ಭಾರತೀಯ ಔಷಧ ನಿಯಂತ್ರಕ ಈಗಾಗಲೇ ಎರಡು ಕರೋನಾ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ ನೀಡಿದೆ. ಕೇಂದ್ರ ಸರ್ಕಾರ ಇದನ್ನು ತನ್ನ ಸಾಧನೆಯೆಂಬಂತೆ ಬಿಂಬಿಸಿ ತನ್ನ ರಾಜಕೀಯ ಲಾಭಕ್ಕೆ ಬಳಸುತ್ತಿರುವಂತೆಯೇ, ಒಂದಲ್ಲ ಒಂದು ಕಾರಣಕ್ಕೆ ಕೇಂದ್ರ ಸರ್ಕಾರವನ್ನು ಇರಿಸು-ಮುರಿಸುಗೊಳಗಾಗುವಂತೆ ಟೀಕಿಸುವ ಸುಬ್ರಮಣಿಯನ್ ಸ್ವಾಮಿ ಲಸಿಕೆಯ ಕುರಿತಂತೆಯೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯ ರಾಜ್ಯಸಭಾ ಸಂಸದರಾಗಿರುವ ಸುಬ್ರಮಣಿಯನ್ ಸ್ವಾಮಿ, “ಲಸಿಕೆ ಸಂಭ್ರಮದಲ್ಲಿ ಕುಸಿಯುತ್ತಿರುವ ಆರ್ಥಿಕತೆ ಮತ್ತು ಚೀನಾ ಲಡಾಖ್ನಲ್ಲಿ 4 ಸಾವಿರ ಚದರ ಕಿಲೋ ಮೀಟರ್ ಭೂಮಿಯನ್ನು ಆಕ್ರಮಿಸಿರುವುದನ್ನು ಮರೆಯಬಾರದು” ಎಂದು ಟ್ವೀಟ್ ಮಾಡಿದ್ದಾರೆ.
ಸದಾ ತಮ್ಮ ಸರ್ಕಾರದ ವಿರುದ್ದ ಮಾತನಾಡುತ್ತಲೇ ಅದನ್ನು ಮುಜುಗರಕ್ಕೆ ತಳ್ಳುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ಕರೊನಾ ಲಸಿಕೆಯ ಸಂಭ್ರಮದಲ್ಲಿ ಕಳೆದು ಹೋಗಬೇಡಿ ಎಂದು ಎಚ್ಚರಿಸಿದ್ದಾರೆ.
ಕರೋನಾದ ನಡು-ನಡುವೆಯೇ ಭಾರತದ ಭೂಪ್ರದೇಶದ ಒಳಗೆ ಕಾಲಿಟ್ಟಿದೆ. ಇದನ್ನು ಆಡಳಿತ ಪಕ್ಷ ಬಿಜೆಪಿ ನೇರವಾಗಿ ಒಪ್ಪುತ್ತಿಲ್ಲವಾದರೂ, ಮಾಧ್ಯಮಗಳು ಅಲ್ಲಿನ ಉಪಗ್ರಹ ಚಿತ್ರಗಳನ್ನು ಪ್ರಕಟಿಸಿ ಗಡಿಯಲ್ಲಿ ಚೀನಾ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲಿದೆ. ಇದೀಗ ರೈತರ ನಿರಂತರ ಹೋರಾಟ ಮತ್ತುಕರೋನಾ ಲಸಿಕೆಯ ಅಬ್ಬರದಲ್ಲಿ ಆ ಸುದ್ದಿಗಳು ಹಿನ್ನಲೆಗೆ ಸರಿದಿವೆ.
