ಬಹುನಿರೀಕ್ಷಿತ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ವಿಧಾನಸಭೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಶನಿವಾರ ಪ್ರಾರಂಭಗೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತವಾಗಿ 30 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬಂಗಾಳದ ಪೂರ್ವ ಮಿಡ್ನಾಪುರದ ಸತ್ಸತ್ಮಾಲ್ ಭಗವನ್ ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ ಮತದಾನ ಆರಂಭಕ್ಕೆ ಮುನ್ನ ಈ ಘಟನೆ ನಡೆದಿದೆ. ಇನ್ನೊಂದೆಡೆ ಪಶ್ಚಿಮ ಮಿಡ್ನಾಪುರದ ಶಲ್ಬೊನಿಯಲ್ಲಿ ಸಿಪಿಎಂ ಅಭ್ಯರ್ಥಿ ಸುಶಾಂತ ಘೋಷ್ ವಾಹನದ ಮೇಲೆ ದಾಳಿ ನಡೆದಿದೆ.
ಟಿಎಂಸಿಗೆ ಮತ ಹಾಕಿದರೂ ಬಿಜೆಪಿ ಎಂದು ತೋರಿಸಿದ ವಿವಿ ಪ್ಯಾಟ್ -ಮತದಾನ ರದ್ದು
ತಾವು ಟಿಎಂಸಿಗೆ ಮತ ಹಾಕಿದ್ದರೂ ವಿವಿಪ್ಯಾಟ್ ನಲ್ಲಿ ಬಿಜೆಪಿ ಎಂದು ತೋರಿಸುತ್ತಿದೆ ಎಂದು ಮತದಾರರು ಆರೋಪಿಸಿದ ಕಾರಣ ಪೂರ್ವ ಮಿಡ್ನಾಪುರದ ದಕ್ಷಿಣ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ಮತದಾನವನ್ನು ರದ್ದುಗೊಳಿಸಲಾಗಿದೆ.
ಪಶ್ಚಿಮ ಬಂಗಾಳ: 119 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
ಮೊದಲ ಹಂತದಲ್ಲಿ ನಡೆಯುತ್ತಿರುವ 30 ಕ್ಷೇತ್ರದಲ್ಲಿ 73 ಲಕ್ಷಕ್ಕೂ ಅಧಿಕ ಮತದಾರರಿದ್ದು, 2016ರ ಚುನಾವಣೆಯಲ್ಲಿ ಈ 30 ರಲ್ಲಿ 26 ಕ್ಷೇತ್ರಗಳನ್ನು ತೃಣಮೂಲ ಕಾಂಗ್ರೆಸ್ ಗೆದ್ದುಕೊಂಡಿತ್ತು. ಒಟ್ಟಾರೆ, ಇಂದು 191 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತೃಣಮೂಲ ಕಾಂಗ್ರೆಸ್ ಮೊದಲ ಹಂತದ ಚುನಾವಣೆಯ ಈ 30 ರಲ್ಲಿ 29 ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆ. ಕಾಂಗ್ರೆಸ್ 10 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, 18 ಸ್ಥಾನಗಳಲ್ಲಿ ಎಡಪಕ್ಷಗಳು ಸ್ಪರ್ಧಿಸುತ್ತಿವೆ.
ಎಲ್ಲಾ ಮತದಾನಗಳು ಬೆಳಗ್ಗೆ 7 ರಿಂದ ಪ್ರಾರಂಭವಾಗಿ ಸಂಜೆ 6 ಕ್ಕೆ ಮುಕ್ತಾಯವಾಗಲಿದೆ. ಸರಿ ಸುಮಾರು 11,000 ಮತಗಟ್ಟೆಗಳಿಗೆ 22,000 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆಯೆಂದು ಎನ್ಡಿಟಿವಿ ವರದಿ ಮಾಡಿದೆ.
ಅಸ್ಸಾಂ -47 ಕ್ಷೇತ್ರಗಳಲ್ಲಿ ಮತದಾನ
ಅಸ್ಸಾಮಿನಲ್ಲಿ 47 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಅದರಲ್ಲಿ 35 ಕ್ಷೇತ್ರಗಳು ಬಿಜೆಪಿ ಈ ಹಿಂದೆ ಗೆಲುವು ಸಾಧಿಸಿದ್ದಾಗಿದೆ. ಬಿಜೆಪಿ 39 ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಬಿಜೆಪಿ ಮಿತ್ರಪಕ್ಷ AGP (ಅಸ್ಸಾಂ ಗಾನ ಪರಿಷದ್) 10 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. 2 ಕ್ಷೇತ್ರದಲ್ಲಿ ಸ್ನೇಹಪರ ಸ್ಪರ್ಧೆಗೆ ಇಳಿದಿವೆ. ಕಾಂಗ್ರೆಸ್ 43 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಉಳಿದ ಕ್ಷೇತ್ರಗಳನ್ನು ಮೈತ್ರಕೂಟದ ಉಳಿದ ಸದಸ್ಯರಿಗೆ ಬಿಟ್ಟುಕೊಡಲಾಗಿದೆ.
ಮತ ಚಲಾಯಿಸುವಂತೆ ಪ್ರಧಾನಿ ಮೋದಿ ಮನವಿ
ಪಶ್ಚಿಮ ಬಂಗಾಳದಲ್ಲಿ ಮತ್ತು ಅಸ್ಸಾಮಿನಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಮತದಾನ ನಡೆಯಲಿರುವ ಕ್ಷೇತ್ರದ ಎಲ್ಲಾ ಮತದಾರರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.