ವಿವಾದಿತ ಸಿಗಂದೂರು ದೇವಾಲಯದ ಆಡಳಿತ ನಡೆಸಿರುವ ಶರಾವತಿ ಅಭಯಾರಣ್ಯದ ಒತ್ತುವರಿಯನ್ನು ತೆರವು ಕಾರ್ಯಾಚರಣೆಗೆ ಸಾಗರ ತಾಲೂಕು ಆಡಳಿತ ಗುರುವಾರ ಚಾಲನೆ ನೀಡಿದೆ.
ಪರಿಸರ ಸೂಕ್ಷ್ಮ ಶರಾವತಿ ಕೊಳ್ಳದ ಅರಣ್ಯ ಒತ್ತುವರಿಗೆ ಸಂಬಂಧಿಸಿದಂತೆ ‘ಪ್ರತಿಧ್ವನಿ’ ಈ ಹಿಂದೆ ವಿಶೇಷ ತನಿಖಾ ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಸ್ಥಳೀಯ ಗ್ರಾಮಸ್ಥರಾದ ಕೆ ಎಸ್ ಲಕ್ಷ್ಮಿನಾರಾಯಣ ಮತ್ತು ಇತರರು, ಒತ್ತುವರಿ ತೆರವು ಕೋರಿ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ್ ಅವರ ನೇತೃತ್ವದ ವಿಭಾಗೀಯ ಪೀಠ, ದೇವಾಲಯದ ಕಟ್ಟಡ ಹೊರತುಪಡಿಸಿ ಉಳಿದ ಜಾಗವನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕು ಎಂದು ಕಳೆದ ಶುಕ್ರವಾರ ದೇವಾಲಯದ ಆಡಳಿತ ಮಂಡಳಿಗೆ ಸೂಚಿಸಿತ್ತು. ಜೊತೆಗೆ ಸಾಗರ ತಹಶೀಲ್ದಾರರು, ಏಪ್ರಿಲ್ ಒಂದರಂದು ಸ್ಥಳಕ್ಕೆ ಭೇಟಿ ನೀಡಿ, ದೇವಾಲಯ ಕಟ್ಟಡಗಳಿರುವ 6.16 ಗುಂಟೆ ಜಾಗವನ್ನು ಹೊರತುಪಡಿಸಿ ಉಳಿದ ಜಾಗವನ್ನು ಸರ್ಕಾರದ ವಶಕ್ಕೆ ಪಡೆದು, ತಂತಿ ಬೇಲಿ ನಿರ್ಮಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತ್ತು.
ಆ ಹಿನ್ನೆಲೆಯಲ್ಲಿ ಗುರುವಾರ ಸಾಗರ ತಹಶೀಲ್ದಾರ್ ಚಂದ್ರಶೇಖರ್ ಮತ್ತು ಸಿಬ್ಬಂದಿ ತುಮರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಿಗಂದೂರಿಗೆ ತೆರಳಿ, ದೇವಾಲಯದ ಕಟ್ಟಡಗಳ ವ್ಯಾಪ್ತಿಯ ಜಾಗವನ್ನು ಹೊರತುಪಡಿಸಿ ವಾಪಸು ತಮ್ಮ ವಶಕ್ಕೆ ಪಡೆಯಬೇಕಾದ ಭೂಮಿಯನ್ನು ಗುರುತಿಸಿ, ತಂತಿ ಬೇಲಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ವಾಸ್ತವವಾಗಿ ಶರಾವತಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಗೆ ಸೇರುವ ಅತಿ ಸೂಕ್ಷ್ಮ ಪರಿಸರ ಪ್ರದೇಶದ ವ್ಯಾಪ್ತಿಯಲ್ಲಿರುವ ಸಿಗಂದೂರಿನಲ್ಲಿ ಚೌಡೇಶ್ವರಿ ದೇವಿಯ ದೇವಾಲಯದ ಹೆಸರಿನಲ್ಲಿ ನೂರಾರು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ, ದೇವಾಲಯ ಕಟ್ಟಡವಷ್ಟೇ ಅಲ್ಲದೆ, ಹೋಟೆಲ್, ಲಾಡ್ಜ್, ಅಂಗಡಿಮುಂಗಟ್ಟು, ಪಾರ್ಕಿಂಗ್ ಜಾಗ, ಸರ್ಕಾರಿ ವಸತಿ ಗೃಹ, ಯಾತ್ರಿನಿವಾಸ ಸೇರಿದಂತೆ ಹಲವು ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ ಸಿಗಂದೂರಿಗೆ ಸಂಪರ್ಕ ಕಲ್ಪಿಸಲು ಭಾರೀ ಅರಣ್ಯ ನಾಶ ಮಾಡಿ ದ್ವಿಪಥ ರಸ್ಥೆ ನಿರ್ಮಿಸಲಾಗಿದೆ.
