‘ಜಿಹಾದ್’ ಎನ್ನುವ ಅರೇಬಿಕ್ ಪದವನ್ನು ಬಳಸಿಕೊಂಡು ಬಲಪಂಥೀಯ ಶಕ್ತಿಗಳು ಭಾರತೀಯರ ಮಧ್ಯೆ ಪರಸ್ಪರ ಅಪನಂಬಿಕೆ, ಅನುಮಾನಗಳನ್ನು ಬಿತ್ತುವ ಯತ್ನಕ್ಕೆ ಹೊಸ ಸೇರ್ಪಡೆ ಎಂಬಂತೆ ಏಪ್ರಿಲ್ 16, 2022 ರಂದು ಸುದರ್ಶನ್ ಟಿ.ವಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಿದ್ದು, ಅದರ ಸಂಪಾದಕ ಸುರೇಶ್ ಚವ್ಹಾಂಕೆ ಅವರು “ಉದ್ಯೋಗ ಜಿಹಾದ್” ಎಂಬ ಪದ ಬಳಸಿ, ಇದು ಹಿಂದೂಗಳ ಜೀವನೋಪಾಯದ ಮೂಲಗಳಿಗೆ ಅಪಾಯವನ್ನುಂಟುಮಾಡಲು ಮುಸ್ಲಿಮರು ನಡೆಸಿದ ಪಿತೂರಿ ಎಂದು ಪ್ರತಿಪಾದಿಸಿದ್ದಾರೆ.
ಈ ಕಾರ್ಯಕ್ರಮ ಪ್ರಸಾರವಾಗುವುದಕ್ಕಿಂತ ,ಒಂದು ವಾರ ಮೊದಲು ‘ಪವನ್ ಹನ್ಸ್ ಲಿಮಿಟೆಡ್’ನಿಂದ ಅಪ್ರೆಂಟಿಸ್ಶಿಪ್ಗೆ ಆಯ್ಕೆಯಾದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ 10 ಅಭ್ಯರ್ಥಿಗಳ ಪಟ್ಟಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಚವ್ಹಾಂಕೆ ಅವರು ಪ್ರಸಾರ ಮಾಡಿದ್ದರು. ಮತ್ತು ಸರಕಾರಿ ಉದ್ದಿಮೆಯಿಂದ ಹಿಂದೂಗಳಿಗೆ ಉದ್ಯೋಗ ನಿರಾಕರಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು.
ಪವನ್ ಹನ್ಸ್ನಲ್ಲಿ ‘100% ಅಘೋಷಿತ ಮೀಸಲಾತಿ’ಯಿಂದ ಮುಸ್ಲಿಮರು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಚವ್ಹಾಂಕೆ ಹೇಳಿದ್ದರು.
ದೆಹಲಿ ಗಲಭೆಯ ಸಂದರ್ಭದಲ್ಲಿ ಹಿಂದುತ್ವ ಗುಂಪುಗಳ ನೇತೃತ್ವ ವಹಿಸಿದ್ದ ರಾಗಿಣಿ ತಿವಾರಿ ಅವರ ನೇತೃತದಲ್ಲಿ ದೆಹಲಿಯ ‘ಪವನ್ ಹನ್ಸ್’ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳನ್ನು ಸುದರ್ಶನ್ ಟಿ.ವಿಯಲ್ಲಿ ಪ್ರಸಾರ ಮಾಡಲಾಗಿದ್ದು ರಾಗಿಣಿ ಅವರನ್ನು ‘ಶೇರ್ನಿ’ ಎಂದು ಕರೆಯಲಾಗಿದೆ. ಕಛೇರಿಯ ಗೇಟ್ನಲ್ಲಿ, ತಿವಾರಿ ಮತ್ತು ಇತರರು ಮುಸ್ಲಿಮರು ಮತ್ತು ಜಾಮಿಯಾ ವಿರುದ್ಧ ಅವಹೇಳನಕಾರಿ ಕಾಮೆಂಟ್ಗಳನ್ನು ಮಾಡಿರುವುದಲ್ಲದೆ “ಪೈಸಾ ಶ್ರೀ ರಾಮ್ ಕಾ ಔರ್ ಫಾಯ್ದಾ ಚುಸ್ಲಾಮ್ ಕಾ (ಹಣವು ಹಿಂದೂಗಳಿಂದ ಬರುತ್ತದೆ ಮತ್ತು ಉದ್ಯೋಗಗಳು ಮುಸ್ಲಿಮರಿಗೆ)” ಎಂದು ತಿವಾರಿ ಹೇಳಿರುವುದು ಯಾವುದೇ ಸೆನ್ಸಾರ್ ಇಲ್ಲದೆ ಪ್ರಸಾರವಾಗಿದೆ. “ಮೋದಿ ಮತ್ತು ಯೋಗಿಯನ್ನು ವಿರೋಧಿಸುವ ಜಾಮಿಯಾದ ಭಯೋತ್ಪಾದಕರಿಗೆ ಏಕೆ ಉದ್ಯೋಗ ಕೊಡಬೇಕು? ಮುಸಲ್ಮಾನರನ್ನು ಹೊರಹಾಕಿ ಹಿಂದೂಗಳಿಗೆ ಉದ್ಯೋಗ ಸಿಗುವಂತೆ ನೋಡಿಕೊಳ್ಳುತ್ತೇವೆ” ಎಂದು ಒಬ್ಬ ಪ್ರತಿಭಟನಾಕಾರ ಹೇಳುತ್ತಿರುವುದು ದೃಶದಲ್ಲಿ ಕಂಡು ಬರುತ್ತದೆ. ಅಲ್ಲದೆ “ಸರ್ಕಾರಿ ಕಂಪನಿಯು ಮುಸ್ಲಿಮರಿಗೆ ಮಾತ್ರ ಉದ್ಯೋಗ ನೀಡಬಹುದೇ? ಪವನ್ ಹನ್ಸ್ನಲ್ಲಿ ಮುಸ್ಲಿಮರಿಗೆ 100% ಮೀಸಲಾತಿ ಇದೆಯೇ? ಎಂದು ‘ಜಾಬ್ ಜಿಹಾದ್’ ಕಾರ್ಯಕ್ರಮದ ಟೀಸರ್ ನಲ್ಲಿ ಸವತಃ ಸುರೇಶ್ ಚವ್ಹಾಂಕೆ ಕೇಳಿದ್ದಾರೆ.
ಇದೀಗ ಸುದರ್ಶನ್ ಮತ್ತು ಹಿಂದುತ್ವ ಪ್ರತಿಭಟನಕಾರರ ಹೇಳಿಕೆಯನ್ನು ‘ದಿ ವೈರ್’ ತನಿಖೆ ಮಾಡಿದ್ದು ಪ್ರಕರಣದ ಸತ್ಯಾಸತ್ಯೆತೆಯನ್ನು ಬಯಲಿಗೆಳೆದಿದೆ.
‘ಜಾಮಿಯಾ ಮಿಲಿಯಾ ಇಸ್ಲಾಮಿಯಾ’ವು ಬ್ಯಾಚುಲರ್ ಆಫ್ ಸೈನ್ಸ್ ಇನ್ ಏರೋನಾಟಿಕ್ಸ್ ಕೋರ್ಸ್ ಅನ್ನು ಪವನ್ ಹನ್ಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಪ್ರಾರಂಭಿಸಿದ್ದು ಕೋರ್ಸ್ ಅನ್ನು ಏವಿಯಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಬ ಎರಡು ಬ್ಯಾಚ್ಗಳಲ್ಲಿ 60 ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ದಿ ವೈರ್ ಪಡೆದುಕೊಂಡ ಅಧಿಕೃತ ದಾಖಲೆಯ ಪ್ರಕಾರ ಇದು ವಾರ್ಷಿಕ ಶುಲ್ಕ ರೂ 1.3 ಲಕ್ಷ ಪಾವತಿಸಬೇಕಾಗಿರುವ ಕೋರ್ಸ್ ಆಗಿದ್ದು ಅದರಲ್ಲಿ 30% ವಿಶ್ವವಿದ್ಯಾಲಯಕ್ಕೆ ಮತ್ತು ಉಳಿದವು ಪವನ್ ಹನ್ಸ್ಗೆ ಹೋಗುತ್ತದೆ.
ಅಂತಿಮ ಆಯ್ಕೆಯ ಮಾನದಂಡವು ಆರು ಸೆಮಿಸ್ಟರ್ಗಳಲ್ಲಿ ಅಭ್ಯರ್ಥಿಯ ಒಟ್ಟು ಅಂಕಗಳು ಮತ್ತು ಅಭ್ಯರ್ಥಿಯು ಉತ್ತೀರ್ಣಗೊಂಡ DGCA (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಮಾಡ್ಯೂಲ್ಗಳ ಸಂಖ್ಯೆಯನ್ನು ಆಧರಿಸಿದೆ. ಈ ಪ್ರಕಾರ ಈ ವರ್ಷ ಒಟ್ಟು 30 ವಿದ್ಯಾರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಈ 30 ವಿದ್ಯಾರ್ಥಿಗಳಲ್ಲಿ ನಾಲ್ವರು ಅಂದರೆ ಇಬ್ಬರು ಮುಸ್ಲಿಮರು ಮತ್ತು ಇಬ್ಬರು ಹಿಂದೂಗಳು ವೈಯಕ್ತಿಕ ಕಾರಣಗಳಿಗಾಗಿ ತೊರೆದಿದ್ದಾರೆ. ಉಳಿದ 26 ಮಂದಿಯಲ್ಲಿ ಪ್ರತಿ ಬ್ಯಾಚ್ನಿಂದ ಐವರು ಸೇರಿ ಒಟ್ಟು 10 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ನಂತರ, ಸಂದರ್ಶನದಲ್ಲಿ ಉತ್ತೀರ್ಣರಾದ ಒಬ್ಬ ಮುಸ್ಲಿಂ ವಿದ್ಯಾರ್ಥಿಯೂ ವೈಯಕ್ತಿಕ ಕಾರಣಗಳಿಗಳಿಂದ ಕೋರ್ಸ್ ತೊರೆದಿದ್ದಾರೆ.
ವಿವಾದದ ಕುರಿತು ಕೋರ್ಸ್ ತೊರೆದ ಏವಿಯಾನಿಕ್ಸ್ನ ಇಬ್ಬರು ಹಿಂದೂ ಅಭ್ಯರ್ಥಿಗಳಲ್ಲಿ ಒಬ್ಬರನ್ನು ದಿ ವೈರ್ ಸಂದರ್ಶಿಸಿದ್ದು “ನನ್ನ ಸ್ನೇಹಿತ ದೀಪಿತ್ ಗೋಯಲ್ ಮತ್ತು ನಾನು ನಮ್ಮ ಬ್ಯಾಚ್ನ ಟಾಪರ್ಗಳಾಗಿದ್ದೆವು. ನಾವು ವೈಯಕ್ತಿಕ ಕಾರಣಗಳಿಂದ ಹೊರಗುಳಿದಿದ್ದೇವೆ. ನಾನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಆಯ್ಕೆ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿತ್ತು ಮತ್ತು ಅರ್ಹತೆಯ ಆಧಾರದ ಮೇಲೆ ಇತ್ತು. ಅಲ್ಪಸಂಖ್ಯಾತ ಸಂಸ್ಥೆಯಾಗಿರುವುದರಿಂದ ಸಹಜವಾಗಿಯೇ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳೇ ವಿಶ್ವವಿದ್ಯಾಲಯದಲ್ಲಿದ್ದಾರೆ. ಜಾಮಿಯಾದಲ್ಲಿ ಹಿಂದೂ ವಿದ್ಯಾರ್ಥಿಯಾಗಿ, ನಾನು ಯಾವುದೇ ತಾರತಮ್ಯವನ್ನು ಎದುರಿಸಿಲ್ಲ ಮತ್ತು ನನ್ನ ಸ್ನೇಹಿತರೆಲ್ಲರೂ ಮುಸ್ಲಿಮರು ”ಎಂದು ಹೇಳಿದ್ದಾರೆ. ಮತ್ತೊಬ್ಬ ಅಭ್ಯರ್ಥಿ ಅಂಶ್ ಅಗರ್ವಾಲ್ ಅವರು ಆಯ್ಕೆಯ ವಿಧಾನದಲ್ಲಿ ಸಮಸ್ಯೆ ಹೊಂದಿದ್ದರೂ, ಇದು ಕೋಮು ತಾರತಮ್ಯ ಆಗಿಲ್ಲ ಎಂದು ಹೇಳಿದ್ದಾರೆ
