ಶಿವಮೊಗ್ಗ ಜಿಲ್ಲೆಯ ಹುಣಸೋಡು ಅಕ್ರಮ ಕಲ್ಲು ಕ್ವಾರೆ ಪ್ರದೇಶದಲ್ಲಿ ಜಿಲೆಟಿನ್ ಸ್ಪೋಟಗೊಂಡ ಘಟನೆ ಮಾಸುವ ಮೊದಲೇ ರಾಜ್ಯದಲ್ಲಿ ಮತ್ತೊಂದು ಜಿಲೆಟಿನ್ ಸ್ಪೋಟ ದುರಂತ ಸಂಭವಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೆನಾಗೇವಲ್ಲಿ ಗ್ರಾಮದ ಬಳಿ ಜಿಲೆಟಿನ್ ಸ್ಫೋಟಗೊಂಡಿದೆ.
ಹಿರೇನಾಗವಳ್ಳಿ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸುಮಾರು 12 ಗಂಟೆಗೆ ಬ್ರಹ್ಮರವರ್ಷಿಣಿ ಕಲ್ಲುಕ್ವಾರಿ ಕ್ರಷರ್ನಿಂದ ಒಂದೂವರೆ ಕಿ.ಮೀ. ದೂರದ ಕಾಡಿನಲ್ಲಿ ಈ ಜಿಲೆಟಿನ್ ಸ್ಫೋಟ ಸಂಭವಿಸಿದೆ. ಭಾರೀ ಸ್ಪೋಟ ಸಂಭವಿಸಿ 5 ಜನ ಸ್ಥಳದಲಿಯೇ ಸಾವನ್ನಪಿದ್ದರೆ, ಒಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೂವರು ಸ್ಥಿತಿ ಗಂಭೀರಾವಾಗಿದೆ.
ಜಿಲೆಟಿನ್ ಸ್ಫೋಟದ ತೀವ್ರತೆ ಹೆಚ್ಚಿದ್ದರಿಂದ ಹತ್ತಾರು ಕಿಲೋಮೀಟರ್ ದೂರದವರೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಜನ ಭೂಕಂಪ ಎಂದು ಭಾವಿಸಿ ಮಧ್ಯರಾತ್ರಿ ಮನೆಯಿಂದ ಹೊರಗೆ ಓಡಿ ಬಂದಿದ್ದರು. ನಂತರ ಇದು ಜಿಲೆಟಿನ್ ಸ್ಫೋಟಗೊಂಡಿದ್ದು ಎಂದು ತಿಳಿದುಬಂದಿದೆ. ಸ್ಥಳೀಯರು ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲೆಟಿನ್ ಸ್ಪೋಟದಿಂದ ತೊಂದರೆಯಾಗುತ್ತಿರುವ ಬಗ್ಗೆ 2008 ರಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಬ್ರಹ್ಮರವರ್ಷಿಣಿ ಕಲ್ಲುಕ್ವಾರಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಈ ಹಿಂದೆ ಅಧಿಕಾರಿಗಳು ದಾಳಿ ನಡೆಸಿದ್ದರು. ಕಂಪ್ರೆಸರ್ ಜಪ್ತಿಗೆ ಫೆಬ್ರವರಿ 22 ರಂದು ಪೊಲೀಸರು ತೆರಳಿದ್ದರು, ಪೊಲೀಸರ ಕಣ್ಣುತಪ್ಪಿಸಲು ಜಿಲೆಟಿನ್ ಕಡ್ಡಿಯನ್ನು ಬಚ್ಚಿಡಲಾಗಿತ್ತು. ಮುಚ್ಚಿಟ್ಟ ಜಿಲೆಟಿನ್ ಸಾಗಿಸಲು ಬಂದ ವೇಳೆಯಲ್ಲಿ ಸ್ಪೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ವಾರಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕಬಳ್ಳಾಪುರ ಎಸ್.ಪಿ ಮಿಥುನ್ ಕುಮಾರ್ ಹೇಳಿದ್ದಾರೆ.