್ದಾರೆ. ಇದು ಕೇವಲ ಒಂದು ನರೇಗಲ್ ವಿಷಯವಲ್ಲ. ಸಿಂಧನೂರಿನ ಸರ್ಕಾರಿ ಕಾಲೇಜಿಗೆ ಪಿಯುಸಿ, ಡಿಗ್ರಿ ಸೇರಿ 2 ಸಾವಿರಕ್ಕೂ ಹೆಚ್ಚು ಅಪ್ಲಿಕೇಷನ್ ಬಂದಿವೆ.
ಇದಕ್ಕೆ ಕಾರಣ ಸಿಬಿಎಸ್ಸಿ, ಐಸಿಎಸ್ಇ ವಿಭಾಗದಿಂದ ಸುಮಾರು 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ನೇರವಾಗಿ ಪ್ರಮೋಟ್ ಆಗಿದ್ದಾರೆ. ಇಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ 8 ಲಕ್ಷ 76 ಸಾವಿರ ವಿದ್ಯಾರ್ಥಿಗಳೆಲ್ಲ (ಡಿಬಾರ್ ಆದ ಒಬ್ಬ ವಿದ್ಯಾರ್ಥಿಯನ್ನು ಹೊರತುಪಡಿಸಿ) ಪಾಸು ಆಗಿದ್ದಾರೆ.
ಆದರೆ ಬಹುತೇಕ ಗ್ರಾಮೀಣ ಮಕ್ಕಳು ಸರ್ಕಾರಿ ಕಾಲೇಜುಗಳನ್ನೇ ಅವಲಂಭಿಸಿದ್ದಾರೆ. ಆದರೆ ಅಲ್ಲಿ ಕೋಟಾದ ಆಚೆಗೆ ಪ್ರವೇಶಾತಿ ನೀಡಲು ಪ್ರಾಶುಂಪಾಲರಿಗೆ ಅನುಮತಿ ಇಲ್ಲ. ಲಿಖಿತ ಆದೇಶವೂ ಇಲ್ಲ.
ಸರ್ಕಾರವೇ ಮೊದಲೇ ಈ ಬಗ್ಗೆ ಯೋಚನೆ ಮಾಡಿ ಸರ್ಕಾರಿ ಕಾಲೇಜುಗಳಿಗೆ ಶೇ. 25-30ರಷ್ಟು ಸೀಟು ಹೆಚ್ಚಳಕ್ಕೆ ಅನುಮತಿ ನೀಡಬೇಕಿತ್ತು. ಸದ್ಯಕ್ಕೆ ಗೆಸ್ಟ್ ಲೆಕ್ಚರರ್ ಗಳನ್ನು ನೇಮಕಾತಿ ಮಾಡಿಕೊಳ್ಳಬೇಕಿತ್ತು. ಕೊಠಡಿಗಳ ವಿಸ್ತರಣೆಗೆ ಖಾಸಗಿ ಬಿಲ್ಡಿಂಗ್ಗಳನ್ನು ಬಾಡಿಗೆ ಪಡೆಯಬೇಕಿತ್ತು.
ಇಂತಹ ಮುಂದಾಲೋಚನೆ ಮಾಡದ ಸರ್ಕಾರದಿಂದ ಈಗ ಎರಡು ಸಮಸ್ಯೆ ಸೃಷ್ಟಿಯಾಗಿವೆ. ಒಂದು ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜುಗಳಿಗೆ ಪ್ರವೇಶ ಕಷ್ಟವಾಗುತ್ತಿದೆ. ಇನ್ನೊಂದು ಕಡೆ ಇದನ್ನೇ ಬಳಸಿಕೊಂಡು ಖಾಸಗಿ ಕಾಲೇಜುಗಳು ಡೊನೇಷನ್ ರೂಪದಲ್ಲಿ ಹಣ ಗೆಬರುತ್ತಿವೆ. ಇತ್ತ ಸೈನ್ಸ್ ವಿಭಾಗಕ್ಕಂತೂ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದ್ದು ರೆಸಿದೆನ್ಸಿಯಲ್ ಪಿಯು ಸೈನ್ಸ್ ಕಾಲೇಜುಗಳು ವಾರ್ಷಿಕ 3-4 ಲಕ್ಷ ರೂವರೆಗೆ ವಾರ್ಷಿಕ ಫೀ (ಟ್ಯೂಷನ್ ಶುಲ್ಕದ ರಸೀತಿಯೇ ಬೇರೆ, ಡೊನೇಷನ್ಗೆ ರಸೀತಿಯೇ ಇಲ್ಲ) ಸುಲಿಗೆ ಆರಂಭಿಸಿವೆ.
