ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಮುದಾಯದ ಲೇಖಕರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ, ಹಾಗೂ ಪ್ರಶಸ್ತಿ ಸ್ವೀಕರಿಸುವ ಸಾಧಕರ ಸಾಲಿನಲ್ಲೂ ಓರ್ವ ಮುಸ್ಲಿಂ ಶಾಸಕರೂ ಇಲ್ಲದಿರುವುದು ಕನ್ನಡದ ಚಿಂತಕ, ಸಾಹಿತಿಗಳ ಆಕ್ಷೇಪಕ್ಕೆ ಕಾರಣವಾಗಿದೆ. ಮಹೇಶ್ ಜೋ಼ಷಿ ಅವರು ಕಸಾಪದ ಅಧ್ಯಕ್ಷರಾದಂದಿನಿಂದ ಇಂತಹ ಒಂದಿಲ್ಲೊಂದು ವಿವಾದಗಳು ಏಳುತ್ತಲೇ ಇವೆ. ಜೋಷಿ ಕಸಾಪದ ಅಧ್ಯಕ್ಷರಾಗಲು ಯೋಗ್ಯರಲ್ಲ ಎಂಬ ಆರೋಪಕ್ಕೆ ಪೂರಕವೆನಿಸುವಂತೆ ಜೋಷಿ ಅವರ ಇತ್ತೀಚಿನ ನಡೆವಳಿಕೆಗಳು ಇವೆ ಎಂಬ ಆರೋಪಗಳೂ ಕೇಳಿ ಬರತೊಡಗಿವೆ.
ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರನ್ನು, ಸಾಧಕರನ್ನು ಕಡೆಗಣಿಸಿರುವ ಕುರಿತು ಆಕ್ಷೇಪ ಎತ್ತಿರುವ ಮಾಜಿ ಜೆಎನ್ಯು ಪ್ರೊಫೆಸರ್, ಕನ್ನಡ ಸಂಸ್ಕೃತಿ ಚಿಂತಕ ಪುರುಷೋತ್ತಮ ಬಿಳಿಮಲೆ ಅವರು, ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಮುಸ್ಲಿಂ ಲೇಖಕರನ್ನು ಹೊರಗಿಟ್ಟಿರುವುದು ಆಕಸ್ಮಿಕ ಏನೂ ಅಲ್ಲ. ನೆಹರೂ ಅಂಥ ಲೇಖಕರನ್ನೇ ಹೊರಗಿಟ್ಟವರಿವರು. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ತನ್ನ ನಿಲುವನ್ನು ನೇರವಾಗಿಯೇ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ, ಕಸಾಪದ ಈ ನಿಲುವಿನ ಸಮ್ಮೇಳನಕ್ಕೆ ಪರ್ಯಾಯವಾಗಿ ಕನ್ನಡಿಗರನ್ನು ವಿಶಾಲವಾಗಿ ಒಳಗೊಳ್ಳುವ ಸಮ್ಮೇಳನವನ್ನು ಮಾಡಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು.
ಬಿಳಿಮಲೆ ಅವರ ಪ್ರಸ್ತಾಪಕ್ಕೆ ವ್ಯಾಪಕವಾದ ಬೆಂಬಲ ವ್ಯಕ್ತವಾಗಿದ್ದು, ಅವರು ಫೇಸ್ಬುಕ್ ಪೋಸ್ಟ್ ಹಾಕಿದ ಕೆಲವು ಗಂಟೆಗಳಲ್ಲಿ ಕನಿಷ್ಟ ಆರು ನೂರಕ್ಕೂ ಅಧಿಕ ಮುಸ್ಲಿಂ ಲೇಖಕರನ್ನು ವಿವಿಧ ಔಲಯದ ಓದುಗರು ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ ʼಜನ ಸಾಹಿತ್ಯ ಸಮ್ಮೇಳನʼದ ಹೆಸರಿನಲ್ಲಿ ಬೆಂಗಳೂರಿನಲ್ಲಿ ಪರ್ಯಾಯವಾಗಿ ಸಮ್ಮೇಳನ ನಡೆಸುವ ಬಗ್ಗೆಯೂ ಯೋಜನೆ ರೂಪುರೇಷೆಗೊಂಡಿದ್ದು, ಜನ ಸಾಹಿತ್ಯ ಸಮ್ಮೇಳನಕ್ಕೆ ಹಲವಾರು ಸಾಹಿತಿಗಳು, ಕವಿ, ಚಿಂತಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ತೇಪೆ ಹಚ್ಚಲು ಬಂದ ಕಸಾಪ ಅಧ್ಯಕ್ಷ ಜೋಷಿ ಅವರು ಬಿಳಿಮಲೆ ವಿರುದ್ಧ ಪೆಂಡಾಲ್ ಗುತ್ತಿಗೆಯ ಬಗ್ಗೆ ಆರೋಪ ಹೊರಿಸಿ ನಗೆಪಾಟಲಿಗೀಡಾದರು. ಬಿಳಿಮಲೆ ಅವರು ಪರಿಚಿತ ಮುಸ್ಲಿಂ ವ್ಯಕ್ತಿ ಒಬ್ಬರಿಗೆ ಸಮ್ಮೇಳನದ ಪೆಂಡಾಲ್ ಹಾಕಿಸುವ ಗುತ್ತಿಗೆ ನೀಡಬೇಕೆಂದು ಶಿಫಾರಸ್ಸು ಮಾಡಿದರೆಂದೂ ʼಅದು ಜಿಲ್ಲಾಡಳಿತದ ವ್ಯಾಪ್ತಿಗೆ ಬರುತ್ತದೆ. ಅದು ನನ್ನ ಕ್ಷೇತ್ರವಲ್ಲ’ ಎಂದು ಹೇಳಿದ್ದೆ. ಇದನ್ನೇ ನೆಪವಾಗಿಟ್ಟುಕೊಂಡು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಜೋಶಿ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಳಿಮಲೆ ಅವರು, ಪೆಂಡಾಲ್ ಬಗ್ಗೆ ಹೇಳಿದ ಮಾತುಗಳು ಅತ್ಯಂತ ಹಾಸ್ಯಾಸ್ಪದವಾದದ್ದು. ಅವರದನ್ನು ಸಾಬೀತು ಪಡಿಸಬೇಕು. ಸಾಬೀತು ಪಡಿಸಲಾಗದಿದ್ದರೆ ಪರಿಷತ್ತಿನ ಅಧ್ಯಕ್ಷ ಪೀಠಕ್ಕೆ ಅವರು ಯೋಗ್ಯರಲ್ಲ ಎಂದೇ ಭಾವಿಸಬೇಕಾಗುತ್ತದೆ. ಸಾರ್ವಜನಿಕ ಸಂಘ ಸಂಸ್ಥೆಗಳ ಜವಾಬ್ದಾರಿ ಹೊತ್ತವರು ಲಜ್ಜೆಗೆಟ್ಟು ಯಾವ ನೀಚ ಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಮಹೇಶ್ ಜೋಷಿಯವರ ಮಾತುಗಳೇ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಷಿಯವರು ನನ್ನ ಮೇಲೆ ಮಾಡಿದ ಆರೋಪಗಳನ್ನು ಗಮನಿಸಿದೆ. ಪರಿಷತ್ತಿನ ಕಾರ್ಯ ವಿಧಾನಗಳ ಬಗ್ಗೆ ನಾನು ಅಸಮಾಧಾನ ಸೂಚಿಸಿದ್ದು ನಿಜ. ಹಾವೇರಿ ಸಮ್ಮೇಳನದಲ್ಲಿ ಎಲ್ಲ ವರ್ಗಗಳಿಗೆ ಸರಿಯಾದ ಪ್ರಾತಿನಿಧ್ಯ ದೊರಕಿಲ್ಲ ಎಂಬ ಅನೇಕರ ಮಾತಿಗೆ ನಾನೂ ಧನಿಗೂಡಿಸಿದ್ದೇನೆ. ಇದು ಪ್ರಜಾಪ್ರಭುತ್ವ ನನಗೆ ತಂದುಕೊಟ್ಟ ಹಕ್ಕು, ಮತ್ತು ಹೀಗೆ ಬರೆಯುವುದು ನನ್ನ ಕರ್ತವ್ಯ ಎಂದು ನಾನು ನಂಬಿದ್ದೇನೆ. ಇದರ ಹೊರತಾಗಿ ನಾನು ಜೋಷಿಯವರ ಸಹಿತವಾಗಿ ಯಾರ ವೈಯಕ್ತಿಕ ವಿಚಾರಗಳ ಬಗ್ಗೆಯೂ ಬರೆದಿಲ್ಲ. ಅವರು ಹಾವೇರಿ ಸಮ್ಮೇಳನಕ್ಕೆ ನನ್ನನ್ನು ಕರೆದಿದ್ದರು. ನನ್ನದೇ ಕಾರಣಗಳಿಗಾಗಿ ಬರಲಾಗುವುದಿಲ್ಲ ಎಂದು ಹೇಳಿದ್ದೇನೆ. ಅದಕ್ಕೆ ಅವರು ಇಷ್ಟೊಂದು ಆರೋಪಗಳನ್ನು ಮಾಡುವ ಅಗತ್ಯ ಇರಲಿಲ್ಲ ಎಂದು ಬಿಳಿಮಲೆ ಹೇಳಿದ್ದಾರೆ.ನಾನು ಮತ್ತು ನನ್ನಂಥ ಹಲವರು ಪರಿಷತ್ತಿನ ಬಗ್ಗೆ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಡಲು ಗೊತ್ತಿಲ್ಲದ ಜೋಷಿಯವರು ವೈಯಕ್ತಿಕವಾಗಿ ಮಾನಹಾನಿಯಾಗುವಂಥ ಮಾತುಗಳನ್ನು ಆಡಿದ್ದಾರೆ. ಈ ಮಾತುಗಳ ಮೂಲಕ ಅವರು ಸಾಹಿತ್ಯ ಪರಿಷತ್ತು ಇವತ್ತು ಎಂಥವರ ಕೈಯಲ್ಲಿದೆ ಎಂಬುದನ್ನು ಮತ್ತೆ ಸಾರ್ವಜನಿಕರಿಗೆ ತಿಳಿಯಪಡಿಸಿದ್ದಾರೆ. ಇಂಥದ್ದರ ವಿರುದ್ಧವಾಗಿ ಪ್ರತ್ಯೇಕ ಸಮ್ಮೇಳನಗಳನ್ನು ಸಂಘಟಿಸಿಕೊಳ್ಳಬೇಕಾದ್ದು ಇವತ್ತಿನ ತುರ್ತು ಅಗತ್ಯ ಎಂದು ಬಿಳಿಮಲೆ ಹೇಳಿದ್ದಾರೆ.
