ಸೂಕ್ತ ಸಂದರ್ಭ ನೋಡಿ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಕಾಶ್ಮೀರದ ಕುರಿತಂತೆ ಸಂವಿಧಾನದ 370ನೇ ವಿಧಿ ರದ್ಧತಿ ವೇಳೆ ನೀಡಲಾಗಿದ್ದ ಭರವಸೆಗಳ ಬಗ್ಗೆ ಏನು ಮಾಡಿದ್ದಿರಿ ಎಂಬ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದ ಅಮಿತ್ ಶಾ, ʼ370ನೇ ವಿಧಿ ರದ್ದುಪಡಿಸಿ 17 ತಿಂಗಳಾಗಿದೆ. ಅಷ್ಟರಲ್ಲಾಗಲೇ, ಅದರ ಬಗ್ಗೆ ಹೊಣೆ ಹೊರಲು ಒತ್ತಾಯಿಸುತ್ತಿದ್ದೀರಿ. 70 ವರ್ಷ ನೀವು ಏನು ಮಾಡಿದ್ದೀರ? ಅದಕ್ಕೆ ನೀವು ಹೊಣೆ ಹೊತ್ತುಕೊಳ್ಳುವಿರಾ?ʼ ಎಂದು ಮರುಪ್ರಶ್ನೆ ಹಾಕಿದ್ದಾರೆ.
ನೀವು ಸರಿಯಾಗಿ ಕೆಲಸ ಮಾಡಿದ್ದರೆ, ನೀವು ನಮ್ಮನ್ನು ಕೇಳಬೇಕಾಗಿರಲಿಲ್ಲ. ನನಗೆ ಯಾವುದೇ ತೊಂದರೆಯಿಲ್ಲ, ಎಲ್ಲದಕ್ಕೂ ನಾನೇ ಹೊಣೆ ಹೊರುತ್ತೇನೆ. ಆದರೆ, ತಲೆಮಾರುಗಳವರೆಗೆ ಆಡಳಿತ ನಡೆಸಲು ಅವಕಾಶ ನೀಡಲ್ಪಟ್ಟವರು ಸರಿಯಾಗಿ ಆಡಳಿತ ನಡೆಸಿದ್ದಾರೆಯೇ ಎಂಬುದನ್ನು ಗಮನದಲ್ಲಿಟ್ಟು ಮಾತನಾಡಬೇಕು ಎಂದು ಅವರು ಹೇಳಿದ್ದಾರೆ.
ಮಸೂದೆ ತಂದಾಗ ಹಲವು ಸಂಸದರು ಕಾಶ್ಮೀರ ಮತ್ತು ಜಮ್ಮುವಿಗೆ ಮತ್ತೆ ರಾಜ್ಯದ ಸ್ಥಾನಮಾನ ಸಿಗುವುದಿಲ್ಲ ಎಂದು ಹೇಳಿದ್ದರು. ಆದರೆ ಎಲ್ಲಿಯೂ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವುದಿಲ್ಲ ಎಂದು ಬರೆದಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ 2019 ರ ಆಗಸ್ಟ್ 5 ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು- ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿತ್ತು. ಇದರ ವಿರುದ್ಧ ಪ್ರತಿಭಟನೆ ನಡೆಯದಂತೆ ಕಾಶ್ಮೀರದಲ್ಲಿ ಇಂಟರ್ನೆಟ್ನ್ನು ನಿಯಂತ್ರಿಸಿತ್ತು. ಇದು ವ್ಯಾಪಕ ಆಕ್ರೋಶಕ್ಕೆ ಒಳಗಾಗಿತ್ತು.