ಕರ್ನಾಟಕದ ಮೊದಲ ತೋಳ ಅಭಯಾರಣ್ಯದ ಸ್ಥಾಪನೆಗೆ ಸಿದ್ದತೆ ನಡೆಸಲಾಗುತ್ತಿದೆ. ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ತೋಳಗಳು ಹೆಚ್ಚಿರುವುದರಿಂದ ಆ ಭಾಗದಲ್ಲಿಯೇ ಅಭಯಾರಣ್ಯ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ.
ಭಾರತದಲ್ಲಿರುವ ಕಂದು ಬಣ್ಣದ ತೋಳಗಳು ಕೊಪ್ಪಳ ಜಿಲ್ಲೆಯ ಬಂಕಾಪುರದಲ್ಲಿ ಹೆಚ್ಚಿದ್ದು, ಕರ್ನಾಟಕದ ವನ್ಯಜೀವಿ ಮಂಡಳಿಯೂ ಈ ಭಾಗದಲ್ಲಿಯೇ ಕರ್ನಾಟಕದ ಪ್ರಥಮ ತೋಳ ಅಭಯಾರಣ್ಯ ಸ್ಥಾಪಿಸುವ ಯೋಜನೆ ಹೊಂದಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ವನ್ಯಜೀವಿ ಮಂಡಳಿ ಈ ಸಂಬಂದ ಬಂಕಾಪುರದಲ್ಲಿ 822.03 ಚದರ ಕಿಲೋಮೀಟರ್ ಅರಣ್ಯ ಪ್ರದೇಶದಲ್ಲಿ ಅಭಯಾರಣ್ಯ ಸ್ಥಾಪನೆಗೆ ಜಾಗ ಮೀಸಲಿಡಲು ನಿರ್ಧರಿಸಿದ್ದು, ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಕಳಿಸಿದೆ.
ಸಾಮಾನ್ಯವಾಗಿ ಬೂದಿತೋಳಗಳು ಒಣ ಹುಲ್ಲುಗಾವಲು ಮತ್ತು ದಕ್ಷಿಣ ಪ್ರಸ್ಥಭೂಮಿಯಲ್ಲಿ ವಾಸಿಸುತ್ತವೆ. ಇವು ಬ್ಲ್ಯಾಕ್ಬಕ್ಸ್ ಸೇರಿದಂತೆ ಸಸ್ಯಹಾರಿ ಪ್ರಾಣಿಗಳನ್ನು ಭೇಟೆಯಾಡುತ್ತವೆ ಎಂದು ಪ್ರಸ್ತಾಪದಲ್ಲಿ ಉಲ್ಲೇಖಿಸಲಾಗಿದೆ.
ಈ ಅಭಯಾರಣ್ಯ ಸ್ಥಾಪಿಸುವುದರಿಂದ ಕತ್ತೆಕಿರುಬ, ಭಾರತೀಯ ತೋಳ, ಚಿನ್ನದ ನರಿ ಸೇರಿದಂತೆ ಇತರೆ ಪ್ರಾಣಿಗಳ ರಕ್ಷಣೆಗೆ ಕೊಪ್ಪಳ ಜಿಲ್ಲೆಯ ಬಂಕಾಪುರ, ಸುಲೇಕಲ್, ಮಲ್ಲಾಪುರ ಹಳ್ಳಿಗಳ ಅರಣ್ಯ ಪ್ರದೇಶವು ಸೂಕ್ತವಾಗುತ್ತದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಣ ಈ ಪ್ರದೇಶದ ಸುತ್ತಮುತ್ತ ಈ ಮೇಲೆ ಉಲ್ಲೇಖಿಸಿದ ಪ್ರಾಣಿಗಳು ಹೆಚ್ಚಾಗಿ ಕಂಡುಬರುತ್ತವೆ, ಮತ್ತು ಕಲ್ಲುಗುಡ್ಡಗಳು ಹಾಗು ಮುಳ್ಳಿನ ಸಸ್ಯಗಳು ಹೆಚ್ಚಾಗಿ ಕಂಡುಬರುವುದರಿಂದ ಇವುಗಳ ವಾಸಕ್ಕೆ ಯೋಗ್ಯ ಸ್ಥಳವೆಂದು ಗುರುತಿಸಲಾಗಿದೆ.
ಅಲ್ಲದೆ, ಕರಡಿಗಳ ಸಂರಕ್ಷಣೆಗೆ ಅಭಯಾರಣ್ಯ ಮಾಡುವ ಪ್ರಸ್ತಾಪವನ್ನು ವನ್ಯಜೀವಿ ಮಂಡಳಿ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಕರ್ನಾಟಕದ ಹಿರೆಕಲ್ಲುಗುಡ್ಡದ ಸುತ್ತಮುತ್ತ ಪ್ರದೇಶ ಮತ್ತು ಅರಸೀಕೆರೆ ಭಾಗದ ಕೆಲವು ಪ್ರದೇಶಗಳನ್ನು ಕರಡಿ ಸಂರಕ್ಷಣೆಗೆ ಅಭಯಾರಣ್ಯ ಸ್ಥಾಪಿಸುವ ಇರಾದೆ ಹೊಂದಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಬೆಂಗಳೂರು ಗ್ರಾಮಾಂತರ ರಾಮನಗರ ಜಿಲ್ಲೆಯ ಹಂದಿಗುಡ್ಡದಲ್ಲಿ ಕರಡಿ ಅಭಯಾರಣ್ಯವನ್ನು ನಿರ್ಮಿಸಲಾಗಿದೆ. ಕೊಪ್ಪಳ ಜಿಲ್ಲೆಯ ಹಿರೆಸೂಲೇಕೆರೆ ಮತ್ತು ಹಂಪಿಯ ಸುತ್ತಮುತ್ತ ಪ್ರದೇಶದವನ್ನು ಮೀಸಲಿಡುವ ಸಾಧ್ಯತೆಯಿದೆ. ಜೊತೆಗೆ ಬಹುದಿನಗಳಿಂದ ಹೆಸರಘಟ್ಟ ಪ್ರದೇಶವನ್ನು ಕರಡಿ ಅಭಯಾರಣ್ಯ ಪ್ರದೇಶ ಪ್ರಸ್ತಾಪದ ಘೋಷಣೆ ಬಾಕಿಯಿದೆ.