ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೂರ್ವ ವಲಯ ವ್ಯಾಪ್ತಿಯಲ್ಲಿ ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಸೋಮವಾರ ಬೆಳಗ್ಗೆ 6.30 ರಿಂದ 10.15 ರವರೆಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆಗೆ 9 ಕಿ.ಮೀ ಗೂ ಹೆಚ್ಚು ದೂರವನ್ನು ಕಾಲ್ನಡಿಗೆಯ ಮೂಲಕ ಹೊರ ವರ್ತುಲ ರಸ್ತೆ ಹೆಣ್ಣೂರು ಮೇಲುಸೇತುವೆಯಿಂದ ಪರಿಶೀಲನೆ ಪ್ರಾರಂಭಿಸಿ ಕಮ್ಮನಹಳ್ಳಿ ಮೆಲುಸೇತುವೆಯವರೆಗೆ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆಯಲ್ಲಿ ಪ್ರಮಖವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ, ನೇತಾಡುವಂತಹ ಓ.ಎಫ್.ಸಿ ಕೇಬಲ್ ತೆರವು, ರಸ್ತೆ ಬದಿಯಲ್ಲಿರುವ ತ್ಯಾಜ್ಯ ಹಾಗೂ ಕಟ್ಟಡ ಭಗ್ನಾವಶೇಷಗಳ ತೆರವು, ಪಾದಚಾರಿ ಮಾರ್ಗಗಳ ಒತ್ತುವರಿ ತೆರವು, ಪಾದಚಾರಿ ಮಾರ್ಗಗಳಲ್ಲಿ ನಿಲಗಡೆ ಮಾಡಿರುವ ವಾಹನಗಳ ತೆರವು, ರಸ್ತೆ ಬದಿಗಳಲ್ಲಿ ನಿಲ್ಲಿಸಿರುವ ಅನಾಥ ವಾಹನಗಳ ತೆರವು, ಮರದ ಕೊಂಬೆಗಳನ್ನು ಕಟಾವು ಮಾಡುವುದು, ಬೀದಿ ದೀಪಗಳನ್ನು ಅಳವಡಿಸುವುದು, ರಸ್ತೆ ಬದಿಯ ಚರಂಡಿಗಳಿಗೆ ಅಳವಡಿಸಿರುವ ಸ್ಲ್ಯಾಬ್ ಗಳು ಆಳಾಗಿರುವುದು, ಶೋಲ್ಡರ್ ಡ್ರೈನ್ ಗಳಲ್ಲಿ ಶುಚಿತ್ವ ಕಾಪಾಡುವುದು ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಪರಿಶೀಲಿಸಿ ಇರುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮೊದಲಿಗೆ, ಹೆಣ್ಣೂರು ಮೆಲುಸೇತುವೆ ಭಾಗದಲ್ಲಿರುವ ತ್ಯಾಜ್ಯವನ್ನು ಕೂಡಲೇ ತೆಗೆಯಬೇಕು ಹಾಗೂ ಮೇಲ್ಸೇತುವೆಯ ಜಂಕ್ಷನ್ ನಲ್ಲಿ ರಸ್ತೆ ದುರಸ್ತಿ ಕಾರ್ಯವನ್ನು ಕೂಡಲೇ ತೆಗೆದುಕೊಳ್ಳಬೇಕು. ಈ ಪೈಕಿ ಮಳೆ ನಿಂತ ಕೂಡಲೇ ದುರಸ್ತಿಕಾರ್ಯ. ಹೊರ ವರ್ತುಲ ರಸ್ತೆಯಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು, ರಸ್ತೆ ಬದಿಯಿರುವ ಮರದ ಕೊಂಬೆಗಳನ್ನು ಕಟಾವು ಮಾಡಬೇಕು, ನೇತಾಡುವಂತಹ ಓ.ಎಫ್.ಸಿ ಕೇಬಲ್ ಗಳನ್ನು ತೆರವುಗೊಳಿಸಬೇಕು. ಈ ಸಂಬಂಧ ನಗರದ ಹೊರ ವರ್ತುಲ ರಸ್ತೆಗಳನ್ನು ವಾರ್ಷಿಕ ನಿರ್ವಹಣೆ ಗುತ್ತಿಗೆ ನೀಡಿ ಸ್ವಚ್ಚವಾಗಿರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹೆಣ್ಣೂರು ಮೇಲುಸೇತುವೆಯಿಂದ ಲಿಂಗರಾಜಪುರ ಕಡೆಗೆ ಹೋಗುವ ಮುಖ್ಯ ರಸ್ತೆಯನ್ನು ಪರಿಶೀಲಿಸಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಬೇಕು. ರಸ್ತೆ ಬದಿಯಿರುವ ತ್ಯಾಜ್ಯ ಕಟ್ಟಡ ಭಗ್ನಾವಶೇಷಗಳನ್ನು ಶಿಲ್ಟ್ ಅಂಡ್ ಟ್ರ್ಯಾಕ್ಟರ್ ಹಾಗೂ ಪೌರಕಾರ್ಮಿಕರನ್ನು ಬಳಸಿಕೊಂಡು ತೆರವುಗೊಳಿಸಬೇಕು. ನೇತಾಡುವ ಒ.ಎಫ್.ಸಿ ಕೇಬಲ್ ಗಳನ್ನು ತೆರವುಗೊಳಿಸಬೇಕು. ಜೊತೆಗೆ ಮುಖ್ಯ ರಸ್ತೆ ಬದಿಯ ಅಂಗಡಿಗಳ ಮುಂಭಾಗ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವುದನ್ನು ಕೂಡಲೆ ತೆರವುಗೊಳಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಕಾಚರಕನಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಿ
ಕಾಚರಕನಹಳ್ಳಿಯ ಸುಮಾರು 16 ಎಕರೆ 8 ಗುಂಟೆ ಕೆರೆ ಜಾಗವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿಬಿಎಂಪಿಗೆ ಹಸ್ತಾಂತರಿಸಿದೆ. ಕೆರೆಯ ಅಂಗಳದಲ್ಲಿ ಕೊಳಗೇರಿ ಪ್ರದೇಶವಿದ್ದು, 250ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದಾರೆ. ಅವರನ್ನು ಬೇರೆಡೆ ಸ್ಥಳಾಂತರಿಸಲು ಸ್ಲಂ ಬೋರ್ಡ್ ನಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಹಸ್ತಾಂತರವಾಗಿರುವ ಜಾಗವನ್ನು ಅಭಿವೃದ್ಧಿಪಡಿಸಲು 7.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಸರಿಯಾಗಿ ಸರ್ವೇ ಮಾಡಿ ಮಾರ್ಕ್ ಮಾಡಿ ಕೆರೆಯ ಜಾಗಕ್ಕೆ ಮೊದಲು ಫೆನ್ಸಿಂಗ್ ಅಳವಡಿಸಬೇಕು. ಬಳಿಕ ಕೆರೆಯ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲು ಕೆರೆ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ವೇಳೆ ವಲಯ ಆಯುಕ್ತರಾದ ಪಿ.ಎನ್.ರವೀಂದ್ರ, ಮಲಯ ಜಂಟಿ ಆಯುಕ್ತರಾದ ಶಿಲ್ಪಾ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಯೋಜನಾ ವಿಭಾಗದ ಮುಖ್ಯ ಅಭಿಯಂತರರಾದ ಲೋಕೇಶ್, ವಲಯ ಮುಖ್ಯ ಅಭಿಯಂತರರಾದ ಸುಗುಣಾ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.