ದಿನೇ ದಿನೇ ಏರುತ್ತಿರುವ ಉತ್ಪಾದನಾ ವೆಚ್ಚ, ಕಾಫಿ, ಕಾಳು ಮೆಣಸಿನ ಬೆಲೆ ಕುಸಿತ ಮತ್ತು ಪ್ರಾಕೃತಿಕ ವಿಕೋಪಗಳ ಕಾರಣದಿಂದ ದೇಶದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಬೆಳೆಗಾರರ ಒತ್ತಾಯದ ನಡುವೆಯೂ ವಾಣಿಜ್ಯ ಬೆಳೆಯಾದ ಕಾಫಿಗೆ ಈವರೆಗೂ ಕೇಂದ್ರ ಅಥವಾ ರಾಜ್ಯ ಸರ್ಕಾರವು ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸಿಲ್ಲ. ಆದರೆ ನಮ್ಮ ನೆರೆಯ ಕೇರಳ ರಾಜ್ಯವು ಕಾಫಿಗೆ ಬೆಂಬಲ ಬೆಲೆಯನ್ನು ಘೋಷಿಸಿ ಬೆಳೆಗಾರರ ಮನ ಗೆದ್ದಿದೆ.
ಕೇರಳ ಹಣಕಾಸು ಸಚಿವ ಟಿ.ಎಂ. ಥಾಮಸ್ ಐಸಾಕ್ ಶುಕ್ರವಾರ ತಮ್ಮ ಬಜೆಟ್ ಭಾಷಣದಲ್ಲಿ ಒಂದು ಕೆಜಿ ರೋಬಸ್ಟಾ ಚೆರಿ ಕಾಫಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) 90 ರೂಪಾಯಿಗೆ ಹೆಚ್ಚಿಸಿದ್ದಾರೆ. ಪ್ರಮುಖ ರೋಬಸ್ಟಾ ಕಾಫಿ ಬೆಳೆಯುವ ಪ್ರದೇಶವಾದ ವಯನಾಡ್ ಜಿಲ್ಲೆಯ ಕಾಫಿ ಕೃಷಿಕರಿಗೆ ಬೆಂಬಲ ನೀಡುವ ಬಜೆಟ್ ನಿಬಂಧನೆಗಳನ್ನು ಕಾಫಿ ಬೆಳೆಗಾರ ಸಂಘಟನೆಗಳು ಸ್ವಾಗತಿಸಿವೆ. ಕಾಫಿಗೆ ಬೆಲೆ ಕಡಿಮೆ
ಆಗಿದ್ದು ಉತ್ಪಾದನಾ ವೆಚ್ಚ ಏರಿಕೆ ಆಗಿ ಜಿಲ್ಲೆಯ ಕಾಫಿ ಬೆಳೆಗಾರರು ತೀವ್ರ ಬಿಕ್ಕಟ್ಟಿನಲ್ಲಿರುವ ಈ ಸಮಯದಲ್ಲಿ, ನಾವು ಈ ಘೋಷಣೆಯನ್ನು ಸ್ವಾಗತಿಸುತ್ತೇವೆ ಎಂದು ವಯನಾಡ್ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಪ್ರಶಾಂತ್ ರಾಜೇಶ್ ತಿಳಿಸಿದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಯನಾಡಿನಲ್ಲಿ ಶುಕ್ರವಾರ ರೊಬಸ್ಟಾ ಚೆರಿ ಬೆಲೆ ಕೆಜಿಗೆ 64 ರೂ ಆಗಿದ್ದು, ಕಳೆದ ವರ್ಷ ಕೆಜಿಗೆ ಇದೇ ಅವಧಿಯಲ್ಲಿ 72 ರೂಪಾಯಿಗಳಷ್ಟಿತ್ತು. ಎಂ ಎಸ್ ಸ್ವಾಮಿನಾಥನ್ ಆಯೋಗವು ಕೂಡ ಎಂಎಸ್ಪಿಯನ್ನು