ಡಿಜಿಟಲ್ ಬಂಡವಾಳಶಾಹಿಯು ಸಕಲ ಸಂಪನ್ಮೂಲಗಳನ್ನೂ ಕಬಳಿಸುತ್ತಿರುವ ಹೊತ್ತಿನಲ್ಲಿ
ಎರಡು ಶತಮಾನಗಳ ವಸಾಹತು ದಾಸ್ಯದಿಂದ 1947ರಲ್ಲಿ ವಿಮೋಚನೆ ಪಡೆದ ಭಾರತದ ಮುಂದೆ ಹಲವು ಜಟಿಲ ಸವಾಲುಗಳಿದ್ದವು. ಔದ್ಯೋಗಿಕ ಕ್ರಾಂತಿಯ ಫಲಾನುಭವಿಯಾಗಬೇಕಿದ್ದ ಭಾರತ ತನ್ನೊಳಗೆ ಅಪಾರ ಪ್ರಮಾಣದ ನೈಸರ್ಗಿಕ, ಮಾನವ ಹಾಗೂ ಬೌದ್ಧಿಕ ಸಂಪನ್ಮೂಲಗಳನ್ನು ಹೊಂದಿದ್ದರೂ ಬ್ರಿಟೀಷರ ಆಳ್ವಿಕೆಯಲ್ಲಿ ಐರೋಪ್ಯ ಅಭಿವೃದ್ಧಿಗೆ ಭಾರತ ಹಾಸುಗಲ್ಲಾಯಿತು. ಶತಮಾನಗಳಿಂದ ಸಂಪದ್ಭರಿತವಾಗಿದ್ದ ಭಾರತದ ಗ್ರಾಮೀಣ ಆರ್ಥಿಕತೆಯನ್ನು ವ್ಯವಸ್ಥಿತವಾಗಿ ಶಿಥಿಲಗೊಳಿಸಿದ ಪಶ್ಚಿಮದ ಬಂಡವಾಳಶಾಹಿಯು, ಔದ್ಯೋಗಿಕ ಕ್ರಾಂತಿಗೆ ಪೂರಕವಾಗಿದ್ದ ಮಾನವ ಸಂಪನ್ಮೂಲಗಳನ್ನು ತನ್ನ ಉನ್ನತಿಗೆ ಬಳಸಿಕೊಳ್ಳುವ ಮೂಲಕ ಭಾರತದ ಸಾಮಾಜಿಕಾರ್ಥಿಕ ವ್ಯವಸ್ಥೆಯನ್ನು ಶಿಥಿಲಗೊಳಿಸಿತ್ತು. ಭಾರತದಲ್ಲಿ ಲಭ್ಯವಿದ್ದ ನೈಸರ್ಗಿಕ ಸಂಪನ್ಮೂಲಗಳು ಮತ್ತು ಕಚ್ಚಾವಸ್ತುಗಳು ಯೂರೋಪಿನ ಕೈಗಾರಿಕೆಗಳ ಉತ್ಪಾದನೆಯ ಸರಕುಗಳಾಗಿ ಬಳಕೆಯಾದವು. ದೇಶದ ವಿಭಜನೆಯಿಂದ ಜರ್ಝರಿತವಾದ ಭಾರತದ ಸಾಮಾಜಿಕ ವ್ಯವಸ್ಥೆಯೂ ಸಹ ತನ್ನ ಸಂಕೀರ್ಣತೆಯ ನಡುವೆಯೇ ಶಿಥಿಲವಾಗಿತ್ತು.
ಈ ಸಂದರ್ಭದಲ್ಲಿ ವಿಮೋಚನೆ ಪಡೆದ ಭಾರತದ ಮುಂದೆ ಬಹುಮುಖ್ಯವಾಗಿ ಎರಡು ಸವಾಲುಗಳಿದ್ದವು. ಮೊದಲನೆಯದು, ಸಾಮಾಜಿಕವಾಗಿ ಬಡತನದ ನಿವಾರಣೆ, ಸಾಕ್ಷರತೆ, ಸಾಮಾಜಿಕಾರ್ಥಿಕ ಸಮಾನತೆ ಮತ್ತು ಮಾನವ ಸಂಪನ್ಮೂಲಗಳ ಸಮರ್ಪಕ ಬಳಕೆ. ಎರಡನೆಯದು ಸಾಂಸ್ಕೃತಿಕವಾಗಿ ಬಹುಸಂಸ್ಕೃತಿಯ ದೇಶವಾದ ಭಾರತವನ್ನು ಬೌದ್ಧಿಕ ನೆಲೆಯಲ್ಲಿ ಸೋದರತೆಯ ಸಂದೇಶದ ಮೂಲಕ ಒಂದು ಸಮನ್ವಯದ ಹಾದಿಯಲ್ಲಿ ಕೊಂಡೊಯ್ಯುವುದು. ಹಾಗಾಗಿಯೇ ಸಮಾನತೆಯನ್ನು ಸಾಧಿಸುವ ಸಮಾಜವಾದಿ ಆರ್ಥಿಕತೆ, ಬಹುಸಂಸ್ಕೃತಿಯನ್ನು ಕಾಪಾಡುವ ಜಾತ್ಯತೀತತೆ ಮತ್ತು ಸಮನ್ವಯದ ಹಾದಿಗೆ ಪೂರಕವಾದ ಸೋದರತೆ ಸ್ವಾತಂತ್ರ್ಯಪೂರ್ವ ಚಿಂತನಾವಾಹಿನಿಯಲ್ಲಿ ಪ್ರಧಾನವಾಗಿ ಹರಿದಿತ್ತು. ಮಾರ್ಕ್ಸ್ ಪ್ರತಿಪಾದಿಸಿದ ವೈಜ್ಞಾನಿಕ ಸಮಾಜವಾದ, ಚಾರಿತ್ರಿಕ ಭೌತವಾದ ಮತ್ತು ಗತಿತಾರ್ಕಿಕ ಭೌತವಾದವನ್ನು ಒಪ್ಪದ ಭಾರತದ ಅಂದಿನ ಆಳುವ ವರ್ಗಗಳಿಗೆ, ಸಹಜವಾಗಿಯೇ ಸಮಾಜವಾದವು ಆರ್ಥಿಕ ನೆಲೆಯಲ್ಲಾದರೂ ಅಪ್ಯಾಯಮಾನವಾಗಿತ್ತು. ಬಹುಸಂಖ್ಯೆಯ ಜನರನ್ನು ಕಾಡುತ್ತಿದ್ದ ಅನಕ್ಷರತೆ, ಬಡತನ, ದಾರಿದ್ರ್ಯ, ಹಸಿವು, ಅಪೌಷ್ಟಿಕತೆ ಮತ್ತು ಅಸಮಾನತೆಯನ್ನು ಎದುರಿಸಲು ಸಮಾಜವಾದ ಏಕೈಕ ಪರಿಹಾರೋಪಾಯವಾಗಿತ್ತು.
