ಕೃಷಿ ಕಾನೂನುಗಳ ವಿರುದ್ದ ನಿರಂತರವಾಗಿ ಪ್ರತಿಭಟನೆಯಲ್ಲಿ ತೊಡಗಿರುವ ರೈತ ಆಂದೋಲನವು ನೂರು ದಿನಗಳ ಗಡಿಯನ್ನು ಈಗಾಗಲೇ ದಾಟಿದೆ. ಈ ಸಂದರ್ಭದಲ್ಲಿ ರೈತ ಆಂದೋಲನದ ಮುಂಚೂಣಿಯ ನಾಯಕರಲ್ಲಿ ಒಬ್ಬರಾದ ಯೋಗೇಂದ್ರ ಯಾದವ್ ಅವರೊಂದಿಗೆ ಪ್ರತಿಧ್ವನಿ ನಡೆಸಿದ ಸಂದರ್ಶನದ ಅಕ್ಷರ ರೂಪ ಇಲ್ಲಿದೆ.
ಪ್ರಶ್ನೆ: ಕಳೆದ ನೂರು ದಿನಗಳಿಂದ ರೈತ ಆಂದೋಲನ ನಡೆಯುತ್ತಲೇ ಇದ್ದರೂ, ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ನಿಮಗೇನು ಅನ್ನಿಸುತ್ತಿದೆ? ಸರ್ಕಾರ ಕಿವುಡಾಗಿದೆಯೇ ಅಥವಾ ಹೆದರಿಕೊಂಡಿದೆಯೇ?
ಉತ್ತರ: ಸಾಮಾನ್ಯವಾಗಿ ಸೆಂಚುರಿ ಬಾರಿಸಿದರೆ ಎಲ್ಲರೂ ಖುಷಿ ಪಡುತ್ತಾರೆ. ಆದರೆ, ಈ ಸೆಂಚುರಿಯಿಂದ ನಾನು ಖುಷಿಯಾಗಿಲ್ಲ. ನಾವು ಸೆಂಚುರಿ ಬಾರಿಸಲು ಬಂದಿಲ್ಲ. ನಾವು ರೈತರ ಹಕ್ಕನ್ನು ಕೇಳಲು ಬಂದಿದ್ದೆವು. ಈ ನೂರು ದಿನಗಳು ಸರ್ಕಾರದ ಹಠಮಾರಿತನದ ನೂರು ದಿನಗಳು. ಸರ್ಕಾರದ ದಮನ ನೀತಿಯ ನೂರು ದಿನಗಳು. ಯಾರೋ ವಿದೇಶಿಯರೊಂದಿಗೆ ವ್ಯವಹರಿಸಿದ ರೀತಿ ವ್ಯವಹರಿಸುತ್ತಿದ್ದಾರೆ. ಸಿಂಘು ಗಡಿಯನ್ನು ಭಾರತ-ಪಾಕ್ ಗಡಿಯಂತೆ ಮಾಡಿದ್ದಾರೆ. ಮುಳ್ಳುತಂತಿ, ಮೊಳೆ, ಸಿಮೆಂಟ್ ಬ್ಲಾಕ್ಗಳನ್ನು ಸೃಷ್ಟಿಸಿದ್ದಾರೆ.
ಈ ನೂರು ದಿನಗಳು ಸರ್ಕಾರದ ಸಂವೇದನರಹಿತ ನೂರು ದಿನಗಳು. ರೈತರ ಸಂಕಲ್ಪ ನಿರ್ಣಯದ ನೂರು ದಿನಗಳು. ನನ್ನ ಪ್ರಕಾರ ಸರ್ಕಾರ ಮತ್ತು ಪ್ರಧಾನ ಮಂತ್ರಿಯವರು ಇದನ್ನು ವೈಯಕ್ತಿಕ ವರ್ಚಸ್ಸಿನ ವಿಚಾರವಾಗಿ ಪರಿಗಣಿಸಿದ್ದಾರೆ. ಕಾನೂನುಗಳು ಸತ್ತು ಹೋಗಿವೆ. ಆದರೆ, ಇದನ್ನು ಬರೆದುಕೊಡಲಾಗುವುದಿಲ್ಲ. ಏಕೆಂದರೆ, ಇದು ಅಂತಸ್ತಿನ ಪ್ರಶ್ನೆ, ಮೋದಿ ಇದ್ದಾರೆ, ವಾಪಾಸ್ ಹೇಗೆ ಪಡೆಯುವುದು? ಪ್ರಧಾನ ಮಂತ್ರಿಯವರು ಚೀನಾ ಮತ್ತು ಪಾಕಿಸ್ತಾನದ ವಿರುದ್ದ ಹೋರಾಡಿದರೆ, ಅದನ್ನು ತಮ್ಮ ವರ್ಚಸ್ಸಿನ ಪ್ರಶ್ನೆಯಾಗಿ ಪರಿಗಣಿಸಿದರೆ, ಅರ್ಥ ಮಾಡಿಕೊಳ್ಳಬಹುದು. ವಿರೋಧ ಪಕ್ಷದವರ ವಿಚಾರದಲ್ಲೂ ಹೀಗೇ ಮಾಡಿದರೆ ಅರ್ಥ ಮಾಡಿಕೊಳ್ಳಬಹುದು. ಆದರೆ, ರೈತರೊಂದಿಗೆ ಈ ರೀತಿಯ ನಡವಳಿಕೆ ಅರ್ಥವಾಗುವುದಿಲ್ಲ.
ಅವರು ನಿಮ್ಮ ರೈತರು. ಅವರಲ್ಲಿ ಹಲವು ನಿಮಗೇ ಮತ ಹಾಕಿದವರು. ಅವರೊಂದಿಗೆ ನೀವು ಏನು ಮಾಡುತ್ತಿದ್ದಾರಾ? ಯಾವುದೇ ಪ್ರಧಾನಿ ಇದನ್ನು ವರ್ಚಸ್ಸಿನ ಪ್ರಶ್ನೆಯಾಗಿ ಪರಿಗಣಿಸಿ, ನನ್ನ ರೈತರಿಗೆ ಏನೂ ಕೊಡುವುದಿಲ್ಲ ಎಂದು ಹೇಳಲಾಗುತ್ತದೆಯೇ? ಅದು ಶುದ್ದ ಅಹಂಕಾರದ ಪರಮಾವಧಿ. ನಾನು ಹಿಂದೆ ಸರಿಯುವುದಿಲ್ಲ, ನನ್ನನ್ನು ಯಾರೂ ಏನೂ ಮಾಡಲಾಗುವುದಿಲ್ಲ. ಪ್ರಜಾಪ್ರಭುತ್ವ ದೊಡ್ಡ ದೊಡ್ಡವರ ಅಹಂಕಾರವನ್ನು ಮುರಿದುಹಾಕಿದೆ. ಅಂದು ಇಂದಿರಾ ಗಾಂಧಿ ಅವರಿಗೂ ಹೀಗೆಯೇ ಆಗಿತ್ತು. ಇವರದ್ದೂ ಆಗುತ್ತೆ.
ಪ್ರಶ್ನೆ: ಜನವರಿ 26ರಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಕೆಂಪುಕೋಟೆಯ ಮೇಲೆ ನಿಶಾನ್ ಸಾಹಿಬ್ ಧ್ವಜ ಹಾರಿಸಲಾಗಿತ್ತು. ಇದೊಂದು ಷಡ್ಯಂತ್ರ ಎಂದು ಹೇಳುತ್ತೀರಾ ಇಲ್ಲ ಆಯೋಜಕರ ತಪ್ಪನಿಂದ ನಡೆದ ಪ್ರಮಾದವೇ?
ಉತ್ತರ: ಇದೊಂದು ಷಡ್ಯಂತ್ರವಾಗಿತ್ತು. ಆದರೆ, ಬೇರೆ ರೀತಿಯ ಷಡ್ಯಂತ್ರವಾಗಿತ್ತು. ಸರ್ಕಾರದ ಷಡ್ಯಂತ್ರವಾಗಿತ್ತು. ಎರಡು ಮೂರು ವಿಷಯಗಳನ್ನು ನಿಮ್ಮ ವೀಕ್ಷಕರಿಗೆ ಹೇಳಲು ಬಯಸುತ್ತೇನೆ. ಮೊದಲನೇಯದು, 72 ವರ್ಷಗಳ ಗಣರಾಜ್ಯೋತ್ಸವದ ಇತಿಹಾಸದಲ್ಲಿ ಯಾವತ್ತಾದರೂ, ಇಷ್ಟೊಂದು ತ್ರಿವರ್ಣ ಧ್ವಜವನ್ನು ದೆಹಲಿಯಲ್ಲಿ ನೋಡಿದ್ದೀರಾ? ಯಾವತ್ತೂ ಇಲ್ಲ. ಯಾರು ತೆಕೊಂಡು ಬಂದ್ರು? ಸರ್ಕಾರವಲ್ಲ, ರೈತರು. ಲಕ್ಷಾಂತರ ಧ್ವಜ ಇದ್ದವು ಅಂದು ದೆಹಲಿಯಲ್ಲಿ. ನಿಮಗೆ ಕೇವಲ ಕೆಂಪು ಕೋಟೆಯ ಮೇಲಿನ ನಿಶಾನ್ ಸಾಹೆಬ್ ಮಾತ್ರ ಕಾಣಿಸುತ್ತದೆಯೇ? ಬೇರೇನು ಕಾಣಿಸುವುದಿಲ್ಲವೇ?
ಎರಡನೇಯದು, ಅಂದೇ ಭ್ರತಾ ದಳಗಳು ಲಾಠಿಯಿಂದ ಹೊಡೆದು ತ್ರಿವರ್ಣ ಧ್ವಜವನ್ನು ರಸ್ತೆಯಲ್ಲಿ ಬಿಸಾಕಿದರು. ಅವರ ವಿರುದ್ದ ಏನಾದರೂ ತನಿಖೆ ನಡೆಯಿತೇ? ಎಫ್ಐಆರ್ ಆಯಿತೇ? ಯಾರು ಅದರ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ?
ಮೂರನೇಯದು, ನಿಶಾನ್ ಸಾಹಿಬ್ ಧ್ವಜ ಹಾರಿಸಿದ್ದು ತಪ್ಪು. ಅದು ಖಲಿಸ್ತಾನಿ ಧ್ವಜವಲ್ಲ. ಅದೊಂದು ಧಾರ್ಮಿಕ ಧ್ವಜ. ಧಾರ್ಮಿಕ ಧ್ವಜಕ್ಕೆ 26ನೇ ಜನವರಿಯಂದು ಕೆಂಪುಕೋಟೆಯ ಮೇಲೆ ಏನೂ ಕೆಲಸವಿಲ್ಲ. ಅದು ಭಗವಾ ಧ್ವಜ ಆಗಿರಲಿ ಅಥವಾ ಇಸ್ಲಾಮಿಕ್ ಧ್ವಜ ಆಗಿರಲಿ. 26 ಜನವರಿಯಂದು ಕೆಂಪುಕೋಟೆಯಲ್ಲಿ ರಾಷ್ಟ್ರೀಯ ಧ್ವಜ ಮಾತ್ರ ಹಾರಬೇಕು, ಬೇರೇನು ಅಲ್ಲ. ಹಾಗಾಗಿ ಅದು ತಪ್ಪು. ನಾಚಿಕೆಗೇಡಿನ ಸಂಗತಿ. ಪ್ರಶ್ನೆಯೇನೆಂದರೆ, ಅದರ ಜವಾಬ್ದಾರಿ ಯಾರು? ನಾವು ಹೇಳಿದ್ವಿ, ಅದರ ನೈತಿಕ ಜವಾಬ್ದಾರಿ ನಾವು ತೆಗೆದುಕೊಳ್ಳುತ್ತೇವೆ. ಆದರೆ, ಅದರ ಆಡಳಿತಾತ್ಮಕ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಕೆಂಪುಕೋಟೆಯಲ್ಲಿ ಬೇರೆ ಧ್ವಜ ಹಾರಿಸಲಾಗುತ್ತಾ ಇದೆ. ಪೊಲೀಸರು ಏನು ಮಾಡುತ್ತಿದ್ದಾರೆ? ಕುರ್ಚಿಯಲ್ಲಿ ಕುಳಿತು ನೋಡುತ್ತಿದ್ದಾರೆ. ಒಬ್ಬ ವ್ಯಕ್ತಿ ಬಂದು ಮೈಕ್ನಲ್ಲಿ ಮಾತನಾಡುತ್ತಾ ಇದ್ದಾನೆ, ದೀಪ್ ಸಿಧು, ಅವನು ಹೇಗೆ ಬಂದ? ಬಂದು ಹೇಗೆ ಹೋದ? ಯಾರು ನಿಲ್ಲಿಸುವುದಿಲ್ಲ. ಅವನದ್ದು ಪ್ರಧಾನಿಗಳೊಂದಿಗೆ, ಗೃಹ ಸಚಿವರೊಂದಿಗೆ ಫೋಟೊಗಳಿವೆ. ನಾನೇನು ತೀರ್ಮಾನಕ್ಕೆ ಬರಲಿ?
ನನ್ನ ತೀರ್ಮಾನ ಏನೆಂದರೆ, ಈ ಘಟನೆ ಆಗುತ್ತದೆ ಎಂದು ದೆಹಲಿ ಪೊಲೀಸರಿಗೆ ಮುಂಚೆಯೇ ತಿಳಿದಿತ್ತು. ಇದನ್ನು ನಾನು ಊಹಿಸಿ ಹೇಳುತ್ತಿಲ್ಲ. ಅವರ ವೀಡಿಯೋಗಳಿವೆ. ಸಂಘಟನೆಗಳು ಹೇಳುತ್ತಿವೆ ನಾವು ರಿಂಗ್ ರೋಡ್ಗೆ ಹೋಗುತ್ತೇವೆ. ದೀಪ್ ಸಿಧು ಹೇಳುತ್ತಿದ್ದಾನೆ, ನಾವು ಕೆಂಪುಕೋಟೆಗೆ ಹೋಗುತ್ತೇವೆ. ಪೊಲೀಸರಿಗೆ ಅವನೆಲ್ಲಿ ಉಳಿದಿದ್ದಾನೆ ಎಂದು ಗೊತ್ತು. ಅವನು ರೈತರೊಂದಿಗೆ ಬಂದಿಲ್ಲ. ಪ್ರತ್ಯೇಕವಾಗಿ ಬಂದ. ಅವನನ್ನು ಬರಲು ಏಕೆ ಬಿಟ್ಟರು? ಬರಲು ಬಿಟ್ಟರೆ, ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಲು ಏಕೆ ಬಿಟ್ಟರು? ಧ್ವಜ ಹಾರಿಸಲು ಬಿಟ್ಟರೆ ಮತ್ತೆ ಹೋಗಲು ಏಕೆ ಬಿಟ್ಟರು? ಯಾರು ಜವಾಬ್ದಾರರು? ನನ್ನ ಪ್ರಕಾರ ಅಲ್ಲ ಷಡ್ಯಂತ್ರವಿತ್ತು. ರೈತರ ಲಕ್ಷಾಂತರ ಧ್ವಜಗಳನ್ನು ಮರೆಮಾಚಿ ಕೇವಲ ಕೆಂಪುಕೋಟೆಯನ್ನು ತೋರಿಸುವ ಷಡ್ಯಂತ್ರವಿತ್ತು. ಇದು ರೈತರ ಆಂದೋಲನವನ್ನು ಕೊಲೆ ಮಾಡುವ ಷಡ್ಯಂತ್ರ. ಯಾವ ಆಂದೋಲನವನ್ನು ಏನೂ ಮಾಡಲಾಗುವುದಿಲ್ಲ, ಅದನ್ನು ಹತ್ಯೆ ಮಾಡುವ ಷಡ್ಯಂತ್ರವಾಗಿತ್ತು.
ಪ್ರಶ್ನೆ: ರೈತ ಆಂದೋಲನವನ್ನು ವಿರೋಧಿಸುತ್ತಿರುವವರು ಪದೇ ಪದೇ ಹೇಳುವ ಮಾತೆಂದರೆ, ಇದೊಂದು ಖಲಿಸ್ತಾನಿ ಬೆಂಬಲಿತ ಹೋರಾಟ ಎಂದು. ಇದರ ಕುರಿತು ನಿಮ್ಮ ಅಭಿಪ್ರಾಯವೇನು?
ಉತ್ತರ: ಈ ಆಂದೋಲನದ ವಿರುದ್ದ ಸರ್ಕಾರದ ಬಳಿ, ಯಾವುದೇ ನೈತಿಕ ತರ್ಕವಿಲ್ಲ, ಕಾನೂನಾತ್ಮಕ ತರ್ಕವಿಲ್ಲ, ಆರ್ಥಿಕ ತರ್ಕವಿಲ್ಲ. ಹಾಗಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಮೊದಲ ದಿನ ಹೇಳಿದರು, ಇವರು ರೈತರಲ್ಲ ಕಮಿಷನ್ ಏಜೆಂಟ್ಗಳೆಂದು. ನಾವು ಹೇಳಿದ್ವಿ, 2 ಲಕ್ಷ ಕಮಿಷನ್ ಏಜೆಂಟ್ಗಳಿದ್ದಾರಾ ಇಲ್ಲಿ? ಅದು ಮುಗಿಯಿತು. ನಂತರ ಹೇಳಿದರು, ಇವರು ಕಾಂಗ್ರೆಸ್ಸಿನವರು. ನಾವು ಹೇಳಿದ್ವಿ ಪಂಜಾಬ್ನಲ್ಲಿ ಕಾಂಗ್ರೆಸ್ ವಿರುದ್ದವೇ ಪ್ರತಿಭಟನೆ ನಡೆಸಿದ್ದೆವು ಎಂದು. ನಂತರ ಹೇಳಿದರು, ಇವರು ಭಯೋತ್ಪಾದಕರು, ಖಲಿಸ್ತಾನಿಗಳು.
14 ಜನವರಿಯಂದು, ಖಲಿಸ್ತಾನಿ ಸಂಘಟನೆಯಾದ ಸಿಖ್ಖ್ಸ್ ಫಾರ್ ಜಸ್ಟೀಸ್ ಇಂಡಿಯಾ ಗೇಟ್ ಮೇಲೆ ಯಾರಾದರು ಖಲಿಸ್ತಾನಿ ಬಾವುಟ ಹಾರಿಸಿದರೆ ಬಹುಮಾನ ನೀಡುವುದಾಗಿ ಹೇಳಿತ್ತು. ನಾವು ಅಂದೇ ಪತ್ರಿಕಾಗೋಷ್ಟಿ ಕರೆದು ಹೇಳಿದ್ದೆವು, ಇವರು ರೈತ ಆಂದೋಲನದ ವೈರಿಗಳೆಂದು. ನಾವು ಬಹಿರಂಗವಾಗಿ ಹೇಳಿದ್ದೇವೆ. ಇವರೇಕೆ ಹೇಳುತ್ತಿಲ್ಲ? ನಮ್ಮ ರೈತ ಒಕ್ಕೂಟದಲ್ಲಿ ಹತ್ತು ಸಂಘಟನೆಗಳು ಖಲಿಸ್ತಾನಿಗಳ ವಿರುದ್ದ ಹೋರಾಡಿದ್ದಾರೆ. ಖಲಿಸ್ತಾನಿಗಳ ಕೈಯಲ್ಲಿ ಅದರ ಸದಸ್ಯರು ಹತರಾಗಿದ್ದಾರೆ. ಇಂತಹವರನ್ನು ನೀವು ಖಲಿಸ್ತಾನಿಗಳೆಂದು ಕರೆಯುತ್ತೀರಾದರೆ, ನಿಮಗೆ ಇತಿಹಾಸ ಗೊತ್ತಿಲ್ಲ, ಪಂಜಾಬ್ ಬಗ್ಗೆ ಗೊತ್ತಿಲ್ಲ, ಏನೂ ಗೊತ್ತಿಲ್ಲ.
ಈ ಸರ್ಕಾರ ಖಲಿಸ್ತಾನಿ ಹೋರಾಟವನ್ನು ಮತ್ತೆ ಜೀವಂತಗೊಳಿಸಲು ಪ್ರಯತ್ನಿಸುತ್ತಿದೆ. ಇವರಿಗೆ ಓವೈಸಿ ಬೇಕು, ಇಸ್ಲಾಮಿಕ್ ಮೂಲಭೂತವಾದಿಗಳು ಬೇಕು, ಖಲಿಸ್ತಾನಿಗಳು ಬೇಕು. ಏಕೆಂದರೆ, ಇವರ ಹಿಂದುತ್ವ ರಾಜಕಾರಣ ಜೀವಂತವಾಗಿರಿಸಬೇಕಾದರೆ, ಇವರೆಲ್ಲರೂ ಬೇಕು.
ಪ್ರಶ್ನೆ: ಮೊದಲಿಂದಲೂ ರೈತ ಪ್ರತಿಭಟನೆಯನ್ನು ರಾಜಕೀಯ ಪಕ್ಷಗಳಿಂದ ದೂರ ಇರಿಸಲಾಗಿತ್ತು. ಆದರೆ, ನೀವೊಂದು ಲೇಖನ ಬರೆದಿದ್ರಿ, ಅದರಲ್ಲಿ ಈ ಪ್ರತಿಭಟನೆ ರಾಜಕಿಯೇತರ ಆಗಲು ಸಾಧ್ಯವಿಲ್ಲ ಎಂದಿದ್ರಿ. ಹಾಗಾಗಿ ಈ ಆಂದೋಲನ ರಾಜಕೀಯ ಆಂದೋಲನ ಎಂದು ಯೋಗೇಂದ್ರ ಯಾದವ್ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಇದನ್ನು ಹೇಗೆ ವಿವರಿಸುತ್ತೀರಾ?
ಉತ್ತರ: ಪಾಪ ಅವರು ಓದುವುದಿಲ್ಲ. ನಾನು ಹೇಳಿದ್ದೆ, ಕೇವಲ ರೈತ ಹೋರಾಟವಲ್ಲ, ದೇಶದ ಪ್ರತಿಯೊಂದು ಹೋರಾಟದಲ್ಲಿಯೂ ರಾಜಕಾರಣ ಇರಬೇಕು, ರಾಜಕಾರಣ ಆಗಲೇಬೇಕು. ರಾಜಕೀಯ ಪಕ್ಷದ ಹೋರಾಟ ಆಗಬಾರದು. ನಾನಂದೆ ಸಣ್ಣ ರಾಜಕಾರಣ ಮತ್ತು ದೊಡ್ಡ ರಾಜಾಕಾರಣ. ಆಂದೋಲನ ಎಂದೂ ಸಣ್ಣ ಮಟ್ಟಿನ ರಾಜಕಾರಣ ಆಗಬಾರದು. ಅಂದರೆ, ಯಾರೋ ಎಂಎಲ್ಎ ಆದರು, ಯಾರೋ ಸಿಎಂ ಆದರು, ಆಂದೋಲನದ ನಾಯಕರು ದೊಡ್ಡವರಾಗಿ, ಆಂದೋಲನದ ಉದ್ದೇಶ ಹಿಂದೆ ಉಳಿದರೆ ಅದು ಸಣ್ಣ ರಾಜಕಾರಣ.
ನಾನಂದೆ, ಇಂತಹ ರಾಜಕೀಯ ನಮಗೆ ಬೇಡ. ದೊಡ್ಡ ರಾಜಕಾರಣ ಎಂದರೆ, ನೀವು ದೇಶದ ರಾಜಕಾರಣದ ಅಜೆಂಡಾ ತೀರ್ಮಾನಿಸಿ. ಮಹಿಳಾ ಆಂದೋಲನ ನಡೆಯಬೇಕು, ಅದು ರಾಜಕೀಯ ಆಂದೋಲನವಾಗಬೇಕು. ಮುಂದಿನ ಚುನಾವಣೆಯಲ್ಲಿ ಮಹಿಳೆಯರ ಸಮಸ್ಯೆಗಳ ಮೇಲೆ ಚರ್ಚೆ ನಡೆಯಬೇಕು. ಹೀಗೇ ರೈ ಆಂದೋಲನವೂ ನಡೆಯಬೇಕು. ನನ್ನ ಬೇಡಿಕೆ, ಆಸೆ, ಗುರಿ ಏನೆಂದರೆ, ಮೂಮದಿನ ಲೋಕಸಭಾ ಚುನಾವಣೆ ರೈತರ ಸಮಸ್ಯೆಗಳ ಮೇಲೆ ನಡೆಯಬೇಕು. 2024ರ ಚುನಾವಣೆಯಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕು. ಕಾಂಗ್ರೆಸ್ ಹೀಗೆ ಮಾಡಬಹುದು ಎನ್ನಬೇಕು, ಬಿಜೆಪಿ ಹಾಗೆ ಮಾಡಬಹುದು ಎನ್ನಬೇಕು. ಇದು ನಡೆಯಲೇಬೇಕು. ಒಂದು ವೇಳೆ ಪ್ರಜಾಪ್ರಭುತ್ವದಲ್ಲಿ ಆಂದೋಲನ ರಾಜಕಾರಣದಿಂದ ದೂರ ಉಳಿದರೆ, ಅದು ಪ್ರಜಾಪ್ರಭುತ್ವವೇ ಅಲ್ಲ.
ನನ್ನ ವಿರುದ್ದ ಮಾತನಾಡುವವರು, ಓದುವುದಿಲ್ಲ. ಹತ್ತು ಶಬ್ದ ಓದುತ್ತಾರೆ, ಹನ್ನೊಂದನೇಯ ಶಬ್ದ ಓದಲ್ಲ. ನಾನು ಸ್ಪಷ್ಟವಾಗಿ ಇದನ್ನೆಲ್ಲಾ ಬರೆದಿದ್ದೆ. ಸಣ್ಣ ಮಟ್ಟದ ರಾಜಕಾರಣವಾಗಬಾರದು, ಆಳವಾದ ರಾಜಕಾರಣ ನಡೆಯಬೇಕು. ಈ ರಾಜಕಾರಣ ರೈತರು ಮಾಡಬೇಕು, ಮಹಿಳೆಯರು ಮಾಡಬೇಕು, ಕಾರ್ಮಿಕರು ಮಾಡಬೇಕು, ಪರಿಸರವಾದಿಗಲು ಮಾಡಬೇಕು, ಎಲ್ಲರೂ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ನೀವು ರಾಜಕಾರಣಕ್ಕೆ ಬೆನ್ನು ತೋರಿಸಲಾಗುವುದಿಲ್ಲ. ಇದು ನಾನು ಇಂದು ಹೇಳುತ್ತಿಲ್ಲ, 20 ವರ್ಷಗಳಿಂದ ಹೇಳುತ್ತಿದ್ದೇನೆ.
ಪ್ರಶ್ನೆ: ನಿಮ್ಮ ಪ್ರಕಾರ, ಮುಂದೆ ಬರುವಂತಹ ಸರ್ಕಾರಗಳು ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಇರುವಂತಹ ಸರ್ಕಾರಗಳಾಗಬೇಕು
ಉತ್ತರ: ಖಂಡಿತಾ. ಯಾಕಾಗಬಾರದು? ಒಂದು ವೇಳೆ, ರೈತರ ಸಮಸ್ಯೆಗಳ ಮೇಲೆ ನರೇಂದ್ರ ಮೋದಿ ಚುನಾವಣೆ ಎದುರಿಸಿ ಪ್ರಧಾನಿಯಾದರೆ, ನಾನು ಅವರಿಗೆ ಸೆಲ್ಯೂಟ್ ಮಾಡುತ್ತೇನೆ. ಮಾಡಲೇಬೇಕು. ಏನು ಬೇಕಾದರೂ ಆಗಲಿ. ರೈತರ ಸಮಸ್ಯೆಗಳ ಮೇಲೆ ಚುನಾವಣೆ ನಡೆಯಲಿ. ಅದರಲ್ಲೇನು ತಪ್ಪಿದೆ? ಯಾವುದೇ ಆಂದೋಲನ ರಾಜಕೀಯ ಪಕ್ಷದ ಬಾಲಕ್ಕೆ ಅಂಕೊಂಡಿರಬಾರದು. ಪಕ್ಷ ಹೇಳುತ್ತೆ ಆಂದೋಲನ ಮುಂದುವರೆಸಿ, ಮೋದಿ ವಿರುದ್ದದ ಆಕ್ರೋಶ ಹೆಚ್ಚಾಗಲಿ ಎಂದರೆ, ಅದು ತಪ್ಪು. ಹಾಗಾಗಬಾರದು. ನಾನು ಇದನ್ನು ವಿರೋಧಿಸುತ್ತೇನೆ. ಆದರೆ, ಆಳವಾದ ರಾಜಕಾರಣ ಆಗಲೇಬೇಕು.
ಪ್ರಶ್ನೆ: ಯಾವ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆಯೋ ಅಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆ. ಇದು ಕೂಡಾ ರೈತರ ವಿರುದ್ದವೇ ಇದೆಯೇ?
ಉತ್ತರ: ಗೋಹತ್ಯೆ ನಿಷೇಧ ಕಾಯ್ದೆ ಗೋವುಗಳನ್ನು ಉಳಿಸಲು ಜಾರಿಗೆ ತಂದಿಲ್ಲ. ಬಿಜೆಪಿಯನ್ನು ಉಳಿಸಲು ಜಾರಿಗೆ ತರಲಾಗಿದೆ. ಇವರು ಯಾವತ್ತೂ ದನ ಸಾಕಿಲ್ಲ. ದನದ ಫೋಟೋ ಮಾತ್ರ ನೋಡಿದ್ದಾರೆ. ನಾನು ದನ ಸಾಕಿಲ್ಲ ಆದರೆ, ಎಮ್ಮೆ ಸಾಕಿದ್ದೇನೆ. ಎಮ್ಮೆ ಸಾಕುವುದು ಹೇಗೆ ಎಂಬುದು ತಿಳಿದಿದೆ. ನಿಜವಾಗಿಯೂ ಗೋವುಗಳನ್ನು ರಕ್ಷಿಸಬೇಕಿದ್ದರೆ, ಗೋವುಗಳನ್ನು ಈ ದೇಶದಲ್ಲಿ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ನಾನು ಏನು ಆಶಿಸುತ್ತೇನೆಂದರೆ, ಗೋಹತ್ಯೆಯನ್ನು ನಿಲ್ಲಿಸುವ ಪ್ರಯತ್ನ ಆಗಲೇಬೇಕು. ಆದರೆ ಹೇಗೆ? ನಾನು ಮೂರು ದಿನಗಳಿಂದ ಕರ್ನಾಟಕದಲ್ಲಿ ಸಂಚರಿಸುತ್ತಾ ಇದ್ದೇನೆ, ಪ್ರತೀ ನಗರದಲ್ಲೂ ಎಷ್ಟು ದನಗಳು ಪ್ಲಾಸ್ಟಿಕ್ ತಿನ್ನುತ್ತಾ ಇದ್ದಾವೆ… ಯಾರು ಆ ದನಗಳನ್ನು ರಸ್ತೆಗೆ ಬಿಟ್ಟರು? ಮುಸ್ಲೀಮರೇ? ಯಾಕೆ ಆ ಗೋವುಗಳನ್ನು ನೀವು ರಕ್ಷಿಸುವುದಿಲ್ಲ?
ಬಿಜೆಪಿಯವರು ಗೋವುಗಳನ್ನು ರಕ್ಷಿಸಲು ಬಯಸುತ್ತಿಲ್ಲ. ಗೋವಿನ ಹೆಗಲ ಮೇಲೆ ಬಂದೂಕು ಇಟ್ಟು ಮುಸ್ಲೀಮರನ್ನು ಗುರಿಯಾಗಿಸುತ್ತಿದ್ದಾರೆ. ಗೋವು ರಕ್ಷಣೆ ಇವರ ಗುರಿಯಲ್ಲ. ಹಿಂದೂ ಧರ್ಮ ಹೇಳುತ್ತೆ ಗೋ ರಕ್ಷಣೆ ಮಾಡಿ ಎಂದು. ಆದರೆ, ಮುಸ್ಲೀಮರ ಧರ್ಮ ಗೋವುಗಳನ್ನು ತಿನ್ನಲು ಹೇಳಲ್ಲ. ನೀವು ಇದಕ್ಕಿಂತ ಒಳ್ಳೆಯ ಪರಿಹಾರ ಹುಡುಕಿ. ದೇಶದಲ್ಲಿ ಗೋ ರಕ್ಷಣೆ ಮಾಡುವ ಕೆಲಸ ಮಾಡಿ. ಆದರೆ, ಇವರಿಗೆ ಅದು ಬೇಡ. ಈಗ ಇವರು ಮಾಡಿರುವ ಕೆಲಸ ರೈತರಿಗೆ ಹೊಸ ಸಮಸ್ಯೆ ತಂದಿಟ್ಟಿದೆ. ಎಷ್ಟೋ ಕಡೆಗಳಲ್ಲಿ ಹಸುಗಳ ಗುಂಪು ಬಂದು ಫಸಲನ್ನು ತಿಂದು ಹಾಕುತ್ತವೆ. ಇದು ಹೊಸ ಸಮಸ್ಯೆಯಾಗಿ ಉದ್ಭವಿಸಿದೆ. ಏಕೆಂದರೆ, ಅವರಿಗೆ ಗೋ ರಕ್ಷಣೆ ನಿಜವಾಗಿಯೂ ಆಗಬೇಕಾಗಿಲ್ಲ. ಒಂದು ವೇಳೆ ಆಗಿದ್ದರೆ, ಅದು ರೈತರಿಗೆ ಸಮಸ್ಯೆಯಾಗಿರುತ್ತಿರಲಿಲ್ಲ.
