ತಮಿಳು ನಾಡು, ಕೇರಳ, ಪಶ್ಚಿಮ ಬಂಗಾಳ, ಪುದುಚೆರಿ ಹಾಗೂ ಅಸ್ಸಾಂ ಸೇರಿದಂತೆ ಒಟ್ಟು ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಪ್ರಚಾರ ಕಣ ರಂಗೇರಿದೆ. ತಮಿಳುನಾಡಿನ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷ ಚುನಾವಣೆ ವೇಳೆ ಪ್ರಚಾರಕ್ಕೆ ಹೊಸ ತಂತ್ರಜ್ಞಾವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು”ಎಲ್ಇಡಿ ಅಭಿಯಾನವನ್ನು ಆರಂಭಿಸಿದೆ.
ಮತದಾರರನ್ನು ಸೆಳೆಯುವ ಉದ್ದೇಶದಿಂದ ಹಾಗು ಆಡಳಿತದ ಅವಧಿಯಲ್ಲಿ ಎಐಎಡಿಎಂಕೆ ಸರ್ಕಾರ ಜಾರಿಗೆ ತಂದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜನತೆಗೆ ಮತ್ತೊಮ್ಮೆ ಮನದಟ್ಟು ಮಾಡಿಕೊಡುವ ಸಲುವಾಗಿ ನಾಲ್ಕು ಚಕ್ರದ ಮೇಲೆ ಎಲ್ಇಡಿ ಪರದೆಯನ್ನು ಅಳವಡಿಸಿ ಆ ಮೂಲಕ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ.
ಎಐಎಡಿಎಂಕೆ ಪಕ್ಷದ ಚೈನೈ ವಲಯದ ಐಟಿ ವಿಂಗ್ ಕಾರ್ಯದರ್ಶಿ ಕೆ ಸ್ವಾಮಿನಾಥನ್ ಮಾತನಾಡಿ ಏಪ್ರಿಲ್ 6 ರಂದು ರಾಜ್ಯದಲ್ಲಿ 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಪಕ್ಷದ ಜನಪರ ಕೆಲಸದ ಮಾಹಿತಿಯನ್ನು ರಾಜ್ಯದ ಮೂಲೆ ಮೂಲೆಗಳಲ್ಲಿಯೂ ತಲುಪಿಸುವ ದೃಷ್ಟಿಯಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ಎಲ್ಇಡಿ ಅಭಿಯಾನದಲ್ಲಿ ಕರೋನಾ ಸಾಂಕ್ರಾಮಿಕ ಹರಡುವಿಕೆಯ ಆರಂಭಿಕ ಹಂತದಲ್ಲಿ ಸರ್ಕಾರ ಕೈಗೊಂಡ ಕಾರ್ಯಗಳನ್ನು ಎತ್ತಿ ತೋರಿಸಲಾಗುತ್ತಿದೆ. ಹಾಗು ಜನರ ವಿರುದ್ಧ ಪ್ರತಿಪಕ್ಷ ಡಿಎಂಕೆ ನಡೆಸಿದ ದೌರ್ಜನ್ಯದ ಬಗ್ಗೆ ತಿಳಿಸಲಾಗುತ್ತಿದೆ.