ಚುನಾವಣೆಗಳು ಸಮೀಪಿಸುತ್ತಿದ್ದಂತೆ ರಾಜಕಾರಣಿಗಳ ಖಾದಿಯಷ್ಟೇ ಅಲ್ಲ; ಅಧಿಕಾರಿಗಳ ಖಾಕಿ ಕೂಡ ರಂಗೇರುತ್ತಿರುವುದು ಇತ್ತೀಚಿಗೆ ಹೆಚ್ಚಾಗಿದೆ.
ಆ ಹಿನ್ನೆಲೆಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಬೆಂಗಳೂರು ಮಾಜಿ ಕಮೀಷನರ್ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಅರ್ಜಿ ಕೂಡ ಖಾಕಿ ತೊರೆದು ಖಾದಿ ಧರಿಸುವ ನಿಟ್ಟಿನಲ್ಲಿ ತೆಗೆದುಕೊಂಡು ತೀರ್ಮಾನ ಎಂಬ ಮಾತುಗಳು ಕೇಳಿಬರುತ್ತಿವೆ.
ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿ ರಾಜ್ಯದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ಭಾಸ್ಕರ್ ರಾವ್ ಕೋವಿಡ್ ಮೊದಲ ಅಲೆಯ ಲಾಕ್ ಡೌನ್ ಮತ್ತು ಆ ಮುಂಚಿನ ಸಿಎಎ-ಎನ್ ಆರ್ ಸಿ ಹೋರಾಟಗಳ ಅವಧಿಯಲ್ಲಿ ಬೆಂಗಳೂರು ಮಹಾನಗರ ಪೊಲೀಸ್ ಕಮೀಷನರ್ ಆಗಿ ಸೇವೆ ಸಲ್ಲಿಸಿದ್ದರು. ಸಿಎಎ ವಿರೋಧಿ ಹೋರಾಟಗಾರರ ಮೇಲೆ ದೇಶದ್ರೋಹ ಪ್ರಕರಣ ಹೂಡಿದ್ದು, ಭದ್ರತಾ ವೈಫಲ್ಯದಿಂದಾಗಿ ಹೋರಾಟಗಾರರ ಮೇಲೆ ನಡೆದ ಹಲ್ಲೆ ಘಟನೆ ಸೇರಿದಂತೆ ಅವರ ಕೆಲವು ವೈಫಲ್ಯ ಮತ್ತು ಆಳುವ ಪಕ್ಷದ ಪರ ನಡೆಗಳು ನ್ಯಾಯಾಲಯದ ಛೀಮಾರಿಗೂ ಕಾರಣವಾಗಿದ್ದವು. ಬಳಿಕ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಮತ್ತೊಬ್ಬ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧವೇ ಕಾನೂನು ಹೋರಾಟ ನಡೆಸಿ ಭಾಸ್ಕರ್ ರಾವ್ ಸುದ್ದಿಯಾಗಿದ್ದರು.
ಈ ನಡುವೆ, ಬಿಜೆಪಿ ಹೈಕಮಾಂಡ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೊಗಳಿಕೆಗೂ ಪಾತ್ರವಾಗಿದ್ದ ರಾವ್, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವಾಗ ಆ ಪಕ್ಷದ ನಾಯಕರೊಂದಿಗೆ ಅಗತ್ಯಕ್ಕಿಂತ ಹೆಚ್ಚು ಆಪ್ತರಾಗಿ ಗುರುತಿಸಿಕೊಂಡಿದ್ದರು.
ಆ ಎಲ್ಲಾ ಹಿನ್ನೆಲೆಯಲ್ಲಿಯೇ ರಾವ್ ಅವರ ಈ ಸ್ವಯಂ ನಿವೃತ್ತಿ ವಿಷಯ, ಕೇವಲ ಹಿರಿಯ ಅಧಿಕಾರಿಯೊಬ್ಬರ ರಾಜೀನಾಮೆ ಸಂಗತಿಯಾಗಿ ಮುಗಿದುಹೋಗದೆ, ರಾಜಕೀಯ ಚರ್ಚೆಯ ಆಯಾಮ ಪಡೆದುಕೊಂಡಿದೆ.
ಹಾಗೆ ನೋಡಿದರೆ, ಭಾಸ್ಕರ್ ರಾವ್ ನಿವೃತ್ತಿಗೆ ಮೂರು ತಿಂಗಳ ಮುನ್ನವೇ ಸ್ವಯಂ ನಿವೃತ್ತಿ ತೆಗೆದುಕೊಳ್ಳುತ್ತಿರುವ ಸಂಗತಿ ಈ ಮೊದಲೇ ಸಾಕಷ್ಟು ಚರ್ಚೆಯಾಗಿತ್ತು. ಕಳೆದ ಆರೇಳು ತಿಂಗಳುಗಳಿಂದಲೇ ರಾವ್, ಸ್ವಯಂ ನಿವೃತ್ತಿ ಪಡೆದುಕೊಂಡು ರಾಜಕೀಯ ಪ್ರವೇಶ ಮಾಡಲಿದ್ದಾರೆ. ಸದ್ಯ ಚಾಲ್ತಿಯಲ್ಲಿರುವ ಬಿಜೆಪಿಯ ಮೂಲಕವೇ ರಾಜಕೀಯ ಪ್ರವೇಶವಾಗಲಿದೆ. ಈಗಾಗಲೇ ಅವರನ್ನು ಬಿಜೆಪಿ ಹೈಕಮಾಂಡ್ ಹಲವು ಬಾರಿ ಸಂಪರ್ಕಿಸಿದೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಪಕ್ಷದಿಂದ ಅವರಿಗೆ ಟಿಕೆಟ್ ನೀಡಿ, ಯೋಗಿ ಆದಿತ್ಯನಾಥ ವಿರುದ್ಧ ಮುನಿದಿರುವ ಅಲ್ಲಿನ ಬ್ರಾಹ್ಮಣ ಸಮುದಾಯವನ್ನು ಓಲೈಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಯೋಗಿ ವಿರುದ್ಧದ ಬ್ರಾಹ್ಮಣರ ಅಸಮಾಧಾನ ಶಮನದ ಭಾಗವಾಗಿ, ವಿವಿಧ ರಾಜ್ಯಗಳಲ್ಲಿ ನಿವೃತ್ತಿಯ ಅಂಚಿನಲ್ಲಿರುವ ಆ ಸಮುದಾಯದ ಜನಪ್ರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ರಾಜೀನಾಮೆ ಕೊಡಿಸಿ ಕೇಸರಿ ಶಾಲು ಹೊದೆಸಿ ಕಣಕ್ಕಿಳಿಸುವ ತಂತ್ರಗಾರಿಕೆಯ ಭಾಗವಾಗಿ ರಾವ್ ಕೂಡ ಉತ್ತರಪ್ರದೇಶದಲ್ಲಿ ಕಮಲ ಧ್ವಜ ಹಿಡಿಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಅದೇ ಹೊತ್ತಿಗೆ ಕಾಂಗ್ರೆಸ್ ನಾಯಕರೊಂದಿಗಿನ ಭಾಸ್ಕರ್ ರಾವ್ ಅವರ ಬಾಂಧವ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಬಸವನಗುಡಿ, ಜಯನಗರ ಅಥವಾ ಮಲ್ಲೇಶ್ವರಂ ಕ್ಷೇತ್ರಗಳ ಪೈಕಿ ಒಂದರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಅವಕಾಶ ನೀಡಿ, ಕಾಂಗ್ರೆಸ್ ಕೂಡ ಅವರಿಗೆ ಆಫರ್ ನೀಡಿದೆ ಎಂಬ ಮಾತುಗಳೂ ಇದ್ದವು. ಅಲ್ಲದೆ, ಸ್ವತಃ ರಾವ್ ಅವರೇ, ತಮ್ಮ ಆಪ್ತರ ಬಳಿ ಕೆಲಸಕ್ಕೆ ರಾಜೀನಾಮೆ ನೀಡಿ ಸದ್ಯದಲ್ಲೇ ರಾಜಕೀಯ ಪ್ರವೇಶ ಮಾಡುವುದಾಗಿಯೂ, ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳಿಂದ ಈಗಾಗಲೇ ತಮಗೆ ಆಹ್ವಾನ ಬಂದಿರುವುದಾಗಿಯೂ ಹೇಳಿಕೊಂಡಿದ್ದಾರೆ ಎಂಬ ಸುದ್ದಿಗಳಿದ್ದವು.
ಆದರೆ, ಇದೀಗ ಉತ್ತರಪ್ರದೇಶ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿಯೇ ನಿವೃತ್ತಿಗೆ ಮೂರು ತಿಂಗಳ ಮುನ್ನವೇ ರಾವ್ ಸ್ವಯಂ ನಿವೃತ್ತಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಕರ್ನಾಟಕದ ವಿಧಾನಸಭಾ ಚುನಾವಣೆ ಇನ್ನೂ ಒಂದೂ ಮುಕ್ಕಾಲು ವರ್ಷ ಮುಂದಿದೆ. ಹಾಗಿದ್ದರೂ, ರಾವ್ ತರಾತುರಿಯಲ್ಲಿ ಹುದ್ದೆ ತೊರೆಯಲು ಮುಂದಾಗಿರುವುದು, ಸಹಜವಾಗೇ ಉತ್ತರಪ್ರದೇಶದ ಚುನಾವಣೆಯತ್ತ ಅವರ ಚಿತ್ತ ನೆಟ್ಟಿದೆ ಎಂಬ ಚರ್ಚೆಗಳಿಗೆ ಗ್ರಾಸವಾಗಿದೆ.