ಪ್ರಶ್ನೆ: ಉತ್ತರ ಭಾರತದಲ್ಲಿ ಇರುವಷ್ಟು ರೈತ ಆಂದೋಲನದ ತೀವ್ರತೆ, ದಕ್ಷಿಣ ಭಾರತದಲ್ಲಿ ಕಾಣುತ್ತಿಲ್ಲ. ಇದಕ್ಕೆ ಕಿಸಾನ್ ಸಂಯುಕ್ತ ಮೋರ್ಚಾ ಏನು ಮಾಡುತ್ತಿದೆ?
ಉತ್ತರ: ಸಂಯುಕ್ತ ಕಿಸಾನ್ ಮೋರ್ಚಾ ಪರವಾಗಿ ಎಂಎಸ್ಪಿ ಅಭಿಯಾನ ಸಂಪೂರ್ಣ ದೇಶದಲ್ಲಿ ಆರಂಭಿಸಿದ್ದೇವೆ. ಅದನ್ನು ಹರಿಯಾಣ-ಪಂಜಾಬ್ನಿಂದ ಆರಂಭಿಸಿಲ್ಲ. ಕರ್ನಾಟಕದ ಕಲಬುರ್ಗಿಯಿಂದ ಆರಂಭಿಸಿದ್ದೇವೆ. ಕಲುಬುರ್ಗಿ, ಬಳ್ಳಾರಿ, ನನಗೆ ವಿಶ್ವಾಸವಿದೆ, ಕರ್ನಾಟಕದ ಪ್ರತೀ ಜಿಲ್ಲೆಯಲ್ಲಿಯೂ ಇದು ನಡೆಯುತ್ತದೆ. ಅದರ ನಂತರ ಆಂಧ್ರ, ತೆಲಂಗಾಣ, ಮಹಾರಾಷ್ಟ್ರಕ್ಕೆ ಹೋಗುತ್ತದೆ. ಕರ್ನಾಟಕದಲ್ಲಿ ರೈತ ಆಂದೋಲನದ ಇತಿಹಾಸ ಬಹಳ ದೊಡ್ಡದಿದೆ. ಕಾಗೋಡು ಸತ್ಯಾಗ್ರಹ ಇಲ್ಲಾಗಿತ್ತು. ಇದು ನಂಜುಂಡಸ್ವಾಮಿ ಅವರ ನೆಲ. ನನಗೆ ವಿಶ್ವಾಸವಿದೆ ಕರ್ನಾಟಕದಲ್ಲಿ ಈಗಾಗಲೇ ಆಂದೋಲನ ನಡೆಯುತ್ತಿದೆ. ಆದರೆ, ಹರಿಯಾಣ-ಪಂಜಾಬ್ಗಿಂತ ಕಡಿಮೆಯಿದೆ. ಯಾವ ದಿನ ಕರ್ನಾಟಕದಲ್ಲಿ ಹಸಿರು ಶಾಲು ಧರಿಸಿದ ಪ್ರತಿಯೊಬ್ಬ ರೈತ ಎದ್ದು ನಿಲ್ಲುತ್ತಾನೋ, ಅಂದು ಹರಿಯಾಣ-ಪಂಜಾಬ್ಗಿಂತ ಹೆಚ್ಚಿನ ಮಟ್ಟದ ಆಂದೋಲನ ಇಲ್ಲಿ ನಡೆಯುತ್ತದೆ. ಈಗ ಅದು ಅಸಮವಾಗಿದೆ. ಕಾವು ಹೆಚ್ಚುತ್ತಲೇ ಇದೆ. ನನಗೆ ವಿಶ್ವಾಸವಿದೆ, ಮುಂಬರುವ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಇದು ಹಬ್ಬಲಿದೆ.
ಪ್ರಶ್ನೆ: ಸಂಪೂರ್ಣ ದೇಶದಲ್ಲಿ ರೈತ ಮಹಾಪಂಚಾಯತ್ಗಳನ್ನು ನಡೆಸಲು ರೈತ ಒಕ್ಕೂಟದಿಂದ ನಿರ್ಧರಿಸಲಾಗಿದೆ. ಇದರ ರೂಪುರೇಷೆಗಳು ಯಾವ ರೀತಿ ಇವೆ?
ಉತ್ತರ: ನಿಜ ಹೇಳಬೇಕೆಂದರೆ, ನಾವು ಯೋಜನೆ ಹಾಕಿಕೊಳ್ಳಲಿಲ್ಲ. ಈ ಸರ್ಕಾರ ಆಂದೋಲನವನ್ನು ಕೊಲ್ಲಲು ಹೊರಟಿತು. ನಂತರ ರಾಕೇಶ್ ಟಿಕಾಯತ್ ನಿಂತುಕೊಂಡರು. ಅವರ ಕಣ್ಣಲ್ಲಿ ನೀರು ಬಂತು. ಆಗ ರೈತರು ಹೇಳಿದರು, ನಮ್ಮ ನಾಯಕರನ್ನು ಅವಮಾನಿಸುತ್ತಿದ್ದಾರೆ ಇವರು ಎಂದು. ನಂತರ ಮಹಾಪಂಚಾಯತ್ಗಳು ಆರಂಭವಾದವು. ಇದರ ಕುರಿತಾಗಿ ನಾವು ಯೋಜನೆ ಹಾಕಿಕೊಂಡಿರಲಿಲ್ಲ. ರೈತರ ತಮ್ಮಷ್ಟಕ್ಕೆ ತಾವೇ ಬರಲಾರಂಭಿಸಿದರು. ನಂತರ ಬೇರೆಯವರು ಇದನ್ನೇ ಮಾಡಿದರು. ನಾವು ಮಹಾಪಂಚಾಯತ್ ಕುರಿತು ಯೋಚನೆಯೇ ಮಾಡಿರಲಿಲ್ಲ.