ಈ ಕುರಿತಂತೆ ‘ಪ್ರತಿಧ್ವನಿ’ ನಾಡಿನ ಶಿಕ್ಷ ಣತಜ್ಞರು, ಆಕ್ಟಿವಿಸ್ಟ್ಗಳು, ನಮ್ಮ ಹೊಸ ಶಿಕ್ಷಣ ಸಚಿವರ ಜೊತೆ ಮಾತನಾಡಿ ಈ ವರದಿ ಸಿದ್ಧ ಮಾಡಿದೆ.
ಮೊದಲಿಗೆ ಈ ಕುರಿತು ಇಂದು ಹೊಸ ಶಿಕ್ಷಣ ಸಚಿವ ಡಿ.ಸಿ ನಾಗೇಶ್ ಅವರನ್ನು ಸಂಪರ್ಕಿಸಿದಾಗ ಅವರು,’’\ಪ್ರವೇಶಾತಿ ತೊಡಕುಗಳನ್ನು ಬಗೆಹರಿಸುತ್ತೇವೆ. ರಾಜ್ಯದ 21 ಭಾಗದಲ್ಲಿ ಸಮಸ್ಯೆ ಇದೆ. ಸ್ಥಳೀಯ ಸರ್ಕಾರಿ ಕಾಲೇಜುಗಳಲಲ್ಲಿ ಪ್ರವೇಶ ಸಿಗದವರಿಗೆ ಸಮೀಪದ ಸರ್ಕಾರಿ ಅಥವಾ ಏಡೆಡ್ ಕಾಲೇಜುಗಳುಗೆ ರೆಫರ್ ಮಾಡುತ್ತೇವೆ’ ಎಂದರು.
ಖಾಸಗಿ ಸ್ವತಂತ್ರ ಪಿಯುಸಿ ಸೈನ್ಸ್ ಕಾಲೇಜುಗಳ ಲೂಟಿ ಬಗ್ಗೆ ಕೇಳಿದಾಗ, ‘ನಾವು ಅದರಲ್ಲಿ ಹಸ್ತಕ್ಷೇಪ ಮಾಡುವಣತಿಲ್ಲ. ಹೈಕೋರ್ಟ್ನಿಂದ ಅವರೆಲ್ಲ ಸ್ಟೇ ತಂದಿದ್ದಾರೆ’ ಎ<ದರು. ಕನ್ನಡ ಪತ್ರಿಕೆಗಳು ಮತ್ತು ಶಿಕ್ಷಣ ತಜ್ಷರಿಗೂ ಗೊತ್ತೇ ಇಲ್ಲದ ಈ ಸ್ಟೇ ಯಾವುದು ಎಂಬ ಪ್ರಶ್ನೆಗೆ ಅವರಲ್ಲಿ ನಿಖರ ಉತ್ತರವಿಲ್ಲ.
ಈ ಬಗ್ಗೆ ಪ್ರತ ಕ್ರಿಯೆ ನೀಡಿದ ಶಿಕ್ಷಣ ತಜ್ಞ ಶ್ರೀಪಾದಭಟ್ ಮತ್ತು ಎಸ್್ಎಫ್ಐನ ವಾಸುದೇವರೆಡ್ಡಿ, ‘ಸರ್ಜಾರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಅದು ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಡುತ್ತಿದೆ’’ ಎಂದರು.
ಸೈನ್ಸ್ ವ್ಯಹಾರ ಅವ್ಯಾಹತ
ಈ ಸಂದರ್ಭ ಬಳಸಿಕೊಂಡ ಸ್ವತಂತ್ರ ಪ್ರೈವೈಟ್ ಪಿಯು ಸೈನ್ಸ್ ಕಾಲೇಜುಗಳು ಈ ವರ್ಷ ಪೂರ್ತಿ ದಂಧೆಗೇ ಇಳಿದಂತಿದೆ. ‘ಪ್ರತಿಧ್ವನಿ’ ಪ್ರತಿಷ್ಠಿತ, ವಿಶ್ವಾಸಾರ್ಹ ಕನ್ನಡ ಮತ್ತು ಇಂಗ್ಲಿಷ್ ದೈನಿಕಗಳ ಸ್ಥಳೀಯ ಹಿರಿಯ ವರೆದಿಗಾರರ ಜೊತೆ ಸೇರಿ ಈ ಕೆಳಗಿನ ಮಾಹಿತಿ ನೀಡುತ್ತಿದೆ.