ಹಾಗಾಗಿಯೇ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಮತ್ತು ಅವರೊಟ್ಟಿಗೆ ಸ್ವತಂತ್ರ ಭಾರತದ ಸಾರಥ್ಯ ವಹಿಸಿದ ಅಂಬೇಡ್ಕರ್ ಆದಿಯಾಗಿ ನಾಯಕರು ದೇಶದ ಆರ್ಥಿಕತೆಯನ್ನು, ಆಗ ಪ್ರಬಲವಾಗಿದ್ದ ಔದ್ಯೋಗಿಕ ಬಂಡವಾಳದ ಕೈಗೆ ಒಪ್ಪಿಸದೆ, ದೇಶದ ಸಂಪತ್ತನ್ನು, ಸಂಪನ್ಮೂಲಗಳನ್ನು ಪ್ರಭುತ್ವದ ವಾರಸುದಾರಿಕೆಯಲ್ಲೇ ತಳಮಟ್ಟದವರೆಗೂ ವಿತರಿಸುವ, ತಲುಪಿಸುವ ಒಂದು ಆರ್ಥಿಕ ನೀತಿಯನ್ನು ಅನುಮೋದಿಸಿದ್ದರು. ಗಾಂಧಿ ಪ್ರಣೀತ ಗ್ರಾಮೀಣಾಭಿವೃದ್ಧಿಯ ಕನಸನ್ನು ಸಾಕಾರಗೊಳಿಸುವುದರೊಂದಿಗೆ, ಔದ್ಯೋಗಿಕ ಕ್ರಾಂತಿ ಸೃಷ್ಟಿಸಿದ್ದ ವಿಪುಲ ಅವಕಾಶಗಳನ್ನು ಬಳಸಿಕೊಂಡು, ಭಾರತದಲ್ಲೂ ಬೃಹತ್ ಕೈಗಾರಿಕಾ ಬಂಡವಾಳವನ್ನು ಹೂಡುವ ಮೂಲಕ ʼ ಅಧುನಿಕ ಭಾರತದ ದೇವಾಲಯಗಳು ʼ ಎಂದೇ ಹೇಳಲಾಗುವ ಸಾರ್ವಜನಿಕ ಉದ್ದಿಮೆಗಳಿಗೆ ಶಿಲಾನ್ಯಾಸ ಮಾಡಿದ್ದರು. ಸ್ವಾತಂತ್ರ್ಯಪೂರ್ವದಲ್ಲೇ ಸಿದ್ಧವಾಗಿದ್ದ ಬಾಂಬೆ ಪ್ಲಾನ್ ಎಂದು ಕರೆಯಲಾಗುವ ಮಿಶ್ರ ಆರ್ಥಿಕ ನೀತಿಯನುಸಾರ, ಭಾರತದ ಅರ್ಥವ್ಯವಸ್ಥೆಯಲ್ಲಿ ಭೂಮಿಯನ್ನೂ ಒಳಗೊಂಡಂತೆ ಸಕಲ ಸಂಪನ್ಮೂಲಗಳ ಮೇಲೆ ಪ್ರಭುತ್ವದ ಹಿಡಿತ ಸಾಧಿಸುವ, ಇದೇ ವೇಳೆ ಖಾಸಗಿ ಬಂಡವಳಿಗರ ಮೂಲಕ ಕೈಗಾರಿಕೋದ್ಯಮವನ್ನು ಉತ್ತೇಜಿಸುವ ಒಂದು ಆರ್ಥಿಕ ನೀತಿಯನ್ನು ನೆಹರೂ ಅನುಸರಿಸಿದ್ದರು.
