ಚಿನ್ನ ಕಳ್ಳ ಸಾಗಣಿಕೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಬಳಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಹೇಳಿಕೆ ನೀಡಲು ಒತ್ತಾಯಿಸಿದ ಆರೋಪದ ಮೇಲೆ ಕೇರಳ ಪೊಲೀಸರು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳ ಮೇಲೆಯೇ ಪ್ರಕರಣ ದಾಖಲಿಸಿದೆಯೆಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಸ್ವಪ್ನಾ ಸುರೇಶ್ ಅವರದೆನ್ನಲಾದ ಆಡಿಯೋ ಕ್ಲಿಪ್ ಕುರಿತಂತೆ ಕ್ರೈಮ್ ಬ್ರಾಂಚ್ ತಂಡ ನೀಡಿದ ವರದಿಯ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಕರಣ ದಾಖಲಾದ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ದೊರೆತಿಲ್ಲ. ಏನೇ ಆದರೂ ಕಾನೂನು ರೀತ್ಯಾ ಎದುರಿಸುತ್ತೇವೆ ಎಂದು ಇಡಿ ಮೂಲಗಳು ತಿಳಿಸಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ವರ್ಷ ಆಗಸ್ಟ್ 12, 13 ರಂದು ಸ್ವಪ್ನಾ ಸುರೇಶ್ ಅವರನ್ನು ವಿಚಾರಣೆಗೆ ಒಳಪಡಿಸಿದ ಇಡಿ ಅಧಿಕಾರಿಗಳು, ನಕಲಿ ಸಾಕ್ಷ್ಯಗಳನ್ನು ಸೃಷ್ಟಿಸಲು ಕೇರಳ ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ದಂಡ ಸಂಹಿತೆ 120-ಬಿ (ಕ್ರಿಮಿನಲ್ ಪಿತೂರಿ), 167 (ಸಾರ್ವಜನಿಕ ನೌಕರ ನೋವು ಮಾಡುವ ಉದ್ದೇಶದಿಂದ ತಪ್ಪು ದಾಖಲೆಯನ್ನು ಸೃಷ್ಟಿಸುವುದು), 192 (ನಕಲಿ ದಾಖಲೆ ಸೃಷ್ಟಿ). 195-ಎ (ನಕಲಿ ಸಾಕ್ಷಿ ನೀಡಲು ಯಾರಿಗಾದರೂ ಬೆದರಿಕೆ ಹಾಕುವುದು) ಮೊದಲಾದ ಸೆಕ್ಷನ್ನಡಿಯಲ್ಲಿ ಕ್ರೈಮ್ ಬ್ರಾಂಚ್ ಪ್ರಕರಣ ದಾಖಲಿಸಿದೆ.
ಕೇರಳ ಸರ್ಕಾರದ ಬುಡಕ್ಕೇ ಬೆದರಿಕೆಯಾಗಿ ಬಂದಿದ್ದ ಅಂತರಾಷ್ಟ್ರೀಯ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಮೊದಲ ಆರೋಪಿಯಗಿದ್ದಾರೆ. ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು, ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಮುಖ್ಯಮಂತ್ರಿ ಕಛೇರಿಯ ಶಾಮೀಲಿದೆ ಎಂದು ಆರೋಪಿಸಿದ್ದರು. ಈ ನಡುವೆ, ಕೇಂದ್ರ ಸರ್ಕಾರ ತನ್ನನ್ನು ಗುರಿಯಾಗಿಸುತ್ತಿದೆ ಎಂದು ಪಿಣರಾಯ್ ವಿಜಯನ್ ಆರೋಪ ಹೊರಿಸಿದ್ದರು.