ಹೆಬ್ಬಾಳ ನಾಗಾವರ ಕಣಿವೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕ್ರಮವಾಗಿ ಸಿಂಗನಾಯಕನಹಳ್ಳಿಯ ಕೆರೆಯಂಗಳದಲ್ಲಿ ಇರುವ ಸುಮಾರು 6316 ಮರಗಳನ್ನು ತೆರವುಗೊಳಿಸುವ ಬಗ್ಗೆ ಅರಣ್ಯ ಇಲಾಖೆಯು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಕೋರಿದ್ದು ಈ ಕುರಿತು ಈಗ ನೈಜ್ಯ ಹೋರಾಟ ವೇದಿಕೆಯ ಎಚ್.ಎಂ. ವೆಂಕಟೇಶ್ ಅವರು ಆಕ್ಷೇಪಣೆ ಅರ್ಜಿಯನ್ನು ಇ-ಮೇಲ್ ಮೂಲಕ ಸಲ್ಲಿಸಿದ್ದಾರೆ.
ಆಕ್ಷೇಪಣೆ ಪತ್ರದಲ್ಲಿ, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಈ ಸಿಂಗನಾಯಕನಹಳ್ಳಿ ಕೆರೆಯಂಗಳಕ್ಕೆ ಅರಣ್ಯ ಇಲಾಖೆಯು ಸಾಮಾಜಿಕ ಅರಣ್ಯ ಕಾರ್ಯಕ್ರಮದ ಅಡಿಯಲ್ಲಿ ಕೆರೆಯಂಗಳದಲ್ಲಿ ಅವೈಜ್ಞಾನಿಕವಾಗಿ ಸಸಿಗಳನ್ನು ನೆಟ್ಟಿರುವುದನ್ನು ನಾವು ಈಗ ಪ್ರಶ್ನಿಸುವಂತ ಸಂದರ್ಭ ಬಂದಿದೆ. ಕಾರಣ ಬಹುಶಃ ಸಣ್ಣ ನೀರಾವರಿ ಇಲಾಖೆ, ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ಅಭಿವೃದ್ಧಿ ಕಾಮಗಾರಿಯಡಿ ಈ ಕೆರೆಯಂಗಳದಲ್ಲಿ ಸಸಿಗಳನ್ನು ನೆಡಲು ಈ ಮೊದಲು ಅರಣ್ಯ ಇಲಾಖೆಗೆ ಅವಕಾಶವನ್ನು ಕೊಟ್ಟು ಒಂದು ರೀತಿಯ ಒಳ ಒಪ್ಪಂದವನ್ನು ಮಾಡಿ ಈಗ ಸಾರ್ವಜನಿಕರೆದುರು ಈ ಇಲಾಖೆಗಳು ನಗ್ನವಾಗಿವೆ.
ಕೆರೆಯಂಗಳದ ಒಳಗಡೆ ಸಸಿಗಳನ್ನು ನೆಡುವುದು ಅವೈಜ್ಞಾನಿಕವಾಗಿ ಇರುವುದಂತೂ ಸತ್ಯ.
ಕೆರೆಯಂಗಳದಲ್ಲಿ ಸಸಿಗಳು ನೆಟ್ಟಲ್ಲಿ ಕೆರೆಯ ನೀರು ಮತ್ತು ಅಂತರ್ಜಲವನ್ನು ಗ್ರಹಿಸಿ, ಕೆರೆಯಲ್ಲಿರುವ ಮಣ್ಣಿನ ಪೋಷಕಾಂಶಗಳೊಂದಿಗೆ ಸಸಿಗಳು ಸೊಂಪಾಗಿ ಬೆಳೆದಿರುವುದು ಪ್ರಕೃತಿಯ ಕೊಡುಗೆಯ ಲಾಭವನ್ನು ಪಡೆಯುವಲ್ಲಿ ಅರಣ್ಯ ಇಲಾಖೆ ಮುಂದಾಗಿರುವುದು ಕೂಡ ಮೇಲ್ನೋಟಕ್ಕೆ ಕಂಡುಬರುತ್ತದೆ.