ಹಾಗೆ ನೋಡಿದರೆ, ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಚುನಾವಣೆಗಳು ಸಮೀಪಿಸುತ್ತಲೇ ತಮ್ಮ ಸೇವಾ ಸಮವಸ್ತ್ರ ಕಳಚಿ, ಖಾದಿ ತೊಟ್ಟು ನೇರ ರಾಜಕಾರಣಕ್ಕಿಳಿಯುವುದು ಹೊಸದೇನಲ್ಲ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಜೆಪಿ ಮಾಜಿ ಹಿರಿಯ ನಾಯಕ ಯಶವಂತ್ ಸಿನ್ಹಾ, ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್, ಕರ್ನಾಟಕದ ಸಚಿವ ಬಿ ಸಿ ಪಾಟೀಲ್, ಶಾಸಕ ಪಿ ರಾಜೀವ್, ಮಾಜಿ ಸಂಸದ ಎಚ್ ಟಿ ಸಾಂಗ್ಲಿಯಾನ, ಕೆ ಶಿವರಾಮ್, ಎಲ್ ರೇವಣಸಿದ್ದಯ್ಯ ಸೇರಿದಂತೆ ಹಲವು ಐಪಿಎಸ್, ಐಎಎಸ್ ಅಧಿಕಾರಿಗಳು ನಿವೃತ್ತಿಯ ಬಳಿಕ ಅಥವಾ ಅದಕ್ಕೂ ಮುಂಚೆಯೇ ರಾಜಕೀಯ ಪಕ್ಷಗಳ ಧ್ವಜ ಹಿಡಿದ ಉದಾಹರಣೆಗಳಿವೆ. ಆ ಪೈಕಿ ಕೆಲವರು ಯಶಸ್ವಿ ರಾಜಕಾರಣಿಗಳು ಆಗಿ, ಮುತ್ಸದ್ಧಿ ನಾಯಕರಾಗಿ ಬೆಳೆದ ನಿದರ್ಶನಗಳೂ ಇವೆ. ಹಾಗೇ ಚುನಾವಣಾ ರಾಜಕಾರಣದಲ್ಲಿ ಮಣ್ಣುಮುಕ್ಕಿದವರೂ ಇದ್ದಾರೆ.
ಆದರೆ, ಕಳೆದ ಒಂದು ವರ್ಷದಲ್ಲಿ ಕರ್ನಾಟಕದ ಇಬ್ಬರು ಅಧಿಕಾರಿಗಳು ತಮ್ಮ ಸೇವೆಯ ಮಧ್ಯದಲ್ಲೇ ಇನ್ನೂ ದಶಕಗಳ ಸೇವಾವಧಿ ಬಾಕಿ ಇರುವಾಗಲೇ ರಾಜೀನಾಮೆ ನೀಡಿದ ರಾಜಕಾರಣಕ್ಕೆ ಧುಮುಕಿದರು. ಅವರಲ್ಲಿ ಒಬ್ಬರು ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ, ಬಿಜೆಪಿಯ ಅಭ್ಯರ್ಥಿಯಾಗಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ಸೋಲು ಕಂಡರು. ಸದ್ಯ ಅವರು ಈಗ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರು. ಇನ್ನು ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಕೂಡ ದೇಶದ ಆಡಳಿತ ವ್ಯವಸ್ಥೆ ಜನಸಾಮಾನ್ಯರ ಪಾಲಿಗೆ ನರಕ ಸೃಷ್ಟಿಸುತ್ತಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಎದುರಾಗಿದೆ ಎಂಬ ಕಾರಣವೊಡ್ಡಿಯೇ ರಾಜೀನಾಮೆ ನೀಡಿ, ಬಳಿಕ ಕಾಂಗ್ರೆಸ್ ಸೇರ್ಪಡೆಯಾದರು.
