ಕಳೆದ ಒಂದು ವರ್ಷಗಳಿಂದ ವಿವಾದಾಸ್ಪದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಿರಂತರ ಪ್ರತಿಭಟನೆಗಳು ನಡೆಸಿದ ಪರಿಣಾಮ ಮೋದಿ ಸರ್ಕಾರ ರೈತರ ಹೋರಾಟಕ್ಕೆ ಶರಣಾಗಿದೆ. ಅದೆಷ್ಟೋ ರೈತ ಬಾಂಧವರು ಜೀವವನ್ನೇ ಕಳೆದುಕೊಂಡಿರುವ ನಿದರ್ಶನಗಳೂ ಇವೆ. ಇದೀಗ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೋರಾಟದಲ್ಲಿ ಮೃತಪಟ್ಟ ಸುಮಾರು 700 ಕುಟುಂಬಗಳಿಗೆ ತಲಾ 3 ಲಕ್ಷ ಪರಿಹಾರ ಧನವನ್ನು ಘೋಷಣೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ರೈತರ ಕುಟುಂಬಗಳಿಗೆ ತಲಾ 25 ಲಕ್ಷ ರೂ ಪರಿಹಾರ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು, ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲು ದೆಹಲಿಯ ಗಡಿ ಪ್ರವೇಶಗಳಲ್ಲಿ ಸುಮಾರು ಒಂದು ವರ್ಷದಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಯಾವುದೇ ರೀತಿಯಲ್ಲೂ ಮನ್ನಣೆ ನೀಡಲಿಲ್ಲ. ರೈತರ ಸಾವು, ನೋವುಗಳಿಗೆ ಸ್ಪಂದಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರತಿಭಟನಾಕಾರರ ಮೇಲೆ ಹಾಕಿರುವ ಎಲ್ಲಾ ಪ್ರಕರಣಗಳನ್ನು ಕೂಡ ಹಿಂಪಡೆಯಬೇಕು. ಮುಂಬರುವ ಪಂಜಾಬ್ ಹಾಗೂ ಉತ್ತರ ಪ್ರದೇಶದ ಚುನಾವಣಾ ದಷ್ಟಿಯಿಂದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ಆರೋಪಿಸಿದ್ದಾರೆ.
Also read : ಕೃಷಿ ಕಾಯ್ದೆ ವಾಪಸ್: ಮೋದಿ ದಾಳಕ್ಕೆ ಮಣಿಯದ ರೈತ ನಾಯಕರು!
ತನ್ನ ತಪ್ಪು ಕೇಂದ್ರಕ್ಕೆ ಅರಿವಾಗಿದೆ: ತೆಲಂಗಾಣ ಸಿಎಂ
ಕೇಂದ್ರ ಸರ್ಕಾರಕ್ಕೆ ಈಗ ತನ್ನ ತಪ್ಪಿನ ಅರಿವಾಗಿದೆ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವಂತೆ ಸರ್ಕಾರ ಕಾನೂನು ರೂಪಿಸಬೇಕು ಎಂದು ಈ ವೇಳೆ ಒತ್ತಾಯಿಸಿದರು. ಕೃಷಿ ವಿಷಯಗಳ ಕುರಿತು ಚರ್ಚಿಸಲು ಮೋದಿ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಬೇಕು. ಕೃಷಿಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ತಮ್ಮ ರಾಜ್ಯದ ಸಚಿವರು ಮತ್ತು ಸಂಸದರು ಕೂಡ ರಾಜಧಾನಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ದಿಶಾರವಿ ಮೇಲೆಯೂ ಆರೋಪವಿತ್ತು!
ಮೂರು ಕೃಷಿ ಕಾಯ್ದೆಗಳ ವಿರುದ್ಧ ದನಿಯೆತ್ತಿದ ಹೋರಾಟಗಾರ್ತಿ ದಿಶಾ ರವಿ ಎಂಬ ಯುವತಿಯನ್ನೂ ಬಂಧಿಸಲಾಗಿತ್ತು. ಈಕೆಯ ಒಂದು ಟ್ವೀಟ್ ಗೆ ಸರ್ಕಾರ ದಿಶಾ ರವಿ ಮೇಲೆ ಕಾನೂನು ಕ್ರಮ ಕೈಗೊಂಡಿತ್ತು. ಟೂಲ್ ಕಿಟ್ ಅನ್ನು ಸಿದ್ಧಪಡಿಸಿದ ಆರೋಪದಿಂದ ದಿಶಾಳ ಮೇಲೆ ಹೊರಿಸಲಾಗಿತ್ತು. ದೇಶದ್ರೋಹ, ಜನರ ನಡುವೆ ದ್ವೇಷದ ಕುಮ್ಮಕ್ಕು ಮುಂತಾದ ಆರೋಪಗಳಿಗೆ ಈಕೆಯ ಮೇಲೆ ಫೆ.4 ರಂದು ಎಫ್ ಐಆರ್ ದಾಖಲಿಸಿ, ದಿಶಾಳ ಬಂಧನವೂ ಸೇರಿದಂತೆ ಹಲವು ಸಂದರ್ಭಗಳನ್ನು ಈ ವೇಳೆ ವಿವರಿಸಿದ್ದಾರೆ.
Also read : ದಿಶಾ ರವಿ ವಿರುದ್ದ ಸಾಕ್ಷ್ಯಾಧಾರಗಳ ಕೊರತೆ: ʻಟೂಲ್ ಕಿಟ್’ ಪ್ರಕರಣ ಮುಚ್ಚಲಿದ್ದಾರೆಯೇ ಪೊಲೀಸರು?
6,600 ಭತ್ತ ಖರೀದಿ ಕೇಂದ್ರಗಳ ಸ್ಥಾಪನೆ!
ತಮ್ಮ ರಾಜ್ಯದ ರೈತರಿಗೆ ಬಿತ್ತನೆ ಮತ್ತು ಭತ್ತದ ಸಂಗ್ರಹಣೆಯ ಬಗ್ಗೆ ಮಾರ್ಗದರ್ಶನ ನೀಡಲಾಗುವುದು. ರಾಜ್ಯದಾದ್ಯಂತ ಸುಮಾರು 6,600 ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಭತ್ತದ ಖರೀದಿಯ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದರು.