ಮುಂಬೈ ಪೊಲೀಸ್ ಕಮಿಷನರ್ ಸ್ಥಾನದಿಂದ ವಜಾಗೊಂಡ ಕೆಲವೇ ದಿನಗಳಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ್ದಾರೆ.
ಪರಮ್ ಬೀರ್ ಸಿಂಗ್ ನೇತೃತ್ವದಲ್ಲಿ ನಡೆದ ಅಂಬಾನಿಗೆ ಬೆದರಿಕೆ ಹಾಕಿದ ಪ್ರಕರಣದ ತನಿಖೆಯಲ್ಲಿ ಕೆಲವು ಕ್ಷಮಿಸಲಾಗದ ಲೋಪಗಳು ನಡೆದಿತ್ತು ಎಂದು ಈ ಹಿಂದೆ ಅನಿಲ್ ದೇಶ್ಮುಖ್ ಹೇಳಿದ್ದರು.
ಆದರೆ, ಇದೀಗ ಪರಮ್ ಸಿಂಗ್ ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಗೃಹಸಚಿವರು 100 ಕೋಟಿ ರುಪಾಯಿ ಲಂಚ ಸಂಗ್ರಹಿಸುವ ಗುರಿ ಹೊಂದಿದ್ದರು ಎಂದು ಆರೋಪಿಸಿದ್ದಾರೆ.
ಅಂಬಾನಿ ಬಾಂಬ್ ಬೆದರಿಕೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರನ್ನು ಬಂಧಿಸಿದ ನಂತರ ಪರಮ್ ಬೀರ್ ಸಿಂಗ್ ಅವರನ್ನು ಹೋಮ್ ಗಾರ್ಡ್ಸ್ ಇಲಾಖೆಗೆ ವರ್ಗಾಯಿಸಲಾಗಿತ್ತು.
ಮುಂಬೈ ಪೊಲೀಸ್ ಅಪರಾಧ ವಿಭಾಗದ ಗುಪ್ತಚರ ಘಟಕದ ಮುಖ್ಯಸ್ಥರಾಗಿದ್ದ ಸಚಿನ್ ವಾಝೆ ಅವರನ್ನು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಬಾರಿ ತಮ್ಮ ಅಧಿಕೃತ ನಿವಾಸ ದಯಾನೇಶ್ವರಕ್ಕೆ ಕರೆಸಿದ್ದರು. ಅಲ್ಲಿ, ತಿಂಗಳಿಗೆ ನೂರು ಕೋಟಿ ಸಂಗ್ರಹಿಸುವಂತೆ ವಾಝೆ ಅವರಿಗೆ ಪದೇ ಪದೇ ಸೂಚಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಮುಂಬೈಯಲ್ಲಿ ಸುಮಾರು 1750 ಬಾರ್ ಆಂಡ್ ರೆಸ್ಟೋರೆಂಟ್ಗಳಿವೆ. ಒಂದೊಂದರಿಂದ 2/3 ಲಕ್ಷ ವಸೂಲಿ ಮಾಡಿದರೂ 40 ರಿಂದ 50 ಕೋಟಿ ಸಂಗ್ರಹವಾಗುತ್ತದೆ. ಉಳಿದ ಮೊತ್ತವನ್ನು ಬೇರೆಯವರಿಂದ ಸಂಗ್ರಹಿಸಬಹುದೆಂದು ಗೃಹಸಚಿವರು ವಾಝೆ ಅವರಿಗೆ ಸಲಹೆ ನೀಡಿದ್ದರು ಎಂದು ಸಿಂಗ್ ಹೇಳಿದ್ದಾರೆ.
ವಾಝೆ ಅವರು ಈ ಚರ್ಚೆಯನ್ನು ನನ್ನ ಎದುರಿಟ್ಟಾಗ ನಾನು ಆಘಾತಗೊಂಡಿದ್ದೆ. ಇದನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೆ ಆತಂಕಗೊಂಡಿದ್ದೆ ಎಂದು ಪರಮ್ ಬೀರ್ ಸಿಂಗ್ ತಿಳಿಸಿದ್ದಾರೆ.
ಕೃಪೆ NDTV