ಈ ನಡುವೆ, ಮತ್ತೊಬ್ಬ ಜನಪ್ರಿಯ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಇತ್ತೀಚೆಗೆ ಬಿಜೆಪಿ ಹೈಕಮಾಂಡ್ ಜೊತೆ ದೆಹಲಿಯಲ್ಲಿ ರಹಸ್ಯ ಮಾತುಕತೆ ನಡೆಸಿ ಸುದ್ದಿಯಾದರು. ಆ ಭೇಟಿ ವೈಯಕ್ತಿಕ ಎಂದು ಅವರು ಸಮಜಾಯಿಷಿ ನೀಡಿದರೂ, ರಾಜ್ಯದಲ್ಲಿ ತಮ್ಮದೇ ಆದ ಪ್ರಚಾರ ಪಡೆಯನ್ನು ಕಟ್ಟಿಕೊಂಡು, ಪಿಆರ್ ತಂಡದೊಂದಿಗೆ ಭರ್ಜರಿ ಪ್ರಚಾರ ಪಡೆಯುತ್ತಿರುವ ಅಧಿಕಾರಿ, ಹೀಗೆ ದಿಢೀರನೇ ರಾಜಕೀಯ ಪಕ್ಷವೊಂದರ ರಾಷ್ಟ್ರೀಯ ಪ್ರಮುಖರನ್ನು ಖಾಸಗಿಯಾಗಿ ಭೇಟಿಯಾದದ್ದು ಸಹಜವಾಗೇ ಆ ಪಕ್ಷಕ್ಕೆ ಅವರು ಸೇರಲಿದ್ದಾರೆ ಎಂಬ ಸುದ್ದಿಗಳಿಗೆ ಗ್ರಾಸವಾಗಿತ್ತು.
ಅಧಿಕಾರಿಗಳಾಗಿ ಜನಸೇವೆ ಮಾಡುವ ಬದಲು, ನೇರ ರಾಜಕಾರಣದ ಮೂಲಕ ಜನಸೇವೆ ಮಾಡುವ ಅಧಿಕಾರಿಗಳ ಇಂತಹ ನಡೆಯ ಹಿಂದಿನ ಲಾಭನಷ್ಟದ ಲೆಕ್ಕಾಚಾರಗಳು ಏನೇ ಇರಬಹುದು. ಆದರೆ, ಸರ್ಕಾರಿ ಅಧಿಕಾರಿಯಾಗಿ ಸೇವಾ ಅವಧಿಯಲ್ಲಿ ರಾಜಕೀಯ ಪ್ರವೇಶದ ಮುಂದಾಲೋಚನೆಯೊಂದಿಗೆ ಆ ಅಧಿಕಾರಿಗಳು ರಾಜಕೀಯ ಪಕ್ಷಗಳಿಗೆ ಮತ್ತು ನಾಯಕರಿಗೆ ಅನುಕೂಲಕರವಾಗಿ ನಡೆದುಕೊಳ್ಳುವುದರಿಂದಾಗಿ ಆಗುವ ಹಾನಿಯ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ರಾಜಕೀಯ ಮಹತ್ವಾಕಾಂಕ್ಷೆಯ ಅಧಿಕಾರಿಯೊಬ್ಬ ಆಯಕಟ್ಟಿನ ಸ್ಥಾನದಲ್ಲಿ ಕುಳಿತು ನಿರ್ಣಾಯಕ ಸಂದರ್ಭದಲ್ಲಿ, ಮಹತ್ವದ ನಿರ್ಧಾರಗಳನ್ನು, ಕ್ರಮಗಳನ್ನು ಕೈಗೊಳ್ಳುವಾಗ ಆತ ಅಥವಾ ಆಕೆ ಎಷ್ಟು ಪ್ರಾಮಾಣಿಕವಾಗಿ, ವಸ್ತುನಿಷ್ಠವಾಗಿ ನಡೆದುಕೊಳ್ಳಲು ಸಾಧ್ಯ ಎಂಬುದು ಕೇಳಬೇಕಿರುವ ಪ್ರಶ್ನೆ.
ಅಂತಹ ಮಹತ್ವಾಕಾಂಕ್ಷೆಗಳು ಕೇವಲ ಕಾನೂನು ಮತ್ತು ಅಧಿಕಾರ ಚಲಾವಣೆಯ ವಿಷಯದಲ್ಲಿ ಮಾತ್ರವಲ್ಲದೆ, ಜನಸಾಮಾನ್ಯರಿಗೆ ಪ್ರಭಾವಿಗಳಿಂದ, ರಾಜಕೀಯ ನಾಯಕರಿಂದ ಆಗುವ ಅನ್ಯಾಯಗಳ ಹೊತ್ತಲ್ಲಿ ಕೂಡ ಸಾಮಾನ್ಯ ನ್ಯಾಯಕ್ಕೆ ದ್ರೋಹ ಬಗೆಯುವುದಿಲ್ಲವೆ? ಎಂಬ ಗಂಭೀರ ಸಂಗತಿ ಕೂಡ ಇದೆ.
