ಮೂರು ವರ್ಷಗಳ ಹಿಂದೆ ಮಲೆನಾಡಿನಲ್ಲಿ ಆತಂಕ ಮೂಡಿಸಿದ್ದ ಮಂಗನಕಾಯಿಲೆ(KFD) ಈ ಬಾರಿ ಮತ್ತೆ ತನ್ನ ಹೆಡೆ ಎತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲೇ ತೀರ್ಥಹಳ್ಳಿ ತಾಲೂಕಿನ ಮಾಳೂರು ಮತ್ತು ಕನ್ನಂಗಿ ಭಾಗದಲ್ಲಿ ಎಂಟಕ್ಕೂ ಹೆಚ್ಚು ಕೆಎಫ್ ಡಿ ಪ್ರಕರಣಗಳು ದೃಢಪಟ್ಟಿವೆ.
ಕಳೆದ ಒಂದು ವಾರದಲ್ಲಿ ದಿಢೀರನೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದ್ದು, ಇನ್ನೂ ಕೆಲವು ಪ್ರಕರಣಗಳು ದೃಢಪಡುವ ಸಾಧ್ಯತೆ ಇದೆ. ಕಳೆದ ಫೆಬ್ರವರಿ ಮೊದಲ ವಾರದಲ್ಲಿ ಎರಡು ಪ್ರಕರಣಗಳು ಮಾಳೂರು ಮತ್ತು ಕನ್ನಂಗಿ ವ್ಯಾಪ್ತಿಯಲ್ಲಿಯೇ ಕಾಣಿಸಿಕೊಂಡಿದ್ದವು. ಇದೀಗ ಒಂದು ತಿಂಗಳ ಅವಧಿಯಲ್ಲೇ ಅದೇ ಮಾಳೂರು ಮತ್ತು ಕನ್ನಂಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿಯೇ ಆರು ಪ್ರಕರಣಗಳು ದೃಢಪಟ್ಟಿದ್ದು, ಪರೀಕ್ಷೆಗೆ ಕಳಿಸಿರುವ ಇನ್ನಷ್ಟು ಜನರ ರಕ್ತದ ಮಾದರಿಯ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.
ಜಿಲ್ಲಾ ಆರೋಗ್ಯಾಧಿಕಾರಿ(DHO) ಡಾ ರಾಜೇಶ್ ಸುರಗಿಹಳ್ಳಿ ಅವರೇ ‘ಪ್ರತಿಧ್ವನಿ’ಗೆ ಈ ಮಾಹಿತಿ ಖಚಿತಪಡಿಸಿದ್ದು, “ಸದ್ಯ ಶುಕ್ರವಾರ ಸಂಜೆಯವರಿಗೆ ಎಂಟು ಪ್ರಕರಣಗಳು ದೃಢಪಟ್ಟಿವೆ. ಎಲ್ಲವೂ ಮಾಳೂರು ಮತ್ತು ಕನ್ನಂಗಿ ಭಾಗದಲ್ಲಿಯೇ ವರದಿಯಾಗಿದ್ದು, ಈ ಬಾರಿ ಸೋಂಕು ತೀರ್ಥಹಳ್ಳಿ ತಾಲೂಕಿನಲ್ಲಿ ಹೆಚ್ಚು ಕಾಣಿಸಿಕೊಂಡಿದೆ. ಸೋಂಕು ದೃಢಪಟ್ಟ ಎಲ್ಲರಿಗೂ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಒಬ್ಬರು ಮಣಿಪಾಲದ ಕೆಎಂಸಿಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದಾರೆ” ಎಂದು ಹೇಳಿದ್ದಾರೆ.