“ವಿದ್ಯಾರ್ಥಿಯಾಗಿ ನನ್ನ ಸಮಸ್ಯೆ ಆಯ್ಕೆಯ ಮಾನದಂಡವಾಗಿದೆ. ಆಯ್ಕೆ ಪ್ಯಾರಾಮೀಟರ್ಗಳಿಗೆ ನೀಡಿದ ಪ್ರಾಶಸ್ತ್ಯ ಮತ್ತು ವಿವಿಧ ಬ್ಯಾಚ್ಗಳಿಂದ ವಿದ್ಯಾರ್ಥಿಗಳು ಹೇಗೆ ಆಯ್ಕೆಯಾಗಿದ್ದಾರೆ ಎಂದು ನಾನು ತಿಳಿಯಲು ಬಯಸುತ್ತೇನೆ”ಎಂದು ಅವರು ಹೇಳಿದ್ದಾರೆ
“ಸಾಮಾನ್ಯವಾಗಿ, ಅಂಕಗಳಿಗಿಂತ ಮಾಡ್ಯೂಲ್ಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ . ಆದರೆ COVID ಕಾರಣದಿಂದಾಗಿ, CGPA ಗೂ ಪ್ರಾಶಸ್ತ್ಯ ನೀಡಬೇಕೆಂದು ನಾವು ಒತ್ತಾಯಿಸಿದ್ದೇವೆ. ಮಹಿಳೆಯರಿಗೆ 33% ಮೀಸಲಾತಿ ಇದೆ ಆದರೆ ಏವಿಯಾನಿಕ್ಸ್ ಮತ್ತು ಮೆಕ್ಯಾನಿಕಲ್ ಎರಡೂ ಶಾಖೆಗಳನ್ನು ಒಟ್ಟು ಸೇರಿಸಲಾಗಿದೆಯೇ ಅಥವಾ ಇಲ್ಲವೇ ನಮಗೆ ತಿಳಿದಿಲ್ಲ. ಆದ್ದರಿಂದ, ಆಯ್ಕೆ ಮಾದರಿಯು ಅಸ್ಪಷ್ಟವಾಗಿದೆ. ಇದರಿಂದಾಗಿ, ಮಾಡ್ಯೂಲ್ ಅಥವಾ ಸಿಜಿಪಿಎ ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ ಮುಸ್ಲಿಮರು ಮತ್ತು ಹಿಂದೂ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ. ಅದನ್ನು ಕೋಮುವಾದ ಎಂದು ಕರೆಯಲು ನನ್ನ ಬಳಿ ಆಧಾರವಿಲ್ಲ. ಆದರೆ ಆಯ್ಕೆಯಾಗದವರಿಂದ ಏನು ತಪ್ಪಾಗಿದೆ ಎಂದು ತಿಳಿಯಲು ನಾನು ಬಯಸುತ್ತೇನೆ ”ಎಂದು ಅಂಶ್ ಹೇಳಿದರು.
ಇದು ಪ್ರಾಯೋಗಿಕ ಕೋರ್ಸ್ ಆಗಿರುವುದರಿಂದ, ನಿರ್ದಿಷ್ಟ ವಿದ್ಯಾರ್ಥಿಯಿಂದ ಉತ್ತೀರ್ಣಗೊಂಡ ಮಾಡ್ಯೂಲ್ಗಳ ಸಂಖ್ಯೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಇನ್ನೊಬ್ಬ ವಿದ್ಯಾರ್ಥಿ ದಿ ವೈರ್ಗೆ ತಿಳಿಸಿದ್ದಾರೆ. ಇನ್ನೊಬ್ಬ ವಿದ್ಯಾರ್ಥಿ, ಪವನ್ ಹನ್ಸ್ ಅವರು ಒಟ್ಟು 38 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ ಮತ್ತು ಅವರಲ್ಲಿ 13 ಮಂದಿ ಮಾತ್ರ ಮುಸ್ಲಿಮರು ಎಂದು ಹೇಳಿದ್ದಾರೆ.
“ಇಡೀ ಆಯ್ಕೆ ಸಮಿತಿಯು ಮುಸ್ಲಿಮೇತರರನ್ನು ಒಳಗೊಂಡಿರುವಾಗ ಮತ್ತು ಮಾನದಂಡವು ಅರ್ಹತೆಯನ್ನು ಆಧರಿಸಿರುವಾಗ ಈ ಆಯ್ಕೆಯು ಹೇಗೆ ಅನ್ಯಾಯವಾಗುತ್ತದೆ? ಈ ವಿವಾದವು ವಿಶ್ವವಿದ್ಯಾನಿಲಯದ ಮುಸ್ಲಿಂ ಮತ್ತು ಮುಸ್ಲಿಮೇತರ ಎರಡೂ ಕಡೆಯ ಅಭ್ಯರ್ಥಿಗಳ ಉದ್ಯೋಗಾವಕಾಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಮತ್ತೊಬ್ಬ ಅಭ್ಯರ್ಥಿ ಹೇಳಿದ್ದಾರೆ.
ಪವನ್ ಹನ್ಸ್ ಜಾಮಿಯಾದೊಂದಿಗೆ ಮಾತ್ರವಲ್ಲದೆ ಮುಂಬೈ ವಿಶ್ವವಿದ್ಯಾನಿಲಯದೊಂದಿಗೂ ಇದೇ ರೀತಿಯ ಪಾಲುದಾರಿಕೆಯನ್ನು ಹೊಂದಿದ್ದು ಈ ವರ್ಷ ಅಲ್ಲಿಂದಲೂ ಒಟ್ಟು 15 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು ಅವರಲ್ಲಿ ಮೂವರು ಮಾತ್ರ ಮುಸ್ಲಿಮರು.
ಏಪ್ರಿಲ್ 16, 2022 ರಂದು, ಚವ್ಹಾಂಕೆ ಕಾರ್ಯಕ್ರಮ ಪ್ರಸಾರ ಮಾಡಿದ್ದು ಅದರಲ್ಲಿ ಅವರು ಯಾವುದೇ ಪುರಾವೆಗಳನ್ನು ಉಲ್ಲೇಖಿಸದೆ ಜಾಮಿಯಾ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಮುಸ್ಲಿಮರು ವಾಯುಯಾನದಲ್ಲಿ ತೊಡಗುವುದು ಭಾರತಕ್ಕೆ ‘ಅಪಾಯಕಾರಿ’ ಎಂದು ಎಂದಿದ್ದಾರೆ. “ಜಾಮಿಯಾ ಒಂದು ಸಂಸ್ಥೆ ಅಲ್ಲ. ಇದು ತಪ್ಪು ಕಾರಣಗಳಿಗಾಗಿ ಕುಖ್ಯಾತವಾಗಿದೆ. ನಮ್ಮ CDS ಜನರಲ್ ಬಿಪಿನ್ ರಾವತ್ಗೆ ಏನಾಯಿತು ಎಂದು ನಮಗೆ ಇನ್ನೂ ತಿಳಿದಿಲ್ಲ, ಈ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಇಡೀ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ.