ಆದರೆ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರು ನಗರ ಪ್ರದೇಶ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅರಣ್ಯಕ್ಕೆ ಮೀಸಲಾಗಿಟ್ಟಿರುವ ಭೂಮಿಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಗುರುತರವಾದ ಜವಾಬ್ದಾರಿ ಕೆಲಸವನ್ನು ಬಿಟ್ಟು ಕೆರೆಯಂಗಳದಲ್ಲಿ ಸಸಿಗಳನ್ನು ನೆಟ್ಟಲ್ಲಿ ಪ್ರಕೃತಿದತ್ತವಾಗಿ ಅವು ಬೆಳೆದು ಬರುತ್ತವೆ. ಆಗ ಅರಣ್ಯ ಇಲಾಖೆಯು ತನ್ನ ಸಾಧನೆಯನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ಅವೈಜ್ಞಾನಿಕವಾಗಿ ಮತ್ತು ದುರುದ್ದೇಶಪೂರಿತವಾದ ಯೋಜನೆಯನ್ನು ಕಾರ್ಯರೂಪ ಪಡಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ದೂರಿದ್ದಾರೆ.
ಕಿರುಅರಣ್ಯಕ್ಕೆ ಮೀಸಲಿಟ್ಟಿರುವ ಭೂಮಿಯಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಂಡ ಈ ಅರಣ್ಯ ಇಲಾಖೆ ಸುಲಭವಾಗಿ ಪ್ರಕೃತಿದತ್ತವಾಗಿ ಕೆರೆಯಂಗಳದಲ್ಲಿ ಬೆಳೆಯುವ ಜಾಗದಲ್ಲಿ ಸಸಿಗಳನ್ನು ನೆಟ್ಟು ಮೆಚ್ಚುಗೆ ಗಳಿಸುವ ಉದ್ದೇಶ ಅರಣ್ಯ ಅಧಿಕಾರಿಗಳಿಗೆ ಇತ್ತು ಎನ್ನುವುದು ಕೂಡ ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದಿದ್ದಾರೆ.
ಕೆರೆಯಂಗಳದ ಅಚ್ಚುಕಟ್ಟು ಪ್ರದೇಶದಲ್ಲಿನ ರೈತರನ್ನು ಸಂಪರ್ಕಿಸದೆ ಸ್ಥಳೀಯರೊಂದಿಗೆ ಈ ಬಗ್ಗೆ ಚರ್ಚಿಸದೆ ನೀರಾವರಿ ಇಲಾಖೆ ಮತ್ತು ಅರಣ್ಯ ಇಲಾಖೆಯ ಒಳಒಪ್ಪಂದ ಗಳ ಮೂಲಕ ಸಾರ್ವಜನಿಕರ ತೆರಿಗೆ ಹಣದಿಂದ( ಲಕ್ಷಾಂತರ ಅಥವಾ ಕೋಟ್ಯಂತರ) ಸಾವಿರಾರು ಸಸಿಗಳನ್ನು ಇಲ್ಲಿ ನೆಟ್ಟು ಯೋಜನೆಗೆ ವೆಚ್ಚವಾದ ಹಣವನ್ನು ಈ 2 ಇಲಾಖೆಯು ಸೇರಿಕೊಂಡು ದುರುಪಯೋಗ ಪಡಿಸಿಕೊಂಡಿದೆ ಎಂಬುದು ಈಗ ಅನಾವರಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅವೈಜ್ಞಾನಿಕವಾಗಿ ಕೆರೆ ಅಂಗಳದಲ್ಲಿ ಪ್ರಕೃತಿ ದತ್ತವಾಗಿ ಬಂದ ಕೆರೆಯ ಒಳಗಿನ ಸಮೃದ್ಧಿಯಾದ ಮಣ್ಣು ಮಣ್ಣಿನ ಜೀವಸತ್ವ ಜಾಗವನ್ನು ಈ ಕಿರು ಅರಣ್ಯಕ್ಕೆ ಬಳಸಿಕೊಂಡು ಯೋಜನೆಯನ್ನು ರೂಪಿಸುವ ಸಂದರ್ಭದಲ್ಲಿ ಸಾರ್ವಜನಿಕರ ಗಮನಸೆಳೆಯುವ ಪ್ರಚಾರವನ್ನು ಮಾಡದೆ ಇಲಾಖೆಗಳು ಎಡವಿದ್ದಾರೆ. ಎಂಬುದು ಸತ್ಯ. ಇವರ ಎಡವಟ್ಟಿನಿಂದಾಗಿ ಅರಣ್ಯ ಇಲಾಖೆಯು ನಿರ್ಮಿಸಿದ ಕಿರು ಅರಣ್ಯದ ಮರಗಳನ್ನು ನಾಶಪಡಿಸಲು ಮುಂದಾಗಿರುವುದು ಪ್ರಕೃತಿಯ ಮೇಲೆ ನಡೆಯುವ ಅತ್ಯಾಚಾರವೆಂದು ಭಾವಿಸಬೇಕಾಗುತ್ತದೆ ಎಂದು ಬರೆದಿದ್ದಾರೆ.
ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಈ ಕೆರೆಯಂಗಳದಲ್ಲಿ ಅವೈಜ್ಞಾನಿಕವಾದ ಯೋಜನೆಯನ್ನು ಅರಣ್ಯ ಇಲಾಖೆಯು ರೂಪಿಸುವಾಗ ಒಳಒಪ್ಪಂದ ಗಳೊಂದಿಗೆ ಯೋಜನೆ ಲಾಭ ಪಡೆಯುವ ದುರುದ್ದೇಶದಿಂದ ಬಹಳ ಸುಲಭವಾಗಿ ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಮಾಡಿಕೊಳ್ಳುವ ದುರಾಲೋಚನೆಯಿಂದ ಅವೈಜ್ಞಾನಿಕವಾದ ಈ ಕಿರು ಅರಣ್ಯವನ್ನು ಅಭಿವೃದ್ಧಿ ಪಡಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಕೆರೆಯಂಗಳದ ಅಚ್ಚುಕಟ್ಟು ಪ್ರದೇಶದಲ್ಲಿನ ರೈತರು, ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಮತ್ತು ಪರಿಸರವಾದಿಗಳು ಸಾಮಾಜಿಕ ಹೋರಾಟಗಾರರನ್ನು ಸಂಪರ್ಕಿಸದೆ,ಸಾವಿರಾರು ಸಸಿಗಳನ್ನು ನೆಟ ಈ ಯೋಜನೆಯ ಉದ್ದೇಶವಾದರೂ ಏನು? ಎಂಬುದು ಈಗ ಈ ಎರಡು ಇಲಾಖೆಗಳು ಸ್ಪಷ್ಟಪಡಿಸಬೇಕಾಗಿದೆ.
ಅರಣ್ಯ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಯ ಅನೈತಿಕ ಸಂಬಂಧದದ ಗರ್ಭದಿಂದ ಬಂದ ಶಿಶುವನ್ನು ತಾವೇ ಕೈಯಾರೆ ಕೊಲ್ಲುವಂತಹ ಕಾರ್ಯಕ್ಕೆ ಸಾರ್ವಜನಿಕರನ್ನು ಸಾಕ್ಷಿಯನ್ನಾಗಿ ಸುವ ಪ್ರಯತ್ನ ಎಷ್ಟರ ಮಟ್ಟಿಗೆ ಸರಿ*? ಎಂಬುದೇ ಪರಿಸರವಾದಿಗಳ, ಸಾಮಾಜಿಕ ಹೋರಾಟಗಾರರು ಪ್ರಶ್ನೆಯಾಗಿದೆ. ಆದುದರಿಂದ ಈ ಸದರಿ ಸಿಂಗನಾಯಕನಹಳ್ಳಿ ಯ ಕೆರೆಯ ಅಂಗಳದಲ್ಲಿರುವ ಕಿರುವ ಅರಣ್ಯವನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸದೆ, ಕೆರೆ ಒತ್ತುವರಿಯಾಗಿದ್ದ ಪಕ್ಷದಲ್ಲಿ ಅದನ್ನು ತೆರವುಗೊಳಿಸಿ ಕೆರೆಗೆ ನೀರು ಹಾಯಿಸುವ ಬಗ್ಗೆ ತಜ್ಞರೊಂದಿಗೆ ಪರಿಶೀಲನೆ ಮಾಡಬೇಕಾಗಿದೆ ಎಂದಿದ್ದಾರೆ.
