ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನದ ಬೆನ್ನಲ್ಲಿಯೇ ಇನ್ನಿಬ್ಬರಿಗೆ ದೆಹಲಿ ಪೊಲೀಸರು ಜಾಮೀನು ರಹಿತ ಬಂಧನಕ್ಕೆ ವಾರೆಂಟ್ ಹೊರಡಿಸಿದ್ದಾರೆ.
ಭಾರತದ ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಹದಿಹರೆಯದ ಜಾಗತೀಕ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಹಂಚಿಕೊಂಡ ಆನ್ಲೈನ್ ಡಾಕ್ಯೂಮೆಂಟ್ "ಟೂಲ್ಕಿಟ್" ಎಡಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ದಿಶಾ ರವಿ (21ವರ್ಷ) ಬಂಧನದ ಬೆನ್ನಲೆ, ವಕೀಲೆ ನಿಖಿತಾ ಜಾಕೋಬ್, ಹೋರಾಟಗಾರ ಶಾಂತನು ಮುಕುಲ್ ವಿರುದ್ಧವೂ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ ಬಂಧನ ವಾರೆಂಟ್ ಹೊರಡಿಸಿದ್ದಾರೆ. ಪೊಲೀಸರು ವಾರೆಂಟ್ ಹೊರಡಿಸಿದ ಬೆನ್ನಲ್ಲಿಯೇ ಮಧ್ಯಂತರ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ವಕೀಲೆ ನಿಖಿತಾ ಜಾಕೋಬ್, ಹೋರಾಟಗಾರ ಶಾಂತನೂ ಮುಕುಲ್ ಅವರ ಬಂಧನಕ್ಕಾಗಿ ದೆಹಲಿ ಪೊಲೀಸರು ಮುಂಬೈ ಮಹಾರಾಷ್ಟದಲ್ಲಿ ಹುಡುಕಾಟ ನಡೆಸಿದ್ದಾರೆ. ದಿಶಾ ರವಿ, ನಿಖಿತಾ ಜಾಕೋಬ್, ಶಾಂತನು ಮುಕುಲ್ ಮೂವರು ಖಲಿಸ್ತಾನಿ ಹಾಗೂ ಪೊಯೆಟಿಕ್ ಫೌಂಡೇಶನ್ ಸಂಸ್ಥಾಪಕ ಎಂ.ಒ ಧಲಿವಾಲ್ ಅವರನ್ನು ಸಂಪರ್ಕಿಸುವುದರ ಜೊತೆಗೆ ಜನವರಿ 26 ರ ರೈತರ ಟ್ರ್ಯಾಕ್ಟರ್ ಮೆರವಣಿಗೆಗೂ ಮೊದಲೇ ಅಂದರೆ ಜನವರಿ 11 ರಂದು ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಸಂಚನ ಮೂಡಿಸಲು ಬಂಧಿತ ದಿಶಾ ಮತ್ತು ಇನ್ನಿಬ್ಬರು ಝೂಮ್ ಸಭೆ ನಡೆಸಿದ್ದಾರೆಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಟೂಲ್ಕಿಟ್ ಎಡಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ರವಿ ದಿಶಾ ಅವರ ಮೇಲೆ ಪಿತೂರಿ ಮತ್ತು ದೇಶದ್ರೋಹದ ಆರೋಪದ ದಾಖಲಿಸಿ ಬಂಧಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲೆ ಈಗ ಇನ್ನಿಬ್ಬರ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.