ಭಾರತ ಸ್ವಾತಂತ್ರ್ಯ ಗಳಿಸಿದ ಹೊತ್ತಿನಲ್ಲಿ ದೇಶದ ಜಿಡಿಪಿ ವಿಶ್ವದ ಜಿಡಿಪಿಯ ಶೇ 3ರಷ್ಟಿತ್ತು. ವಿಶ್ವ ಆದಾಯದಲ್ಲಿ ಭಾರತದ ಪಾಲು ಶೇ 3.8ರಷ್ಟಿತ್ತು. ಇದರೊಂದಿಗೆ ಬರಗಾಲ, ಕ್ಷಾಮ, ಆಹಾರದ ಕೊರತೆ ದೇಶವನ್ನು ಕಾಡುತ್ತಿತ್ತು. ಈ ಹಿನ್ನೆಲೆಯಲ್ಲೇ . ಜೆ ಆರ್ ಡಿ ಟಾಟಾ ಮತ್ತು ಜಿ ಡಿ ಬಿರ್ಲಾ ಅವರನ್ನೊಳಗೊಂಡಿದ್ದ ಎಂಟು ಪ್ರಭಾವಿ ಕೈಗಾರಿಕೋದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿ 1945ರಲ್ಲಿ ತಯಾರಿಸಲಾದ ಬಾಂಬೆ ಪ್ಲಾನ್ ಭವಿಷ್ಯ ಭಾರತದ ಸುಭದ್ರ ಬುನಾದಿಗೆ ಪರಿಕರಗಳನ್ನು ಒದಗಿಸಿತ್ತು ಭಾರತದ ಆರ್ಥಿಕತೆ ಸಮೃದ್ಧವಾಗಬೇಕೆಂದರೆ ಸಂಪನ್ಮೂಲಗಳ ಮೇಲೆ ಸರ್ಕಾರದ ನಿರ್ವಹಣೆ ಮತ್ತು ನಿಯಂತ್ರಣ ಅತ್ಯಗತ್ಯ ಎಂದೇ ಪರಿಗಣಿಸಿತ್ತು. ಮಾರುಕಟ್ಟೆ ಆರ್ಥಿಕತೆ ಮತ್ತು ಖಾಸಗಿ ಬಂಡವಾಳಶಾಹಿಯು ಭಾರತ ಎದುರಿಸುತ್ತಿದ್ದ ಜ್ವಲಂತ ಸಾಮಾಜಿಕಾರ್ಥಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಾಧ್ಯತೆಗಳು ಇರಲಿಲ್ಲವಾದ್ದರಿಂದ, ನೆಹರೂ ಮತ್ತು ಸಹಚರರು ಭಾರತವನ್ನು ಸಮಾಜವಾದಿ ಆರ್ಥಿಕತೆಯತ್ತ ಕೊಂಡೊಯ್ಯಲು ನಿರ್ಧರಿಸಿದ್ದರು. ಸಂಪೂರ್ಣ ಸೋವಿಯತ್ ಮಾದರಿ ಅಲ್ಲದಿದ್ದರೂ, ಸಮಾಜವಾದಿ ಆರ್ಥಿಕ ನೀತಿಯನ್ನು ಪ್ರಭುತ್ವವೇ ನಿರ್ವಹಿಸುವ ಮತ್ತು ಖಾಸಗಿ ಬಂಡವಾಳ ಹೂಡಿಕೆಗೂ ಅವಕಾಶ ಒದಗಿಸುವ ಮಿಶ್ರ ಆರ್ಥಿಕ ನೀತಿಯನ್ನು ಭಾರತ ಅನುಸರಿಸಿತ್ತು. ಈ ಆರ್ಥಿಕ ನೀತಿಗೆ 1938ರಲ್ಲಿ ಬುನಾದಿ ಹಾಕಿದ್ದು ನೆಹರೂ ಮತ್ತು ಸುಭಾಷ್ ಚಂದ್ರ ಬೋಸ್ ಎನ್ನುವುದು ವಿಶೇಷ.
ಔದ್ಯೋಗಿಕ ಸಮೃದ್ಧಿಯತ್ತ ಭಾರತ
ಭೀಕರ ಕ್ಷಾಮದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿದ್ದ ಹಸಿವು, ಬಡತನ ಮತ್ತು ಅಸಮಾನತೆಗಳನ್ನು ಹೋಗಲಾಡಿಸುವುದರೊಂದಿಗೇ ಆಹಾರ ಭದ್ರತೆಯನ್ನು ಕಾಪಾಡುವುದು ಸ್ವತಂತ್ರ ಭಾರತದ ಪ್ರಥಮ ಆದ್ಯತೆಯಾಗಿತ್ತು. ಮೂಲತಃ ಕೃಷಿ ಪ್ರಧಾನ ದೇಶವಾಗಿದ್ದ ಭಾರತದಲ್ಲಿ ಶೇ 80ರಷ್ಟು ಜನರು ಕೃಷಿ ಮತ್ತು ಕೃಷಿ ಸಂಬಂಧಿತ ಆರ್ಥಿಕತೆಯನ್ನೇ ಆಧರಿಸಿದ್ದರು. ಹಾಗಾಗಿಯೇ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿ ಮತ್ತು ಪ್ರಾಥಮಿಕ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಭಾಕ್ರಾ ನಂಗಲ್, ಹಿರಾಕುಡ್ ಮತ್ತು ನಾಗಾರ್ಜುನ ಸಾಗರ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಲಕ್ಷಾಂತರ ಎಕರೆ ಭೂಮಿಗೆ ನೀರಾವರಿ ಒದಗಿಸುವುದು ಮತ್ತು ವಿದ್ಯುತ್ ಉತ್ಪಾದಿಸುವುದು ಈ ಯೋಜನೆಯ ಧ್ಯೇಯವಾಗಿತ್ತು. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಮಾತ್ರವೇ ಭಾರತದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ನಂಬಿದ್ದ ನೆಹರೂ ಸಾರ್ವಜನಿಕ ಒಡೆತನದಲ್ಲಿ ವಿಜ್ಞಾನ ಸಂಸ್ಥೆಗಳೊಂದಿಗೆ, ವೈದ್ಯಕೀಯ ಸಂಸ್ಥೆಗಳನ್ನೂ, ಕೈಗಾರಿಕಾ ಉದ್ದಿಮೆಗಳನ್ನೂ ಸ್ಥಾಪಿಸಲು ಉತ್ತೇಜನ ನೀಡಿದ್ದರು. ಪಶ್ಚಿಮ ರಾಷ್ಟ್ರಗಳಲ್ಲಿದ್ದ ವಿಜ್ಞಾನ ಸಂಸ್ಥೆಗಳ ಮಾದರಿಯಲ್ಲೇ ಭಾರತದಲ್ಲೂ ವಿಜ್ಞಾನ, ಸಂಶೋಧನೆ ಮತ್ತು ಅಧ್ಯಯನವನ್ನು ಉತ್ತೇಜಿಸುವ ಸಾರ್ವಜನಿಕ ಸಂಸ್ಥೆಗಳ ನಿರ್ಮಾಣಕ್ಕೆ ನೆಹರೂ ಮುಂದಾಗಿದ್ದರು.
