ಕರೋನಾ ಹಿನ್ನೆಲೆಯಲ್ಲಿ ಅಂತರರಾಜ್ಯ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ ಎಂಬ ವದಂತಿಯನ್ನು ಅಲ್ಲಗೆಳೆದ ಕರ್ನಾಟಕ ಸರ್ಕಾರ ಅಂತರ್-ರಾಜ್ಯ ಪ್ರಯಾಣಕ್ಕೆ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದೆ, ಆದರೆ ನೆರೆಯ ಕೇರಳ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ 72 ಗಂಟೆಗಳು ಮೀರದ ಆರ್ಟಿ-ಪಿಸಿಆರ್ ನೆಗೆಟಿವ್ ಪ್ರಮಾಣಪತ್ರಗಳನ್ನು ಕಡ್ಡಾಯಗೊಳಿಸಿರುವುದಾಗಿ ತಿಳಿಸಿದೆ.
ಅದಾಗ್ಯೂ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕರ್ನಾಟಕ ಸರ್ಕಾರ ಕೇರಳದ ಪ್ರಯಾಣಿಕರಿಗೆ ನಿರ್ಬಂಧಿಸಿದೆ. ಈ ಕ್ರಮದಿಂದ ಮುಖ್ಯವಾಗಿ ವಿದ್ಯಾರ್ಥಿಗಳು, ಮೆಡಿಕಲ್ ಹಾಗೂ ಅಗತ್ಯ ಸಾಮಾಗ್ರಿ ಸಾಗಿಸುವವರಿಗೆ ತೊಂದರೆಯಾಗಿದೆ. ಪ್ರಧಾನಮಂತ್ರಿ ಕರ್ನಾಟಕ ಸರ್ಕಾರದ ಈ ಕ್ರಮದ ಕುರಿತು ಗಮನ ಹರಿಸಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕರ್ನಾಟಕ ಮತ್ತು ಕೇರಳ ನಡುವಿನ ಅಂತರರಾಜ್ಯ ಪ್ರಯಾಣವನ್ನು ಕರ್ನಾಟಕ ನಿಷೇಧಿಸಿಲ್ಲ. ಆದಾಗ್ಯೂ, ಮುನ್ನೆಚ್ಚರಿಕೆ ಕ್ರಮವಾಗಿ, ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಪ್ರಯಾಣಿಕರು ಕಡ್ಡಾಯವಾಗಿ 72 ಗಂಟೆಗಳನ್ನು ಮೀರದ ಆರ್ಟಿ-ಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿಯನ್ನು ಹೊಂದಿರಬೇಕು ಎಂದು ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆಯೂ ಇದರ ಕುರಿತು ಮಾಹಿತಿ ನೀಡಿದ್ದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ʼಕೇರಳ, ಮಹಾರಾಷ್ಟ್ರ ಅಥವಾ ಇನ್ಯಾವುದೇ ರಾಜ್ಯದ ಪ್ರಯಾಣಿಕರನ್ನು ನಿರ್ಬಂಧಿಸಿಲ್ಲ. ಬೇರೆ ರಾಜ್ಯಗಳು ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಹೊಂದಬಾರದೆಂಬ ಕಾರಣಕ್ಕೆ ನಾವು ಈ ಸ್ಪಷ್ಟನೆ ನೀಡುತ್ತಿದ್ದೇವೆ. ಅಂತರ್-ರಾಜ್ಯ ಪ್ರಯಾಣಿಕರಿಗೆ ಯಾವುದೇ ತಡೆ ಒಡ್ಡಲಾಗಿಲ್ಲ, ಒಡ್ಡುವುದಿಲ್ಲ ಎಂದು ಸಚಿವರು ತಿಳಿಸಿದ್ದರು.
ಆದರೆ ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬರುವವರಿಗೆ 72 ಗಂಟೆಗಿಂತ ಹಳೆಯದಲ್ಲದ RT-PCR ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ಈ ಕ್ರಮವನ್ನು ಕಳೆದ ವಾರವೇ ತೆಗೆದುಕೊಳ್ಳಲಾಗಿದೆ. ಬಸ್,ರೈಲು,ವಿಮಾನ ಅಥವಾ ಇನ್ಯಾವುದೇ ರೀತಿಯಲ್ಲಿ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದಿಂದ ಬರುವ ಪ್ರಯಾಣಿಕರಿಗೆ RT-PCR ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ಆ ರಾಜ್ಯಗಳಲ್ಲಿ ಕೋವಿಡ್ ಸಂಖ್ಯೆ ಗಣನೀಯವಾಗಿ ಏರುತ್ತಿರುವುದರಿಂದ ಈ ಕ್ರಮವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಸುಧಾಕರ್ ತಿಳಿಸಿದ್ದರು.