ಆ ಹಿನ್ನೆಲೆಯಲ್ಲಿಯೇ ಇತ್ತೀಚೆಗೆ ಚುನಾವಣಾ ಆಯೋಗ ಕೂಡ, ಐಎಎಸ್ ಮತ್ತು ಐಪಿಎಸ್ ಸೇರಿದಂತೆ ಭಾರತೀಯ ನಾಗರಿಕ ಸೇವೆಯ ಅಧಿಕಾರಿಗಳು ತಮ್ಮ ಸೇವಾವಧಿಯ ನಡುವೆ ಅಥವಾ ನಿವೃತ್ತಿಯ ಬಳಿಕ ರಾಜಕೀಯ ಪಕ್ಷ ಸೇರಲು ನಿರ್ದಿಷ್ಟ ಸಮಯದ ಕೂಲಿಂಗ್ ಪೀರಿಯಡ್ ನಿಯಮ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. 2012ರಲ್ಲಿ ಒಮ್ಮೆ ಕನಿಷ್ಟ ಎರಡು ವರ್ಷಗಲ ಕೂಲಿಂಗ್ ಅವಧಿಯ ಶಿಫಾರಸು ಮಾಡಿದ್ದ ಆಯೋಗ, ಆ ಶಿಫಾರಸನ್ನು ಸರ್ಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಪ್ರಸ್ತಾವನೆ ಮುಂದಿಟ್ಟಿದೆ.
ಯಾವುದೇ ಅಧಿಕಾರಿ ಹುದ್ದೆ ತ್ಯಜಿಸಿ ಅಥವಾ ನಿವೃತ್ತಿಯ ಬಳಿಕ ಯಾವುದೇ ಚುನಾವಣೆಗೆ ಸ್ಪರ್ಧಿಸಲು ನಿರ್ದಿಷ್ಟ ನಿರ್ಬಂಧ ಅವಧಿ ಇರಬೇಕು. ಇಲ್ಲವಾದಲ್ಲಿ ಚುನಾವಣೆಗೆ ಸ್ಪರ್ಧಿಸುವ ಮತ್ತು ರಾಜಕೀಯ ಪ್ರವೇಶದ ಮುಂದಾಲೋಚನೆಯೊಂದಿಗೆ ತನ್ನ ಸೇವಾವಧಿಯಲ್ಲಿ ಆತ/ ಆಕೆ ರಾಜಕೀಯ ಪಕ್ಷ ಮತ್ತು ನಾಯಕರ ಪರ ನೀತಿ-ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಅಧಿಕಾರ ದುರುಪಯೋಗಕ್ಕೆ ಅವಕಾಶವಿದೆ. ಹಾಗೇ ಮತದಾರರನ್ನು ಪ್ರಭಾವಿಸುವ ಸಾಧ್ಯತೆಯೂ ಇದೆ. ಹಾಗಾಗಿ ನಿರ್ದಿಷ್ಟ ಅವಧಿಯವರೆಗೆ ಕೂಲಿಂಗ ಪೀರಿಯಡ್ ಕಡ್ಡಾಯಗೊಳಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.
ಇದೀಗ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಅರ್ಜಿ ಮತ್ತು ರಾಜಕೀಯ ಸೇರ್ಪಡೆಯ ಚರ್ಚೆಗಳ ಹಿನ್ನೆಲೆಯಲ್ಲಿ ಆಯೋಗದ ಈ ಪ್ರಸ್ತಾವನೆ ಮುನ್ನಲೆಗೆ ಬಂದಿದೆ. ಅದರಲ್ಲೂ ಬೆಂಗಳೂರು ಕಮೀಷನರ್ ಆಗಿ ಅವರು ಬಿಜೆಪಿಯ ಸಿಎಎ-ಎನ್ ಆರ್ ಸಿ, ರೈತ ಕಾಯ್ದೆಗಳ ವಿರುದ್ಧದ ಹೋರಾಟದ ಹೊತ್ತಿನಲ್ಲಿ ನಡೆದುಕೊಂಡು ರೀತಿಯ ಹಿನ್ನೆಲೆಯಲ್ಲಿ ಕೂಡ ಆಯೋಗದ ಶಿಫಾರಸು ಎಷ್ಟು ವಾಸ್ತವಿಕ ಎಂಬುದು ಗಮನಾರ್ಹ ಸಂಗತಿ.