ಬಿಹಾರ ಚುನಾವಣೆಯಲ್ಲಿ ರಾಜಕೀಯ ನಾಯಕರ ಮಾತಿನ ಬಿರುಸು ಮತ್ತಷ್ಟು ಮುಂದುವರೆದಿದೆ. ಅದರಲ್ಲೂ, ಎನ್ಡಿಎ ಮೈತ್ರಿಕೂಟದ ಒಳಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಬಿಹಾರ ಚುನಾವಣೆಯ ಕಾವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಾದೇಶಿಕ ಪಕ್ಷವಾದ ಎಲ್ಜೆಪಿ, ಈಗ ಬಿಹಾರ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದು, ಬಿಜೆಪಿಯ ರಾಷ್ಟ್ರೀಯ ನಾಯಕರಿಗೇ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ.
ಜೆಡಿಯು ಮತ್ತು ಎಲ್ಜೆಪಿ ನಡುವಿನ ವೈಮನಸ್ಯದಿಂದಾಗಿ ಬಿಹಾರ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ತೊರದು ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿರುವ ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಈಗ ಬಿಜೆಪಿ ನಾಯಕರಿಗೆ ಆಯ್ಕೆ ನೀಡಿದ್ದಾರೆ. ನಿತೀಶ್ ಕುಮಾರ್ ಮುಖ್ಯಮಂತ್ರಿ ಆದಲ್ಲಿ ಎನ್ಡಿಎ ಮೈತ್ರಿಕೂಟದಿಂದ ಸಂಪೂರ್ಣವಾಗಿ ಹೊರಬರುವುದು ಖಚಿತ ಎಂದು ಅವರು ಹೇಳಿದ್ದಾರೆ.
ಚಿರಾಗ್ ಪಾಸ್ವಾನ್ ಅವರನ್ನು ಬಿಜೆಪಿ ನಾಯಕರು ʼಮತ ವಿಭಜಕʼ ಎಂದು ಜರೆದಿದ್ದರು. ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಹೆಸರಿನಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟದ ಮತಗಳನ್ನು ಒಡೆಯುವ ಪ್ರಯತ್ನ ಚಿರಾಗ್ ಪಾಸ್ವನ್ ಮಾಡುತ್ತಿದ್ದಾರೆ ಎಂದು ಬಿಹಾರದ ಪ್ರಮುಖ ನಾಯಕರು ಹೇಳಿಕೆ ನೀಡಿದ್ದರು.
ಇದರಿಂದಾಗಿ ಕುಪಿತಗೊಂಡಿರುವ ಚಿರಾಗ್ ಪಾಸ್ವಾನ್ “ಬಿಜೆಪಿ ನಾಯಕರಿಂದ ಇಂತಹ ಹೇಳಿಕೆಯನ್ನು ನಾನು ನಿರೀಕ್ಷಿಸಿರಲಿಲ್ಲ. ನಿತಿಶ್ ಕುಮಾಋ ಅವರನ್ನು ಚುನಾವಣೆಯಲ್ಲಿ ಸೋಲಿಸುವುದು ನನ್ನ ಪ್ರಮುಖ ಧ್ಯೇಯ. ಒಂದು ವೇಳೆ ನಿತೀಶ್ ಕುಮಾರ್ ಅವರು ಮತ್ತೆ ಮುಖ್ಯಮಂತ್ರಿಯಾದಲ್ಲಿ, ನಾನು ಎನ್ಡಿಎ ಬಿಟ್ಟು ಹೊರಗೆ ಬಂದು ವಿರೋಧ ಪಕ್ಷದ ಸ್ಥಾನದಲ್ಲಿ ಕೂರುತ್ತೇನೆ,” ಎಂದು ಕಟುವಾಗಿ ನುಡಿದಿದ್ದಾರೆ.
