ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷದಲ್ಲಿದ್ದರೆ ಒಂದು ವೇಳೆ ಮುಖ್ಯಮಂತ್ರಿಯಾಗುತ್ತಿದ್ದರು. ಬಿಜೆಪಿಗೆ ಹೋಗಿ ಆ ಅವಕಾಶವನ್ನು ಕಳೆದುಕೊಂಡರು. ಬಿಜೆಪಿಯಲ್ಲಿ ಅವರು ಕೊನೆಯ ಬೆಂಚಿನವರು ಆಗಿಯೇ ಉಳಿಯುತ್ತಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಜ್ಯೋತಿರಾಧಿತ್ಯ ಸಿಂಧಿಯಾ ತಿರುಗೇಟು ನೀಡಿದ್ದಾರೆ.
ನಾನು ಕಾಂಗ್ರೆಸ್ನಲ್ಲಿದ್ದಾಗ ರಾಹುಲ್ ಗಾಂಧಿಯವರಿಗೆ ಈ ಕಾಳಜಿ ಇದ್ದಿದ್ದರೆ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂದು ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದ್ದಾರೆ.
ಸಿಂಧಿಯಾ ಅವರು ಕಳೆದ ವರ್ಷ ಮಾರ್ಚ್ನಲ್ಲಿ ತಮ್ಮ ಕಾಂಗ್ರೆಸ್ ತೊರೆದಿದ್ದರು, ಇದು ಕಮಲ್ ನಾಥ್ ನೇತೃತ್ವದ ಸರ್ಕಾರ ಪತನವಾಗಲು ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣವಾಗಿತ್ತು.
ಸೋಮವಾರ, ರಾಹುಲ್ ಗಾಂಧಿ ಅವರು ಕಾಂಗ್ರೆಸ್ನ ಯುವ ವಿಭಾಗದ ಸಭೆಯಲ್ಲಿ ಪಕ್ಷದ ಮಹತ್ವವನ್ನು ತಿಳಿಸುತ್ತಿರುವಾಗ ತಮ್ಮ ಒಂದು ಕಾಲದ ಆಪ್ತ ಸಹಾಯಕ ಸಿಂಧಿಯಾ ಬಗ್ಗೆ ಉಲ್ಲೇಖಿಸಿದ್ದರು. ಸಿಂಧಿಯಾ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಕೆಲಸ ಮಾಡಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಅವಕಾಶ ಇತ್ತು. ಒಂದು ದಿನ ನೀವು ಮುಖ್ಯಮಂತ್ರಿಯಾಗುತ್ತೀರೆಂದು ಅವರಿಗೆ ನಾನು ಭರವಸೆ ನೀಡಿದ್ದೆ. ಆದರೆ ಅವರು ಬೇರೆಯೇ ಹಾದಿಯನ್ನು ಆಯ್ದುಕೊಂಡರು ಎಂದು ರಾಹುಲ್ ಗಾಂಧಿ ಹೇಳಿದ್ದರು.
ಮೂಲಗಳ ಪ್ರಕಾರ, ಮಧ್ಯಪ್ರದೇಶ ಚುನಾವಣೆಗೆ ಮುಂಚೆಯಿಂದಲೂ ಸಿಎಂ ಸ್ಥಾನಕ್ಕಾಗಿ ಜ್ಯೋತಿರಾಧಿತ್ಯ ಮತ್ತು ಕಮಲ್ ನಾಥ್ ನಡುವೆ ಪೈಪೋಟಿ ಇತ್ತು. ಅಂದಿನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ತಮಗೆ ಸಿಎಂ ಸ್ಥಾನದ ಭರವಸೆ ನೀಡಿದ್ಧಾರೆ ಎಂಬುದನ್ನು ಬಹಿರಂಗವಾಗಿಯೇ ಸಿಂಧಿಯಾ ಹೇಳಿಕೊಂಡಿದ್ದರು. ಆದರೆ, ಫಲಿತಾಂಶ ಹೊರಬಿದ್ದು ಪಕ್ಷ ಬಹುಮತ ಪಡೆಯುತ್ತಲೇ ಸಿಂಧಿಯಾ ಬದಲಿಗೆ ಕಮಲ್ ನಾಥ್ ಸಿಎಂ ಹುದ್ದೆಗೇರಿದರು. ಬಳಿಕ ಕನಿಷ್ಠ ಪಕ್ಷದ ಅಧ್ಯಕ್ಷ ಸ್ಥಾನವನ್ನಾದರೂ ಕೊಡಿ, ಪಕ್ಷ ಕಟ್ಟುವೆ ಎಂಬ ಪ್ರಸ್ತಾಪವನ್ನು ಸಿಂಧಿಯಾ ಮುಂದಿಟ್ಟಿದ್ದರು. ಆದರೆ ಬರೋಬ್ಬರಿ 15 ತಿಂಗಳು ಕಳೆದರೂ ಸಿಎಂ ಕಮಲ್ ನಾಥ್ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿದಿದ್ದರೆ ವಿನಃ ಸಿಂಧಿಯಾಗೆ ಅಧಿಕಾರ ಸಿಕ್ಕಿರಲಿಲ್ಲ.
ಇನ್ನೊಂದು ಮೂಲಗಳ ಪ್ರಕಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಒಂದು ವರ್ಷದ ಮೊದಲೇ ಸಿಂಧಿಯಾ ಕಾಂಗ್ರೆಸ್ನೊಂದಿಗೆ ಆಂತರಿಕ ಘರ್ಷಣೆ ನಡೆಯುತ್ತಿತ್ತು. ಸೋನಿಯಾ ಗಾಂಧಿಯವರ ಭೇಟಿಗಾಗಿ ಒಂದು ವರ್ಷಗಳ ಕಾಲ ಸಿಂಧಿಯಾ ನಿರಂತರ ಪ್ರಯತ್ನಿಸಿದ್ದರೂ ಫಲಪ್ರದವಾಗಿರಲಿಲ್ಲ. ತಮ್ಮ ವಿರುದ್ಧ ಪಕ್ಷದ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಪ್ರಬಲ ತಂತ್ರ ಹೂಡಿದ್ದಾರೆ ಎಂಬುದು ಅರಿವಾಗುತ್ತಲೇ ಬಿಜೆಪಿ ಸೇರಿಕೊಂಡಿದ್ದರು.