ದೇಶವನ್ನೇ ಬೆಚ್ಚಿಬೀಳಿಸಿದ್ದ ತೂತುಕುಡಿ ತಂದೆ-ಮಗನ ಲಾಕಪ್ ಡೆತ್ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಪೋಲಿಸ್ ಅಧಿಕಾರಿ ಕರೋನಾದಿಂದಾಗಿ ಮೃತಪಟ್ಟಿದ್ದಾರೆ. ಮೃತ ಪಟ್ಟ ಪೋಲಿಸ್ ಸಬ್ ಇನ್ಸ್ಪೆಕ್ಟರನ್ನು ಪಾಲ್ದುರೈ ಎಂದು ಗುರುತಿಸಲಾಗಿದೆ.
ಮೃತ ಅಧಿಕಾರಿ ಅತಿಯಾದ ಮಧುಮೇಹದಿಂದ ಬಳಲುತ್ತಿದ್ದು, ಇದೇ ಕಾರಣಕ್ಕೆ ಕರೋನಾ ಸೋಂಕಿನೊಂದಿಗೆ ಹೋರಾಡಲು ಅವರ ದೇಹದಲ್ಲಿ ಶಕ್ತಿ ಇರಲಿಲ್ಲವೆಂದು ಹೇಳಲಾಗಿದೆ.
ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿದ್ದ 10 ಪೊಲೀಸರನ್ನು ಕೊಲೆ ಆರೋಪದಲ್ಲಿ ಜೈಲಿಗೆ ಹಾಕಲಾಗಿತ್ತು. ಮದುರೈ ಕೇಂದ್ರ ಕಾರಾಗೃಹದಲ್ಲಿದ್ದ ಪಾಲ್ದುರೈಗೆ ಜೈಲಿನಲ್ಲಿ ಕರೋನಾ ಸೋಂಕು ತಗುಲಿತ್ತು. ಜುಲೈ 24 ರಂದು ಕರೋನಾ ಪಾಸಿಟಿವ್ ಫಲಿತಾಂಶ ಬಂದಿದ್ದು, ಅವರನ್ನು ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ಮೃತಪಟ್ಟಿದ್ದಾರೆ.
ಜೂನ್ 19 ರಂದು ಪೋಲಿಸರ ದೌರ್ಜನ್ಯಕ್ಕೆ ಜಯರಾಜ್ ಹಾಗೂ ಅವರ ಮಗ ಬೆನಿಕ್ಸ್ ಪೋಲಿಸ್ ಕಸ್ಟಡಿಯಲ್ಲೇ ಮೃತಪಟ್ಟಿದ್ದರು. ಇದು ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ತಪ್ಪಿತಸ್ಥ ಪೋಲಿಸರ ಮೇಲೆ ಕೊಲೆ ಪ್ರಕರಣ ದಾಖಲಿಸಿತ್ತು.