ಛತ್ತೀಸ್ಗಢ ಮೂಲದ ಗಗನಸಖಿ ಒಬ್ಬರನ್ನು ಮುಂಬೈ ನಗರದಲ್ಲಿ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿರುವುದಾಗಿ ಮಂಗಳವಾರ (ಸೆಪ್ಟೆಂಬರ್ 5) ವರದಿಯಾಗಿದೆ.
24 ವರ್ಷದ ರೂಪಾಲ್ ಓಗ್ರೆ ಹತ್ಯೆಯಾದ ಗಗನಸಖಿ.
ಮುಂಬೈ ಅಂದೇರಿಯ ಟಾಟಾ ಶಕ್ತಿ ಕೇಂದ್ರದ ಮರೋಳ್ನ ಎನ್ಜಿ ಕಾಂಪ್ಲೆಕ್ಸ್ನಲ್ಲಿ ಸೋಮವಾರ ರಾತ್ರಿ ರೂಪಾಲ್ ಕೊಲೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಾರ್ಟ್ಮೆಂಟ್ ಶೋಧಿಸಿದ ಸಂದರ್ಭದಲ್ಲಿ ಪತ್ತೆಯಾದ ರೂಪಾಲ್ ಅವರ ಕತ್ತು ಸೀಳಲಾಗಿತ್ತು. ಆದರೆ ಅವರು ಉಸಿರಾಡುತ್ತಿದ್ದರು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಆರೋಪದ ಮೇಲೆ ರೂಪಾಲ್ ಉಳಿದುಕೊಂಡಿದ್ದ ಅಪಾರ್ಟ್ಮೆಂಟ್ನ ಸ್ವಚ್ಚತಾ ಕೆಲಸಗಾರ 40 ವರ್ಷದ ವಿಕ್ರಮ್ ಅತ್ವಾಲ್ ಎಂಬುವವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ರೂಪಾಲ್ ಕಳೆದ ಆರು ತಿಂಗಳುಗಳ ಹಿಂದೆಯಷ್ಟೇ ಮುಂಬೈ ನಗರಕ್ಕೆ ಬಂದು ತನ್ನ ಸಹೋದರಿ ಜೊತೆ ಮರೋಳ್ನ ಅಪಾರ್ಟ್ಮೆಂಟ್ನಲ್ಲಿ ತಂಗಿದ್ದರು. ಏರ್ ಇಂಡಿಯಾ ಗಗನಸಖಿಯಾಗಿ ಇತ್ತೀಚಿಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ತಿಳಿದು ಬಂದಿದೆ. ಇವರು ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದರು.