ಕರ್ನಾಟಕದ ಬಾಗಲಕೋಟೆಯಲ್ಲಿ ಎಥೆನಾಲ್ ಘಟಕವನ್ನು ಉದ್ಘಾಟಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕೃಷಿ ಕಾಯ್ದೆಗಳ ಗುಣಗಾನ ಮಾಡಿದ್ದಾರೆ. ಮೂರು ಕೃಷಿ ಕಾಯ್ದೆಗಳು ದೇಶದ ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಸಹಕಾರಿ ಎಂದು ಹೇಳಿದ್ದಾರೆ.
“ನರೇಂದ್ರ ಮೋದಿ ಸರ್ಕಾರ ರೈತರ ಹಿತವನ್ನು ಕಾಪಾಡುವಲ್ಲಿ ಬದ್ದವಾಗಿದೆ. ಮೂರು ಕೃಷಿ ಕಾಯ್ದೆಗಳು ರೈತರ ಆದಾಯವನ್ನು ಮತ್ತಷ್ಟು ಹೆಚ್ಚಿಸಲಿವೆ. ಈಗ ರೈತರು ತಮ್ಮ ಬೆಳೆಯನ್ನು ದೇಶದ ಅಥವಾ ಪ್ರಪಂಚದ ಯಾವ ಮೂಲೆಯಲ್ಲಿಯೂ ಮಾರಾಟ ಮಾಡಬಹುದು,” ಎಂದಿದ್ದಾರೆ.
ಕೇಂದ್ರ ಸರ್ಕಾರದಿಂದ ರೈತರಿಗಾಗಿ ರೂಪಿಸಿರುವ ಯೋಜನೆಗಳ ಕುರಿತಾಗಿ ಮಾತನಾಡಿದ ಶಾ ಅವರು, ಕಿಸಾನ್ ಸಮ್ಮಾನ್ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೊಳಿಸಿತ್ತು. ಕಾಂಗ್ರೆಸ್ ಸರ್ಕಾರವಿದ್ದಾಗ ರೈತರಿಗೆ ಕೇವಲ 6 ಲಕ್ಷ ಕOಟಿಯಷ್ಟು ಸಾಲ ನೀಡಿತ್ತು. ನಾವು 13 ಲಕ್ಷ ಕೋಟಿ ಕೊಟ್ಟಿದ್ದೇವೆ. ಎಪಿಎಂಸಿಗಳ ಡಿಜಿಟಲೀಕರಣಕ್ಕೂ ಸರ್ಕಾರ ಮುಂದಾಗಿದೆ, ಎಂದು ಹೇಳಿದ್ದಾರೆ.
ಇನ್ನು ಉದ್ಘಾಟನೆಗೊಂಡ ಎಥನಾಲ್ ಘಟಕದ ಕುರಿತಾಗಿ ಮಾತನಾಡಿದ ಅವರು, ಈ ಘಟಕದಿಂದಾಗಿ ಕಬ್ಬು ಬೆಳೆಗಾರರಿಗೆ ಉತ್ತಮ ಪ್ರಯೋಜನವಾಗಲಿದೆ. ಸರ್ಕಾರವು ಪೆಟ್ರೋಲ್ ಬೆಲೆಯನ್ನು ಇಳಿಸಲು ಎಥನಾನ್ ಅನ್ನು ಬೆಂಬಲಿಸುತ್ತಿದೆ. ಇದಕ್ಕಾಗಿ ಎಥನಾಲ್ ಮೇಲಿನ ಜಿಎಸ್ಟಿಯನ್ನು 18% ದಿಂದ 5%ಕ್ಕೆ ಇಳಿಸಲಾಗಿದೆ, ಎಂದರು.
ಅಮಿತ್ ಶಾರನ್ನು ಸರ್ದಾರ್ ಪಟೇಲರಿಗೆ ಹೋಲಿಸಿದ ಸಿಎಂ ಬಿಎಸ್ವೈ:
ಕಾರ್ಯಕ್ರಮದಲ್ಲಿ ಗೃಹ ಮಂತ್ರಿ ಅಮಿತ್ ಶಾರನ್ನು ಸರ್ದಾರ್ ವಲ್ಲಭಭಾಯ್ ಪಟೇಲರಿಗೆ ಹೋಲಿಸಿರುವ ಸಿಎಂ ಯಡಿಯೂರಪ್ಪನವರು, ಸರ್ದಾರ್ ಪಟೇಲರ ನಂತರ ಇಷ್ಟು ಎತ್ತರಕ್ಕೆ ಬೆಳೆದ ಏಕೈಕ ನಾಯಕ ಅಮಿತ್ ಶಾ ಎಂದು ಹಾಡಿ ಹೊಗಳಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಜೊತೆಯಾಗಿ ದೇಶದಲ್ಲಿ ಹೊಸ ಕ್ರಾಂತಿಯನ್ನು ತರುತ್ತಿದ್ದಾರೆ. ಕರ್ನಾಟಕದಲ್ಲಿ ಮುಂದಿನ ವಿಧಾಣಸಭಾ ಚುನಾವಣೆಯಲ್ಲಿ ಬಿಜೆಪಿ 150 ಸೀಟುಗಳನ್ನು ಗೆಲ್ಲಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.