ಕೃಷಿ ಇಲಾಖೆಯಲ್ಲಿ ಸಚಿವರು ಅಧಿಕಾರಿಗಳಿಂದ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಉಡುಪಿ ಜಿಲ್ಲೆಯ ಕೃಷಿ ಇಲಾಖೆಯ ಸಿಬ್ಬಂದಿ ವಿನೋದ ಎಂಬುವವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಪ್ರತ ಬರೆದಿದ್ದಾರೆ.
2020-21 ನೇ ಸಾಲಿನ ಗ್ರೂಪ್ –ಬಿ ಮತ್ತು ಗ್ರೂಪ್-ಸಿ ನೌಕರರ ವರ್ಗಾವಣೆಯ ಜವಬ್ದಾರಿಯನ್ನು ಸಂಬಂಧ ಪಟ್ಟ ಉನ್ನತ ಅಧಿಕಾರಿಗಳಿಗೆ ವಹಿಸಿಕೊಡಲಾಗಿದ್ದು, ಈ ಹಿನ್ನಲೆ ಅಧಿಕಾರಿಗಳು ಸಿಬ್ಬಂದಿಗಳಿಗೆ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆಂದು ಸಿಬ್ಬಂದಿಗಳಿಂದಲೇ ಆರೋಪ ಕೇಳಿ ಬರುತ್ತಿದೆ.
“ನೀವು ಕಾರ್ಯನಿರ್ವಹಿಸುತ್ತಿರುವ ಕಚೇರಿಯಲ್ಲಿಯೆ ಕೆಲಸ ಮುಂದುವರೆಸ ಬೇಕೆಂದರೆ ಅಥವಾ ವರ್ಗಾವಣೆ ಪಡೆಯ ಬೇಕಾದರೆ ನಾವು ಮಾನ್ಯ ಕೃಷಿ ಸಚಿವರಿಗೆ ಹಣ ಕೊಡಬೇಕು ಆದ್ದರಿಂದ ನೀವು ನಮಗೆ ಹಣಕೊಡಿ ಎಂದು” ಹಿರಿಯ ಅಧಿಕಾರಿಗಳು ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮಾನ್ಯ ಕೃಷಿ ಸಚಿವರ ಹಾಗು ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳ ಹೇಳಿಕೆಯನ್ನು ಆಡಿಯೋ, ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಇಲಾಖೆ ಕೊಡುವ ಸಂಬಳದಲ್ಲಿ ಜೀವನ ನಿರ್ವಹಣೆ ಮಾಡುವುದೇ ಕಷ್ಟ ಇದರ ಮಧ್ಯೆ ಅಧಿಕಾರಿಗಳಿಂದ ಹಣ ನೀಡುವಂತೆ ಕಿರುಕುಳ ನೀಡಲಾಗುತ್ತಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಗಂಭೀರವಾಗಿ ಪರಿಗಣಿಸ ಬೇಕು. ಜೊತೆಗೆ ತಪ್ಪು ಸಾಬೀತಾದರೆ ಕೃಷಿ ಸಚಿವರನ್ನು ಸಂಪುಟದಿಂದ ತೆಗೆಯ ಬೇಕು. ಹಾಗೆಯೇ ಹಣದ ಆಮಿಷ ಒಡ್ಡಿದ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ನಮಗಾದ ಅನ್ಯಾಯವನ್ನು ಸರಿಪಡಿಸುವಂತೆ ಇಲಾಖೆಯ ಸಿಬ್ಬಂದಿಗಳು ಆಗ್ರಹಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಹೆಚ್ಚಿನ ಗಮನಹರಿಸದೆ ಅನ್ಯಾಯವನ್ನು ಸರಿಪಡಿಸದೆ ಇದ್ದಲ್ಲಿ ಪ್ರಧಾನ ಮಂತ್ರಿ, ಬಿಜೆಪಿಯ ರಾಷ್ಟ್ರೀಯ ಹೈಕಮಾಂಡ್ ಗಮನಕ್ಕೆ ತರುವುದರ ಮೂಲಕ ಕೃಷಿ ಇಲಾಖೆಯ ಸಿಬ್ಬಂದಿಗಳ ಸಾಮೂಹಿಕ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತೇವೆಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಎಚ್ಚರಿಸಲಾಗಿದೆ.