ಉದ್ಯೋಗಾವಕಾಶಗಳ ಬಗ್ಗೆ ಸುರೇಶ್ ಚವ್ಹಾಂಕೆ ಅಥವಾ ರಾಗಿಣಿ ತಿವಾರಿ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. ಮಾರ್ಚ್ 2020 ರಲ್ಲಿ, ಚವ್ಹಾಂಕೆ ಅವರು ಇಂಡಿಯಾ ಗೇಟ್ನಲ್ಲಿ ‘ಗಲಭೆಕೋರರ ಆರ್ಥಿಕ ಬಹಿಷ್ಕಾರ’ ಕ್ಕೆ ಕರೆನೀಡುವ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ಆರ್ಥಿಕ ಬಹಿಷ್ಕಾರದ ಮೂಲವೂ ಇದೇ ಆಗಿದೆ. “ಅವರು ನಿಮ್ಮ ಕತ್ತು ಸೀಳುವುದನ್ನು ತಡೆಯಲು ಬಯಸುತ್ತೀರಾದರೆ ನಿಮ್ಮ ಹಣವನ್ನು ಅವರ ‘ಗ್ರೀನ್ ಚಾದರ್’ಗೆ ದೇಣಿಗೆ ನೀಡುವುದನ್ನು ನಿಲ್ಲಿಸಬೇಕು ”ಎಂದು ಮಾರ್ಚ್ ಮೊದಲ ವಾರದಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿದ್ದಾಗ ಚವ್ಹಾಂಕೆ ತಮ್ಮ ಚಾನೆಲ್ನಲ್ಲಿ ಹೇಳಿದ್ದರು. ಉತ್ತಮ್ ನಗರ ಪ್ರತಿಭಟನೆಯನ್ನೂ ಅತ್ಯಂತ ಪ್ರಚೋದಕ ರೀತಿಯಲ್ಲಿ ಸುದರ್ಶನ್ ಟಿವಿ ವರದಿ ಮಾಡಿದ್ದು, ಈ ಕಾರ್ಯಕ್ರಮದ ಉದ್ದಕ್ಕೂ, ಸುದರ್ಶನ್ ವರದಿಗಾರ ಸಾಗರ್ ಕುಮಾರ್ ಮತ್ತು ಆಂಕರ್ ಶುಭಂ ತ್ರಿಪಾಠಿ ಮುಸ್ಲಿಮರನ್ನು “ಜಿಹಾದಿಗಳು” ಎಂದು ಕರೆಯುತ್ತಾ ಇತರ ಅವಹೇಳನಕಾರಿ ಪದಗಳನ್ನು ಬಳಸಿದ್ದರು. ಅಲ್ಲದೆ ಗಲಭೆಯನ್ನು ಸಮರ್ಥಿಸುವಂತೆ ಮತನಾಡಿದ್ದ ಶುಭಂ “ಮೊದಲ ಬಾರಿಗೆ ಹಿಂದೂಗಳು ಜಿಹಾದಿಗಳ ವಿರುದ್ಧ ಉತ್ತಮ್ ನಗರದಲ್ಲಿ ಲಾಠಿಗಳೊಂದಿಗೆ ಆಕ್ರಮಣಕಾರಿಯಾಗಿ ಬಂದಿದ್ದಾರೆ” ಎಂದು ಹೇಳಿದ್ದರು.“ಇಂದು, ಉತ್ತಮ್ ನಗರದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲಾಗುವುದು ಮತ್ತು ಜಿಹಾದಿಗಳನ್ನು ಬಹಿಷ್ಕರಿಸಲು ಕರೆ ನೀಡಲಾಗುವುದು. ಸುದರ್ಶನ್ ನ್ಯೂಸ್ ಜಿಹಾದಿಗಳ ಆರ್ಥಿಕ ಬಹಿಷ್ಕಾರವನ್ನು ದೀರ್ಘಕಾಲದವರೆಗೆ ಪ್ರತಿಪಾದಿಸಲಿದೆ” ಎಂದು ಸಾಗರ್ ಕುಮಾರ್ ಹೇಳಿದ್ದರು.
ಚವ್ಹಾಂಕೆ ಅವರು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ‘UPSC ಜಿಹಾದ್’ ಎಂಬ ಸರಣಿ ಕಾರ್ಯಕ್ರಮವನ್ನೂ ನಡೆಸಿದ್ದರು, ಮುಸ್ಲಿಮರು ರಹಸ್ಯವಾಗಿ ಭಾರತೀಯ ಆಡಳಿತಾತ್ಮಕ ಹುದ್ದೆಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸುದರ್ಶನ್ ನ್ಯೂಸ್ಗೆ ಭವಿಷ್ಯದಲ್ಲಿ ಈ ಜಾಗರೂಕರಾಗಿರಲು ಎಚ್ಚರಿಸಿದೆ ಎಂದು ಹೇಳಿದೆ.