ಇವರು ಅಂದುಕೊಂಡರು, ಆಂದೋಲನವನ್ನು ಮೆಟ್ಟಿ ಹಾಕಿದರೆ ಅದು ಭೂಮಿಯೊಳಗೆ ಸೇರುತ್ತದೆ ಎಂದು, ಆದರೆ ಅದು ಹಬ್ಬತೊಡಗಿತು. ಸಂಪೂರ್ಣ ದೇಶದಲ್ಲಿ ಹಬ್ಬುತ್ತಿದೆ. ನಮ್ಮ ಯೋಜನೆಯಲ್ಲ ಇದು. ನಮ್ಮ ಯೋಜನೆ ಬೇರೆಯೇ ಇದೆ. ನಾವು ಎಂಎಸ್ಪಿ ಅಭಿಯಾನ ಆರಂಭಿಸಿದ್ದೇವೆ. ʼವೋಟ್ ಕಿ ಚೋಟ್ʼ ಅಭಿಯಾನ ಆರಂಬಿಸಿದ್ದೇವೆ. ನಾವು ಈ ಆಂದೋಲನವನ್ನು ಇನ್ನೂ ತೀವ್ರವಾಗಿಸುತ್ತಿದ್ದೇವೆ.
ಪ್ರಶ್ನೆ: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಅಭಿಯಾನ ನಡೆಸುವುದರಿಂದ ಬಿಜೆಪಿಗೆ ಎಷ್ಟು ನಷ್ಟ ಉಂಟಾದಿತೆಂದು ನೀವು ಅಂದಾಜಿಸುತ್ತೀರಾ?
ಉತ್ತರ: ಬೇರೆ ಬೇರೆ ರಾಜ್ಯಗಳಲ್ಲಿ ಪರಿಸ್ಥಿತಿ ಬೇರೆ ಬೇರೆ ಇದೆ. ಈಗ ಕೇರಳದಲ್ಲಿ ಬಿಜೆಪಿ ಗೆಲ್ಲುವ ಸ್ಥಿತಿಯಲ್ಲಿ ಇಲ್ಲ. ಅದಕ್ಕೇನು ನಷ್ಟ ಆಗುತ್ತೆ ಗೊತ್ತಿಲ್ಲ. ಅಲ್ಲಿ ಬಿಜೆಪಿ ಇಲ್ಲವೇ ಇಲ್ಲ. ತಮಿಳುನಾಡಿನಲ್ಲಿ ಬಿಜೆಪಿಯ ಬಿ ಟೀಮ್ ಎಐಡಿಎಂಕೆ ಇದೆ. ಅದಕ್ಕೆಷ್ಟು ನಷ್ಟ ಆಗುತ್ತೆ. ನಿಜವಾದ ಸಮಸ್ಯೆ ಬಂಗಾಳದ್ದು. ಏಕೆಂದರೆ, ಬಂಗಾಳದಲ್ಲಿ ಬಿಜೆಪಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿದೆ.
ನಾವು ಬಂಗಾಳಕ್ಕೆ ಹೋಗುತ್ತೇವೆ. ನಾನು ವೈಯಕ್ತಿಕವಾಗಿ ಹೋಗುತ್ತೇನೆ. ಸ್ವಲ್ಪ ಬೆಂಗಾಲಿ ಮಾತನಾಡಬಲ್ಲೆ. ಅಲ್ಲಿ ಹೋಗುತ್ತೇವೆ, ಅವರಿಗೆ ಹೇಳುತ್ತೇವೆ, ಈ ಪಕ್ಷ ರೈತರನ್ನು ಅವಮಾನಿಸಿದೆ. ರೈತರನ್ನು ದಮನಿಸಿದೆ. ರೈತರ ವಿರುದ್ದ ಕಾನೂನು ಮಾಡಿದ್ದಾರೆ. ಅವರ ಬಳಿ ಮಾತನಾಡಲೂ ನಿರಾಕರಿಸಿದ್ದಾರೆ. ದಯವಿಟ್ಟು ಬಿಜೆಪಿಗೆ ಶಿಕ್ಷೆ ನೀಡಿ. ಇಷ್ಟೇ ನಮ್ಮ ಸಂದೇಶ. ಈ ಪಾರ್ಟಿಗೆ ಶಿಕ್ಷೆ ನೀಡಿ. ವೋಟ್ ಯಾರಿಗೆ ಕೊಡಬೇಕು, ಇದರ ಬಗ್ಗೆ ನಾವು ಮಾತನಾಡುವುದಿಲ್ಲ. ನಿಮ್ಮ ಇಷ್ಟ. ಬಿಜೆಪಿ ಶಿಕ್ಷೆ ಆಗಲೇಬೇಕು, ಏಕೆಂದರೆ, ಯಾವ ಪಕ್ಷ ರೈತರಿಗೆ ಕಷ್ಟ ನೀಡುತ್ತದೆಯೋ ಅದಕ್ಕೆ ಶಿಕ್ಷೆ ಸಿಗುತ್ತದೆ ಎಂಬ ಸಂದೇಶ ರವಾನೆಯಾಗಬೇಕು. ಇದರಿಂದ ಕೇವಲ 2 ಶೇಕಡಾ ವ್ಯತ್ಯಾಸವಾದರೂ, ಅದು ಬಿಜೆಪಿಗೆ ನೋವು ನೀಡೇ ನೀಡುತ್ತದೆ.