ಚುನಾವಣೆಗಳ ಸಂದರ್ಭದಲ್ಲಿ ಚಿಕ್ಕ ಪುಟ್ಟ ಘಟನೆಗಳೂ ರಾಜಕೀಯ ಬಣ್ಣ ಪಡೆದುಕೊಳ್ಳುತ್ತವೆ. ಕೆಲವೊಮ್ಮೆ ಉತ್ಪ್ರೇಕ್ಷಿತ ವರದಿಗಳು ಕೂಡ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗುತ್ತವೆ. ಚುನಾವಣಾ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮತ ಗಳಿಕೆಯತ್ತಲೇ ಕಣ್ಣಿಟ್ಟಿರುತ್ತಾರೆ. ಸಾಕಷ್ಟು ಸಂದರ್ಭಗಳಲ್ಲಿ ಸಾವಿಗೀಡಾದ ಅಭ್ಯರ್ಥಿಯ ಕುಟುಂಬಸ್ಥರು ಸುಲಭವಾಗಿ ಜಯ ಗಳಿಸಿರುವುದನ್ನೂ ನಾವು ನೋಡಿದ್ದೇವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ನಂದಿ ಗ್ರಾಮದಲ್ಲಿ ಪ್ರಚಾರ ಮಾಡುತಿದ್ದ ಸಂದರ್ಭದಲ್ಲಿ ಕಾಲು ಹಾಗೂ ಭುಜಕ್ಕೆ ಗಾಯವಾಗಿರುವ ಕುರಿತು ರಾಜ್ಯ ಪೋಲೀಸ್ ಇಲಾಖೆಯು ಚುನಾವಣಾ ಆಯೋಗಕ್ಕೆ ಗುರುವಾರ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಈ ಗಾಯಗಳು ಅಪಘಾತದಿಂದ ಅಗಿವೆ ಎಂದು ತಿಳಿಸಿದೆ. ಈ ಗಾಯವು 4-5 ಜನರು ಹಲ್ಲೆ ಮಾಡಿದ್ದರಿಂದ ಆಗಿದೆ ಎಂದು ಅವರು ಮೊದಲು ಹೇಳಿಕೊಂಡಿದ್ದರು. ಇದೀಗ ಪೋಲೀಸ್ ಇಲಾಖೆಯ ವರದಿ ಅವರ ಹೇಳಿಕೆಯನ್ನೆ ಅಲ್ಲಗಳೆದಿದೆ.
ತೃಣಮೂಲ ಕಾಂಗ್ರೆಸ್ ಸದಸ್ಯರು ಸೇರಿದಂತೆ ಸ್ಥಳೀಯ ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ವಿಡಿಯೋ ತುಣುಕನ್ನು ಮತ್ತು ತನಿಖೆ ಮಾಡಿ ಈ ತೀರ್ಮಾನಕ್ಕೆ ಬಂದಿರುವುದಾಗಿ ವರದಿ ಹೇಳಿದೆ. ಕಿಕ್ಕಿರಿದ ಮಾರುಕಟ್ಟೆ ಪ್ರದೇಶದ ಮೂಲಕ ಅವರ ಕಾರು ಹಾದು ಹೋಗುತಿದ್ದಾಗ ಸಣ್ಣ ಕಬ್ಬಿಣದ ಕಂಬಕ್ಕೆ ಢಿಕ್ಕಿ ಹೊಡೆದಾಗ ಮುಖ್ಯಮಂತ್ರಿಯು ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ. ಜಡ್ ಪ್ಲಸ್ ಭದ್ರತೆ ಹೊಂದಿರುವ ಮಮತಾ ಬ್ಯಾನರ್ಜಿ ಅವರು ತಮ್ಮ ಕಾರಿನ ಬಾಗಿಲನ್ನು ತೆರೆದು ಜನರತ್ತ ಕೈ ಬೀಸುತಿದ್ದರು. ಅಗ ಮುಂದೆ ಚಲಿಸುತಿದ್ದ ಕಾರಿನ ಬಾಗಿಲಿಗೆ ಕಂಬ ಢಿಕ್ಕಿ ಹೊಡೆದಿದ್ದರಿಂದಾಗಿ ಕಾರಿನ ಬಾಗಿಲು ಬಲವಂತವಾಗಿ ಮುಚ್ಚಲ್ಪಟ್ಟು ಕಾಲಿಗೆ ಗಾಯವಾಗಿದೆ ಎಂದು ವರದಿ ಸ್ಪಷ್ಟಪಡಿಸಿದೆ.
ನಾಲ್ಕೈದು ಜನರಿಂದ ತಮ್ಮ ಮೇಲೆ ಹಲ್ಲೆ ನಡೆದಿದ್ದು ಅವರು ಆಕೆಯನ್ನು ತಳ್ಳಿದಾಗ ಕಾರಿನ ಬಾಗಿಲು ಬಡಿದು ಗಾಯಗಳಾಗಿವೆ ಎಂದು ಬ್ಯಾನರ್ಜಿ ಬುಧವಾರ ಸಂಜೆ ಆರೋಪಿಸಿದ್ದರು. ಬಿಜೆಪಿ ಈ ಪ್ರಸಂಗವನ್ನು ನಾಟಕ ಎಂದು ಆರೋಪಿಸಿತ್ತು. ಚುನಾವಣಾ ಆಯೋಗದ ಆದೇಶದ ಮೇರೆಗೆ ರಾಜ್ಯ ಡಿಜಿಪಿಯನ್ನು ವರ್ಗಾವಣೆ ಮಾಡಿ ಬೇರೊಬ್ಬರನ್ನು ಅವರ ಸ್ಥಳಕ್ಕೆ ನೇಮಿಸಿದ ಕೆಲವೇ ಗಂಟೆಗಳ ನಂತರ ನಂದಿಗ್ರಾಮ್ ನಲ್ಲಿ ಈ ಘಟನೆ ಸಂಭವಿಸಿದೆ, ಡಿಜಿಪಿ ವರ್ಗಾವಣೆಯ ನಂತರ ನಡೆದ ನಂದಿಗ್ರಾಮದ ಘಟನೆಯವರೆಗೆ ಇದೆಲ್ಲವೂ ಚೆನ್ನಾಗಿ ಯೋಚಿಸಿದ ಯೋಜನೆ ಯ ಭಾಗ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿತ್ತು. ಇದಲ್ಲದೆ ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರೇನ್ ನೇತೃತ್ವದ ತೃಣಮೂಲ ಕಾಂಗ್ರೆಸ್ ನಿಯೋಗವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಈ ಘಟನೆಯನ್ನು ಮಮತಾ ಬ್ಯಾನರ್ಜಿಯನ್ನು ಕೊಲ್ಲಲು ನಡೆಸಿದ ಪೂರ್ವ ಯೋಜನಾ ಪಿತೂರಿ ಎಂದು ಆರೋಪಿಸಿತ್ತು. ಏತನ್ಮಧ್ಯೆ, ಟಿಎಂಸಿ ಮುಖಂಡ ಶೇಖ್ ಸೂಫಿಯಾನ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪುರ್ಬಾ ಮದಿನಿಪುರ ಜಿಲ್ಲೆಯ ಪೊಲೀಸರು ಈ ಘಟನೆಯ ಕುರಿತು ಪ್ರಕರಣ ದಾಖಲಿಸಿದ್ದಾರೆ. ಎಫ್ಐಆರ್ ನಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 341 ಮತ್ತು 323 (ಸ್ವಯಂಪ್ರೇರಣೆಯಿಂದ ನೋವನ್ನುಂಟು ಮಾಡಿದ ಶಿಕ್ಷೆ) ಅನ್ವಯ ಮೊಕದ್ದಮೆ ದಾಖಲಾಗಿದೆ.
ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಚುನಾವಣಾ ಆಯೋಗ ಆದೇಶಿಸಿದೆ. ಪೋಲೀಸ್ ವರದಿಯ ಪ್ರಕಾರ, ಮುಖ್ಯಮಂತ್ರಿಯವರ ಮೇಲೆ ಯೋಜಿತ ದಾಳಿ ನಡೆದಿದೆ ಎಂದು ಹೇಳುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ.ಸ್ಥಳೀಯ ತೃಣಮೂಲ ನಾಯಕರು ಈ ಘಟನೆಯನ್ನು ಉದ್ದೇಶಪೂರ್ವಕವಲ್ಲ ಎಂದು ಹೇಳಿರುವುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಟಿಎಂಸಿ ಮುಖಂಡರ ಪ್ರಕಾರ ಮುಖ್ಯ ಮಂತ್ರಿಗಳ ಕಾರ್ಯಕ್ರಮಕ್ಕಾಗಿ ನಮ್ಮ ಕಾರ್ಯಕರ್ತರೇ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಅವರು ದೀದಿ ಅವರನ್ನು ಎಂದಿಗೂ ಹಲ್ಲೆ ನಡೆಸುವುದಿಲ್ಲ ಎಂದು ಹೇಳಿದ್ದಾರಲ್ಲದೆ ಸ್ವಲ್ಪ ನೂಕು ನುಗ್ಗಲು ಸಂಭವಿಸಿದೆ. ಆದರೆ ಅದು ಜನದಟ್ಟಣೆಯಿಂದ ಉಂಟಾಗಿದೆ, ಇದು ಉದ್ದೇಶಪೂರ್ವಕವಲ್ಲ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಿರ್ದಿಷ್ಟ ಸಮಯದಲ್ಲಿ ಮುಖ್ಯಮಂತ್ರಿಗಳ ವಾಹನದ ಬಳಿ ಸುಮಾರು 50 ಜನರು ಸೇರಿದ್ದರು ಎಂದು ಹೇಳಿದರು. ಆದರೆ ಅಲ್ಲಿ ಮುಖ್ಯಮಂತ್ರಿಗಳನ್ನು ತಳ್ಳುವ ಅಥವಾ ಹೊಡೆದ ಯಾವುದೇ ಪುರಾವೆಗಳಿಲ್ಲ. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಕಾರಿನ ಬಾಗಿಲು ಕಂಬಕ್ಕೆ ಬಡಿದಾಗ ಕಾರಿನ ಬಾಗಿಲು ಬಲವಂತವಾಗಿ ಮುಚ್ಚಲ್ಪಟ್ಟು ಆಕೆಯ ಕಾಲುಗಳಿಗೆ ಪೆಟ್ಟಾಗಿದೆ ಎಂದು ಹೇಳಿದರು.
ನಂದಿಗ್ರಾಮದಲ್ಲಿ ನಡೆದ ಘಟನೆಗೆ ಕೆಲವು ಗಂಟೆಗಳ ಮೊದಲು, ಬಂಗಾಳದ ಡಿಜಿಪಿ ವೀರೇಂದ್ರ ಅವರನ್ನು ಕೇಂದ್ರ ಚುನಾವಣಾ ಆಯೋಗ ವರ್ಗಾಯಿಸಿತು, ರಾಜ್ಯದ ಚುನಾವಣಾ ವಿಶೇಷ ವೀಕ್ಷಕರ ಪ್ರತಿಕೂಲ ವರದಿಯ ನಂತರ ವರ್ಗಾವಣೆ ಮಾಡಲಾಗಿದ್ದು ಐಪಿಎಸ್ ಅಧಿಕಾರಿ ಪಿ.ನಿರಾಜ್ನಾಯನ್ ಅವರು ನೂತನ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡರು. ಪಶ್ಚಿಮ ಬಂಗಾಳದ ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಜಾವೇದ್ ಶಮೀಮ್ ಅವರನ್ನು ಚುನಾವಣಾ ಆಯೋಗವು ತೆಗೆದುಹಾಕಿದ ಕೆಲ ದಿನಗಳ ನಂತರ ಈ ವರ್ಗಾವಣೆ ಮಾಡಲಾಗಿದೆ. ತಮ್ಮ ಆಪ್ತ ಅಧಿಕಾರಿ ಡಿಜಿಪಿ ಅವರ ವರ್ಗಾವಣೆಯ ಬಗ್ಗೆ ದೀದಿ ತುಂಬಾ ಅಸಮಾಧಾನಗೊಂಡಿದ್ದರು. ವರ್ಗಾವಣೆಯನ್ನು ತಡೆಯಲು ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಅವರು ನ್ಯಾಯಾಲಯಕ್ಕೆ ಹೋಗುವ ಬಗ್ಗೆಯೂ ಯೋಚಿಸುತ್ತಿದ್ದರು ಎಂದು ಹಿರಿಯ ತೃಣಮೂಲ ನಾಯಕರೊಬ್ಬರು ಹೇಳಿದರು.