ಒಂದು ವೇಳೆ ತಜ್ಞರ ಅಭಿಪ್ರಾಯದಂತೆ ಈ ಮರಗಳನ್ನು ತೆರವುಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಲ್ಲಿ ಇಂತಹ ದುಸ್ಥಿತಿಯನ್ನು ತಂದಿಟ್ಟ ಅರಣ್ಯ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಇದರ ಸಂಪೂರ್ಣ ಹೊಣೆಯನ್ನು ಹೊತ್ತುಕೊಂಡು ಈ ಕಿರು ಅರಣ್ಯಕ್ಕೆ ವೆಚ್ಚವಾದ ಸಾರ್ವಜನಿಕರ ತೆರಿಗೆ ಹಣವನ್ನು ಬಡ್ಡಿ ಸಹಿತ ಎರಡು ಇಲಾಖೆಯ ಅಧಿಕಾರಿಗಳಿಂದ ವಸೂಲಿ ಮಾಡುವ ಕೆಲಸವಾಗಬೇಕಾಗಿದೆ. ಈಗ ನೀರಾವರಿ ಇಲಾಖೆಯವರು ನನ್ನ ವ್ಯಾಪ್ತಿಯಲ್ಲಿರುವ ಕೆರೆಯ ಅಂಗಳವನ್ನು ಪುನಹ ಮೂಲಸ್ವರೂಪದ ಹಾಗೆ ಮಾಡಿಕೊಡಿ ಎಂದು ಅರಣ್ಯ ಇಲಾಖೆಯನ್ನು ಕೇಳುತ್ತಿದೆ. ಹಾಗಾಗಿ ಅರಣ್ಯಇಲಾಖೆ ಕಿರು ಅರಣ್ಯವನ್ನು ನಾಶಮಾಡಿ ಕೆರೆಯಂಗಳವನ್ನು ಮೊದಲಿನ ಮೂಲಸ್ವರೂಪಕ್ಕೆ ತಂದಿಡುವ ದುಸ್ಸಾಹಸಕ್ಕೆ ಕೈ ಹಾಕುತ್ತಿದೆ.
ಕೆರೆಗೆ ನೀರನ್ನು ತುಂಬಿಸುವ ಗುರುತರ ಜವಾಬ್ದಾರಿ ಹೊತ್ತ ನೀರಾವರಿ ಇಲಾಖೆಯು ತನ್ನ ಜವಾಬ್ದಾರಿಯನ್ನು ಮರೆತ ಕಾರಣವೇ ಸಿಂಗನಾಯಕನಹಳ್ಳಿ ಕೆರೆಯ ಅಂಗಳದಲ್ಲಿರುವ ಮರಗಳನ್ನು ಕತ್ತರಿಸುವ ಸ್ಥಿತಿಗೆ ಬಂದಿದೆ ಎಂದಿದ್ದಾರೆ.
ಉದಾರಣೆಗೆ : ಬೆಂಗಳೂರಿನಲ್ಲಿ ಬಾಡಿಗೆ ಮನೆಯನ್ನು ಪಡೆಯುವ ಸಂದರ್ಭದಲ್ಲಿ ಹೇಗೆ ಮನೆಯ ಒಳಾಂಗಣ ಗಳೆಲ್ಲ ಸುಣ್ಣಬಣ್ಣಗಳಿಂದ ಸುಸಜ್ಜಿತವಾಗಿತ್ತು, ಅದೇ ರೀತಿಯಲ್ಲಿ ಹತ್ತು ವರ್ಷಗಳ ನಂತರ ಬಾಡಿಗೆದಾರ ಮನೆ ಖಾಲಿಮಾಡಿ ಕೊಡುವಾಗ ಪುನಹ ಸುಣ್ಣ ಬಣ್ಣಗಳನ್ನು ಹೊಡೆದು ಸುಸಜ್ಜಿತವಾಗಿ ಮೊದಲಿನ ಹಾಗೆ ಮಾಡಿಕೊಡುವಹಾಗೆ. ಇದೇ ರೀತಿ ಈಗ ಸಣ್ಣ ನೀರಾವರಿ ಇಲಾಖೆಯು ಅರಣ್ಯ ಇಲಾಖೆಯವರಿಗೆ ಕೆರೆಯಂಗಳವನ್ನು ಮೊದಲಿನಂತೆ ಸುಸ್ಥಿತಿಗೆ ಎಂದರೆ ಮೂಲಸ್ವರೂಪಕ್ಕೆ ತಂದು ಇಡಬೇಕೆಂದು ತಾಕೀತು ಮಾಡುತ್ತಿರುವುದರಿಂದ ಈ ಪ್ರಕಟಣೆ ಹೊರಡಿಸಲಾಗಿದೆ. ಈ ಎರಡು ಇಲಾಖೆಗಳಿಗೆ ಮೊದಲಿನಿಂದಲೂ ದೂರದೃಷ್ಟಿಯಿಲ್ಲದ,
ಕೋ ಆರ್ಡಿನೇಷನ್ ಇಲ್ಲದಿರುವುದರಿಂದ ಇಂತಹ ಒಂದು ದೊಡ್ಡ ಪ್ರಮಾದವಾಗಿದೆ ಎಂದಿದ್ದಾರೆ.