ಈ ಚಿಂತನೆಯ ನೆಲೆಯಲ್ಲೇ 1950ರಲ್ಲಿ ಖರಗ್ಪುರ, 1958ರಲ್ಲಿ ಬಾಂಬೆ, 1959ರಲ್ಲಿ ಮದ್ರಾಸ್, 1959ರಲ್ಲಿ ಕಾನ್ಪುರ ಮತ್ತು 1961ರಲ್ಲಿ ದೆಹಲಿಯಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಆರಂಭವಾದವು. ಈ ಸಂಸ್ಥೆಗಳಿಗೆ ಪೂರಕವಾಗಿ ಸಾರ್ವಜನಿಕ ನಿಧಿಯನ್ನು ಹೂಡುವ ಮೂಲಕವೇ ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆಗಳನ್ನು (ಐಐಎಮ್) 1961ರಲ್ಲಿ ಕೊಲ್ಕತ್ತಾ ಮತ್ತು ಅಹಮದಾಬಾದ್ನಲ್ಲಿ ಸ್ಥಾಪಿಸಲಾಗಿತ್ತು. ಭಾರತೀಯ ಗಣಿ ವಿಜ್ಞಾನ ಶಾಲೆ, ಕೃಷಿ ವಿಶ್ವವಿದ್ಯಾಲಯಗಳು, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೇಗಳು (ಎಐಐಎಮ್ಎಸ್) ದೇಶಾದ್ಯಂತ ಪಸರಿಸಿದ್ದವು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಗಾಗಿ ಬಳಸುವುದರೊಂದಿಗೇ ದೇಶದ ಭೌಗೋಳಿಕ ರಕ್ಷಣೆಗಾಗಿ ಮತ್ತು ಆಹಾರ ಭದ್ರತೆಗಾಗಿ ಬಳಸಿಕೊಳ್ಳುವ ಉದ್ದೇಶದಿಂದ ನೆಹರೂ ಆಡಳಿತದಲ್ಲಿ ವಿಕ್ರಂ ಸಾರಾಭಾಯಿ, ಸಿ ವಿ ರಾಮನ್, ಹೊಮಿ ಜೆ ಭಾಭಾ, ಸತೀಶ್ ಧಾವನ್, ಎಸ್ ಎಸ್ ಭಟ್ನಾಗರ್ ಮುಂತಾದ ವಿಶ್ವವಿಖ್ಯಾತ ವಿಜ್ಞಾನಿಗಳ ನೆರವಿನೊಂದಿಗೆ ಕ್ರಮವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಯೋಜನೆ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಭಾಭಾ ಪರಮಾಣು ಸಂಶೋಧನಾ ಕೆಂದ್ರ (ಬಿಎಆರ್ಸಿ-1954), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ-1962), ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಲಿ (ಸಿಎಸ್ಐಆರ್) ಮುಂತಾದ ಬೃಹತ್ ಸಾರ್ವಜನಿಕ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಇದರೊಂದಿಗೆ ಜನಸಾಮಾನ್ಯರಲ್ಲೂ ವೈಜ್ಞಾನಿಕ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಹಲವು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಯಿತು.
ವಿಜ್ಞಾನದ ಬೆಳವಣಿಗೆಯ ದೃಷ್ಟಿಯಿಂದ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ (1950), ರಾಷ್ಟ್ರೀಯ ಭೌತಶಾಸ್ತ್ರ ಪ್ರಯೋಗಾಲಯ (1947), ಇಂಧನ ಸಂಶೋಧನಾ ಕೇಂದ್ರ (1946), ಕೇಂದ್ರೀಯ ಗಾಜು ಮತ್ತು ಸೆರಾಮಿಕ್ಸ್ ಸಂಶೋಧನಾ ಸಂಸ್ಥೆ (1950), ರಾಷ್ಟ್ರೀಯ ಲೋಹ ವಿಜ್ಞಾನ ಪ್ರಯೋಗಾಲಯ (1950) ಸ್ಥಾಪಿಸಲಾಯಿತು. 1956ರಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), 1958ರಲ್ಲಿ ಮೌಲಾನಾ ಆಜಾದ್ ವೈದ್ಯಕೀಯ ಮಹಾವಿದ್ಯಾಲಯ, 1961ರಲ್ಲಿ ಗೋವಿಂದ ವಲ್ಲಭ ಪಂತ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಮತ್ತಿತರ ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. 1946ರಲ್ಲಿ 15 ವೈದ್ಯಕೀಯ ಕಾಲೇಜುಗಳಿದ್ದುದು 1965ರ ವೇಳೆಗೆ 81ಕ್ಕೆ ತಲುಪಿತ್ತು. 1952ರಲ್ಲಿ ನೆಹರೂ ಆಳ್ವಿಕೆಯಲ್ಲಿ ಪುಣೆಯಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ರೋಗಸೂಕ್ಷ್ಮಾಣುಶಾಸ್ತ್ರ ಸಂಸ್ಥೆ 2020-21ರ ಕೋವಿದ್ ಸಂದರ್ಭದಲ್ಲಿ ಭಾರತದ ಅಸಂಖ್ಯಾತ ಜನತೆಯ ಜೀವರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಸ್ಮರಿಸಬಹುದು.