ನೋಟ್ ಬ್ಯಾನ್ ಮತ್ತು ಜಿಎಸ್ಟಿ ಸೇರಿದಂತೆ ಬಿಜೆಪಿಯ ಅಸಮರ್ಪಕ ಆರ್ಥಿಕ ನೀತಿಯಿಂದಾಗಿ ಕರೋನಾಗೂ ಮೊದಲೇ ಭಾರತದ ಆರ್ಥಿಕತೆ ಹಿಮ್ಮುಖವಾಗಿ ಚಲಿಸುತ್ತಿತ್ತು. ಅಲ್ಲದೆ ಕರೋನಾ ಬಳಿಕ ಯಾವುದೇ ಮುನ್ನೆಚ್ಚರಿಕೆಯಿಲ್ಲದೆ ಅವೈಜ್ಞಾನಿಕ ರೀತಿಯಲ್ಲಿ ಹೇರಲ್ಪಟ್ಟ ಲಾಕ್ಡೌನ್ನಿಂದಾಗಿ ಭಾರತದ ಆರ್ಥಿಕತೆ ಇನ್ನಷ್ಟು ಹಿಮ್ಮುಖವಾಗಿ ಚಲಿಸಲು ಫ್ರಾರಂಭವಾಯಿತು. ಭಾರತದ ರುಪಾಯಿ ಮೌಲ್ಯ ಏಷ್ಯಾ ಖಂಡದಲ್ಲೇ ಅತ್ಯಂತ ಕಡಿಮೆ ಮೌಲ್ಯದ್ದು ಎಂದು ವರದಿಗಳು ಹೇಳುತ್ತಿವೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಸುಬ್ರಹ್ಮಣಿಯನ್ ಸ್ವಾಮಿ ಅವರ ಟ್ವೀಟ್ ಗಂಭೀರವಾಗಿ ಪರಿಗಣಿಸಬೇಕಾಗಿರುವುದೇ ಆಗಿದೆ. ಕರೋನಾ ಲಸಿಕೆಯ ಕುರಿತಂತೆ ಸುಬ್ರಮಣಿಯನ್ ಟೀಕೆ ಇದೇ ಮೊದಲಲ್ಲ, ಲಸಿಕೆ ಪ್ರಯೋಗಕ್ಕೆ ಅನುಮತಿ ಸಿಕ್ಕಾಗಲೂ ತೀವ್ರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು ಸ್ವಾಮಿ.
“ಆತ್ಮನಿರ್ಭರ ಭಾರತ ಎಂಬ ತನ್ನ ಘೋಷಣೆಗೆ ಭಾರತ ಸರ್ಕಾರ ನಿಜವಾಗಿಯೂ ಬದ್ಧವಾಗಿದ್ದರೆ, ಅದು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುವ ಲಸಿಕೆಯನ್ನು ಮಾತ್ರ ಬಳಸಬೇಕು. ನಾವು ಅದಕ್ಕಾಗಿ ಕೆಲವು ತಿಂಗಳು ಕಾಯಬೇಕಾಗಬಹುದು, ಆದರೂ, ವಿದೇಶಿಯರು ಭಾರತೀಯರನ್ನು ಗಿನಿ ಪಿಗ್ ಆಗಿ ಬಳಸುತ್ತಿರುವುದನ್ನು ಗಮನಿಸಿದರೆ, ಹಾಗೆ ಕಾಯುವುದು ದೊಡ್ಡದಲ್ಲ. ಇಂತಹ ವಿಷಯಗಳು ದೇಶದ ಆಂತರಿಕ ಭದ್ರತೆಯ ಕುರಿತ ಆತಂಕಕಾರಿ ಬೆಳವಣಿಗೆ. ಆ ಹಿನ್ನೆಲೆಯಲ್ಲಿ ನಮಗೆ ಈಗ ಲಸಿಕೆಯ ವಿಷಯದಲ್ಲಿ ಆತ್ಮನಿರ್ಭರ ಭಾರತವೊಂದೇ ಇರುವ ಸುರಕ್ಷಿತ ದಾರಿ” ಎಂದು ಅವರು ಟ್ವೀಟ್ ಮಾಡಿದ್ದರು.