ಹಾಸನ- ನಿಜಲಿಂಗಪ್ಪ ಸೇರಿದಂತೆ ರಾಜ್ಯ ನಾಯಕರನ್ನ ಕಾಂಗ್ರೆಸ್ ಹೈಕಮಾಂಡ್ ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ತಿರುಗೇಟು ನೀಡಿದ್ದಾರೆ . ಹಾಸನದಲ್ಲಿ ಈ ವಿಚಾರವಾಗಿ ಮಾತನಾಡಿದ ಡಿ.ಕೆ ಶಿವಕುಮಾರ್, ಎಲ್.ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿಯನ್ನು ಬಿಜೆಪಿ ಹೇಗೆ ನಡೆಸಿಕೊಂಡಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.
ನಿಜಲಿಂಗಪ್ಪರಿಗೆ ನಾವೇನು ಮೋಸ ಮಾಡಿದ್ದೇವೆ..? ಕೊನೆಗಾಲದಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿದ್ದೇವೆ. ವಿರೇಂದ್ರ ಪಾಟೀಲ್ ಆರೋಗ್ಯದ ಸರಿಯಿಲ್ಲದೇ ಇದ್ದಾರ ಬಂಗಾರಪ್ಪನಿಗೆ ಅವಕಾಶ ಮಾಡಿಕೊಟ್ಟಿದ್ದೆವು. ನರೇಂದ್ರ ಮೋದಿ ಭಾವನೆಗಳ ಬಗ್ಗೆಯಲ್ಲ ಬದುಕಿನ ಬಗ್ಗೆ ಮಾತನಾಡಬೇಕು ಎಂದು ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಎ.ಮಂಜು ಜೊತೆ ಮಾತನಾಡಿರುವ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ನಾನು ಎ.ಮಂಜು ಜೊತೆ ಮಾತನಾಡಿದ್ದು ನಿಜ. ಅವರಿಗೂ ಜೆಡಿಎಸ್ ನಡುವೆ ಕೇಸ್ ನಡೀತಾ ಇರೋದೂ ನಿಜ. ಬಿಜೆಪಿಯಿಂದ ಎ.ಮಂಜು ಜೆಡಿಎಸ್ ವಿರುದ್ಧ ಕಣಕ್ಕಿಳಿದಿದ್ದೂ ನಿಜ. ರಾಜಕೀಯ ಜೀವನದಲ್ಲಿ ಇವೆಲ್ಲ ಸರ್ವೆ ಸಾಮಾನ್ಯ. ರಾಜಕೀಯ ಜೀವನದಲ್ಲಿ ಯಾವಾಗ ಏನಾಗುತ್ತೆ ಅಂತಾ ಹೇಳಲು ಆಗದು ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಗೊಂದಲದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು , ಸ್ವರೂಪ್ ಜೊತೆ ಈ ಬಗ್ಗೆ ಮಾತನಾಡಿದ್ದೇನೆ,ಎ,ಟಿ ರಾಮಸ್ವಾಮಿ ಕೂಡ ಮನವಿ ಮಾಡಿದ್ದಾರೆ ಎಂದು ಹೇಳಿದರು. ಅರಸಿಕೆರೆ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶೀಘ್ರದಲ್ಲಿಯೇ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಸಿದ್ದರಾಮಯ್ಯ ಮಾರ್ಚ್ ಐದರಂದು ರಾಯಣ್ಣ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆಂದು ಅರಸೀಕರೆಗೆ ಹೋಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಿವಲಿಂಗೇಗೌಡ ಕೂಡ ಭಾಗಿಯಾಗಲಿದ್ದಾರೆ ಎಂದು ಡಿಕೆಶಿ ಹೇಳಿದರು.