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ವಿವಾದಾತ್ಮಕ ಕರೆಗೆ ಸಂಬಂಧಿಸಿದಂತೆಯೂ ಚವ್ಹಾಂಕೆ ಅವರು ದ್ವೇಷ ಭಾಷಣದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಹೊಸದಿಲ್ಲಿಯ ಸಾರ್ವಜನಿಕ ಸಭೆಯೊಂದರಲ್ಲಿ ಅವರು “ನಾವೆಲ್ಲರೂ ನಮ್ಮ ಜೀವನದ ಕೊನೆಯ ಉಸಿರು ಇರುವವರೆಗೂ ಹಿಂದೂ ರಾಷ್ಟ್ರಕ್ಕಾಗಿ ಹೋರಾಡಲು ಮತ್ತು ಸಾಯಲು ಸಿದ್ಧರಾಗಿರುತ್ತೇವೆ” ಎಂದು ಹೇಳಿದ್ದರು.
ಹಿಂದುತ್ವ ಗುಂಪುಗಳೊಂದಿಗೆ ಸೇರಿ ಭಾರತದ ಮುಖ್ಯ ವಾಹಿನಿಯ ಮಾಧ್ಯಮಗಳೂ ದೇಶವನ್ನು ಧರ್ಮಾಧಾರಿತವಾಗಿ ಒಡೆಯುವ ಪ್ರಯತ್ನವನ್ನು ಜಾರಿಯಲ್ಲಿಟ್ಟಿದ್ದು ಈ ದೇಶವನ್ನು ಕೇವಲ ಅಧಿಕಾರದ ಆಸೆಗಾಗಿ ಶಾಶ್ವತ ಉನ್ಮಾದದ ಸ್ಥಿತಿಯಲ್ಲಿಡಲು ಬಯಸುತ್ತಿದೆ. ಭಾರತದ ಎರಡನೇ ಅತಿ ದೊಡ್ಡ ಸಮುದಾಯವಾದ ಮುಸ್ಲಿಮರನ್ನು ಅನಕ್ಷರಸ್ಥರು ಎಂದು ಜರೆಯುತ್ತಿದ್ದ ಇದೇ ಮಾಧ್ಯಮಗಳು ಈಗ ‘ಆರ್ಥಿಕ ಜಿಹಾದ್’, ‘ಉದ್ಯೋಗ ಜಿಹಾದ್’, ‘ಯುಪಿಎಸ್ಸಿ ಜಿಹಾದ್’, ‘ಆಹಾರ ಜಿಹಾದ್’ ಎಂದೆಲ್ಲಾ ಗೋಳಾಡುತ್ತಿರುವುದು ಹಾಸ್ಯಾಸ್ಪದ. ವಾಸ್ತವವಾಗಿ ಭಾರತದ ಜನಸಂಖ್ಯೆಯ 14.2% ರಷ್ಟಿರುವ ಮಸ್ಲಿಮರಲ್ಲಿ ಆಡಳಿತಾತ್ಮಕ ಹುದ್ದೆಯಲ್ಲಿರುವುದು ಕೇವಲ 4.22%ನಷ್ಟು ಮಂದಿ ಮಾತ್ರ. ಅಸಮಾನತೆಯ ಬಗ್ಗೆ ಮಾತನಾಡುವುದಾದರೆ ಇದು ಸಮುದಾಯವೊಂದು ಪಡೆದುಕೊಂಡಿರುವ ಅತ್ಯಂತ ಕಡಿಮೆ ಪ್ರಾತಿನಿಧ್ಯವಾಗಿದೆ. ಆದರೆ ಇವೆಲ್ಲವೂ ಗೊತ್ತಿದ್ದೂ ಕೋಮು ಧ್ರುವೀಕರಣವೊಂದೇ ಮಾಧ್ಯಮಗಳ ಅಜೆಂಡಾವಾಗಿದ್ದಾಗ ಇಂತಹ ಆಧಾರರಹಿತ, ಸುಳ್ಳು ಸುದ್ದಿಗಳೂ ನಿರ್ಲಜ್ಜೆಯಿಂದ ಪ್ರಸಾರವಾಗುತ್ತವೆ.