ವಿವಾದ ಬಿರುಸು ಪಡೆದುಕೊಳ್ಳುತ್ತಿದ್ದಂತೆ ಕವಿ ಚಾಂದ್ ಪಾಶಾ ಅವರು, ಸಮುದಾಯವನ್ನು ದೂರ ಇಟ್ಟ ಸಮ್ಮೇಳನ ಸೂತಕವಿದ್ದಂತೆ ಎಂದು ಹೇಳಿ ಕವಿಗೋಷ್ಠಿಯಿಂದ ಹಿಂದೆ ಸರಿದರು. ಅದರ ಬೆನ್ನಲ್ಲೇ, 7 ಜನವರಿಯಂದು ನಡೆಯಬೇಕಿದ್ದ ಕವಿಗೋ಼ಟಿಯ ಅಧ್ಯಕ್ಷತೆ ವಹಿಸಬೇಕಿದ್ದ ಸಾಹಿತಿ ಎಚ್ ಆರ್ ಸುಜಾತಾ ಅವರು ಹಿಂದೆ ಸರಿದಿದ್ದು, “ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ರೀತಿಯ ತಾರತಮ್ಯ ಇರಬಾರದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ. ಇಂಥ ತಾರತಮ್ಯದಿಂದ ಕೂಡಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುವುದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾನು ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿಲ್ಲ ಎನ್ನುವ ವಿಷಯವನ್ನು ವಿನಮ್ರತೆಯಿಂದ ನಿಮ್ಮಲ್ಲಿ ನಿವೇದಿಸಿ ಕೊಳ್ಳುತ್ತಿದ್ದೇನೆ.” ಎಂದು ಹೇಳಿದ್ದಾರೆ.
ಇವರು ಮಾತ್ರವಲ್ಲದೆ, ಕನ್ನಡದ ಹಲವು ಚಿಂತಕರು, ಲೇಖಕರು, ಸಾಹಿತಿಗಳು ಪತ್ರಕರ್ತರು ಕಸಾಪ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದರೂ ದಾರ್ಷ್ಟ್ಯದಿಂದ ವರ್ತಿಸಿದ ಜೋಷಿ ಅವರು ಕಲೆ ಮತ್ತು ಪ್ರತಿಭೆಯನ್ನು ಜಾತಿ–ಧರ್ಮದ ದುರ್ಬೀನುನಿಂದ ನೋಡಬಾರದು. ಮನೋರೋಗದಿಂದ ನರಳುತ್ತಿರುವ ಪ್ರಗತಿಪರ ಚಿಂತಕರು ಅದರಿಂದ ಹೊರಬರಬೇಕು ಎಂದು ಹೇಳಿಕೆ ನೀಡಿ ಸಾಗ ಹಾಕಿದರು ಪ್ರಯತ್ನಿಸುತ್ತಿದ್ದಾರೆ. ಕಸಾಪಗೆ ಅಂಟಿರುವ ಜಿಡ್ಡುಗಳು ಕರಗಿ ತಿಳಿಯಾಗಲಿ. ಕಸಾಪ ಎಲ್ಲರನ್ನೂ ಒಳಗೊಳ್ಳುವ ಸಂಸ್ಥೆಯಾಗಲಿ, ಕುವೆಂಪು ಅವರ ವಿಶ್ವಮಾನವ ತತ್ವವನ್ನು ಅಳವಡಿಸಿಕೊಂಡು ವಿಶಾಲವಾಗಲಿ ಎನ್ನುವುದು ಕನ್ನಡಿಗರ ಸದ್ಯದ ಆಶಯ.!