ಬಹುತೇಕ ಸ್ವತಂತ್ರ ಪಿಯು ಸೈನ್ಸ್ ಕಾಲೇಜುಗಳು ಸಿಬಿಎಸ್ಸಿ, ಐಸಿಎಸ್ಇ ಮತ್ತು ಎಸ್ಎಸ್ಎಲ್ಸಿ ಫಲಿತಾಂಶ ಬರುವ ಮೊದಲೇ ಅಡ್ಮಿಷನ್ ಆರಂಭಿಸಿದ್ದವು.
ಸ್ವತಂತ್ರ ಪಿಯು ಸೈನ್ಸ್ ಕಾಲೇಜುಗಳು ಈಗ ರಾಜ್ಯದ ಎಲ್ಲ ನಗರಗಳಲ್ಲಿ ನಾಯಿಕೊಡೆಗಳಂತೆ ಹಬ್ಬಿವೆ. ಇದರ ಹಿಂದೆ ಹಳೆಯ ಟ್ಯೂಷನ್ ಮಾಫಿಯಾವೂ ಇದೆ. ಹಿಂದೆ ಕಾಲೇಜುಗಳಲ್ಲಿದ್ದು ಹೊರಗೆ ಪ್ರೈವೇಟ್ ಟ್ಯೂಷನ್ ಮಾಡುತ್ತಿದ್ದ ಬಹುತೇಕರು ಈಗ ಅಧಿಕೃತವಾಗಿ ಕಾಲೇಜು ತೆರೆದು ಈ ದಂಧೆ ಮಾಡುತ್ತಿದ್ದಾರೆ.
ಹತ್ತನೆ ಇಯತ್ತೆಯಲ್ಲಿ 95 ಪರ್ಸೆಂಟ್ ಮಾಡಿದವರಿಗೆ ವಸತಿಸಹಿತ ಪ್ರವೇಶಕ್ಕೆ 1 ಲಕ್ಷ 70 ಸಾವಿರ. ಶೇ. 85ರ ಆಸುಪಾಸಿನವರಿಗೆ 3 ಲಕ್ಷದಷ್ಟು ಫೀಸು. ಇದರಲ್ಲಿ ಬೋಧನಾ ಶುಲ್ಕದ ರಸೀತಿಯೇ ಬೇರೆ. ಉಳಿದದ್ದು ರೆಸೆಡೆನ್ಸಿಯಲ್ (ಹಾಸ್ಟೇಲ್) ಖರ್ಚು ಮತ್ತು ಸ್ಪೇಷಲ್ ಕೋಚಿಂಗ್ ಹೆಸರಿನಲ್ಲಿ ಅನಧಿಕೃತವಾಗಿ ಪಾವತಿಯಾಗುತ್ತದೆ. ಈ ವರ್ಷ ಇದು ಅಲ್ಮೋಸ್ಟ್ ಡಬಲ್ ಆಗುತ್ತಿದೆ.
ಪ್ರವೇಶ ಪಡೆದ ‘ಜಾಣ’ ಮಕ್ಕಳಿಗೆ ಕಾಲೇಜುಗಳಲ್ಲಿ ಕಲಿಸುವ ಜೊತೆಗೆ ಹಾಸ್ಟೇಲ್ಗಳಲ್ಲಿ ಟ್ಯೂಷನ್ ಕೂಡ ಮಾಡುತ್ತಾರೆ. ಮುಂಜಾನೆ 7ರಿಂದ ರಾತ್ರಿ 7ರವರೆಗೆ ಈ ಮಕ್ಕಳು ಬೊಧನೆ ಎಂಬ ಭಯೋತ್ಪಾದನೆಗೆ ಒಳಪಡಬೇಕು. ಈ ಸ್ವತಂತ್ರ ಪಿಯು ಕಾಲೇಜುಗಳಿಗೆ ಆಟದ ಮೈದಾನಗಳು ಕೂಡ ಇಲ್ಲ! ಸಹಜವಾಗಿಯೇ ತಮ್ಮ ಪ್ರತಿಭೆಯಿಂದಾಗಿಯೇ ಉತ್ತಮ ಅಂಕ ಗಳಿಸಿದವರ ಫೋಟೊಗಳನ್ನು ಜಾಹಿರಾತು ಹಾಕುವ ಮೂಲಕ ಮುಂದಿನ ವರ್ಷದ ಬೇಟೆ ಶುರುವಾಗುತ್ತದೆ.
ಈ ಸಲ ರಾಜ್ಯದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ 8 ಲಕ್ಷ 76 ಸಾವಿರ ವಿದ್ಯಾರ್ಥಿಗಳಲ್ಲಿ ಡಿಬಾರ್ ಆದ ಒಬ್ಬ ಹುಡುಗನನ್ನು ಬಿಟ್ಟರೆ ಎಲ್ಲರೂ ಪಾಸ್. ಜೊತೆಗೆ ಸಿಬಿಎಸ್ಸಿ, ಐಸಿಎಸ್ಇ ಕಡೆಯಿಂದ ಪರೀಕ್ಷೆ ಇಲ್ಲದೇ ಸುಮಾರು 2 ಲಕ್ಷ ಮಕ್ಕಳು ಪಿಯು ಸೇರಲು ಯವಕರಾಗಿದ್ದಾರೆ.
ಈ ದೊಡ್ಡ ಸಂಖ್ಯೆಯೇ ಈ ಸ್ವತಂತ್ರ ಪಿಯುಸಿ ಸೈನ್ಸ್ ಕಾಲೇಜುಗಳಿಗೆ ವರದಾನವಾಗಿದೆ. ಸರ್ಕಾರ ಪ್ರಬೇಶ ಸಂಖ್ಯೆಯನ್ನು ಕನಿಷ್ಠ 30 ಪರ್ಸೆಂಟ್ ಏರಿಸಬೇಕಿತ್ತು. ಅದಾಗಲಿಲ್ಲ. ಇದು ಕೂಡ ಪ್ರೈವೇಟ್ ಸೈನ್ಸ್ ಕಾಲೇಜುಗಳಿಗೆ ವರದಾನವಾಗಿದೆ. ಸ್ಥಳೀಯ ಶಿಕ್ಷಣ ಇಲಾಖೆ ಜೊತೆ ಶಾಮೀಲಾಗಿರುವ ಈ ಕಾಲೇಜುಗಳು ತಮಗೆ ಸಿಕ್ಕಿದ ಪ್ರವೇಶ ಸಂಖ್ಯೆಗಳನ್ನು ಉಲ್ಲಂಘಿಸಿ ಅಡ್ಮಿಶನ್ ಮಾಡಿಕೊಳ್ಳತ್ತಿವೆ. ಅಂದರೆ ಡೊನೇಷನ್ ಹೆಚ್ಚಳ!
ಆತ್ಮಹತ್ಯಾ ಕೇಂದ್ರಗಳೇ!
ಕೋವಿಡ್ ಬಿಕ್ಕಟ್ಟಿಗೂ ಮೊದಲೇ ಇವು ಸುಲಿಗೆ ಕೇಂದ್ರ ಆಗಿದ್ದವು. ಆಂಧ್ರ ಮತ್ತು ತೆಲಂಗಾಣದಲ್ಲ ವಿವಾದಕ್ಕೆ ಈಡಾದ ನಾರಾಯಣ ಮತ್ತು ಚೇತನಾ ಎಂಬ ಪಿಯು ಸೈನ್ಸ್ ಕರ್ನಾಟಕದ ಪ್ರಮುಖ ಸಿಟಿಗಳಲ್ಲಿ ಹತ್ತು ವರ್ಷದ ಹಿಂದೆಯೇ ಕಾಲೇಜು ತೆರೆದು ಕೂತಿವೆ.
ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಸಂಸ್ಥೆಗಳ ಮೇಲೆ ಇರುವ ಆರೋಪ ಏನೆಂದರೆ ಈ ಸಂಸ್ಥೆಗಳಲ್ಲಿ ಆತ್ಹತ್ಯೆ ಹೆಚ್ಚುತ್ತಿವೆ ಎಂಬುದು.