ಈ ಹಿಂದೆ ನಾನು ಪ್ರಧಾನಿ ಮೋದಿಯವರಿಗೆ ಹನುಮಂತನಿದ್ದಂತೆ, ನನ್ನ ಹೃದಯ ಸೀಳಿದರೆ ಪ್ರಧಾನಿ ಮೋದಿ ಕಾಣಿಸುತ್ತಾರೆ ಎಂದು ಚಿರಾಗ್ ಹೇಳಿದ್ದರು. ಇದನ್ನು ಕೂಡಾ ಖಂಡಿಸಿದ್ದ ಬಿಜೆಪಿ ನಾಯಕರು, ಚಿರಾಗ್ ಪಾಸ್ವಾನ್ ಮತದಾರರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ಇಷ್ಟು ಮಾತ್ರವಲ್ಲದೇ, ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿಯವರ ಹೆಸರು ಹಾಗೂ ಅವರ ಭಾವ ಚಿತ್ರವನ್ನು ಎಲ್ಜಿಪಿ ನಾಯಕರು ಬಳಸಿಕೊಳ್ಳಲು ಅವಕಾಶ ನೀಡಬಾರದು ಎಂದು ನಿಜೆಪಿಯವರು ಚುನಾವಣಾ ಆಯೋಗಕ್ಕೆ ಪತ್ರವನ್ನು ಕೂಡಾ ಬರೆದಿದ್ದಾರೆ.
ಬಿಜೆಪಿಯಿಂದ ಟಿಕೆಟ್ ವಂಚಿತರಾಗಿದ್ದ ಒಟ್ಟು ಒಂಬತ್ತು ಜನ ನಾಯಕರು ಎಲ್ಜೆಪಿ ಸೇರಿದ್ದಾರೆ. ಚಿರಾಗ್ ಪಾಸ್ವಾನ್ ಅವರ ʼಬಿಹಾರ್ ಮೊದಲು, ಬಿಹಾರಿ ಮೊದಲುʼ ಎಂಬ ಘೋಷ ವಾಕ್ಯವನ್ನು ಜಾರಿಗೆ ತರಲು ಇದು ಸಕಾಲ ಎಂದು ಅವರೆಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಈ ಒಂಬತ್ತು ಜನರನ್ನು ಬಿಜೆಪಿಯು ಪ್ರಾಥಮಿಕ ಸದಸ್ಯತ್ವದಿಂದ ಕಿತ್ತೊಗೆದಿದ್ದು, ಬಂಡಾಯಗಾರರಿಗೆ ಖಡಕ್ ಸಂದೇಶ ರವಾನಿಸಿದೆ.
ಎಲ್ಜೆಪಿಯು ಈ ಬಾರಿ ಚುನಾವಣೆಯಲ್ಲಿ ಒಟ್ಟು 143 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಹೆಚ್ಚಿನ ಕಡೆಗಳಲ್ಲಿ ಜೆಡಿಯು ಅದರ ನಿಕಟ ಪ್ರತಿಸ್ಪರ್ಧಿಯಾಗಿದೆ. ಕೇಂದ್ರದಲ್ಲಿ ಈಗಲೂ ಎನ್ಡಿಎ ಮೈತ್ರಿಕೂಟದಲ್ಲಿ ಸಕ್ರಿಯವಾಗಿರುವ ಎಲ್ಜೆಪಿಯು, ಒಂದು ವೇಳೆ ನಿತೀಶ್ ಸಿಎಂ ಆದಲ್ಲಿ ಕೇಂದ್ರದಲ್ಲಿಯೂ ಬೆಂಬಲವನ್ನು ಹಿಂಪಡೆಯುವ ನಿರ್ಧಾರ ತಾಳಿದೆ.
ಬಿಜೆಪಿ ಹಾಗೂ ಎಲ್ಜೆಪಿ ನಡುವಿನ ತಿಕ್ಕಾಟ ಎನ್ಡಿಎ ಮೈತ್ರಿಕೂಟವನ್ನು ನಿಜಕ್ಕೂ ಗೊಂದಲಕ್ಕೆ ತಳ್ಳುತ್ತಿದೆ. ಇದರಿಂದಾಗಿ ಮತದಾರರು ಕೂಡಾ ಸಂಪೂರ್ಣವಾಗಿ ಗೊಂದಲದಲ್ಲಿದ್ದು, ಈ ಪರಿಸ್ಥಿತಿ ಚುನಾವಣಾ ಫಲಿತಾಂಶದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಈ ಪರಿಸ್ಥಿತಿಯನ್ನು ಆರ್ಜೆಡಿ ಮತ್ತು ಕಾಂಗ್ರೆಸ್ ನಾಯಕರು ಯಾವ ರೀತಿ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ಸಂಪೂರ್ಣ ಚುನಾವಣೆಯ ಫಲಿತಾಂಶ ನಿರ್ಧಾರವಾಗಲಿದೆ.