ಕೃಷಿ ಪ್ರಧಾನ ಭಾರತದಲ್ಲಿ ಬಂಡವಾಳದ ಉತ್ಪಾದನೆಯ ಕೊರತೆ ಇದ್ದುದರಿಂದ, ಖಾಸಗಿ ಬಂಡವಳಿಗರ ಸಹಭಾಗಿತ್ವದಲ್ಲಿ ಹಲವು ಸಾರ್ವಜನಿಕ ಉದ್ದಿಮೆಗಳನ್ನು ಸರ್ಕಾರದ ಸ್ವಾಮ್ಯದಲ್ಲೇ ನಿರ್ಮಿಸಲಾಯಿತು.1948ರಲ್ಲಿ ಭಾರತದ ಪ್ರಪ್ರಥಮ ಸಾರ್ವಜನಿಕ ಉದ್ದಿಮೆ ಐಟಿಐ ಸ್ಥಾಪನೆಯಾಗಿತ್ತು. 1955ರಲ್ಲಿ ಭಾಕ್ರಾ ನಂಗಲ್ ಅಣೆಕಟ್ಟು ಯೋಜನೆಗೆ ಬುನಾದಿ ಹಾಕಲಾಗಿತ್ತು. ಕಬ್ಬಿಣ ಮತ್ತು ಉಕ್ಕು ತಯಾರಿಕೆಯಲ್ಲಿ ಇಂದಿಗೂ ದೇಶದ ಅತಿದೊಡ್ಡ ಸಂಸ್ಥೆಯಾದ ಭಿಲಾಯಿ ಉಕ್ಕು ಕಾರ್ಖಾನೆಯನ್ನು 1959ರಲ್ಲಿ ಸ್ಥಾಪಿಸಲಾಯಿತು. ಸೋವಿಯತ್ ಸಹಕಾರದೊಂದಿಗೆ ಸ್ವದೇಶಿ ಉಕ್ಕು ಘಟಕ ಎಂದೇ ಹೆಸರಾದ ಬೊಕಾರೋ ಉಕ್ಕು ನಿಗಮ ಸ್ಥಾಪನೆಯಾಗಿತ್ತು. ನಂತರ ಇದನ್ನು ಭಾರತೀಯ ಉಕ್ಕು ಪ್ರಾಧಿಕಾರ ನಿಗಮ (ಎಸ್ಎಐಎಲ್)ನಲ್ಲಿ ವಿಲೀನಗೊಳಿಸಿ ಬೊಕಾರೋ ಸ್ಟೀಲ್ ನಿಗಮ ಎಂದು ಸ್ಥಾಪಿಸಲಾಯಿತು. ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಐದು ಸಾರ್ವಜನಿಕ ಉದ್ದಿಮೆಗಳಿದ್ದವು. 1980ರ ವೇಳೆಗೆ ಇದು 163ಕ್ಕೆ ಏರಿತ್ತು. ಈ ನಡುವೆ ನೆಹರೂ ಆರ್ಥಿಕತೆಯ ಚೌಕಟ್ಟಿನಲ್ಲೇ ಬಿಹೆಚ್ಇಎಲ್, ಬಿಇಎಮ್ಎಲ್, ಬಿಇಎಲ್, ಹೆಚ್ಎಮ್ಟಿ, ಹೆಚ್ಎಎಲ್ ಇನ್ನೂ ಮುಂತಾದ ಬೃಹತ್ ಕೈಗಾರಿಕೋದ್ಯಮಗಳನ್ನು ಸಾರ್ವಜನಿಕ ಉದ್ದಿಮೆಗಳಾಗಿ ಸರ್ಕಾರಿ ಸ್ವಾಮ್ಯದಲ್ಲೇ ಸ್ಥಾಪಿಸಲಾಗಿತ್ತು.