ಈ ನಡುವೆ, ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳು ಏರುಗತಿಯಲ್ಲಿದ್ದರೂ ಲಸಿಕೆ ಕೊರತೆ ಮಾತ್ರ ಜಿಲ್ಲೆಯಲ್ಲಿ ಈಗಲೂ ಮುಂದುವರಿದಿದೆ. ಜನವರಿ 31ಕ್ಕೆ ಆ ಹಿಂದಿನ ಬ್ಯಾಚ್ ಲಸಿಕೆಯ ವಾಯಿದೆ ಮುಗಿದಿತ್ತು. ಆ ಬಳಿಕ ಈವರೆಗೆ ಒಂದು ತಿಂಗಳ ಅವಧಿಯಲ್ಲಿ ಲಸಿಕೆ ಲಭ್ಯವಾಗಿಲ್ಲ. ಈ ವಿಷಯವನ್ನು ಕೂಡ ಸ್ವತಃ ಡಿಎಚ್ ಒ ಅವರೇ ಸ್ಪಷ್ಟಪಡಿಸಿದ್ದು, “ಹೊಸ ಬ್ಯಾಚ್ ಲಸಿಕೆಯ ಪರೀಕ್ಷೆಯ ತಾಂತ್ರಿಕ ತೊಂದರೆಯಿಂದಾಗಿ ಮರು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಬಹುಶಃ ಇನ್ನೂ ಹದಿನೈದು ದಿನಗಳಲ್ಲಿ ಆ ಲಸಿಕೆ ಲಭ್ಯವಾಗಬಹುದು. ಈ ತಿಂಗಳಲ್ಲಿ ಎರಡನೇ ಲಸಿಕೆ ನೀಡಬೇಕಿರುವ ಪ್ರಕರಣಗಳಿವೆ. ಹಾಗಾಗಿ ಲಸಿಕೆ ಸಕಾಲದಲ್ಲಿ ಸಿಗದೇ ಇದ್ದಲ್ಲಿ ತೊಂದರೆಯಾಗಲಿದೆ” ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಹೊಸನಗರ ತಾಲೂಕಿನ ರಿಪ್ಪನ್ ಪೇಟ್ ಸಮೀಪದ ಕಳಸೆ ಭಾಗದಲ್ಲಿ ಉಣುಗಿನಲ್ಲಿ ಕೆಎಫ್ ಡಿ ವೈರಾಣು ಪತ್ತೆಯಾಗಿದ್ದರೂ, ಲಸಿಕೆ ಕೊರತೆಯಿಂದಾಗಿ ಅಲ್ಲಿ ಸಮರ್ಪಕ ಲಸಿಕೀಕರಣ ಪೂರ್ಣಗೊಳಿಸಲಾಗಿಲ್ಲ. ಏಕೆಂದರೆ, ಆ ಭಾಗದಲ್ಲಿ ವೈರಾಣು ಇರುವುದು ಪತ್ತೆಯಾಗಿರುವುದೇ ಫೆಬ್ರವರಿ ಮೊದಲ ವಾರದಲ್ಲಿ. ಇದೇ ಮೊದಲ ಬಾರಿಗೆ ಅಲ್ಲಿ ವೈರಾಣು ಪತ್ತೆಯಾಗಿರುವುದರಿಂದ ಈ ಮುಂಚೆ ಲಸಿಕೆ ನೀಡಲಾಗಿಲ್ಲ ಕೂಡ. ಹಾಗಾಗಿ ಲಸಿಕೆಯ ಕೊರತೆ ಆ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.
‘ಪ್ರತಿಧ್ವನಿ’ ಕಳೆದ ಫೆಬ್ರವರಿ ಮೊದಲ ವಾರದಲ್ಲಿಯೇ ಕೆಎಫ್ ಡಿ ಲಸಿಕೆ ಲಭ್ಯವಿಲ್ಲದ ಬಗ್ಗೆ ವಿಸ್ತೃತ ವರದಿ ಮಾಡಿತ್ತು. ಆ ವರದಿಯ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ್ದ ಡಿ ಎಚ್ ಒ ಸುರಗಿಹಳ್ಳಿ ಅವರು, ಲಸಿಕೆ ಕೊರತೆ ಇಲ್ಲ ಮತ್ತು ಲಸಿಕೆಯ ಕಾರ್ಯಕ್ಷಮತೆಯ ಬಗ್ಗೆಯೂ ಯಾವುದೇ ಅನುಮಾನವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದರು. ಆದರೆ, ಇದೀಗ ತಿಂಗಳ ಬಳಿಕ ಸ್ವತಃ ಅವರೇ ಲಸಿಕೆ ಅಲಭ್ಯತೆಯ ಬಗ್ಗೆ ಖಚಿತಪಡಿಸಿದ್ದು, ಕಳೆದ ಜನವರಿ 31ರಿಂದ ಈವರೆಗೆ ಲಸಿಕೆ ಲಭ್ಯವಾಗಿಲ್ಲ ಮತ್ತು ಇನ್ನೂ ಹದಿನೈದು ದಿನಗಳ ಕಾಲ ಲಸಿಕೆ ಸಿಗುವುದು ಅನುಮಾನ ಎಂದು ಹೇಳಿದ್ದಾರೆ.