ಶಿಫಾರಸು ಮಾಡಿರಲಿಲ್ಲ ಎಂದ ರಾಜೇಶ್ ಆವರು ಇದನ್ನು ವಯನಾಡ್ ಜಿಲ್ಲೆಯು ವರ್ಷಕ್ಕೆ 90,000 ಟನ್ಗಿಂತಲೂ ಹೆಚ್ಚು ರೋಬಸ್ಟಾ ಚೆರ್ರಿ ಉತ್ಪಾದಿಸುತ್ತಿದೆ ಎಂದು ರಾಜೇಶ್ ಹೇಳಿದರು, ಇದೇ ಅಲ್ಲದೆ ಕೇರಳ ಸರ್ಕಾರವು ಬ್ರಹ್ಮಗಿರಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಮೂಲಕ ಬೆಳೆಗಾರರಿಗೆ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಹಣಕಾಸಿನ ನೆರವು ನೀಡಲಿದೆ. ವಯನಾಡ್ ಕಾಫಿ ಬ್ರಾಂಡ್ ಹೆಸರಿನಲ್ಲಿ ಮೌಲ್ಯವರ್ಧಿತ ಕಾಫಿ ಉತ್ಪನ್ನಗಳನ್ನು ಮಾರಾಟ ಮಾಡಲು ಕುಡುಂಬಶ್ರೀ ಘಟಕಗಳ ಅಡಿಯಲ್ಲಿ ನೂರು ಕಿಯೋಸ್ಕ್ ಗಳನ್ನು ಮತ್ತು 500 ಕಾಫಿ ವೆಂಡಿಂಗ್ ಮೆಷೀನ್ ಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದ್ದು ವಯನಾಡಿನಲ್ಲಿ ಕಾಫಿ ಪಾರ್ಕ್ ಕೂಡ ಸ್ಥಾಪಿಸಲಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿ ಮಾಜಿ ಸದಸ್ಯ ಡಾ ಸಣ್ಣುವಂಡ ಕಾವೇರಪ್ಪ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಧಾವಿಸಬೇಕಿದೆ. ಏಕೆಂದರೆ ಕಾಪಿಯಿಂದ ಸರ್ಕಾರಗಳು ಕೋಟಿಗಟ್ಟಲೆ ರೂಪಾಯಿ ತೆರಿಗೆ ಸಂಗ್ರಹ ಮಾಡುತ್ತಿವೆ ಆದರೆ ಬೆಳೆಗಾರರನ್ನು ಸಂಪೂರ್ಣ ನಿರ್ಲಕ್ಷಿಸಿವೆ ಎಂದು ದೂರಿದರು. ಇಂದು ದೇಶದಲ್ಲಿ ಎಲ್ಲ ಬೆಳೆಗಳಿಗೂ ವಿಮೆ ಸೌಲಭ್ಯ ಇದೆ. ಆದರೆ ಕಾಫಿಗೆ ಮೂರು ವರ್ಷ ಮಾತ್ರ ಅಲ್ಪ ಸಮಯ ಬೆಳೆ ವಿಮೆ ಸೌಲಭ್ಯ ನೀಡಿ ನಂತರ ನಿಲ್ಲಿಸಲಾಗಿದೆ ಎಂದ ಅವರು ಸರ್ಕಾರ ಕಮಾಡಿಟಿ ಬೋರ್ಡ್ ಸ್ಥಾಪಿಸಿ ಬೆಳೆಗಾರರ ನೆರವಿಗೆ ಮುಂದಾಗಲಿ ಎಂದು ಒತ್ತಾಯಿಸಿದರು. ಆದರೆ ಏನೇ ಆದರೂ ಯಾವುದೇ ಸರ್ಕಾರವೂ ಈ ರೀತಿ ಬೆಳೆಗಾರನಿಗೆ ನೆರವಿನ ಹಸ್ತ ಚಾಚಿಲ್ಲ.
ಇದನ್ನು ಕೇರಳ ಸರ್ಕಾರವು ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಬಿಳಿಗೇರಿಯ ಕಾಫಿ ಬೆಳೆಗಾರ ಎಂ ಏ ಶ್ಯಾಮ್ ಪ್ರಸಾದ್ ಹೇಳೀದರು. ಕಳೆದ 5 ವರ್ಷಗಳ ಹಿಂದೆ ಹೋಲಿಸಿದರೆ ಇಂದು ಕಾಫಿ ತೋಟಗಳಲ್ಲಿ ಬಳಸುವ ಗೊಬ್ಬರ, ಕ್ರಿಮಿನಾಶಕ , ಯಂತ್ರೋಪಕರಣ ಎಲ್ಲದರ ಬೆಲೆ ದುಪ್ಪಟ್ಟಾಗಿದೆ. ಅಷ್ಟೇ ಏಕೆ ಅತ್ಯಂತ ಹೆಚ್ಚು ಮಾನವ ಶ್ರಮ ಬೇಡುವ ತೋಟಗಳ ನಿರ್ವಹಣೆಗೆ ನೀಡುವ ಕಾರ್ಮಿಕರ ಕೂಲಿ ಕೂಡ ದುಪ್ಪಟ್ಟಾಗಿದ್ದು ಹಣ ನೀಡಿದರೂ ಸಕಾಲದಲ್ಲಿ ಪುರುಷ ಕಾರ್ಮಿಕರು ಸಿಗುತ್ತಿಲ್ಲ. ಇಂತಹ ಸಮಯದಲ್ಲಿ ಕೇರಳವು ಉತ್ತಮವಾಗಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿದ್ದು ಕರ್ನಾಟಕ ಸರ್ಕಾರವೂ ಇದೇ ಮಾದರಿ ಅನುಸರಿಸಲಿ ಎಂದು ಅವರು ಹೇಳಿದರು. ದೇಶದಲ್ಲಿ ಉತ್ಪಾದನೆ ಆಗುವ ಕಾಫಿಯು ಶೇಕಡಾ 70 ರಷ್ಟು ವಿದೇಶಕ್ಕೆ ರಫ್ತಾಗುತಿದ್ದು ಇದರಿಂದ ಅಪಅರ ವಿದೇಶೀ ವಿನಿಮಯ ಸಂಗ್ರಹ ಆಗುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ಬೆಳೆಗಾರರ ಸಂಕಷ್ಟ ಪರಿಹರಿಸಲು ಮುಂದಾಗಲಿ ಎಂದು ಅವರು ಒತ್ತಯಿಸಿದರು. ಕೇರಳದಲ್ಲಿ ಮುಂದಿನ ಮೇ ತಿಂಗಳಿನಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಆ ಹಿನ್ನೆಲೆಯಲ್ಲಿ ಸರ್ಕಾರ ಎಂಎಸ್ಪಿ ಘೋಷಿಸಿದೆ ಎನ್ನಲಾಗಿದ್ದು ಎಂಎಸ್ಪಿ ಅಡಿಯಲ್ಲಿ ಬೆಳೆಗಾರನ ಪೂರ್ಣ ಉತ್ಪನ್ನವನ್ನೂ ಖರೀದಿಸುವುದಿಲ್ಲ ಬದಲಿಗೆ ಪ್ರತಿಯೊಬ್ಬ ಬೆಳೆಗಾರನಿಂದಲೂ ಸೀಮಿತ ಪ್ರಮಾಣದ ಕಾಫಿ ಖರೀದಿಸಲಿದೆ ಎಂದೂ ಹೇಳಲಾಗುತ್ತಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ. ಆದರೆ ಏನೇ ಆದರೂ ಕಾಫಿ ಬೆಳೆಗಾರರ ಸಂಕಷ್ಟವನ್ನು ಅರ್ಥ ಮಾಡಿಕೊಂಡ ಕೇರಳ ಸರ್ಕಾರವನ್ನು ನಿಜಕ್ಕೂ ಶ್ಲಾಘಿಸಲೇಬೇಕು.