ಬ್ಯಾಂಕಿಂಗ್ ವಿಮೆ ಮತ್ತು ಹಣಕಾಸು ಸ್ವಾವಲಂಬನೆ
ಹಣಕಾಸು ವಲಯದಲ್ಲಿ ದೇಶದ ಸ್ವಾವಲಂಬನೆಯನ್ನು ಕಾಪಾಡುವ ನಿಟ್ಟಿನಲ್ಲಿ ನೆಹರೂ ಆಳ್ವಿಕೆಯಲ್ಲಿ ಖಾಸಗಿ ವಲಯದ ಬ್ಯಾಂಕುಗಳಿಗೇ ಸಾಮಾಜಿಕ ಜವಾಬ್ದಾರಿಯನ್ನು ಹೊರಿಸಲಾಗಿತ್ತು. ದೇಶದ ಜನಸಾಮಾನ್ಯರಿಗೆ ಜೀವವಿಮೆಯನ್ನು ಒದಗಿಸುವಲ್ಲಿ ಖಾಸಗಿ ವಲಯದ ವೈಫಲ್ಯವನ್ನು ಮನಗಂಡು 1956ರಲ್ಲಿ ಭಾರತೀಯ ಜೀವವಿಮಾ ನಿಗಮವನ್ನು ರಾಷ್ಟ್ರೀಕರಣಗೊಳಿಸಿ ಸ್ಥಾಪಿಸಲಾಗಿತ್ತು. 1953ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ರಾಷ್ಟ್ರೀಕರಣವಾಗಿತ್ತು. ನೆಹರೂ ನಂತರದಲ್ಲೂ ಇದೇ ಮಿಶ್ರ ಆರ್ಥಿಕ ನೀತಿಯನ್ನು ಅನುಸರಿಸಿದ ಭಾರತ 1960ರ ದಶಕದಲ್ಲಿ ಎದುರಿಸಿದ ಎರಡು ಯುದ್ಧಗಳು, ಭೀಕರ ಕ್ಷಾಮ ಮತ್ತು ಆಹಾರದ ಕೊರತೆಯಿಂದ ಕಂಗಾಲಾಗಿದ್ದಾಗ, ದೇಶದಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಿ ಸ್ವಾವಲಂಬಿ ರಾಷ್ಟ್ರವನ್ನು ನಿರ್ಮಿಸುವ ಉದ್ದೇಶದಿಂದಲೇ ಕೃಷಿ ವಲಯಕ್ಕೆ ಹಣಕಾಸು ಸೌಲಭ್ಯ ಒದಗಿಸುವ ಹಲವು ಮಾರ್ಗಗಳನ್ನು ಅನುಸರಿಸಲಾಗಿತ್ತು. ಆದರೆ ಖಾಸಗಿ ವಲಯದ ಬ್ಯಾಂಕುಗಳು ಈ ಉದಾತ್ತ ಯೋಜನೆಗೆ ಪೂರಕವಾಗಿ ಸ್ಪಂದಿಸದಿದ್ದ ಕಾರಣ 1969ರಲ್ಲಿ ಇಂದಿರಾಗಾಂಧಿ ಸರ್ಕಾರ 14 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿತ್ತು. 1980ರಲ್ಲಿ ಪುನಃ 6 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು.
1969ರ ರಾಷ್ಟ್ರೀಯ ಕ್ರೆಡಿಟ್ ಕೌನ್ಸಿಲ್ ಸಮೀಕ್ಷೆಯ ಅನುಸಾರ ರಾಷ್ಟ್ರೀಕರಣಕ್ಕೆ ಮುನ್ನ ವಾಣಿಜ್ಯ ಬ್ಯಾಂಕುಗಳು ಶೇ 1ರಷ್ಟು ಗ್ರಾಮೀಣ ಜನತೆಯನ್ನೂ ತಲುಪುತ್ತಿರಲಿಲ್ಲ. ಜಿಡಿಪಿಯಲ್ಲಿ ಶೇ 50ರಷ್ಟು ಪಾಲು ಒದಗಿಸುತ್ತಿದ್ದ ಕೃಷಿವಲಯಕ್ಕೆ ಹೆಚ್ಚಿನ ಹಣಕಾಸು ಉತ್ತೇಜನ ದೊರೆಯುತ್ತಿರಲಿಲ್ಲ. ಈ ಕಾರಣಗಳಿಗಾಗಿಯೇ ಗ್ರಾಮೀಣ ಭಾರತದ ಸರ್ವತೋಮುಖ ಅಭಿವೃದ್ಧಿ ಮತ್ತು ಕೃಷಿ, ಗುಡಿಕೈಗಾರಿಕೆ, ಗ್ರಾಮೀಣ ಕೈಗಾರಿಕೆ, ಕೈಮಗ್ಗ ಮುಂತಾದ ಕಸುಬುಗಳು ಹಾಗೂ ಸಣ್ಣ ಅತಿ ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಬ್ಯಾಂಕ್ ರಾಷ್ಟ್ರೀಕರಣ ಮಾಡಲಾಗಿತ್ತು. 1969 ರಿಂದ 80ರ ಅವಧಿಯಲ್ಲಿ ಸಾರ್ವಜನಿಕ ಬ್ಯಾಂಕುಗಳ ಶಾಖೆಗಳ ಸಂಖ್ಯೆ 6955 ರಿಂದ 26810ಕ್ಕೆ ಏರಿತ್ತು. 1980-90ರ ಅವಧಿಯಲ್ಲಿ 26810 ರಿಂದ 42079ಕ್ಕೆ ಏರಿತ್ತು. ಗ್ರಾಮೀಣ ಶಾಖೆಗಳ ಸಂಖ್ಯೆ 1984ರಲ್ಲಿ 25541ರಷ್ಟಿದ್ದುದು 1994ರ ವೇಳೆಗೆ 35396 ಆಗಿತ್ತು. 2013ರ ವೇಳೆಗೆ ಭಾರತದಲ್ಲಿ ಬ್ಯಾಂಕ್ ಶಾಖೆಗಳ ಸಂಖ್ಯೆ 1,09,279 ಆಗಿತ್ತು. ರಾಷ್ಟ್ರೀಕೃತ ಬ್ಯಾಂಕುಗಳ ಠೇವಣಿ 4.56 ಲಕ್ಷ ಕೋಟಿ ರೂ, ಸಾಲದ ಪ್ರಮಾಣ 6.69 ಲಕ್ಷ ಕೋಟಿ ರೂಗಳಾಗಿತ್ತು. ರಿಸರ್ವ್ ಬ್ಯಾಂಕ್ನಲ್ಲಿದ್ದ 1.75 ಲಕ್ಷ ಕೋಟಿ ರೂಗಳ ಆಪದ್ಧನವು ಕೋವಿದ್ ಸಂದರ್ಭದಲ್ಲಿ ಕುಸಿಯುತ್ತಿದ್ದ ಭಾರತದ ಚಾಲ್ತಿ ಖಾತೆ ಕೊರತೆಯನ್ನು ನೀಗಿಸಲು ನೆರವಾಗಿತ್ತು. ಇಂದಿಗೂ ಸಹ ಭಾರತ ಸರ್ಕಾರದ ಸಾರ್ವಜನಿಕ ಮೂಲ ಸೌಕರ್ಯಗಳಿಗೆ ಅತ್ಯಧಿಕ ಬಂಡವಾಳ ಪೂರೈಕೆ ಮಾಡುವುದು ನಮ್ಮೆಲ್ಲರ ಪ್ರತಿಷ್ಠಿತ ಎಲ್ಐಸಿ (ಭಾರತೀಯ ಜೀವವಿಮಾ ನಿಗಮ). ಹಸಿರು ಕ್ರಾಂತಿಯ ಯಶಸ್ಸು, ಇತ್ತೀಚಿನ ಜನಧನ್ ಯೋಜನೆ ಮತ್ತು ಉದ್ಯೋಗ ಖಾತರಿ ಯೋಜನೆಯ ಯಶಸ್ಸಿಗೆ ರಾಷ್ಟ್ರೀಕೃತ ಬ್ಯಾಂಕುಗಳೇ ಕಾರಣ ಎನ್ನುವುದು ನಿರ್ವಿವಾದಿತ ಸತ್ಯ.
