ಕಳೆದ ಕೆಲವು ದಿನಗಳಿಂದ ಕನ್ನಡ ಬೌದ್ಧಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ಅನುಭವ ಮಂಟಪ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ಕುರಿತಂತೆ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಬಸವಣ್ಣನವರ ಹೋರಾಟವೇ ಸನಾತನ ಧರ್ಮದ ವಿರುದ್ಧ, ಆದರೆ ಯಡಿಯೂರಪ್ಪ ಅವರು ಆರ್.ಎಸ್.ಎಸ್ ನವರ ಮುಲಾಜಿಗೆ ಒಳಗಾಗಿ ಅನುಭವ ಮಂಟಪ ಸ್ಥಾಪನೆ ಮೂಲಕ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ಮಾಡುತ್ತೇವೆ ಅಂತ ಹೇಳುತ್ತಿದ್ದಾರೆ. ಅನುಭವ ಮಂಟಪ ಬಸವ ತತ್ವವನ್ನು ಸಾರುವಂತಿರಬೇಕೇ ಹೊರತು, ಬಸವಣ್ಣನವರೇ ವಿರೋಧಿಸಿದ ಸನಾತನ ಚಿಂತನೆಗಳನ್ನಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಿಸಿದ್ದಾರೆ.
ಸನಾತನ ಧರ್ಮದಲ್ಲಿದ್ದ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ತಾರತಮ್ಯ ಮುಂತಾದ ಅನಿಷ್ಟ ಪದ್ಧತಿಗಳ ವಿರುದ್ಧ ಸಿಡಿದೆದ್ದು ಅನುಭವ ಮಂಟಪ ಸ್ಥಾಪಿಸಿ, ಅಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸಿ, ಮನುಕುಲಕ್ಕೆ ಸಮಾನತೆಯನ್ನು ಸಾರಿದವರು ಜಗಜ್ಯೋತಿ ಬಸವೇಶ್ವರರು ಎಂದು ಅವರು ಹೇಳಿದ್ದಾರೆ.
ಬಿಜೆಪಿಯವರ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಹಿಂದಿನ ಉದ್ದೇಶ ಸಂವಿಧಾನ ಬದಲಾವಣೆ ಮತ್ತು ವರ್ಣವ್ಯವಸ್ಥೆಯ ಮರುಸ್ಥಾಪನೆಯಾಗಿದೆ. ಸಮಾಜದಲ್ಲಿ ತಾರತಮ್ಯ ಜೀವಂತವಾಗಿದ್ದರೆ ಮತಧ್ರುವೀಕರಣ ಸಾಧ್ಯ ಎಂಬುದು ಬಿಜೆಪಿಯ ಲೆಕ್ಕಾಚಾರ ಎಂದು ಅವರು ಆರೋಪಿಸಿದ್ದಾರೆ.
ಇದರ ಹಿಂದೆ ಆರ್ ಎಸ್ ಎಸ್ ಕುತಂತ್ರ ಇದೆ. ನಾವು ಗಾಂಧಿ, ಲೋಹಿಯಾ ಅವರ ಹಿಂದುತ್ವದ ಪ್ರತಿಪ್ರಾದಕರು. ಆದರೆ ಬಿಜೆಪಿಯವರು ಸಾವರ್ಕರ್ ಹಿಂದುತ್ವ ಪ್ರತಿಪಾದನೆ ಮಾಡುತ್ತಿದ್ದಾರೆ. ಅದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಎಂದು ಅವರು ಹೇಳಿದ್ದಾರೆ.
ಬಸವಣ್ಣನವರ ಚಿಂತನೆಗಳ ಮರುಸ್ಥಾಪನೆಗಾಗಿ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಬೇಕೆಂದು ಗೊ.ರು ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದು, ಅನುಭವ ಮಂಟಪ ನಿರ್ಮಾಣಕ್ಕೆ ಮುನ್ನುಡಿ ಬರೆದದ್ದು ನಮ್ಮ ಸರ್ಕಾರ. ಆದರೆ ಈಗ ಯಡಿಯೂರಪ್ಪ ಅವರು ನಿರ್ಮಾಣ ಮಾಡಲು ಹೊರಟಿರುವ ಅನುಭವ ಮಂಟಪ ಬಸವ ತತ್ವಗಳಿಗೆ ವಿರುದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಸವಣ್ಣನನ್ನು RSS ಕಡೆಗೆ ಸೆಳೆಯುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ ಎಂದು ಸ್ವತಂತ್ರ ಲಿಂಗಾಯತ ಧರ್ಮ ಹೋರಾಟಗಾರ, ಮಾಜಿ ಐಎಎಸ್ ಅಧಿಕಾರಿ ಎಸ್ ಎಂ ಜಾಮದಾರ್ ಕೂಡಾ ಹೇಳಿದ್ದರು