ರಾಜ್ಯಕ್ಕೆ ಚುನಾವಣಾ ಆಯೋಗ ನೇಮಿಸಿದ ವಿಶೇಷ ಪೊಲೀಸ್ ವೀಕ್ಷಕ ವಿವೇಕ್ ದುಬೆ ಅವರನ್ನೂ ಬ್ಯಾನರ್ಜಿ ಟೀಕಿಸಿದ್ದಾರೆ. ಇದು ಚೆನ್ನಾಗಿ ಯೋಚಿಸಿದ ಯೋಜನೆ. ಅವರು ಮೊದಲು ಎಡಿಜಿ ಮತ್ತು ನಂತರ ಡಿಜಿಪಿಯನ್ನು ತೆಗೆದುಹಾಕಿದರು. ಭದ್ರತಾ ಕೊರತೆ ಕಂಡುಬಂದಿದೆ, ಮುಖ್ಯ ಮಂತ್ರಿಗಳ ಭದ್ರತೆಯ ನಿಯಮವನ್ನು ಉಲ್ಲಂಘಿಸಲಾಗಿದೆ. ಇದು ನಿಜಕ್ಕೂ ಪಿತೂರಿ ಎಂದು ರಾಜ್ಯ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದರು. ಸರ್ಕಾರದ ಹಿರಿಯ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರದೊಂದಿಗೆ ಯಾವುದೇ ಸಮಾಲೋಚನೆ ಮಾಡದೆ ತೆಗೆದುಹಾಕಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ತಿಳಿಸಿದೆ. ಈ ದಾಳಿಯು ನಮ್ಮ ಪಕ್ಷದ ಅದ್ಯಕ್ಷರ ಜೀವವನ್ನು ಬಲಿ ತೆಗೆದುಕೊಳ್ಳುವ ಆಳವಾದ ಪಿತೂರಿಯಾಗಿದೆ ಎಂದೂ ಪತ್ರದಲ್ಲಿ ಆರೋಪಿಸಲಾಗಿದೆ. ಹಿಂದಿನ ಡಿಜಿಪಿ ವಿರುದ್ಧ ಬಿಜೆಪಿಯ ದೂರುಗಳು ಮತ್ತು ಚುನಾವಣಾ ಆಯೋಗವು ಅವರನ್ನು ವರ್ಗಾಯಿಸಿರುವುದು ಮುಖ್ಯ ಮಂತ್ರಿಗಳಿಗೆ ರಕ್ಷಣೆ ನೀಡಬೇಕಾದ ಜಿಲ್ಲಾ ಎಸ್ ಪಿ ಮತ್ತು ಅಧಿಕಾರಿಗಳ ಗೈರು ಹಾಜರಿ ಒಂದಕ್ಕೊಂದು ಸಂಬಂದವಿದೆ ಎಂದು ಟಿಎಂಸಿ ಪತ್ರದಲ್ಲಿ ಹೇಳಿದೆ.