ಅಂದರೆ, ಕೆಎಫ್ ಡಿ ಲಸಿಕೆ ಕೊರತೆ ಈಗಲೂ ಜಿಲ್ಲೆಯಲ್ಲಿ ಮುಂದುವರಿದಿದ್ದು, ಜನವರಿ 31ರ ಬಳಿಕ ಈವರೆಗೆ ಒಂದು ತಿಂಗಳ ಅವಧಿಯಲ್ಲಿ ಯಾವುದೇ ವ್ಯಕ್ತಿಗೂ ಲಸಿಕೆ ನೀಡಲಾಗಿಲ್ಲ. ಮೊದಲ ಲಸಿಕೆ ನೀಡಿದವರಿಗೆ ನಿಯಮದಂತೆ ಸರಿಯಾಗಿ 30 ದಿನಗಳಿಗೆ ಎರಡನೇ ಲಸಿಕೆ ನೀಡಬೇಕಿದ್ದು, ಫೆಬ್ರವರಿ ತಿಂಗಳಿನಲ್ಲಿ ಮತ್ತು ಜನವರಿಯಲ್ಲಿ ಮೊದಲ ಲಸಿಕೆ ಪಡೆದವರಿಗೆ ಈಗಾಗಲೇ ಎರಡನೇ ಲಸಿಕೆ ಪಡೆಯುವ ವಾಯಿದೆ ಮೀರುತ್ತಿದೆ. ಆದರೂ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಲಸಿಕೆ ಲಭ್ಯವಿಲ್ಲ!
ಇನ್ನು ಲಸಿಕೆಯ ಕಾರ್ಯಕ್ಷಮತೆ ಮತ್ತು ಹಳೆಯ ವೈರಸ್ ಸ್ಟ್ರೈನ್ ಬಳಕೆಯ ಕುರಿತು ಪ್ರತಿಧ್ವನಿ ಈ ಹಿಂದಿನ ವರದಿಯಲ್ಲಿ ಪ್ರಸ್ತಾಪಿಸಿತ್ತು. ಆ ಬಗ್ಗೆ ಕೂಡ ತಮ್ಮ ಸ್ಪಷ್ಟನೆಯಲ್ಲಿ ಪ್ರಸ್ತಾಪಿಸಿದ್ದು ಡಿಎಚ್ ಒ, ಅಂತಹ ಯಾವುದೇ ಸಮಸ್ಯೆ ಇಲ್ಲ. ಇದು ತಪ್ಪು ಮಾಹಿತಿ ಎಂದು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಆದರೆ, ವ್ಯಾಕ್ಸಿನ್ ಕಾರ್ಯಕ್ಷಮತೆಯ ಬಗ್ಗೆ ಸ್ವತಃ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಅವರೇ ವ್ಯಕ್ತಪಡಿಸಿದ್ದ ಅಭಿಪ್ರಾಯ ಮತ್ತು ಶಿವಮೊಗ್ಗ ವಿಡಿಎಲ್ ಲ್ಯಾಬ್ ಹಾಲಿ ಪ್ರಭಾರ ಉಪನಿರ್ದೇಶಕ ಡಾ ಗುಡದಪ್ಪ ಕಸಬಿ ಅವರೇ ನಡೆಸಿದ ಸಂಶೋಧನೆಗಳೇ ಆತಂಕ ವ್ಯಕ್ತಪಡಿಸಿವೆ.
2019ರಲ್ಲಿ ಶಿವಮೊಗ್ಗದ ಅರಳುಗೋಡು ಪಂಚಾಯ್ತಿ ವ್ಯಾಪ್ತಿಯಲ್ಲಿ ದಿಢೀರನೇ ಸೋಂಕು ಉಲ್ಬಣಗೊಂಡು ಆ ಪಂಚಾಯ್ತಿ ಮತ್ತು ಜಿಲ್ಲೆಯ ವಿವಿಧೆಡೆ 26ಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾದ ಬಳಿಕ ಸೋಂಕಿನ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಲೋಪವಾಗುತ್ತಿರುವ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮನಗಂಡಿತ್ತು. ಆ ಹಿನ್ನೆಲೆಯಲ್ಲಿ 2020ರಲ್ಲಿ ಕೆಎಫ್ ಡಿ ಚಿಕಿತ್ಸಾ ಮತ್ತು ನಿರ್ವಹಣಾ ಕೈಪಿಡಿಯನ್ನು ಬಿಡುಗಡೆ ಮಾಡಲಾಗಿತ್ತು. ಆ ಕೈಪಿಡಿಗೆ ಮುನ್ನುಡಿ ಬರೆದಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಖ್ತರ್ ಅವರು, “…though a vaccine has been available against the disease, still more studies about improving its potency and efficacy have to be conducted extensively (ಕಾಯಿಲೆಗೆ ಲಸಿಕೆ ಲಭ್ಯವಿದ್ದರೂ, ಅದರ ಕಾರ್ಯಕ್ಷಮತೆ ಮತ್ತು ಪರಿಣಾಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇನ್ನೂ ವಿಸ್ತೃತ ಸಂಶೋಧನೆಗಳು ವ್ಯಾಪಕವಾಗಿ ನಡೆಯಬೇಕಿದೆ)” ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರರ್ಥ ಈಗಿರುವ ಈಗಿರುವ ಲಸಿಕೆ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿಯಾಗಿಲ್ಲ ಮತ್ತು ನಿರೀಕ್ಷಿತ ಕಾರ್ಯಕ್ಷಮತೆ ಹೊಂದಿಲ್ಲ ಎಂದೇ ಅಲ್ಲವೆ?
ಶಿವಮೊಗ್ಗ ವಿಡಿಎಲ್ ಲ್ಯಾಬ್ ಹಾಲಿ ಪ್ರಭಾರ ಉಪನಿರ್ದೇಶಕ ಡಾ ಗುಡದಪ್ಪ ಕಸಬಿ ಅವರೇ ಪ್ರಕಟಿಸಿರುವ ಎರಡು ಸಂಶೋಧನಾ ಪ್ರಬಂಧಗಳಲ್ಲಿ ಕೂಡ ಲಸಿಕೆಯ ಕಾರ್ಯಕ್ಷಮತೆ ಮತ್ತು ಪರಿಣಾಮದ ಕುರಿತು ಆಧಾರಸಹಿತ ಆತಂಕ ವ್ಯಕ್ತಪಡಿಸಿದ್ದಾರೆ(ಈ ಪ್ರಬಂಧಗಳು ಸಾರ್ವಜನಿಕವಾಗಿ ಲಭ್ಯವಿದ್ದು, https://www.researchgate.net/publication/235366292_Kyasanur_Forest_Disease_India_2011-2012 ಮತ್ತು https://journals.plos.org/plosntds/article?id=10.1371/journal.pntd.0002025 ಈ ಎರಡು ಲಿಂಕ್ನಲ್ಲಿ ನೋಡಬಹುದು. ಅಷ್ಟೇ ಅಲ್ಲದೆ, ಗುಡದಪ್ಪ ಕಸಬಿ ಅವರ ಸಂಶೋಧನೆಯನ್ನು ಉಲ್ಲೇಖಿಸಿರುವ ಮತ್ತು ಇತರೆ ಹಲವು ಸಂಶೋಧಕರ ಸಂಶೋಧನೆಗಳಿಗೆ ಪೂರಕವಾಗಿ ಜಗತ್ತಿನ ಹಲವು ವಿಜ್ಞಾನಿಗಳು ಜಂಟಿಯಾಗಿ ಖ್ಯಾತ ವಿಜ್ಞಾನ ಪತ್ರಿಕೆ ‘ದ ನೇಚರ್’ನಲ್ಲಿ ಪ್ರಕಟಿಸಿರುವ ಸಂಶೋಧನಾ ವರದಿಯಲ್ಲಿ ಕೂಡ ಕೆಎಫ್ ಡಿ ಲಸಿಕೆಯ ಕಾರ್ಯಕ್ಷಮತೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ ಮತ್ತು ಲಸಿಕೆ ಪಡೆದುಕೊಂಡ ಮೇಲೂ ಹಲವರಿಗೆ ಸೋಂಕು ಕಾಣಿಸಿಕೊಂಡ ಉದಾಹರಣೆಗಳಿವೆ ಎಂದು ಉಲ್ಲೇಖಿಸಲಾಗಿದೆ https://www.nature.com/articles/s41598-020-58242-w . ಮುಖ್ಯವಾಗಿ ಲಸಿಕೆಯ ಕಾರ್ಯಕ್ಷಮತೆಯಲ್ಲಿನ ಕೊರತೆ ಮತ್ತು ವೈರಾಣುವಿನ ರೂಪಾಂತರಗಳಿಂದಾಗಿ ಆಗಿರುವ ವ್ಯತ್ಯಾಸಗಳೇ ಸೋಂಕು ಪದೇ ಪದೇ ಕಾಣಿಸಿಕೊಳ್ಳಲು ಕಾರಣವಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಬೆಂಗಳೂರಿನ ಐಎಎಚ್ &ವಿಬಿಯಲ್ಲಿ ಲಸಿಕೆ ತಯಾರಿಕೆಯ ಹಂತದಲ್ಲಿ ಮಾನವ ಲಸಿಕೆ ತಯಾರಿಯ ಮಾನದಂಡಗಳನ್ನು ಪಾಲಿಸಲಾಗುತ್ತಿದೆಯೇ? ಪಶು ರೋಗ ಸಂಶೋಧನೆ ಮತ್ತು ಲಸಿಕೆ ಕೇಂದ್ರದಲ್ಲಿ ಮಾನವ ಲಸಿಕೆ ತಯಾರಿಗೆ ಡಿಸಿಜಿಐ(ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಪರವಾನಗಿ ಇದೆಯೇ ಎಂಬ ಬಗ್ಗೆ ಕೂಡ ಪ್ರತಿಧ್ವನಿ ಪ್ರಶ್ನೆಗಳನ್ನು ಎತ್ತಿತ್ತು. ಆ ಬಗ್ಗೆ ಬೆಂಗಳೂರಿನ ಐಎಎಚ್ &ವಿಬಿಯ ಡಾ ಬೈರೇಗೌಡರನ್ನು ಸಂಪರ್ಕಿಸಿದಾಗ, “ಲಸಿಕೆ ತಯಾರಿಕೆಗೆ ಅನುಮತಿ ಪಡೆಯಲಾಗಿತ್ತು. ಇದೀಗ ಪರವಾನಗಿ ವಾಯಿದೆ ಮೀರಿದೆ. ಹಾಗಾಗಿ ಲೈಸೆನ್ಸ್ ನವೀಕರಣಕ್ಕೆ ಅರ್ಜಿ ಹಾಕಿದ್ದೇವೆ” ಎಂದಿದ್ದರು. ಯಾವಾವ ಪರವಾನಗಿ ಮುಗಿದಿತ್ತು ಮತ್ತು ಪರವಾನಗಿ ಮುಗಿದ ಬಳಿಕವೂ ಕೇಂದ್ರದಲ್ಲಿ ಲಸಿಕೆ ಉತ್ಪಾದಿಸಲಾಗುತ್ತಿದೆಯೇ ? ಎಂಬ ಪ್ರಶ್ನೆಗಳಿಗೆ ಅವರು ಉತ್ತರ ನೀಡಿರಲಿಲ್ಲ!
ಈ ಎಲ್ಲಾ ಪ್ರಶ್ನೆ, ಗೊಂದಲಗಳ ನಡುವೆ ಇದೀಗ ಜಿಲ್ಲೆಯಲ್ಲಿ ಕೆಎಫ್ ಡಿ ಪ್ರಕರಣಗಳು ಏರುಗತಿಯಲ್ಲಿವೆ. ಹೊಸ ಪ್ರದೇಶಗಳಲ್ಲಿ ಕೂಡ ಸೋಂಕು ಕಾಣಿಸಿಕೊಂಡಿದೆ. ಆದರೆ, ಸಕಾಲಕ್ಕೆ ಮಲೆನಾಡಿನ ಜನರಿಗೆ ಕನಿಷ್ಟ ಸುರಕ್ಷತೆಯ ಅಭಯ ನೀಡಲು ಕೂಡ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಲಸಿಕೆ ಲಭ್ಯವಿಲ್ಲ!