ಈ ಕುರಿತು ಪ್ರತಿಕ್ರಿಯೆ ನೀಡಿದ ಪತ್ರಕರ್ತ ನವೀನ್ ಸೂರಿಂಜೆ, ‘ ನಮ್ಮ ಮೂಡುಬಿದರೆ ಆಳ್ವಾಸ್ ಏನು ಕಡಿಮೆ? ಅಲ್ಲೂ ಈ ತರಹದ ಸಾವು ಸಂಭವಿಸುತ್ತಿವೆ. ಆದರೆ ಮೋಹನ್ ಆಳ್ವಾ ಮತ್ತು ಟೀಂ ಸರ್ಕಾರಗಳ ಜೊತೆ ಚೆನ್ನಾಗಿರುತ್ತದೆ. ಕರಾವಳಿಯಲ್ಲಿ ಎಜುಕೇಷನ್ ಮಾಫಿಯಾ ದಶಕಗಳಿಂದ ಇದೆ. ಅದು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಹೀಗೆ ಎಲ್ಲ ಕಡೆ ಬ್ರ್ಯಾಂಚ್ ತೆರೆದು ದಂಧೆ ಮುಂದುವರೆಸಿದೆ’’ ಎಂದು ಪ್ರತ್ಇಧ್ವನಿಗೆ ತಿಳಿಸಿದರು.
‘’ಹೊಸ ಶಿಕ್ಷಣ ನೀತಿಯ ಅನುಷ್ಠಾನವನ್ನು ಆರಂಭ
ಮಾಡಿದ್ದೇ ಕರ್ನಾಟಕ ಸರ್ಕಾರ. ಈ ಹಿನ್ನೆಲೆಯಲ್ಲಿ ಈ ವಿದ್ಯಮಾನ ನೋಡಬೇಕು. ಸಂಪೂರ್ಣ ಶೈಕ್ಷಣಿಕ ಖಾಸಗಕರಣವೇ ಇದೆಲ್ಲದರ ಉದ್ದೇಶ’’ ಎನ್ನುತ್ತಾರೆ ಚಳುವಳಿ ಹಿನ್ನಲೆಯ ನಂದಕುಮಾರ್ ಮತ್ತು ಭೀಮನಗೌಡ ಕಾಶಿರೆಡ್ಡಿ.
‘ಸರ್ಕಾರಿ ಕಾಲೇಜುಗಳ ಮೂಲಣೂತ ಸೌಕರ್ಯ ಹೆಚ್ಚಿಸಲು,
ಅಧ್ಯಾಪಕರ ನೇಮಕಾತಿಗೆ ಸಾಕಷ್ಟು ಅವಕಾಶವಿದ್ದರೂ ಸರ್ಕಾರ ಈ ವಿಷಯದಲ್ಲಿ ಬೇಕೆಂತಲೇ ಅಸಡ್ಡೆ ಮಾಡಿತು. ಇದು 90ರ ದಶಕದಿಂದ ಅರಂಭವಾದ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳನ್ನು ನಾಶ ಮಾಡುವ ಪ್ರಕ್ರಿಯೆಯ ಮುಂಸುವರೆದ ಭೀಕರ ಭಾಗ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಇದಕ್ಕ ಪೂರಕವಾಗಿಯೇ ಇಸೆ; ಎಂದು ಬಂಡಾಯ ಸಾಹಿತಿ, ಆಕ್ಟಿವಿಸ್ಟ್ ಬಸವರಾಜ ಸೂಳಿಭಾವಿ ಪ್ರತಿಧ್ವನಿಗೆ ತಿ:ಳಿಸಿದರು.
ಆನ್ಲೈನ್ ಮತ್ತು ಆಫ್ಲೈನ್ ಎರಡೂ ಬೋಧನೆ ಇರಲಿವೆ ಎಂದ ಸರ್ಕಾರ, ಎಲ್ಲ ಪ್ರವೇಶಗಳು ಮುಗಿದ ನಂತರ ಮತ್ತೆ ಆನ್ಲೈನ್ ಮೋಡ್ಗೆ ಹೋಗಬಹುದು. ಅದಕ್ಕೆ ಮೂರನೇ ಅಲೆ ಎಂಬ ನೆಪವಂತೂ ಇದ್ದೇ ಇದೆ. ಒಟ್ಟಿನಲ್ಲಿ ಖಾಸಗಿ ಕಾಲೇಜುಗಳಿ ಗೆ ‘ಹಬ್ಬ’, ಬಡ ವಿದ್ಯಾರ್ಥಿಗಳಿಗೆ ಮತ್ತದೇ ಸಂಕಟ.