ಜಾಗತೀಕರಣ ಮತ್ತು ನವ ಉದಾರವಾದ
ನವ ಉದಾರವಾದ ಮತ್ತು ಜಾಗತೀಕರಣದ ಯುಗದಲ್ಲಿ ಸ್ವಾವಲಂಬಿ ಭಾರತ ಕಟ್ಟಿದ ಈ ಭದ್ರ ಕೋಟೆಗಳು ನಿರಂತರವಾಗಿ ಶಿಥಿಲವಾಗುತ್ತಿವೆ. ಸಾರ್ವಜನಿಕ ಉದ್ದಿಮೆಗಳನ್ನು ಹಂತಹಂತವಾಗಿ ಶಿಥಿಲಗೊಳಿಸಿ, ಕೊಲ್ಲಲಾಗುತ್ತಿದೆ. ಕರ್ನಾಟಕದ ಪ್ರತಿಷ್ಠಿತ ಬಿಇಎಮ್ಎಲ್ ಈಗ ಸರದಿಯಲ್ಲಿದೆ. ಎಸ್ಬಿಐ ಸೇರಿದಂತೆ 28 ರಾಷ್ಟ್ರೀಕೃತ ಬ್ಯಾಂಕುಗಳನ್ನು 12ಕ್ಕೆ ಇಳಿಸಲಾಗಿದೆ. ಮುಂದಿನ ದಿನಗಳಲ್ಲಿ ನಾಲ್ಕು ಬ್ಯಾಂಕುಗಳು ಮಾತ್ರ ಸರ್ಕಾರಿ ಸ್ವಾಮ್ಯದಲ್ಲಿ ಉಳಿಯುತ್ತವೆ. ರಕ್ಷಣಾ ಉಪಕರಣಗಳ ಉತ್ಪಾದನೆಯನ್ನೂ ಒಳಗೊಂಡಂತೆ, ಕಲ್ಲಿದ್ದಲು, ಗಣಿಗಾರಿಕೆ, ಬಂದರು, ಕಡಲ ಸಾರಿಗೆ, ವಿಮಾನಯಾನ, ರೈಲ್ವೆ, ಬ್ಯಾಂಕಿಂಗ್,ವಿಮೆ, ರಸ್ತೆ ಸಾರಿಗೆ ಮತ್ತು ಮೂಲ ಸೌಕರ್ಯಗಳ ಎಲ್ಲ ವಲಯಗಳನ್ನೂ ಕಾರ್ಪೋರೇಟ್ ಮಾರುಕಟ್ಟೆಗೆ ಒಪ್ಪಿಸಲಾಗುತ್ತಿದೆ. ನವ ಉದಾರವಾದ ಮತ್ತು ಡಿಜಿಟಲ್ ಬಂಡವಾಳಶಾಹಿಯ ಯುಗದಲ್ಲಿ ಸರ್ಕಾರ ಉದ್ಯೋಗ, ಶಿಕ್ಷಣ ಮತ್ತು ಉದ್ಯಮ ಈ ಮೂರೂ ವಲಯಗಳಿಂದ ಮುಕ್ತವಾಗಿ ಕೇವಲ ಮೇಲ್ವಿಚಾರಣೆಯ ಪಾತ್ರವನ್ನು ಮಾತ್ರವೇ ನಿರ್ವಹಿಸುತ್ತದೆ. ಹಾಗಾಗಿಯೇ ಹೊಸ ಶಿಕ್ಷಣ ನೀತ 2020ರ ಅನುಸಾರ ಶಿಕ್ಷಣ ಕ್ಷೇತ್ರವನ್ನೂ ಸಹ, ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ಶಿಕ್ಷಣದವರೆಗೆ ಕಾರ್ಪೋರೇಟೀಕರಣಗೊಳಿಸಲಾಗುತ್ತಿದೆ.
