ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಯ ಅಂತಿಮ ನವೀಕೃತ ಆವೃತ್ತಿಯನ್ನು ಪ್ರಕಟಿಸಿದ ಹತ್ತೊಂಬತ್ತು ತಿಂಗಳ ನಂತರ ತಮ್ಮ ಹೆಸರನ್ನು ನಮೂದಿಸುವಲ್ಲಿ ವಿಫಲರಾದ ಅರ್ಜಿದಾರರಿಗೆ ನಿರಾಕರಣೆ (rejection slip) ಸ್ಲಿಪ್ಗಳನ್ನು 'ತಕ್ಷಣ' ನೀಡುವಂತೆ ಗೃಹ ವ್ಯವಹಾರ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಹಿಂದಿನ ಎಂಎಚ್ಎ (Ministry of Home Affairs) ಅಧಿಸೂಚನೆಯ ಪ್ರಕಾರ, ನಿರಾಕರಣೆ ಸ್ಲಿಪ್ಗೆ ಪ್ರತಿಕ್ರಿಯಿಸಲು ಅರ್ಜಿದಾರರಿಗೆ ನೀಡಲಾದ ಸಮಯದ ಮಿತಿಯನ್ನು 60 ದಿನಗಳಿಂದ 120 ದಿನಗಳಿಗೆ ಹೆಚ್ಚಿಸಲಾಗಿತ್ತು. ತಿರಸ್ಕರಿಸಲ್ಪಟ್ಟ ಅರ್ಜಿದಾರರು, ಪೌರತ್ವ ಸ್ಥಾನಮಾನವನ್ನು ನಿರ್ಧರಿಸಲು ಅಸ್ಸಾಂನಲ್ಲಿ ಅಸ್ತಿತ್ವದಲ್ಲಿರುವ ಅರೆ-ನ್ಯಾಯಾಂಗ ಸಂಸ್ಥೆಗಳಾದ ವಿದೇಶಿಯರ ನ್ಯಾಯಮಂಡಳಿ (foreigners tribunals) ಗಳಲ್ಲಿ ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕು. ಈ ನ್ಯಾಯಮಂಡಳಿಗಳಲ್ಲಿ ತಿರಸ್ಕರಿಸಿದವರು ಉನ್ನತ ನ್ಯಾಯಾಲಯಗಳನ್ನು ಸಂಪರ್ಕಿಸಬಹುದು ಎಂದು ಸೂಚನೆ ನೀಡಲಾಗಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೂರು ಹಂತಗಳ ವಿಧಾನಸಭಾ ಚುನಾವಣೆಯ ನಡೆಯುತ್ತಿರುವುದರ ಮಧ್ಯೆಯೇ ರಾಜ್ಯ ಸರ್ಕಾರಕ್ಕೆ ಇತ್ತೀಚಿನ ಎಂಎಚ್ಎ ಸೂಚನೆ ಬಂದಿದೆ. ಆಗಸ್ಟ್ 2019 ರಿಂದಲೂ ಬಾಂಗ್ಲಾದೇಶದ ಗಡಿಯಲ್ಲಿರುವ 19 ಲಕ್ಷಕ್ಕೂ ಹೆಚ್ಚು ನಿವಾಸಿಗಳ ಪೌರತ್ವವು ಅನಿಶ್ಚಿತತೆಯಿಂದ ಕೂಡಿದ್ದು, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುನಿಲ್ ಅರೋರಾ ಅವರು ವಿಧಾನಸಭಾ ಚುನಾವಣೆಯಲ್ಲಿ ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿದ್ದರೆ ಪೌರತ್ವ ನೋಂದಣಿಯಿಂದ ಹೊರಗಿರುವವರು ಸಹ ಮತ ಚಲಾಯಿಸಲು ಸಾಧ್ಯವಾಗುತ್ತದೆ ಎಂದು ಜನವರಿಯಲ್ಲಿ ಸ್ಪಷ್ಟಪಡಿಸಿದ್ದರು.
ಕಳೆದ ವಾರ ಗುವಾಹಟಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ‘ಎಲ್ಲ ಸರಿಯಿರುವ ಎನ್ಆರ್ಸಿ’ ಜಾರಿಗೆ ಬರುತ್ತದೆ ಎಂದು ಭರವಸೆ ನೀಡಿತ್ತು.
ಬಿಜೆಪಿ ಹಿರಿಯ ನಾಯಕರ ಪ್ರಕಾರ ಪ್ರಸ್ತುತ ಎನ್ಆರ್ಸಿಯು ಮುಸ್ಲಿಮರಿಗಿಂತ ಹೆಚ್ಚಿನ ಬಂಗಾಳಿ ಹಿಂದೂಗಳನ್ನು ಒಳಗೊಂಡಿದೆ. ಆದ್ದರಿಂದ ಬಿಜೆಪಿ ಅದನ್ನು ತಿರಸ್ಕರಿಸುತ್ತದೆ. ಪಕ್ಷದ ಹಲವು ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡಿರುವಂತೆ ಬಂಗಾಳಿ ಮೂಲದ ಮುಸ್ಲಿಮರು ಮಾತ್ರ 'ಅಕ್ರಮ ವಲಸಿಗರು'.
ಅಸ್ಸಾಮಿನ ಬಂಗಾಳಿ ಹಿಂದೂಗಳು ಕಳೆದ ಕೆಲವು ದಶಕಗಳಿಂದಲೂ ಬಿಜೆಪಿಯ ಓಟ್ಬ್ಯಾಂಕ್. ಬಿಜೆಪಿಯು ಭಾರತದ ಇತರೆಡೆಗಳಲ್ಲಿ ವಾಸಿಸುತ್ತಿರುವ ಬಾಂಗ್ಲಾದೇಶದ ಮುಸ್ಲಿಮೇತರ ನಾಗರಿಕರಿಗೆ ಭಾರತೀಯ ಪೌರತ್ವ ನೀಡಲು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ತಂದಿದೆ, ಇದು ಎನ್ಆರ್ಸಿಯಿಂದ ಹೊರಗುಳಿದ ಬಂಗಾಳಿ ಹಿಂದೂಗಳಲ್ಲಿ ಭರವಸೆ ಮೂಡಿಸಿತ್ತು. ಆದರೆ ಬಾಂಗ್ಲಾದೇಶ ರಚನೆಗೆ ಮುಂಚಿತವಾಗಿ ಅಸ್ಸಾಂ ಪ್ರವೇಶೀಸಿದ್ದೇವೆ ಎನ್ನುವುದಕ್ಕೆ ಪೂರಕ ದಾಖಲೆಗಳನ್ನು ಸಲ್ಲಿಸಬೇಕು ಎಂಬ ಶರತ್ತು ಬಂಗಾಳಿ ಹಿಂದೂಗಳಿಗೆ ಸಂಕಷ್ಟ ತಂದೊಡ್ಡಿದೆ. ಅಸ್ಸಾಂನ ವಿಶೇಷ ಪೌರತ್ವ ಕಟ್ ಆಫ್ ದಿನಾಂಕದ ಪ್ರಕಾರ, ಬಾಂಗ್ಲಾದೇಶ ರಚನೆಗೆ ಮುಂಚೆಯೇ ಅಂದರೆ ಮಾರ್ಚ್ 24, 1971 ರ ಮಂಚೆಯೇ ರಾಜ್ಯಕ್ಕೆ ಪ್ರವೇಶಿಸಿದವರು ಭಾರತದ ಪೌರತ್ವ ಪಡೆಯಬಹುದು.
2019 ರಲ್ಲಿ ಅಂತಿಮ ಎನ್ಆರ್ಸಿ ಪ್ರಕಟವಾದ ನಂತರದ ಈ ಪ್ರಕ್ರಿಯೆಯು ನಿಧಾನವಾಗಿದ್ದರೂ, ಮಾರ್ಚ್ 23 ರಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ನ ಮೇಲ್ವಿಚಾರಣೆಯಲ್ಲಿ ಎಂಎಚ್ಎ ನೀಡಿದ ಪತ್ರವು ಪ್ರಸ್ತುತ ನವೀಕರಿಸಲಾದ ಎನ್ಆರ್ಸಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸುವತ್ತ ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ ಎಂಬುವುದನ್ನು ತೋರಿಸುತ್ತದೆ. 'ದಿ ಹಿಂದೂ' ಪತ್ರಿಕೆ ವರದಿ ಮಾಡಿರುವಂತೆ, ಅಸ್ಸಾಂ ಮುಖ್ಯ ಕಾರ್ಯದರ್ಶಿ ಎಸ್.ಆರ್. ಗ ಭುಯಾನ್ ಗೆ ಕಳುಹಿಸಿರುವ ಪತ್ರದಲ್ಲಿ, “ಫೆಬ್ರವರಿ 22, 2020 ರಂದು ಕೇಂದ್ರ ಗೃಹ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೇರ್ಪಡೆಗೊಳಿಸುವ ಮತ್ತು ಹೊರಗಿಡುವ ಪೂರಕ ಪಟ್ಟಿಯಿಂದ ಹೊರಗುಳಿದ ವ್ಯಕ್ತಿಗಳಿಗೆ ರಿಜೆಕ್ಟೆಡ್ ಸ್ಲಿಪ್ ನೀಡಲು ನಿರ್ಧರಿಸಲಾಯಿತು. ಹಾರ್ಡ್ ಕಾಪಿಯಲ್ಲಿ ದಾಖಲಾದ ಮತ್ತು ಕಂಪ್ಯೂಟರ್ನಲ್ಲಿ ನಮೂದಿಸಿದ ಫಲಿತಾಂಶಗಳಲ್ಲಿ ಹೊಂದಿಕೆಯಾಗದ ಪ್ರಕರಣಗಳನ್ನು ಎಸ್ಸಿಎನ್ಆರ್ (ರಾಷ್ಟ್ರೀಯ ನೋಂದಣಿಯ ರಾಜ್ಯ ಸಂಯೋಜಕ)ಕಂಡುಹಿಡಿದಿದ್ದು ಹೆಚ್ವಿನ ಸ್ಪಷ್ಟೀಕರಣಕ್ಕಾಗಿ ಸಂಬಂಧಪಟ್ಟ ಉಪ ಆಯುಕ್ತರಿಗೆ ಸಲ್ಲಿಸಬಹುದು" ಎಂದಿದೆ.