ನೀರಾವರಿ ಇಲಾಖೆಯ ಸಂಬಂಧಪಟ್ಟ ಕೆರೆಯಂಗಳದಲ್ಲಿ ಕಿರು ಅರಣ್ಯವನ್ನು ಬೆಳೆಸುವ ಸಂದರ್ಭದಲ್ಲಿ ಇಲಾಖೆಯವರು ಕುಳಿತು ಚರ್ಚೆ ಮಾಡಿ ವೈಜ್ಞಾನಿಕವಾಗಿ ಕಿರು ಅರಣ್ಯವನ್ನು ಸೂಕ್ತ ಸ್ಥಳದಲ್ಲಿ ಬೆಳೆಸಿದ್ದೆಯಾದಲ್ಲಿ ಈಗಇಂತಹ ಅವೈಜ್ಞಾನಿಕವಾದ ಕೆರೆಯಂಗಳದಲ್ಲಿನ ಕಿರು ಅರಣ್ಯ ತೆರವು ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ ಎಂಬುದಂತೂ ಸತ್ಯ ಎನ್ನುತ್ತಾರೆ ವೆಂಕಟೇಶ್ ಅವರು.
ಈಗ ಸದ್ಯ ಸಾರ್ವಜನಿಕರ ಆಕ್ಷೇಪಣೆಗಳನ್ನು ಕೇಳುತ್ತಿರುವ ಅರಣ್ಯ ಇಲಾಖೆ ಈ ಮೊದಲೇ ಸಣ್ಣ ನೀರಾವರಿ ಇಲಾಖೆ ಯೊಂದಿಗೆ ಸಮರ್ಪಕವಾದ ಅಧ್ಯಯನದೊಂದಿಗೆ ಯೋಜನೆಯನ್ನು ಸೂಕ್ತ ಸ್ಥಳದಲ್ಲಿ ಅನುಷ್ಠಾನಗೊಳಿಸಿದೆ ಆದಲ್ಲಿ ಸಾರ್ವಜನಿಕರ ತೆರಿಗೆ ಹಣ ಪೋಲಾಗುವುದನ್ನು ತಡೆಯಬಹುದಿತ್ತು. ಹಾಗೂ ಕೆರೆಯು ತನ್ನ ಮೂಲ ಸ್ವರೂಪದಲ್ಲೇ ಇರುತ್ತಿತ್ತು ಎನ್ನುತ್ತಾರೆ.
ಈಗ ಬೆಳೆದು ನಿಂತ ಈ ಕಿರು ಅರಣ್ಯ ಪ್ರಕೃತಿಯ ಸೊಬಗನ್ನು ನೀಡುವುದರ ಜೊತೆಗೆ ಮನುಷ್ಯರ ಉಸಿರಾಟಕ್ಕೆ ಶುದ್ಧ ಗಾಳಿಯನ್ನು, ವನ್ಯಜೀವಿಗಳಾದ ಮೊಲ, ಹಕ್ಕಿಪಕ್ಷಿಗಳ ಜೊತೆ ರಾಷ್ಟ್ರೀಯ ಪಕ್ಷಿಯಾದ ನವಿಲು ಗಳು ಮತ್ತು ಇನ್ನಿತರ ಜೀವವೈವಿಧ್ಯ ಗಳು ಅಲ್ಲಿ ನೆಲೆಸಿದ್ದು ಇಂತಹ ಕಿರು ಅರಣ್ಯವನ್ನು ಈಗ ನಾಶಮಾಡುವುದು ನ್ಯಾಯಸಮ್ಮತವಲ್ಲ. ಎನ್ನುವುದು ಪರಿಸರವಾದಿಗಳ ಮತ್ತು ಸಾಮಾಜಿಕ ಹೋರಾಟಗಾರರು ಆಗ್ರಹವಾಗಿದೆ. ಆದುದರಿಂದ ಸಿಂಗನಾಯಕನಹಳ್ಳಿ ಕೆರೆ ಅಂಗಳದಲ್ಲಿರುವ ಅರಣ್ಯವನ್ನು ತೆರವುಗೊಳಿಸುವುದು ಸಮಂಜಸವಲ್ಲ ಎಂದು ನೈಜ ಹೋರಾಟಗಾರರ ವೇದಿಕೆ ಯು ಈ ಮೂಲಕ ತಮ್ಮಲ್ಲಿ ಆಗ್ರಹಿಸುತ್ತದೆ. ಹಾಗೂ ಇದನ್ನೇ ತಾವು ನಮ್ಮ ತಕರಾರು ಅರ್ಜಿ ಎಂದು ಪರಿಗಣಿಸಬೇಕಾಗಿ ವಿನಂತಿಸುತ್ತೇವೆ ಎಂದು ಕೇಳಿಕೊಂಡಿದ್ದಾರೆ.