ನವ ಉದಾರವಾದದ ನಾಲ್ಕನೆ ಹಂತದಲ್ಲಿರುವ ಭಾರತ ಈಗ ಡಿಜಿಟಲ್ ಬಂಡವಾಳಶಾಹಿಯ ಹಿಡಿತಕ್ಕೆ ಸಿಲುಕಿದ್ದು, ಕೈಗಾರಿಕಾ ಉತ್ಪಾದನೆಗಳಿಗಿಂತಲೂ ದೇಶದ ಅರ್ಥವ್ಯವಸ್ಥೆ ದತ್ತಾಂಶ ಬಂಡವಾಳದ ಉತ್ಪಾದನೆ ಮತ್ತು ವಿತರಣೆಯನ್ನು ಅವಲಂಬಿಸಿದೆ. “ ಔದ್ಯೋಗೀಕರಣ ಯುಗದಲ್ಲಿ ಬಂಡವಾಳ ಶೇಖರಣೆಗಾಗಿ ಮಾನವ ಉತ್ಪಾದನೆಯನ್ನು ಶೋಷಣೆಗೊಳಪಡಿಸಲಾಗುತ್ತಿತ್ತು. ಅಸಮಾನ ಮಾನವ ಸಂಬಂಧಗಳು ಇದಕ್ಕೆ ಪೂರಕವಾಗಿದ್ದವು. ಇಂದು ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ಬಂಡವಾಳ ಶೇಖರಣೆಯನ್ನು ಹೆಚ್ಚಿಸಲು ಮಾನವನ ಬದುಕಿನ ಚುಟುವಟಿಕೆಗಳ ದತ್ತಾಂಶವನ್ನು ಮುಖ್ಯವಾಗಿ ಶೋಷಣೆಗೊಳಪಡಿಸಲಾಗುತ್ತದೆ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದ ಮನುಷ್ಯ ಜೀವಿ ಡಿಜಿಟಲ್ ಬಂಡವಾಳಶಾಹಿ ಯುಗದಲ್ಲಿ ಕಚ್ಚಾವಸ್ತುವಾಗಿ ಬಳಸಲ್ಪಡುತ್ತಾನೆ ”ಎಂದು ಅರ್ಥಶಾಸ್ತ್ರಜ್ಞೆ ಶೋಶಾನ ಜುಬೋಫ್ (The Great Tech Game–Anirudh Suri) ಅಭಿಪ್ರಾಯಪಡುತ್ತಾರೆ.
ಹಣಕಾಸು ಬಂಡವಾಳ ಮತ್ತು ಡಿಜಿಟಲ್ ಬಂಡವಾಳಶಾಹಿಗೆ ಮಾನವ-ನೈಸರ್ಗಿಕ ಸಂಪನ್ಮೂಲವನ್ನೂ ಒಳಗೊಂಡಂತೆ, ಸಕಲ ಸಂಪನ್ಮೂಲಗಳೂ ಬಂಡವಾಳ ಶೇಖರಣೆ, ಕ್ರೋಢೀಕರಣ ಮತ್ತು ಮಾರುಕಟ್ಟೆ ವಿಸ್ತರಣೆಯ ಕಚ್ಚಾವಸ್ತುಗಳಾಗಿಯೇ ಕಾಣುತ್ತದೆ. ಹಾಗಾಗಿಯೇ ಸಾರ್ವಜನಿಕ ಸ್ವತ್ತು ಎನ್ನಲಾಗುವ ಉದ್ದಿಮೆ, ಶಿಕ್ಷಣ ಸಂಸ್ಥೆ, ಹಣಕಾಸು ವ್ಯವಸ್ಥೆ ಮತ್ತು ಬೌದ್ಧಿಕ ಸಂಸ್ಥೆಗಳೆಲ್ಲವನ್ನೂ ಕಾರ್ಪೋರೇಟ್ ಮಾರುಕಟ್ಟೆಯ ನಿಯಂತ್ರಣಕ್ಕೊಳಪಡಿಸುವ ಹಪಹಪಿ ಹೆಚ್ಚಾಗುತ್ತಿದೆ. ಅಮೃತ ಕಾಲದತ್ತ ಸಾಗುತ್ತಿರುವ ಸ್ವಾವಲಂಬಿ ಭಾರತ ತಾನು 60 ವರ್ಷಗಳಲ್ಲಿ ಗಳಿಸಿದ ಸ್ವಾವಲಂಬನೆಯನ್ನು ತ್ಯಾಗ ಮಾಡಿ ಈಗ ಮಾರುಕಟ್ಟೆ ವಶವಾಗುತ್ತಿದೆ. ಭಾರತ ಇಂದು ಚಂದ್ರಯಾನ, ಮಂಗಳಯಾನ ಮಾಡುತ್ತಿದ್ದರೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಅಗ್ರಮಾನ್ಯ ರಾಷ್ಟ್ರವಾಗಿದ್ದರೆ, ಬಾಹ್ಯಾಕಾಶ ವಿಜ್ಞಾನದಲ್ಲಿ ಉನ್ನತ ಸ್ಥಾನ ಹೊಂದಿದ್ದರೆ, ಇದರ ಬುನಾದಿಯನ್ನು ಸ್ವಾತಂತ್ರ್ಯೋತ್ತರ ಭಾರತದ ಮೊದಲ ಮೂರು ದಶಕಗಳಲ್ಲಿ ನಿರ್ಮಿಸಲಾದ ಸಾರ್ವಜನಿಕ ಸಂಸ್ಥೆಗಳಲ್ಲಿ ಮತ್ತು ಈ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಅಸಂಖ್ಯಾತ ಜ್ಞಾನಿಗಳಲ್ಲಿ, ಶ್ರಮಜೀವಿಗಳಲ್ಲಿ ಕಾಣಬೇಕಾಗುತ್ತದೆ. ಭಾರತದ ಆರ್ಥಿಕ ಸುಸ್ಥಿರತೆಗೂ ಕಾರಣ ಈ ದೇಶದ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನಿರ್ಮಿಸಿರುವ ಸುಭದ್ರ ಬುನಾದಿ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ.