ಮೋದಿ ಸರ್ಕಾರ ಜಾರಿಗೆ ತಂದಂತಹ ಕೃಷಿಕಾಯ್ದೆಗಳನ್ನು ಹಿಂಪಡೆಯುವಂತೆ ನವೆಂಬರ್ ತಿಂಗಳಿಂದ ದೆಹಲಿಯ ಗಡಿಭಾಗಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದು, ಜನವರಿ26 ಗಣರಾಜೋತ್ಸವ ದಿನದ ಟ್ರ್ಯಾಕ್ಟರ್ ರ್ಯಾಲಿ ಪ್ರತಿಭಟನೆ ತೀವ್ರ ಸ್ವರೂಪ ತಾಳಿದೆ.
ಜನವರಿ26 ಗಣರಾಜೋತ್ಸವ ದಿನದಂದು ಸಿಂಘು, ಗಾಝೀಪುರ್, ಟಿಕ್ರಿ, ಮುಕರ್ಬಾ, ಚೌಕ್, ನಂಗ್ಲೋಯಿ ಸೇರಿದಂತೆ ದೆಹಲಿ ಎನ್ಸಿಟಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 12 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಅಂತರ್ಜಾಲ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸರ್ಕಾರ ಆದೇಶ ನೀಡಿದೆ.
ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ರೈತರು ಪ್ರತಿಭಟಿಸುತ್ತಿರುವ ಸ್ಥಳಗಳಲ್ಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ದೃಷ್ಟಿಯಿಂದ 2017 ರ ಟೆಲಿಕಾಂ ಸಂಸ್ಥೆ ನಿಯಮಾನುಸಾರ ಸಾರ್ವಜನಿಕ ತುರ್ತು ಅಥವಾ ಸುರಕ್ಷತೆಯ ಬಗ್ಗೆ ಗಮನಹರಿಸಿ ತಾತ್ಕಾಲಿಕವಾಗಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಸ್ಥಳೀಯ ಮಟ್ಟದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನಲೆ ಸ್ಥಳೀಯ ಆಡಳಿತ ವ್ಯವಸ್ಥೆ ಈ ಆದೇಶವನ್ನು ಹೊರಡಿಸಿದೆ ಎಂದು ಟೆಲಿಕಾಂ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಎಸ್ಎಂಎಸ್ ಕಳುಹಿಸಲಾಗಿದೆ ಎಂದು ರೈತರ ಪ್ರತಿಭಟನಾ ಸ್ಥಳಗಳ ಸಮೀಪ ನೆಲೆನಿಂತಿರುವ ಜನರು ಹೇಳಿದ್ದಾರೆ.
“ ಸರ್ಕಾರದ ಆದೇಶದ ಮೇರೆಗೆ ನಿಮ್ಮ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಅಂತರ್ಜಾಲ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುತ್ತದೆ. ಸರ್ಕಾರ ಅನುಮತಿ ನೀಡಿದ ನಂತರ ಸೌಲಭ್ಯ ಒದಗಿಸಲಾಗುವುದು ಎಂದು ಟೆಲಿಕಾಂ ಸಂಸ್ಥೆ ಕಳುಹಿಸಿದ ಎಸ್ಎಂಎಸ್ನಲ್ಲಿ ಈ ರೀತಿ ತಿಳಿಸಲಾಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಈ ಹಿಂದೆ ಸಿಎಎ, ಎನ್ಆರ್ಸಿ, ಮತ್ತು 370ನೇ ವಿಧಿ ರದ್ದುಗೊಂಡಾಗಲು ಸಂಬಂಧ ಪಟ್ಟ ಸ್ಥಳಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು.