ಓವರ್–ದಿ–ಟಾಪ್ (ಒಟಿಟಿ) ಪ್ಲಾಟ್ಫಾರ್ಮ್ಗಳಲ್ಲಿ ಬಿಡುಗಡೆಯಾಗುತ್ತಿರುವ ಸೀರಿಸ್ಗಳಲ್ಲಿನ ದೃಶ್ಯಗಳ ಬಗ್ಗೆ ಪದೇ ಪದೇ ಆಕ್ಷೇಪ ವ್ಯಕ್ತವಾಗುತ್ತಿವೆ. ಇತ್ತೀಚೆಗಂತೂ ಹಿಂದೂ ಭಾವನೆಗಳಿಗೆ ಧಕ್ಕೆ ಆರೋಪದ ಮೇಲೆ ಕೆಲವು ಸೀರಿಸ್ ಗಳ ವಿರುದ್ಧ ನ್ಯಾಯಾಲಯದವರೆಗೂ ದೂರು ಹೋಗಿತ್ತು. ಅವುಗಳಲ್ಲಿ ಪ್ರಸ್ತಾಪಿಸಲಾಗುತ್ತಿರುವ ವಿಷಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ್ಗೆ ಚರ್ಚೆಗೆ ಗ್ರಾಸವಾಗುತ್ತಿದ್ದು, ಒಟಿಟಿ ಕಂಟೆಂಟ್ ನಿಯಂತ್ರಣಕ್ಕೆ ನಿರ್ದಿಷ್ಟ ಕಾಯ್ದೆಗಳು ಇಲ್ಲದಿರುವುದು ಇದಕ್ಕೆ ಕಾರಣ ಎಂಬ ಮಾತುಗಳೂ ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವಡೇಕರ್ ಒಟಿಟಿ, ಸಾಮಾಜಿಕ ಮಾಧ್ಯಮಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
ಕರಡು ನಿಯಮಗಳು ಗಮನಿಸಿದರೆ, ಸೀರಿಸ್ಗಳ ಸಾಧ್ಯತೆಗಳನ್ನು ಮೊಟಕುಗೊಳಿಸಬಹುದಾದ ಆತಂಕವನ್ನು ಸೀರೀಸ್ ಪ್ರಿಯರು ವ್ಯಕ್ತಪಡಿಸಿದ್ದಾರೆ.
ಕರಡು ಪ್ರಕಾರ, ಮೇಲ್ವಿಚಾರಣಾ ಕಾರ್ಯವಿಧಾನವು ರಕ್ಷಣಾ, ವಿದೇಶಾಂಗ ವ್ಯವಹಾರಗಳು, ಗೃಹ, ಮಾಹಿತಿ ಮತ್ತು ಪ್ರಸಾರ, ಕಾನೂನು, ಐಟಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳ ಪ್ರತಿನಿಧಿಗಳ ಸಮಿತಿಯನ್ನು ಒಳಗೊಂಡಿರುತ್ತದೆ.
ಈ ಸಮಿತಿಯು ಬಯಸಿದಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯ ದೂರುಗಳ ಮೇಲೆ ವಿಚಾರಣೆ ಮಾಡಲು ಸು-ಮೋಟು ಅಧಿಕಾರಗಳನ್ನು ಹೊಂದಿರುತ್ತದೆ. ಸಮಿತಿಯು ನೀತಿಸಂಹಿತೆ ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಬಹುದು, ಖಂಡಿಸಬಹುದು ಇತ್ಯಾದಿ ಕ್ರಮಗಳಲ್ಲದೆ ಕ್ಷಮೆಯಾಚಿಸಲು ಸೂಚಿಸಬಹುದು.
ಕರಡಿನ ಪ್ರಮುಖ ಅಂಶಗಳು:
- ಹೊಸ ನಿಯಮಗಳ ಅಡಿಯಲ್ಲಿ ಫೇಸ್ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಸೂಚಿಸಲಾದ ಆಕ್ಷೇಪಾರ್ಹ ವಿಷಯಗಳನ್ನು ಕೂಡಲೇ ತೆಗೆದು ಹಾಕಬೇಕು.
- ಕಾನೂನು ಬದ್ಧವಾದ ಅಥವಾ ಸರ್ಕಾರದ ಆದೇಶವಾದ 36 ಗಂಟೆಗಳೊಳಗೆ ಸೂಕ್ತ ಕ್ರಮ ಜಾರಿಯಾಗಬೇಕು. ಅದಕ್ಕಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುವಂತಿಲ್ಲ. ದೂರುಗಳನ್ನು ಶೀಘ್ರದಲ್ಲೇ ಪರಿಗಣಿಸಬೇಕಾಗುತ್ತದೆ.
- ಸೋಶಿಯಲ್ ಮೀಡಿಯಾ ಮೆಸೇಜಿಂಗ್ ಸೈಟ್ಗಳು ಮಾಹಿತಿಯನ್ನು ಮೊದಲು ಹುಟ್ಟು ಹಾಕಿದವರ ಟ್ರ್ಯಾಕಿಂಗ್ ಅನ್ನು ಸಕ್ರಿಯಗೊಳಿಸಬೇಕು.
- ದೂರಿನಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ, ಮಹಿಳೆಯ ಅಂಗಾಂಗಳನ್ನು ಪ್ರದರ್ಶಿಸಿರುವುದು ಅಥವಾ ಅಶ್ಲೀಲವಾಗಿ ಬಳಸುವುದು ಅಥವಾ ಕೆಟ್ಟದಾಗಿ ಚಿತ್ರಿಸಿರುವುದು ಸೇರಿದಂತೆ ಇತರೆ ಆಕ್ಷೇಪಗಳಿದ್ದರೆ, ಅಂಥ ಪೋಸ್ಟ್ಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು 24 ಗಂಟೆಯೊಳಗೆ ತೆಗೆದುಹಾಕಬೇಕು.
- ಕೋರ್ಟ್ ಆದೇಶವಿದ್ದರೆ, ಸಾಮಾಜಿಕ ಮಾಧ್ಯಮಗಳು ಸಂದೇಶ ಅಥವಾ ಟ್ವೀಟ್ನ ಮೂಲವನ್ನು ಬಹಿರಂಗ ಪಡಿಸಬೇಕಾಗುತ್ತದೆ. ಕಾನೂನು ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲು ಅಧಿಕಾರ ಹೊಂದಿರುವ ಸರ್ಕಾರಿ ಸಂಸ್ಥೆಗೆ ಮಧ್ಯವರ್ತಿ/ ಮಧ್ಯ ಭಾಗಿದಾರ ಸೈಬರ್ ಭದ್ರತಾ ಲೋಪದ ವಿವರಗಳನ್ನು 72 ಗಂಟೆಗಳ ಒಳಗೆ ಒದಗಿಸಬೇಕು.
- ಕಾನೂನು, ನಿಯಮಗಳ ಪಾಲನೆ ಗಮನಿಸಲು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಅಧಿಕಾರಿಯನ್ನು ನೇಮಕ ಮಾಡಿಕೊಂಡಿರಬೇಕು ಹಾಗೂ ಅವರು ಭಾರತದಲ್ಲಿ ಇರಬೇಕು. ಜಾರಿ ನಿರ್ದೇಶನ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲು ನೋಡಲ್ ಸಂಪರ್ಕ ವ್ಯಕ್ತಿ ಇರಬೇಕು.
- ಸಾಮಾಜಿಕ ಮಾಧ್ಯಮಗಳು ಕುಂದು–ಕೊರತೆ/ ದೂರುಗಳನ್ನು ಗಮನಿಸುವ ಅಧಿಕಾರಿಯನ್ನು ನೇಮಕ ಮಾಡಿಕೊಳ್ಳಬೇಕು, ಅವರು 24 ಗಂಟೆಗಳಲ್ಲಿ ದೂರು ದಾಖಲಿಸಿಕೊಳ್ಳಬೇಕು. ಸಮಸ್ಯೆಗಳನ್ನು ಪರಿಹರಿಸಲು ಅವರು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕಾಗುತ್ತದೆ.
- ಪ್ರಸಾರವಾಗುವ ಕಂಟೆಂಟ್ಗಳನ್ನು ವಯಸ್ಸಿನ ಆಧಾರದ ಮೇಲೆ ಸ್ವಯಂ ವರ್ಗೀಕರಣಕ್ಕೆ ಒಳಪಡಿಸುವುದನ್ನು ಒಟಿಟಿ ಪ್ಲಾಟ್ಫಾರ್ಮ್ಗಳು ಅನುಸರಿಸಬೇಕು.
- ನೀತಿ ಸಂಹಿತೆಯನ್ನು ಜಾರಿಗೊಳಿಸಲು ಮೂರು ಹಂತದ ಕಾರ್ಯವಿಧಾನ: ಸ್ವಯಂ ನಿಯಂತ್ರಣ; ಸ್ವಯಂ-ನಿಯಂತ್ರಿಸುವ ಸಂಸ್ಥೆಗಳಿಂದ ಸ್ವಯಂ ನಿಯಂತ್ರಣ; ಸರ್ಕಾರದ ಮೇಲ್ವಿಚಾರಣಾ ಕಾರ್ಯವಿಧಾನ.