ಈ ಯಾವ ಕಾಮಗಾರಿಗಳಿಗೂ ಸರ್ಕಾರವಾಗಲೀ, ಖಾಸಗೀ ಒತ್ತುವರಿದಾರರಾಗಲೀ ಅರಣ್ಯ ಇಲಾಖೆಯಿಂದಾಗಲೀ, ಅಥವಾ ವನ್ಯಜೀವಿ ಸಂಬಂಧಿಸಿದ ಯಾವುದೇ ಸಕ್ಷಮ ಪ್ರಾಧಿಕಾರದಿಂದಾಗಲೀ ಯಾವುದೇ ರೀತಿಯ ಅನುಮತಿ, ನಿರಪೇಕ್ಷಣಾ ಪತ್ರವನ್ನಾಗಲೀ ಪಡೆದಿಲ್ಲ. ಅರಣ್ಯ ಭೂಮಿ ಅಕ್ರಮ ಒತ್ತುವರಿ ತಡೆಯುವಲ್ಲಿ ವಿಫಲವಾಗಿದ್ದ ಅರಣ್ಯ ಇಲಾಖೆ, ಸ್ಥಳೀಯರ ದೂರುಗಳ ಹೊರತಾಗಿಯೂ ಕನಿಷ್ಟ ಒತ್ತುವರಿ ತಡೆಯುವ ಅಥವಾ ತೆರವು ಮಾಡುವ ಪ್ರಯತ್ನವನ್ನು ಕೂಡ ನಡೆಸಿರಲಿಲ್ಲ.
ಆ ಹಿನ್ನೆಲೆಯಲ್ಲಿ, ನೂರಾರು ಎಕರೆ ಶರಾವತಿ ಕೊಳ್ಳದ ಅಕ್ರಮ ಒತ್ತುವರಿಯ ಕುರಿತು ದಾಖಲೆ ಸಹಿತ ಕಳೆದ ಸೆಪ್ಟೆಂಬರಿನಲ್ಲಿ ಪ್ರತಿಧ್ವನಿ ವಿಶೇಷ ತನಿಖಾ ವರದಿ ಪ್ರಕಟಿಸಿತ್ತು. ಆ ವರದಿಯ ಹಿನ್ನೆಲೆಯಲ್ಲಿಯೇ ಪರಿಸರಾಸಕ್ತ ಕೆಲವು ಸ್ಥಳೀಯರು ರಾಜ್ಯ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆ ಹಿನ್ನೆಲೆಯಲ್ಲಿ ನ್ಯಾಯಾಲಯದ ಈಗಿನ ನಿರ್ದೇಶನ ಮಹತ್ವ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಅಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡಗಳು, ರಸ್ತೆ, ಯಾತ್ರಿ ನಿವಾಸದಂತಹ ನಿರ್ಮಾಣಗಳ ಬಗ್ಗೆ ಅಧಿಕಾರಿಗಳು ಯಾವ ಕ್ರಮಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಈ ನಡುವೆ, 6.16 ಗುಂಟೆ ದೇವಾಲಯದ ಜಾಗ ಹೊರತುಪಡಿಸಿ ಉಳಿದ ಜಾಗ ವಶಕ್ಕೆ ಪಡೆಯಲು ಸೂಚಿಸಿರುವ ನ್ಯಾಯಪೀಠ, ತನ್ನ ಈ ನಿರ್ದೇಶನದ ಅರ್ಥ, ದೇವಸ್ಥಾನದ ಕಟ್ಟಡವಿರುವ ಭೂಮಿ ಸಕ್ರಮವೆಂದಲ್ಲ. ಆ ಭೂಮಿಯ ಕುರಿತು ಮುಂದಿನ ವಿಚಾರಣೆಯ ವೇಳೆ ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಮುಂದಿನ ವಿಚಾರಣೆಯನ್ನು ಏ.16ಕ್ಕೆ ನಿಗದಿ ಮಾಡಿದೆ.