Covid 19 ಸಮಯದಲ್ಲಿ ಶಾಲೆ ಇಲ್ಲದೆ ಮನೆಯಲ್ಲೇ ಉಳಿದ ಪುಟ್ಟ ಮಕ್ಕಳ ಮೇಲೆ ದೌರ್ಜನ್ಯದ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ಇದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು ಬದುಕಿಡೀ ಕಾಡುವ ಆತಂಕ ಎದುರಾಗಿದೆ. ಮಕ್ಕಳಯೋಗ ಕ್ಷೇಮದ ಜವಾಬ್ದಾರಿ ಇರುವ ರಾಜ್ಯ ಮಕ್ಕಳ ಸಂರಕ್ಷಣಾ ಸಮಿತಿಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ಮಕ್ಕಳ ಸಮಸ್ಯೆಗಳನ್ನು ಆಲಿಸುವಲ್ಲಿ ಮತ್ತು ಪರಿಹರಿಸುವಲ್ಲಿ ಸಮಸ್ಯೆ ಎದುರಾಗಿದೆ.
ಒಂದು ಕೋಟಿಗಿಂತಲೂ ಜಾಸ್ತಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಕೇವಲ ಹನ್ನೊಂದು ಸದಸ್ಯರಿರುವ ತಂಡ 164 ‘ಮಕ್ಕಳ ಆರೈಕೆ ಸಂಸ್ಥೆ’ಗಳ ಪ್ರಕರಣಗಳನ್ನು ನೋಡಿಕೊಳ್ಳುತ್ತಿವೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಕಾನೂನಿನ ಹೋರಾಟ, ಮಕ್ಕಳ ಸಂರಕ್ಷಣೆ, ಆರೈಕೆ ಎಲ್ಲವನ್ನೂ ಈ ತಂಡವೇ ಮಾಡಬೇಕಿದೆ. ಆ ಹನ್ನೊಂದು ಮಂದಿಯಲ್ಲೂ ಒಬ್ಬರು ಮಾತ್ರ ಸರ್ಕಾರಿ ಉದ್ಯೋಗಿಯಾಗಿದ್ದು ಉಳಿದ ಹತ್ತು ಮಂದಿಯನ್ನು ಹೊರಗುತ್ತಿಗೆಯ ಮೂಲಕ ನೇಮಿಸಿಕೊಳ್ಳಲಾಗಿದೆ.
ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣಾ ಸಮಿತಿಯ ಮಾಹಿತಿಯ ಪ್ರಕಾರ ಕರೋನಾ ಲಾಕ್ಡೌನ್ ಸಂದರ್ಭದಲ್ಲಿ 318 ಮಕ್ಕಳ ಮೇಲಿನ ದೌರ್ಜನ್ಯ ದ ಕೇಸು ದಾಖಲಾಗಿವೆ. ಇದು ರಾಜ್ಯವಾರು ಹೋಲಿಕೆಯಲ್ಲಿ ದಕ್ಷಿಣ ಭಾರತದಲ್ಲೇ ಅತ್ಯಧಿಕ ಪ್ರಮಾಣದ್ದಾಗಿದೆ. ತಮಿಳುನಾಡು ಎರಡನೇ ಸ್ಥಾನದಲ್ಲಿದ್ದು 224 ಪ್ರಕರಣಗಳು, ಕೇರಳದಲ್ಲಿ 181, ಆಂದ್ರಪ್ರದೇಶದಲ್ಲಿ 129, ತೆಲಂಗಾಣದಲ್ಲಿ 10 ಮತ್ತು ಪುದುಚೇರಿಯಲ್ಲಿ 7 ಪ್ರಕರಣಗಳು ದಾಖಲಾಗಿವೆ.
ಮಕ್ಕಳ ಮೇಲಿನ ದೌರ್ಜನ್ಯದಲ್ಲಿ ಲೈಂಗಿಕ ದೌರ್ಜನ್ಯ, ದೈಹಿಕ ದೌರ್ಜನ್ಯ, ಬಾಲ್ಯ ವಿವಾಹ, ಮಾನಸಿಕ ದೌರ್ಜನ್ಯ, ಬಾಲ ಕಾರ್ಮಿಕತೆ ಒಳಗೊಂಡಿವೆ. ಇಂತಹ ಪ್ರಕರಣಗಳು ಗಮನಕ್ಕೆ ಬಂದ ತಕ್ಷಣ ಮಕ್ಕಳ ಸಂಸ್ಥೆಗಳು ಅವರನ್ನು ರಕ್ಷಿಸಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಆರ್ಥಿಕ ಕಾರಣದಿಂದಲೋ, ಸಾಮಾಜಿಕ ಕಾಣದಿಂದಲೋ ವರದಿಯಾಗದೆ ಉಳಿದ ಪ್ರಕರಣಗಳು ಯಾರ ಲೆಕ್ಕಕ್ಕೂ ಸಿಗುವುದಿಲ್ಲ.
“ಸರ್ಕಾರ ಮತ್ತು ಪೊಲೀಸ್ ಇಲಾಖೆ ಹೆಚ್ಚಿನ ಗಮನವನ್ನು ಕರೋನಾ ಕಡೆ ನೀಡಿದಾಗ ಮಕ್ಕಳ ಪೀಡಕರು ಹೆಚ್ಚು ಕಾರ್ಯಶೀಲರಾದರು. ಮಕ್ಕಳ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವವರು ಈ ಸಂದರ್ಭದಲ್ಲಿ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು” ಎನ್ನುತ್ತಾರೆ ಕರ್ನಾಟಕ ಮಕ್ಕಳ ಹಕ್ಕು ರಕ್ಷಣಾ ಸಮಿತಿಯ ಮಾಜಿ ಅಧ್ಯಕ್ಷರಾದ ವೈ ಮರಿಸ್ವಾಮಿ. “ಮಕ್ಕಳಿಗೆ ಮಾನಸಿಕ ಬೆಂಬಲದ ಅಗತ್ಯವಿದೆ, ಮಕ್ಕಳ ವಿಚಾರದಲ್ಲಿ ನಾವು ಮತ್ತಷ್ಟು ಸೂಕ್ಷ್ಮರಾಗಬೇಕು” ಎಂದೂ ಅವರು ಹೇಳುತ್ತಾರೆ.