ವರದಿಯ ಪ್ರಕಾರ, ಆರ್ಜಿಐ ಜಸ್ಪಾಲ್ ಸಿಂಗ್ ಅವರ ಕಚೇರಿಯಲ್ಲಿ ಜಂಟಿ ನಿರ್ದೇಶಕರು ಪತ್ರದಲ್ಲಿ ಜನವರಿ 30, 2020 ಮತ್ತು ಜುಲೈ 2, 2020 ರಂದು ನಡೆದ ಎನ್ಆರ್ಸಿ ಸಮನ್ವಯ ಸಮಿತಿ ಸಭೆಗಳಲ್ಲಿ ಚರ್ಚೆಯಾದಂತೆ ಅನುಮೋದಿತ ಬಜೆಟ್ನ ಮಿತಿಯಾದ 1602 ಕೋಟಿ ರೂಗಳಲ್ಲಿ ಇಡೀ ಪ್ರಕ್ರಿಯೆ ಮುಗಿಸುವಂತೆ ಒತ್ತಾಯಿಸಲಾಗಿದೆ. ದಾಖಲೆಗಳ ಪಾಲನೆಗಾಗಿ ರಾಜ್ಯ ಸರ್ಕಾರವು ತಿಂಗಳಿಗೆ 3.22 ಕೋಟಿ ರೂ.ಗಳ ಅವಶ್ಯಕತೆ ಇದೆ ಹೇಳಿತ್ತು. ಆದರೆ ಈ ಮೊತ್ತ ತುಂಬಾ ಹೆಚ್ಚಾಗಿದ್ದು ಹೆಚ್ಚುವರಿ ಸಿಬ್ಬಂದಿಗಳನ್ನು ಕೆಲಸದಿಂದ ಕೈ ಬಿಡುವಂತೆ ಪತ್ರದಲ್ಲಿ ತಿಳಿಸಲಾಗಿದೆ.
ಹೊಸದಾಗಿ ಬಿಡುಗಡೆ ಮಾಡಿದ ನಂತರ ಪಟ್ಟಿಯಲ್ಲಿ ಅಸ್ಸಾಮಿನ ಪೌರತ್ವ ಇಲ್ಲದಿರುವವರಿಗೆ ಭಾರತೀಯ ಪೌರತ್ವವನ್ನು ನಿರಾಕರಿಸಿದಂತಲ್ಲ ಎಂದು ಎಂಚ್ಎ ಪ್ರಕಟಣೆಯಲ್ಲಿ ತಿಳಿಸಿದೆ. ಈಶಾನ್ಯ ರಾಜ್ಯಗಳ 3.29 ಕೋಟಿ ನಿವಾಸಿಗಳು ಎನ್ಆರ್ಸಿಯಲ್ಲಿ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಿದ್ದರು. ಅಂತಿಮಗೊಳಿಸಲ್ಪಟ್ಟ ಎನ್ಆರ್ಸಿಯನ್ನು ಗುವಾಹಟಿಯಲ್ಲಿನ ಆರ್ಜಿಐ ಬಿಡುಗಡೆಗೊಳಿಸಿದಾಗ 19, 06,657 ಜನರು ಅಧಿಕೃತ ದಾಖಲೆಯಿಂದ ಹೊರಗುಳಿದಿದ್ದರು. ಹೊರಗುಳಿದಿರುವ ಪಟ್ಟಿಯಲ್ಲಿ ಖ್ಯಾತ ರಾಜಕೀಯ ನಾಯಕರ, ಮಾಜಿ ಸೈನಿಕರ, ಸ್ವಾತಂತ್ರ್ಯ ಹೋರಾಟಗಾರರ ಹೆಸರಿದ್ದು ದೇಶಾದ್ಯಂತ ವ್ಯಾಪಕ ಖಂಡನೆಗೆ ಒಳಗಾಗಿತ್ತು.