‘ರಾಜ್ಯದ ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಿಂದ ಬೌದ್ಧ, ಜೈನ ಧರ್ಮಗಳ ಪರಿಚಯ ಪಾಠಗಳನ್ನು ಕೈ ಬಿಟ್ಟಿಲ್ಲ, ಅನಗತ್ಯ ಅನಿಸುವ ಕೆಲವೊಂದು ಅಂಶಗಳನ್ನು ಮಾತ್ರ ಕೈಬಿಡಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಫೇಸ್ಬುಕ್ನಲ್ಲಿ ವಿಡೀಯೋ ಹಂಚಿಕೊಂಡ ಸುರೇಶ್ ಕುಮಾರ್, ‘ಬೌಧ ಧರ್ಮ ಮತ್ತು ಜೈನ ಧರ್ಮದ ಕುರಿತ ಪಾಠವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ತಪ್ಪು ಗೃಹಿಕೆಯಿಂದ ಈ ಸುದ್ದಿಗಳು ಬಂದಿವೆ ಎಂದಿದ್ದಾರೆ.
ಆರನೇ ತರಗತಿಯ ಸಮಾಜ ವಿಜ್ಞಾನ ಭಾಗ–1ರ ಪಾಠದ ಪೀಠಿಕಾ ರೂಪದ ವಿವರಣೆಯಲ್ಲಿ ಅನಗತ್ಯ ಮತ್ತು ಆರನೇ ತಗರತಿಯ ಮಕ್ಕಳ ವಯೋಮಾನಕ್ಕೆ ಮೀರಿದ ಪಠ್ಯಾಂಶ ಇದೆ ಎಂಬ ಅಂಶವನ್ನು ಮಂತ್ರಾಲಯದ ಸ್ವಾಮಿಜಿಗಳು ನನಗೆ ಕರೆ ಮಾಡಿ ತಿಳಿಸಿದ್ದರು. ಅದರಂತೆ ನಾನು ಪರಿಶೀಲನೆ ನಡೆಸಿದಾಗ, ಆರನೆ ತರಗತಿ ಮಕ್ಕಳಿಗೆ ಅನಗತ್ಯ ಅನ್ನುವಂತಹ ಅಂಶಗಳು ಇರುವುದು ಗಮನಕ್ಕೆ ಬಂದಿದೆ. ಅದರಂತೆ, ಅವುಗಳನ್ನು ಮಾತ್ರ ಕೈಬಿಡಲು ನಿರ್ಧರಿಸಿ ಕೈಬಿಡಲು ನಿರ್ಧರಿಸಿ ಸುತ್ತೋಲೆ ಹೊರಡಿಸಲಾಗಿದೆ. ಆದರೆ, ಭೌದ್ಧ, ಜೈನ ಧರ್ಮಗಳ ಪರಿಚಯ ಪಾಠಗಳಿಗೆ ಕೊಕ್ ನೀಡಿಲ್ಲ. ಆ ಪಾಠಗಳು ಪೂರ್ಣವಾಗಿ ಇವೆ, ಇರುತ್ತವೆ’ ಎಂದು ಅವರು ತಿಳಿಸಿದ್ದಾರೆ.
‘ಯಾವುದೇ ಧರ್ಮದ ಪರಿಚಯ ಪಾಠಗಳಿಗೆ ಕೊಕ್ ನೀಡಲಾಗಿಲ್ಲ. ಅನಗತ್ಯ ವಿವಾದ ಹುಟ್ಟುಹಾಕುವ ಅವಶ್ಯಕತೆ ಇಲ್ಲ. 2016–17ನೇ ಸಾಲಿನಲ್ಲಿ ಪಠ್ಯಪುಸ್ತಕ ಪರಿಷ್ಕರಣೆಗೊಂಡಂದಿನಿಂದ ಪಠ್ಯಗಳು ಜಾರಿಯಲ್ಲಿವೆ. ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರಬಾರದು. ವಿಶೇಷವಾಗಿ ನಮ್ಮ ಮಕ್ಕಳಲ್ಲಿ ಅನಗತ್ಯ ದ್ವೇಷದ ಭಾವನೆ ಬಿತ್ತಬಾರದು ಎನ್ನುವ ಸದುದ್ದೇಶದಿಂದ ಈ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಭೌದ್ಧ ಧರ್ಮ ಹಾಗೂ ಜೈನ ಧರ್ಮ ಅಥವಾ ಇನ್ಯಾವುದೇ ಧರ್ಮದ ಅವಹೇಳನವನ್ನು ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ’ ಎಂದೂ ಅವರು ಹೇಳಿದ್ದಾರೆ.