ಆದಿವಾಸಿಗಳು ಹಿಂದೂಗಳಲ್ಲ, ಅವರು ಎಂದೂ ಹಿಂದೂಗಳಾಗುವುದಿಲ್ಲ, ಈ ಕುರಿತು ಯಾವುದೇ ಗೊಂದಲಗಳಿರಬಾರದು ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದ್ದಾರೆ. ಸ್ವತಃ, ಓರ್ವ ಆದಿವಾಸಿಯಾಗಿರುವ ಸೊರೆನ್, ಆದಿವಾಸಿಗಳು ಯಾವತ್ತಿಗೂ ಪ್ರಕೃತಿ ಆರಾಧಕರು, ಅದಕ್ಕಾಗಿಯೇ ಅವರನ್ನು ಸ್ಥಳೀಯ ಜನರೆಂದು ಸಂಬೋಧಿಸಲಾಗುತ್ತದೆ ಎಂದು ಹೇಳಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾಲಯದ 18 ನೇ ಭಾರತೀಯ ವಾರ್ಷಿಕದಲ್ಲಿ ಮಾತನಾಡಿದ ಅವರು, ನಮ್ಮ ಜಾರ್ಖಂಡಿನಲ್ಲಿ 32 ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳಿವೆ. ಆದರೆ ಇಲ್ಲಿ ನಮ್ಮ ʼಸ್ಥಳೀಯʼ ಸಂಸ್ಕೃತಿ, ಭಾಷೆಗಳಿಗೆ ಉತ್ತೇಜನ ನೀಡಲು ನಮಗೆ ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
“ನಮ್ಮ ರಾಜ್ಯದ ವತಿಯಿಂದ ಈ ಬಾರಿ ಜನಗಣತಿಗೆ ಆದಿವಾಸಿ ಕಾಲಂ ಪ್ರತ್ಯೇಕವಾಗಿ ಸೇರಿಸಬೇಕೆಂಬ ಕೋರಿಕೆಯನ್ನು ಕೇಂದ್ರ ಸರ್ಕಾರಕ್ಕೆ ಇಡಲಾಗಿದೆ. ಆದಿವಾಸಿ ಸಂಪ್ರದಾಯ, ಸಂಸ್ಕೃತಿ, ಅಸ್ಮಿತೆಗೆ ಇದು ಸುರಕ್ಷತೆ ಒದಗಿಸಬಲ್ಲದು. ಆದಿವಾಸಿಗಳು ಹಿಂದೂಗಳಲ್ಲ, ಅವರು ಎಂದೂ ಹಿಂದೂಗಳಾಗುವುದಿಲ್ಲ, ಜನಗಣತಿ ಕಾಲಮ್ನಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್ ಅಥವಾ ಇನ್ನೇನೆ ಬರೆದರೂ ಅವರು ಆದಿವಾಸಿಗಳಾಗಿಯೇ ಉಳಿಯುತ್ತಾರೆ. ಕೇಂದ್ರ ಸರ್ಕಾರ ʼಇತರರುʼ ಎಂಬ ಕಾಲಂ ಇಟ್ಟು ಹೊಂದಿಸಲು ಮಾತ್ರ ನೋಡುತ್ತಿದೆ.” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ʼಕಾನನ್ ನಹೀ, ಪರ್ಯಟನ್ʼ ಎಂಬ ಇತ್ತೀಚಿನ ಘೋಷಣೆಯ ಕುರಿತು ಮಾತನಾಡಿದ ಅವರು, ಜಾರ್ಖಂಡ್ ಮುಖ್ಯವಾಗಿ ಖನಿಜ ಸಂಪತ್ತಿನ ನಾಡು. ಖನಿಜಗಳ ಗಣಿಗಾರಿಕೆ ನಡೆಸುವ ಯಾವ ಪ್ರದೇಶವೂ ಉತ್ತಮ ಸ್ಥಿತಿಯಲ್ಲಿಲ್ಲ. ಹಾಗಾಗಿ ಗಣಿಗಾರಿಕೆಗಿಂತ ಪ್ರವಾಸೋದ್ಯಮವನ್ನು ಅಭಿವೃದ್ಧಿಯ ಹೊಸ ಕ್ರಮವಾಗಿ ನೋಡುವ ಉದ್ದೇಶ ಈ ಸ್ಲೋಗನ್ ಹಿಂದೆ ಇದೆ, ಆದಿವಾಸಿಗಳು ದೇವರಾಗಿ, ಪೂಜ್ಯಭಾವದಿಂದ ನೋಡುವ ಕಾಡುಗಳನ್ನು ಕೇವಲ ಖನಿಜ, ಗಣಿಗಳ ದೃಷ್ಟಿಯಲ್ಲಿ ಕಾಣಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡದವರನ್ನು ನಿರ್ಲಕ್ಷಿಸಲಾಗುತ್ತಿದೆ ಹಾಗೂ ಅವಗಣಿಸಲಾಗುತ್ತಿದೆ. ಈ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಆದಿವಾಸಿ/SC/ST ಜನರಿಗೆ ʼನೀವು ಅರ್ಹರಲ್ಲ, ಸಮರ್ಥರಲ್ಲʼ ಎಂದು ಹೇಳುವುದನ್ನು ಇಂದಿಗೂ ಕೇಳುತ್ತಿದ್ದೇನೆ. ನಾನೀಗ ಮುಖ್ಯಮಂತ್ರಿಯಾಗಿದ್ದೇನೆ, ಒಬ್ಬ ಆದಿವಾಸಿ ಮುಖ್ಯಮಂತ್ರಿಯಾಗುವುದು ಸುಲಭದ ಮಾತಲ್ಲ ಎಂದು ತನ್ನದೇ ಉದಾಹರಣೆಯನ್ನು ಅವರು ನೀಡಿದ್ದಾರೆ.
"ಸಂವಿಧಾನದಲ್ಲಿರುವ ಸುರಕ್ಷತೆಯ ಹೊರತಾಗಿಯೂ, ಆದಿವಾಸಿಗಳು ತಮ್ಮ ಹಕ್ಕನ್ನು ಪಡೆಯಲಾಗುವುದಿಲ್ಲ, ಅವರನ್ನು ಪುರಾತನ ಕಾಲದಿಂದಲೂ ಕೆಳಕ್ಕೆ ತಳ್ಳಲಾಗಿದೆ, ಇಂದು ಸಹ ಅದೇ ಮನಸ್ಥಿತಿಯಾಗಿದೆ. ಅವರನ್ನು ಕೀಳಾಗಿ ನೋಡಲಾಗುತ್ತದೆ, ಇದು ಕಳವಳಕಾರಿ ವಿಷಯ ಎಂದು ಅವರು ಹೇಳಿದ್ದಾರೆ.
ಜಾರ್ಖಂಡ್ ರಾಜ್ಯವು ರೂಪುಗೊಂಡು 20 ವರ್ಷಗಳಾಗಿವೆ ಆದರೆ ಜಾರ್ಖಂಡ್ ಇನ್ನೂ ತಲುಪಬೇಕಾದ ಸ್ಥಳವನ್ನು ತಲುಪಿಲ್ಲ, ಆದಿವಾಸಿಗಳ ಅಭಿವೃದ್ಧಿಗಾಗಿ ಬುಡಕಟ್ಟು ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.